ಯಾದಗಿರಿ | ಜೈಲರ್ ಎಸ್.ಜಿ ರಾಠೋಡ್ಗೆ ಬೀಳ್ಕೊಡುಗೆ ಸಮಾರಂಭ

ಯಾದಗಿರಿ: ಯಾದಗಿರಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಜಿಲ್ಲಾ ಕಾರಾಗೃಹದ ವತಿಯಿಂದ ಯಾದಗಿರಿ ಜಿಲ್ಲಾ ಕಾರಾಗೃಹದಲ್ಲಿ ಜೈಲರ್ ಆಗಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಎಸ್.ಜಿ ರಾಠೋಡ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ವೇಳೆ ಮಾತನಾಡಿದ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮರಿಯಪ್ಪ, ಸುದೀರ್ಘ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿದ ಜೈಲರ್ ಎಸ್ ಜಿ ರಾಠೋಡ್ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶೀರ್ವಾದಿಸಿದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೈಲರ್ ಎಸ್ ಜಿ ರಾಠೋಡ್, ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳು ನೀಡಿದ ಪ್ರೋತ್ಸಾಹ ಹಾಗೂ ಸಹದ್ಯೋಗಿಗಳ ಸಹಕಾರವನ್ನು ಮರೆಯಲಾರೆ. ಕರ್ತವ್ಯದ ಬಗ್ಗೆ ಭಯ, ಭಕ್ತಿಯಿದ್ದರೆ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ನಾವು ಮಾಡುವ ಸೇವೆ ಶ್ಲಾಘನೀಯ ಮತ್ತು ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಧೀಕ್ಷರಾದ ಸಂಜೀವ ಎಸ್ ಪಾಟೀಲ್, ಸಹಾಯಕ ಜೈಲರ್ ಜಗದೀಶ್ ಎಸ್ ಪೂಜಾರಿ, ಜಗದೀಶ್ ಚವ್ಹಾಣ್, ಮುಖ್ಯ ವೀಕ್ಷಕರಾದ ಶರಣಪ್ಪ ಹುಂಡೇಕಲ್, ಬಸವರಾಜ, ಪ್ರೇಮನಾಥ, ಹಸನ್ ಬಿ, ರಾಜೇಂದ್ರ, ಸುನೀತಾ, ಸುನಿಲ್ ಕೋಣಿನ್, ಶಿಕ್ಷಕಿಯಾದ ಉಮಾದೇವಿ, ವಿಲ್ಸನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.