ಯಾದಗಿರಿ | ಡಿಸಿ ಆದೇಶಕ್ಕೂ ಬೆಲೆ ಕೊಡದೆ ಹೊಲದ ರಸ್ತೆ ಬಂದ್ ಮಡಿದ ಭೂಮಾಲಕರ ವಿರುದ್ಧ ಮೇ 28 ರಂದು ಧರಣಿ : ಅಶೋಕ

ಯಾದಗಿರಿ : ವಡಗೇರಿ ತಾಲ್ಲೂಕಿನ ಗೋಡಿಹಾಳ ಗ್ರಾಮದ, ಕುಮನೂರು ಸೀಮೆಯಲ್ಲಿ ಬರುವ ಬಡ ರೈತರ ಹೊಲಗಳಿಗೆ ದಾರಿ ಬಿಟ್ಟುಕೊಡದೇ ತೊಂದರೆ ಕೊಡುತ್ತಿರುವವರ ವಿರುದ್ಧ ಜಿಲ್ಲಾಡಳಿತ ಕಚೇರಿ ಮುಂದೆ ಸಮಸ್ಯೆ ಇತ್ಯರ್ಥವಾಗುವ ರೆಗೂ ಅನಿರ್ಧಿಷ್ಟ ಧರಣಿ ನಡೆಸಲಾಗುವುದು ಎಂದು ವರ್ತೂರ್ ಪ್ರಕಾಶ ಯುವ ಘರ್ಜನೆ ಜಿಲ್ಲಾಧ್ಯಕ್ಷ ಐಕೂರ ಅಶೋಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸಂತ್ರಸ್ತ ರೈತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 16ಕ್ಕೂ ಹೆಚ್ಚು ರೈತರು ಕಳೆದ 10 ವರ್ಷದಿಂದ ಉಳುಮೆ ಮಾಡಲಾಗದೇ ಜಮೀನು ಬೀಳು ಬಿದ್ದಿದ್ದು, ಸಂಕಷ್ಟಕ್ಕೆ ಈಡಾಗಿದ್ದಾರೆ. ಈಗಾಗಲೇ ಈ ಬಗ್ಗೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟು ಆದೇಶಿಸಿ ರಸ್ತೆ ಮಾಡಿಸಿದರೂ ಸಹ ಕಿತ್ತು ಹಾಕಿರುವ ಭೂ ಮಾಲಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸ್ವತಃ ಡಿಸಿ ಅವರೇ ರಸ್ತೆ ಕೊಡಬೇಕು ಎಂದು ಹೇಳಿದಾಗ ಅದಕ್ಕೆ ಒಪ್ಪಿಗೆ ಸೂಚಿಸಿದ ಭೂ ಮಾಲಕರು ರಸ್ತೆಗೆ ಗುರ್ತು ಕಲ್ಲುಗಳು ಹಾಕಿ ಹೋದ ರಾತ್ರಿಯೇ ಜೆಸಿಬಿಯಿಂದ ಕಿತ್ತಿಹಾಕಿದ್ದಾರೆ ಎಂದು ದೂರಿದರು.
ಈದೀಗ ರೈತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮೇ 28 ರಂದು ಅನಿರ್ದಿಷ್ಟ ಧರಣಿ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಡ್ಡಿಗೌಡ ರಾಮನಾಳ, ಬಸವರಾಜ ಪತ್ತಾರ, ನಬಿಸಾಬ ಕುಮನೂರ, ಮಲ್ಲಮ್ಮ ಪೂಜಾರಿ, ಸಿದ್ದಪ್ಪ ಪೂಜಾರಿ, ಸಣ್ಣ ಅಬ್ದುಲ್ ಕುಮನೂರ, ಸಂಗಾರಡ್ಡಿ ಗೋಡಿಹಾಳ, ಇಮಾಮ್ ಬಿ., ಶರೀಪ್, ಗೌತಮ ಅರಕೇರಿ ಇನ್ನಿತರರು ಇದ್ದರು.