ಯಾದಗಿರಿ | ಜನೌಷಧಿ ಕೇಂದ್ರ ಬಂದ್ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ಯಾದಗಿರಿ: ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಬಂದ್ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಯಾದಗಿರಿ ನಗರ ಮಂಡಲ ಮತ್ತು ಗ್ರಾಮೀಣ ಮಂಡಲದ ವತಿಯಿಂದ ನಗರದ ಹಳೆ ಜಿಲ್ಲಾಸ್ಪತ್ರೆ ಮುಂದೆ ಮೌನ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಪಕ್ಷದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್, ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿ ದೊರೆಯಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರಕಾರ ಜನೌಷಧಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರಕಾರ ಡ್ರಗ್ ಕಂಪೆನಿಗಳ ಒತ್ತಾಯಕ್ಕೆ ಮಣಿದು ಈ ಕುತಂತ್ರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ನಾಯಕಿ ನಾಗರತ್ನ ಕುಪ್ಪಿ ಮಾತನಾಡಿ, ಕಾಂಗ್ರೆಸ್ ಸರಕಾರಕ್ಕೆ ಜನರ ಹಿತಾಸಕ್ತಿ ಬೇಕಿಲ್ಲ. ಮಾತೆತ್ತಿದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಬೀಗುವ ಈ ಸರಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಜನಪರ ಯೋಜನೆಗಳನ್ನು ಜಾರಿಗೆ ತರದೆ, ಕೇಂದ್ರ ಸರಕಾರದ ಯೋಜನೆಗಳಿಗೂ ಕಲ್ಲು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ರಾಜ್ಯದಲ್ಲಿ ಸರಕಾರ ಅಸ್ಥಿತ್ವದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಅಗತ್ಯ ಬೆಲೆ ಏರಿಕೆ ಸೇರಿದಂತೆ ಜನತೆಗೆ ನಾನಾ ಸಂಕಷ್ಟಗಳು ಎದುರಾದರೂ ಈ ಸರಕಾರ ಮಾತ್ರ ಮೌನವಾಗಿದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ನಾಯಕರಾದ ಬಸವರಾಜ ಸಾಹು, ಸಿದ್ದಣಗೌಡ ವಡಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದಾ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಚವ್ಹಾಣ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೋನಾಗೇರ, ಜಿಲ್ಲಾ ಉಪಾಧ್ಯಕ್ಷ ಮಾರುತಿ ಕಲಾಲ್, ವಿಲಾಸ ಪಾಟೀಲ, ಮಲ್ಲಿಕಾರ್ಜುನ ಕಟ್ಟಿಮನಿ, ರಾಜಶೇಖರ ವಡಗೇರಾ, ರಮೇಶ ದೊಡ್ಡನಿ, ಮೌನೇಶ ಬೆಳಗೇರಾ, ಮಲ್ಲು ಕೋಲಿವಾಡ, ಮರೀಲಿಂಗ ಜಿನಿಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.