ಯಾದಗಿರಿ | ಡಿಸಿ ಕಚೇರಿ ಮುಂದೆ ತಮಟೆ ಬಡಿದು ರೈತರಿಂದ ಧರಣಿ ಸತ್ಯಾಗ್ರಹ

ಯಾದಗಿರಿ : ವಡಗೇರಿ ತಾಲ್ಲೂಕಿನ ಗೋಡಿಹಾಳ ಗ್ರಾಮದ, ಕುಮನೂರು ಸೀಮೆಯಲ್ಲಿ ಬರುವ ಬಡ ರೈತರ ಹೊಲಗಳಿಗೆ ಹೋಗುವ ಸೀಮಿ ದಾರಿಬಂದ್ ಮಾಡಿದನ್ನು ತೆರವುಗೊಳಿಸುವಂತೆ ಆಗ್ರಹಿಸಿ ವರ್ತೂರ್ ಪ್ರಕಾಶ ಯುವ ಘರ್ಜನೆ ಜಿಲ್ಲಾಧ್ಯಕ್ಷ ಐಕೂರ ಅಶೋಕ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಕಚೇರಿ ಮುಂದೆ ತಮಟೆ ಬಡಿದು ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಐಕೂರ ಅಶೋಕ ಅವರು, ಸುಮಾರು 16ಕ್ಕೂ ಹೆಚ್ಚು ರೈತರು ಕಳೆದ 10 ವರ್ಷದಿಂದ ಉಳುಮೆ ಮಾಡಲಾಗದೇ ಜಮೀನು ಬೀಳು ಬಿದ್ದಿದ್ದು, ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ಹೊಲಗಳಿಗೆ ತಲತಲಾಂತರದಿಂದಲೂ ಡೋಣದ ಮೇಲೆ ಹೋಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಲೇ ಬಂದಿದ್ದಾರೆ. ಆದರೆ 6 ಎಕರೆ ಜಮೀನು ಖರೀದಿ ಮಾಡಿದ ಮಹೇಶ ಹಾಗೂ ದೇವರಾಜ ಬಡಿಗೇರ ಎಂಬುವವರು ಸೇರಿಕೊಂಡು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟು ಹೊಲದರಸ್ತೆ ಮಾಡಲು ಆದೇಶಿಸಿ ರಸ್ತೆ ಮಾಡಿಸಿದರೂ ಸಹ ಕಿತ್ತುಹಾಕಿರುವ ಈ ಇಬ್ಬರು ಭೂ ಮಾಲಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಣಮಂತ್ರಾಯ ಗೌಡ ತೇಕರಾಳ, ಮಹೇಶ್ ಸುಭೆದಾರ, ಮಹಾವೀರ ಲಿಂಗೇರಿ, ಯಂಕಪ್ಪ ಕಟ್ಟಿಮನಿ, ಮರಿಸ್ವಾಮಿ, ಶರಣಪ್ಪ, ಗೌತಮ್ ಹರಿಕೇರಿ, ತಿಪ್ಪಣ್ಣ, ಬಸವರಾಜ ಸೇರಿದಂತೆ ಅನೇಕ ರೈತರು ಭಾಗವಹಿಸಿದರು.