Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 9ನೇ ವಯಸ್ಸಿನಲ್ಲೇ ಶಾಲೆ ಪ್ರಾರಂಭಿಸಿ,...

9ನೇ ವಯಸ್ಸಿನಲ್ಲೇ ಶಾಲೆ ಪ್ರಾರಂಭಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕು ಬದಲಿಸಿದ ಬಾಬರ್ ಅಲಿ

'ಜಗತ್ತಿನ ಅತ್ಯಂತ ಕಿರಿಯ ಹೆಡ್ ಮಾಸ್ಟರ್' ಜೊತೆ ವಿಶೇಷ ಸಂದರ್ಶನ

ವಾರ್ತಾಭಾರತಿವಾರ್ತಾಭಾರತಿ24 May 2025 11:55 AM IST
share
9ನೇ ವಯಸ್ಸಿನಲ್ಲೇ ಶಾಲೆ ಪ್ರಾರಂಭಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕು ಬದಲಿಸಿದ ಬಾಬರ್ ಅಲಿ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಬಾಬ್ಥ ಉತ್ತರಪಾರಾದಲ್ಲಿ ಕೇವಲ ಒಂಭತ್ತು ವರ್ಷದ ಎಳೆ ವಯಸ್ಸಿನ ಬಾಬರ್ ಅಲಿ ಎಂಬ ಬಾಲಕ ತನ್ನ ಮನೆ ಹಿಂದಿನ ಪೇರಳೆ ಮರದ ಕೆಳಗೆ ಒಂದು ಶಾಲೆ ಪ್ರಾರಂಭಿಸುತ್ತಾನೆ. ಶಾಲಾ ಬಾಲಕನೊಬ್ಬನ ಸಣ್ಣ ಪ್ರಯತ್ನವಾಗಿ ಆರಂಭವಾದ ಆ ಯೋಜನೆ ಇಂದು 'ಅನಂದೋ ಶಿಕ್ಷಾ ನಿಕೇತನ' ಎಂಬ ಪೂರ್ಣ ಪ್ರಮಾಣದ ಶಾಲೆಯಾಗಿ ಬೆಳೆದಿದೆ. ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುತ್ತಿರುವ ಈ ಶಾಲೆ ಕಳೆದ 22 ವರ್ಷಗಳಿಂದ ಎಂಟು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ, ವಿಶೇಷವಾಗಿ ಹಿಂದುಳಿದ ಸಮುದಾಯದವರಿಗೆ, ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಹಾಯ ಮಾಡುತ್ತಿದೆ.

ಪಶ್ಚಿಮ ಬಂಗಾಳದ ಪ್ರೌಢಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಬಾಬರ್ ಅಲಿಯವರ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ. ಅವರ ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ, ಗ್ರಂಥಾಲಯ ಸೇರಿದಂತೆ ಆಧುನಿಕ ಸೌಲಭ್ಯಗಳಿವೆ. ಮೌಲ್ಯಾಧಾರಿತ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತಿದೆ.

ಬಾಬರ್ ಅಲಿ ಅವರ ಅಸಾಮಾನ್ಯ ಶೈಕ್ಷಣಿಕ ಸೇವೆ ಹಾಗು ಸಾಧನೆಗೆ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು, ಗೌರವಗಳು, ಬಿರುದುಗಳು ಬಂದಿವೆ. ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಶಾಲಾ ಪಠ್ಯಪುಸ್ತಕಗಳಲ್ಲಿ ಅವರ ಸಾಧನೆ ಮಕ್ಕಳಿಗೆ ಪಠ್ಯವಾಗಿದೆ. ಟೆಡ್ ಫೆಲೋ, ʼಫೋರ್ಬ್ಸ್ 30 ಅಂಡರ್ 30ʼ, ಬಿಬಿಸಿಯಂತಹ ಚಾನಲ್ ಗಳಲ್ಲಿ ಅವರ ಯಶೋಗಾಥೆ ಪ್ರಸಾರ - ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಇತ್ತೀಚಿಗೆ ಮಂಗಳೂರಿಗೆ ಭೇಟಿ ನೀಡಿದ್ದಾಗ 'ವಾರ್ತಾ ಭಾರತಿʼ ಪ್ರಧಾನ ಕಚೇರಿಯಲ್ಲಿ ನೀಡಿದ ಸಂದರ್ಶನದಲ್ಲಿ ಬಾಬರ್ ಅಲಿ ಅವರು ಪೇರಳೆಯ ಮರದ ಕೆಳಗೆ ಶುರುವಾಗಿ ಈವರೆಗಿನ ತಮ್ಮ ಶೈಕ್ಷಣಿಕ ಸಾಹಸದ ಪಯಣ, ಅವರು ಎದುರಿಸಿದ ಸಮಸ್ಯೆ, ಸವಾಲುಗಳು, ಅವರಿಗೆ ಸಿಕ್ಕಿದ ಪ್ರೋತ್ಸಾಹ, ಸಮಾಜದಲ್ಲಿ ಅವರ ಶಾಲೆ ಬೀರಿದ ಪ್ರಭಾವ, ಭವಿಷ್ಯದ ಅವರ ಯೋಜನೆಗಳು ಮತ್ತು ಇಂದಿನ ವಿದ್ಯಾರ್ಥಿಗಳಿಗೆ ಒಂದಿಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ನೀವು 9ನೇ ವಯಸ್ಸಿನಲ್ಲಿ ಶಾಲೆ ಆರಂಭಿಸಿದ್ದಕ್ಕೆ ಕಾರಣವೇನು?

ಉತ್ತರ: ನಾನು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯವನು. ನಮ್ಮ ಜಿಲ್ಲೆಯು ರಾಜ್ಯದ ರಾಜಧಾನಿ ಕೋಲ್ಕತ್ತದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಒಂದೊಮ್ಮೆ ಮುರ್ಶಿದಾಬಾದ್ ಬಂಗಾಳ, ಬಿಹಾರ ಮತ್ತು ಒಡಿಶಾ ರಾಜ್ಯಗಳ ರಾಜಧಾನಿಯಾಗಿತ್ತು. ಆದರೆ ಇಂದು ಅದು ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ.

ನನ್ನ ತಂದೆ ಮೊಹಮ್ಮದ್ ನಸೀರುದ್ದೀನ್ ಅವರು ಶಾಲೆ ತೊರೆದವರು. ಆದರೆ, ಅವರಿಗೆ ಶಿಕ್ಷಣದಲ್ಲಿ ಅಪಾರ ಆಸಕ್ತಿ ಇತ್ತು. ಅವರು ನನ್ನನ್ನು ನಮ್ಮ ಹಳ್ಳಿಯಿಂದ 10 ಕಿಲೋಮೀಟರ್ ದೂರದ ಶಾಲೆಗೆ ಸೇರಿಸಿದರು.

ಆದರೆ ನಮ್ಮ ಹಳ್ಳಿಯಲ್ಲಿ ನನ್ನ ವಯಸ್ಸಿನ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನವರು ಕೆಲಸ ಮಾಡುತ್ತಿದ್ದರು. ಹುಡುಗರು ಜಾನುವಾರು ಮೇಯಿಸುತ್ತಿದ್ದರು, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು; ಹುಡುಗಿಯರು ಮನೆಕೆಲಸಗಳಲ್ಲಿ ತೊಡಗಿದ್ದರು. ಅವರ ಪೋಷಕರು ಕುಟುಂಬಕ್ಕೆ ಆರ್ಥಿಕವಾಗಿ ಆಧಾರವಾಗಲು ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದರು.

ಆ ಸಮಯ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ನಾನು ಕೇವಲ ಒಂಭತ್ತು ವರ್ಷದವನಾಗಿದ್ದಾಗ ನನ್ನ ಮನಸ್ಸಿನಲ್ಲಿ ಎರಡು ಭಾವನೆಗಳು ಮೂಡಿದವು. ಪ್ರೀತಿ ಮತ್ತು ಅರಿವು. ಒಂದನೆಯದಾಗಿ, ನಾನು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಪ್ರೀತಿ. ನಾನು ಕೂಡ ಸರಳ ಹಿನ್ನೆಲೆಯಿಂದ ಬಂದಿದ್ದರೂ, ನನ್ನ ತಂದೆ ನನಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದನ್ನು ಕಂಡು, ನನಗೆ ಅವಕಾಶ ಸಿಕ್ಕಿದೆ ಎಂದ ಅರಿವು ನನ್ನಲ್ಲಿ ಮೂಡಿತು. ಇನ್ನೊಂದು, ನಾನು ಕಲಿಯುತ್ತಿರುವಾಗ ಇತರರ ಕಲಿಕೆಗೂ ಸಹಾಯ ಮಾಡಬೇಕು ಎಂಬ ಯೋಚನೆ ಮೂಡಿತು.

ಈ ಎರಡು ಭಾವನೆಗಳು ನನ್ನ ಹಿತ್ತಿಲ ಪೇರಳೆ ಮರದ ಕೆಳಗೆ ಸಣ್ಣ ಶಾಲೆ ಆರಂಭಿಸಲು ಪ್ರೇರಣೆಯಾದವು. ಅದನ್ನು ನಾನು 'ಅನಂದೋ ಶಿಕ್ಷಾ ನಿಕೇತನ' ಎಂದು ನಾಮಕರಣ ಮಾಡಿದೆ; ಇದರರ್ಥ: “ಆನಂದದ ಶಿಕ್ಷಣ ಮನೆ”.

ಪ್ರತಿ ಬಾರಿ ನಾನು ನನ್ನ ಶಾಲೆಯಲ್ಲಿ ಮುಂದಿನ ತರಗತಿಗೆ ತೇರ್ಗಡೆಯಾಗುತ್ತಿದ್ದಾಗ, ನನ್ನ ಶಾಲೆಯಲ್ಲಿಯೂ ಹೊಸ ತರಗತಿ ಸೇರಿಸುತ್ತಿದ್ದೆ. ಕ್ರಮೇಣ ಅದು ಪೂರ್ಣ ಪ್ರಮಾಣದ ಶಾಲೆಯಾಗಿ ಬೆಳೆಯಿತು. 'ಪ್ರೀತಿ' ಮತ್ತು 'ಅರಿವು' ಎಂಬ ಎರಡು ಭಾವನೆಗಳು ಈ ಕೆಲಸಕ್ಕೆ ನನಗೆ ಪ್ರೇರಣೆ ನೀಡಿದವು.

ಪ್ರಶ್ನೆ: ನೀವು ಕೇವಲ 9 ವರ್ಷದವರಾಗಿದ್ದಾಗ ಶಾಲೆ ಪ್ರಾರಂಭಿಸಿದಿರಿ. ಆ ವಯಸ್ಸಿನಲ್ಲಿ ಮಕ್ಕಳು ಆಟವಾಡುವುದನ್ನೇ ಇಷ್ಟಪಡುತ್ತಾರೆ. ಆ ವಯಸ್ಸಿನಲ್ಲಿ ನಿಮಗೆ ಶಾಲೆ ಆರಂಭಿಸುವ ಆಲೋಚನೆ ಹೇಗೆ ಬಂತು?

ಉತ್ತರ : ನಿಜ ಹೇಳಬೇಕಾದರೆ, ಯಾವುದೇ ಪ್ರೇರಣೆ ಇರಲಿಲ್ಲ. ಯಾರೂ ನನಗೆ ಇದನ್ನು ಮಾಡಲು ಹೇಳಿರಲಿಲ್ಲ. ಆ ವಯಸ್ಸಿನಲ್ಲಿ ಮಕ್ಕಳು ಆಟವಾಡುವುದರಲ್ಲಿ ತೊಡಗಿರುತ್ತಾರೆ, ಆದರೆ ನನಗೆ ಕಲಿಸುವುದೇ ಆಟವಾಗಿತ್ತು. ಪ್ರತಿದಿನ ನಾನು ಶಾಲೆಯಿಂದ ಮನೆಗೆ ಬಂದು, ನಾನು ಕಲಿತದ್ದನ್ನು ಇತರ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದೆ.

ನಾನು ಶಿಕ್ಷಕರಿಂದ ಮುರಿದ ಚಾಕ್ ತುಂಡುಗಳನ್ನು ಸಂಗ್ರಹಿಸುತ್ತಿದ್ದೆ. ನನ್ನ ಶಿಕ್ಷಕಿ ಬೈಜಯಂತಿ ತಿವಾರಿ ಅವರು ಕುತೂಹಲದಿಂದ ನನ್ನ ಸ್ನೇಹಿತನನ್ನು ನಾನೇಕೆ ಚಾಕ್ ಪೀಸ್ ಸಂಗ್ರಹಿಸುತ್ತೇನೆ ಎಂದು ಕೇಳಿದ್ದರು. ಅದಕ್ಕೆ ಅವನು, ನಾನು ಇತರ ಮಕ್ಕಳಿಗೆ ಪಾಠ ಹೇಳಲು ಬಳಸುತ್ತಿರುವುದಾಗಿ ಹೇಳಿದ. ಈ ಮಾತು ಕೇಳಿದ ಶಿಕ್ಷಕಿ ನನಗೆ ಚಾಕ್ ಪೀಸ್ ಗಳ ಒಂದು ಬಾಕ್ಸ್ ನೀಡಿದರು. ಅದು ನನಗೆ ಮತ್ತಷ್ಟು ಪ್ರೇರಣೆ ನೀಡಿತು.

(9ರ ಹರೆಯದ ಬಾಬರ್ ಅಲಿ ತನ್ನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಚಿತ್ರ)

ನಮ್ಮಲ್ಲಿ ಸರಿಯಾಗಿ ಪುಸ್ತಕಗಳೂ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ ನನ್ನ ಪೋಷಕರು ನನಗೆ ಬೆಂಬಲ ನೀಡಿದರು. ಅವರಿಗೆ ಸ್ವತಃ ಓದಲು ಬರೆಯಲು ಬರುತ್ತಿರಲಿಲ್ಲ.

ಪುಸ್ತಕಗಳಿಗಾಗಿ ಮೊದಲು ನನ್ನ ಶಾಲೆಗೆ ಬರುವ ಮಕ್ಕಳ ಮನೆಗಳಿಂದ ಅಕ್ಕಿ ಸಂಗ್ರಹಿಸಿ, ಅದನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದೆ. ಅದರಿಂದ 20 ರೂಪಾಯಿ ಸಿಗುತ್ತಿತ್ತು. ಆ ಹಣದಿಂದ 20 ಬಂಗಾಳಿ ಅಕ್ಷರಮಾಲೆಯ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ಹಂಚಿದೆ. ಇದೆಲ್ಲವೂ ನನ್ನ ಕಲಿಕೆಯ ಮೇಲಿನ ಪ್ರೀತಿ. ಕಲಿಸುವ ಪ್ರೀತಿ ನನಗೆ ಮುಖ್ಯವಾಗಿತ್ತು. ಯಾರೂ ಇದನ್ನು ಮಾಡಲು ಯಾರೂ ನನಗೆ ಹೇಳಿರಲಿಲ್ಲ. ಎಲ್ಲವೂ ನನ್ನೊಳಗಿನಿಂದ ಬಂತು.

ಪ್ರಶ್ನೆ: ಆರಂಭದ ದಿನಗಳಲ್ಲಿ ಮಕ್ಕಳ ಮತ್ತು ಪೋಷಕರ ಪ್ರತಿಕ್ರಿಯೆ ಹೇಗಿತ್ತು?

ಉತ್ತರ: ಪ್ರತಿಕ್ರಿಯೆ ಮಿಶ್ರವಾಗಿತ್ತು. ಕೆಲವು ಮಕ್ಕಳು ಮತ್ತು ಪೋಷಕರು ತುಂಬಾ ಖುಷಿಯಾಗಿದ್ದರು. ಮಕ್ಕಳಿಗೆ ಹೊಸದಾಗಿ ಕಲಿಯಲು ಅವಕಾಶ ಸಿಕ್ಕಿತು. ವಿಶೇಷವಾಗಿ ನನ್ನ ವಯಸ್ಸಿನವರು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ವಿದ್ಯಾರ್ಥಿಗಳಾಗಿದ್ದರು. ಅವರಿಗೆ ಕಲಿಯಲು ತುಂಬಾ ಆಸಕ್ತಿಯಿತ್ತು.

ಆದರೆ ಪೋಷಕರನ್ನು ಒಪ್ಪಿಸುವುದು ಸುಲಭವಿರಲಿಲ್ಲ. “ಶಿಕ್ಷಣದಿಂದ ಏನು ಪ್ರಯೋಜನ? ನಾವು ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ಕಲಿತರೆ ಏನು ಸಿಗುತ್ತದೆ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು.

ನಾನು ನಿರಾಸೆ ಮತ್ತು ನಕಾರಾತ್ಮಕತೆಯನ್ನೂ ಎದುರಿಸಬೇಕಾಯಿತು. ಆದರೆ ಪ್ರೀತಿ ಮತ್ತು ಸಹನೆ ನನ್ನನ್ನು ಯಶಸ್ಸಿನತ್ತ ಬೆಳೆಸಿತು. ಪೋಷಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆ.

ಪ್ರಶ್ನೆ: ನೀವು ಎಷ್ಟು ಮಕ್ಕಳೊಂದಿಗೆ ಈ ಪಯಣ ಆರಂಭಿಸಿದ್ದೀರಿ?

ಉತ್ತರ: ನಾನು 8 ಮಕ್ಕಳೊಂದಿಗೆ ಈ ಪಯಣ ಆರಂಭಿಸಿದೆ. ಅವರಲ್ಲಿ ಒಬ್ಬಳು ನನ್ನ ತಂಗಿ ಅಮೀನಾ ಖಾತೂನ್. ಅವಳೇ ನಮ್ಮ ಶಾಲೆಯ ಮೊದಲ ವಿದ್ಯಾರ್ಥಿನಿ.

ಪ್ರಶ್ನೆ: ನಿಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಹೇಳಿ

ಉತ್ತರ: ನಮ್ಮದು ಆರು ಜನರ ಕುಟುಂಬ. ನಾವು ಸರಳ ಹಿನ್ನಲೆಯವರು. ನಾನು, ಅಪ್ಪ ಅಮ್ಮ, ಇತ್ತೀಚಿಗಷ್ಟೇ ವಿವಾಹವಾದ ತಂಗಿ. ಇಬ್ಬರು ಚಿಕ್ಕ ತಮ್ಮಂದಿರು.

ನನ್ನ ತಂದೆ ಸೆಣಬಿನ ವ್ಯಾಪಾರಿ. ಇಂದು ಕೂಡ ಅವರು ಸಣ್ಣಮಟ್ಟದಲ್ಲಿ ಸೆಣಬಿನ ವ್ಯಾಪಾರ ಮಾಡುತ್ತಾರೆ. ಸೆಣಬು ಬಂಗಾಳದಲ್ಲಿ ಪ್ರಮುಖ ಬೆಳೆಯಾದ್ದರಿಂದ, ಅದೇ ನಮ್ಮ ಜೀವನೋಪಾಯ.

ಇಬ್ಬರೂ ಪೋಷಕರು ಶಾಲೆ ಬಿಟ್ಟವರು. ಕಷ್ಟಪಟ್ಟು ಅವರು ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಆದರೆ ನನ್ನ ತಂದೆಗೆ ಶಿಕ್ಷಣದಲ್ಲಿ ಅಪಾರ ಆಸಕ್ತಿ. ಅವರು ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ನನ್ನ ಬಾಲ್ಯದಿಂದಲೇ, ನಮ್ಮ ಮನೆಯಿಂದ 10 ಕೀ.ಮೀ.ದೂರವಿದ್ದರೂ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಪ್ರಯತ್ನಿಸಿದರು. ಇಂತಹ ಸರಳ ಹಿನ್ನಲೆಯಿಂದ ಬಂದವನು ನಾನು.

ಪ್ರಶ್ನೆ: ಶಾಲೆ ಆರಂಭಿಸಿದಾಗ ಎದುರಿಸಿದ ಸಮಸ್ಯೆಗಳು ಯಾವುವು?

ಉತ್ತರ: ಇದು ಒಳ್ಳೆಯ ಪ್ರಶ್ನೆ. ನನ್ನ ತಂದೆ ನಾನು ಐಎಎಸ್ ಆಗಬೇಕೆಂದು ಬಯಸಿದ್ದರು. ಅವರು ನಾನು ಇತರರಿಗೆ ಪಾಠ ಹೇಳುವುದರಿಂದ ನನ್ನ ಸ್ವಂತ ಓದಿಗೆ ಹಾನಿಯಾಗಬಹುದು ಎಂದು ಭಾವಿಸಿದ್ದರು. ಆದ್ದರಿಂದ ಅವರು ನನಗೆ ಇದನ್ನು ನಿಲ್ಲಿಸಿ ನನ್ನ ಓದಿನ ಮೇಲೆ ಗಮನಹರಿಸು ಎಂದು ತಾಕೀತು ಮಾಡಿದರು. ಆಗ ನನ್ನ ತಾಯಿ ನನ್ನನ್ನು ಬೆಂಬಲಿಸಿದರು.

ನಾನು ನನ್ನ ಕಾರ್ಯವನ್ನು ಮುಂದುವರಿಸಿದೆ. ಒಂದು ದಿನ, ನನ್ನ ತಂದೆಯವರು ತಾತನ ಕಾಲದಿಂದಲೂ ನಮ್ಮ ಕುಟುಂಬದ ಸ್ನೇಹಿತರಾದ ನಿವೃತ್ತ ಕಾಲೇಜು ಪ್ರಾಂಶುಪಾಲರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದರು. ಅವರು ನನ್ನನ್ನು ಬೆಂಬಲಿಸುವುದಾಗಿ ಹೇಳಿದರು. ಅದಕ್ಕೆ ಎರಡು ಕಾರಣಗಳನ್ನು ನೀಡಿದರು. ನಾನು ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದರೆ ದೇವರು ಸಹಾಯ ಮಾಡುತ್ತಾನೆ; ಜ್ಞಾನ ಹಂಚಿಕೊಳ್ಳುವುದರಿಂದ ನಾನು ಇನ್ನಷ್ಟು ಕಲಿಯಬಹುದು ಎಂದರು. ಈ ಮಾತುಗಳು ನನ್ನ ತಂದೆಯ ಮನಸ್ಸನ್ನು ಬದಲಿಸಿತು. ಹಾಗಾಗಿ ತಂದೆಯವರ ಮನವೊಲಿಸಿದ್ದು ನಾನು ಜಯಿಸಿದ ಮೊದಲ ಸವಾಲಾಗಿತ್ತು.

ನಾನು ಯಾವಾಗಲೂ ಕುಟುಂಬದ ಬೆಂಬಲ ಪಡೆದಿದ್ದೆ. ಆದರೆ ಇತರರನ್ನು, ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಸಮಾಜವನ್ನು ಒಪ್ಪಿಸುವುದು ಸುಲಭವಿರಲಿಲ್ಲ. ನಮ್ಮ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆ ತಿಳಿಸುವುದು ಕಷ್ಟವಾಗಿತ್ತು. ವಿದ್ಯಾರ್ಥಿಗಳಿಗೆ ಪುಸ್ತಕಗಳು, ಲೇಖನ ಸಾಮಾಗ್ರಿಗಳನ್ನು ಕೊಡಲು ಸಾಕಷ್ಟು ಸಂಪನ್ಮೂಲ ಇರಲಿಲ್ಲ. ಅಲ್ಲದೇ ನಾನು ಕೂಡ ಮಗುವೇ ಆಗಿದ್ದೆ.

ಅನೇಕ ಜನರು ನನ್ನ ಹುರುಪಿಗೆ ತಣ್ಣೀರೆರಚಿದರು. ನಾನು ಅಸೂಯೆ ಮತ್ತು ನಕಾರಾತ್ಮಕತೆಯನ್ನು ಎದುರಿಸಬೇಕಾಯಿತು. ಅದೆಲ್ಲವೂ ನನ್ನ ಬಾಲ್ಯದ ಸವಾಲುಗಳಾಗಿತ್ತು. ಆದರೆ ಸಹಾನುಭೂತಿಯುಳ್ಳ ಜನರು ನನ್ನನ್ನು ಬೆಂಬಲಿಸಿದರು. ಮುಂದೆ ಸಾಗುತ್ತಿದ್ದಂತೆ ಸವಾಲಿನ ಸ್ವರೂಪಗಳು ಬದಲಾದವು. ಆದರೆ ಸವಾಲುಗಳು ನಿಲ್ಲಲಿಲ್ಲ. ಒಬ್ಬ ಸಣ್ಣ ಹುಡುಗ ಸಮಾಜಕ್ಕೆ ಅರ್ಥಪೂರ್ಣವಾದದ್ದನ್ನು ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಒಂದಿಷ್ಟು ಸಹೃದಯರಿದ್ದರು. ಅವರು ನನಗೆ ಬೆಂಬಲ ನೀಡಿದರು.

ನನ್ನ ಎಸೆಸ್ಸೆಲ್ಸಿ ಪರೀಕ್ಷೆಯ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಅವರನ್ನು ಭೇಟಿಯಾದೆ. ಅವರ ಸರ್ಕಾರ ನನಗೆ ನೈತಿಕ ಬೆಂಬಲ ನೀಡಿತು.

ಪ್ರತಿ ಸಮಾಜದಲ್ಲಿಯೂ ವಿಭಿನ್ನ ಮನೋಭಾವದ ಜನರು ಇರುತ್ತಾರೆ. ನಾನು ಬೆದರಿಕೆಯ ಅಪಾಯ ಎದುರಿಸಿದಾಗ, ಸರ್ಕಾರ ಸೇರಿದಂತೆ ಒಳ್ಳೆಯ ಜನರು ಮುಂದೆ ಬಂದು ನನ್ನನ್ನು ರಕ್ಷಿಸಿದರು.

ಪ್ರಶ್ನೆ: ಶಾಲೆ ನಡೆಸಲು ಯಾರಿಂದ ಯಾವ ಸಹಾಯ ದೊರೆತಿತು?

ಉತ್ತರ: ಮೊದಲಿಗೆ ನನ್ನ ಪೋಷಕರಿಂದ ಬೆಂಬಲ ಸಿಕ್ಕಿತು.

ನನ್ನ ಶಿಕ್ಷಕಿ ಬೈಜಯಂತಿ ತಿವಾರಿ ಮತ್ತು ಮತ್ತೊಬ್ಬ ಶಿಕ್ಷಕಿ, ನನ್ನ ಬಗ್ಗೆ ಸ್ಥಳೀಯ ಮಾಧ್ಯಮ ಮತ್ತು ಪ್ರಮುಖ ಪತ್ರಿಕೆಗೆ ಮಾಹಿತಿ ನೀಡಿದರು.

ಅದರ ಪರಿಣಾಮವಾಗಿ, ಜನರು ನನ್ನನ್ನು ಗಮನಿಸತೊಡಗಿದರು. ನಾನು 8ನೇ ತರಗತಿಯಲ್ಲಿ ಇದ್ದಾಗ, ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರು ನನ್ನನ್ನು ಆಹ್ವಾನಿಸಿದರು. ನನ್ನ ತಂದೆಯವರು ನನ್ನನ್ನು ಕೆಲವು ಸರ್ಕಾರಿ ಕಚೇರಿಗಳಿಗೆ ಪರಿಚಯಿಸಿದರು.

ಒಂದು ದಿನ, ನಾನು ನಮ್ಮ ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಪುಸ್ತಕಗಳಿಗಾಗಿ ಅರ್ಜಿ ನೀಡಿದೆ. ಪಂಚಾಯತ್ ಪ್ರಧಾನರು ನನ್ನ ಪ್ರಯತ್ನವನ್ನು ಮೆಚ್ಚಿದರು. ಆದರೆ ಅಲ್ಲಿ ಪುಸ್ತಕಗಳಿಲ್ಲ ಎಂದು ಹೇಳಿದರು. ಅವರು ನನ್ನ ಅರ್ಜಿಯನ್ನು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ ಗೆ ನೀಡಲು ಸಲಹೆ ನೀಡಿದರು. ಆದರೆ ಅವರು ಪುಸ್ತಕ ನೀಡಲಿಲ್ಲ.

ನಂತರ ನಾನು ಜಿಲ್ಲಾಧಿಕಾರಿಯವರ ಕಚೇರಿಗೆ ಹೋಗಲು ನಿರ್ಧರಿಸಿದೆ. ಶಾಲೆಯ ಯೂನಿಫಾರ್ಮ್ ಧರಿಸಿ, ಶಾಲಾ ಬ್ಯಾಗ್ ಹಿಡಿದು, ನನ್ನ ಹೆಸರು ಬಾಬರ್ ಅಲಿ, ಆನಂದ ಶಿಕ್ಷಣ ನಿಕೇತನದ ಮುಖ್ಯೋಪಾಧ್ಯಾಯ ಎಂದು ಬರೆದು ಒಂದು ಚೀಟಿ ಸಲ್ಲಿಸಿದೆ. ಜೊತೆಗೆ ನನ್ನ ಶಾಲೆಯ ಬಗ್ಗೆ ಪ್ರಕಟವಾದ ಕೆಲವು ಪತ್ರಿಕಾ ವರದಿಗಳನ್ನು ನೀಡಿದೆ. ಜಿಲ್ಲಾಧಿಕಾರಿಗಳು ಶಿಕ್ಷಕರಿಗೆ ಬಹಳ ಗೌರವ ನೀಡುತ್ತಿದ್ದರು. ಅವರು ಶಾಲೆಗೆ ಹಿರಿಯ ಮುಖ್ಯೋಪಾಧ್ಯಾಯರು ಇದ್ದಾರೆ ಎಂದು ಭಾವಿಸಿ, ತಮ್ಮ ಸಹಾಯಕನಿಗೆ ಮೊದಲು ಮುಖ್ಯೋಪಾಧ್ಯಾಯರನ್ನು ಒಳಗೆ ಕರೆದುದುಕೊಂಡು ಬರಲು ಹೇಳಿದರು. ನಾನು ಜಿಲ್ಲಾಧಿಕಾರಿಯವರ ಕೊಠಡಿಗೆ ಪ್ರವೇಶಿಸಿದಾಗ, ಅವರು ಆಶ್ಚರ್ಯಚಕಿತರಾಗಿ, "ನಾನು ಮುಖ್ಯೋಪಾಧ್ಯಾಯರನ್ನು ಬರಲು ಹೇಳಿದ್ದೆ. ಈ ಹುಡುಗ ಯಾರು?" ಎಂದು ಕೇಳಿದರು. ಅದಕ್ಕೆ ನಾನು, "ಸರ್, ನಾನೇ ಅದು. ಬೆಳಿಗ್ಗೆ ವಿದ್ಯಾರ್ಥಿ, ಮಧ್ಯಾಹ್ನ ಶಾಲೆ ನಡೆಸುತ್ತೇನೆ" ಎಂದು ಹೇಳಿದೆ. ಅವರು ನನ್ನ ನಡೆಯನ್ನು ತುಂಬಾ ಮೆಚ್ಚಿದರು.

ಮುಂದಿನ ದಿನವೇ ಅವರು ನಾನು ಹೇಳಿದ್ದು ನಿಜವೇ ಎಂದು ಪರಿಶೀಲಿಸಲು ಉಪವಿಭಾಗಾಧಿಕಾರಿಯನ್ನು ನನ್ನ ಶಾಲೆಗೆ ಅಚ್ಚರಿಯ ಭೇಟಿ ನೀಡಲು ಕಳುಹಿಸಿದರು. ನನ್ನ ಕಥೆ ನಿಜವೇ ಎಂದು ಪರಿಶೀಲಿಸಲು ಬಂದ ಉಪವಿಭಾಗಧಿಕಾರಿ ಶೋಭುಜ್ ವರುಣ್ ಸರ್ಕಾರ್ ನೋಡಿ ತುಂಬಾ ಸಂತೋಷಪಟ್ಟರು. ಆಗಿನಿಂದ ಜಿಲ್ಲಾಧಿಕಾರಿ ಜೀವನ್ ಕೃಷ್ಣ ಸಾಧುಖಾನ್ ಅವರು ನನಗೆ ಸಂಪೂರ್ಣ ಬೆಂಬಲ ನೀಡಿದರು. ಅವರ ಕೊನೆಯ ಉಸಿರಿನವರೆಗೆ ನನಗೂ, ನಮ್ಮ ಸಂಸ್ಥೆಗೂ ಸಹಾಯ ಮಾಡಿದರು.

ಉಪವಿಭಾಗಾಧಿಕಾರಿಯವರು ನಮ್ಮ ಶಾಲೆಯ ವ್ಯವಸ್ಥಾಪನಾ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಆಗ ನಾನು 8ನೇ ತರಗತಿಯಲ್ಲಿ ಇದ್ದೆ. ಉಪ ವಿಭಾಗಾಧಿಕಾರಿಯವರು ಅಧ್ಯಕ್ಷರಾಗಿದ್ದರು.

ಮತ್ತೊಂದು ಉದಾಹರಣೆ ನಾನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ರಾಮಕೃಷ್ಣ ಮಿಷನ್ ನಮ್ಮ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿತ್ತು. ಅವರ ಪರೋಪಕಾರದ ಗುಣಗಳ ಬಗ್ಗೆ ತಿಳಿದು, ನಾನು ಸಹಾಯಕ್ಕಾಗಿ ಅವರನ್ನು ಸಂಪರ್ಕಿಸಿದೆ. ಪ್ರಾಥಮಿಕ ಶಾಲಾ ದಿನಗಳಲ್ಲಿಯೂ ಅವರು ನಮಗೆ ಸಮವಸ್ತ್ರ ಮತ್ತು ಇತರ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದರು. ಆ ಬಳಿಕ ಅವರು ನನ್ನನ್ನು ರಾಷ್ಟ್ರೀಯ ಯುವ ದಿನಾಚರಣೆಗೆ ಆಹ್ವಾನಿಸಿದ್ದರು. ನಾನು ನನ್ನ ವಿದ್ಯಾರ್ಥಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಸರ್ಕಾರದ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಫಿರೋಜಾ ಬೇಗಮ್ ಅವರು ಕೂಡ ತಮ್ಮ ವಿದ್ಯಾರ್ಥಿಗಳೊಂದಿಗೆ ಇದ್ದರು. ಕಾರ್ಯಕ್ರಮದ ವೇಳೆ ಸ್ವಾಮಿಜಿ ನನ್ನನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಸಣ್ಣ ಹುಡುಗನಾಗಿ, ನಾನು ನಮ್ಮ ಪ್ರದೇಶದಲ್ಲಿ ಮಾಡುತ್ತಿರುವ ಈ ರೀತಿಯ ಕೆಲಸಗಳ ಬಗ್ಗೆ ಅವರು ಒತ್ತಿ ಹೇಳಿದರು. ಕಾರ್ಯಕ್ರಮದ ನಂತರ ಫಿರೋಜಾ ಬೇಗಮ್ ತಾಯಿಯಂತೆ ನನ್ನ ಬಳಿ ಬಂದು, ನಾನು ಹೇಗೆ ಸಹಾಯ ಮಾಡಬಹುದು ಎಂದು ಕೇಳಿದರು.

ಕೆಲವು ದಿನಗಳ ನಂತರ, ನಾನು ಅವರ ಸಂಸ್ಥೆಗೆ ಭೇಟಿ ನೀಡಿ, ನಮ್ಮ ಶಾಲೆಯ ಕಾರ್ಯದರ್ಶಿಯಾಗಲು ವಿನಂತಿಸಿದೆ. ಅವರು ಒಪ್ಪಿಕೊಂಡರು. ಇಂದಿಗೂ, ಕಳೆದ 18 ವರ್ಷಗಳಿಂದ, ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ.

ಅನೇಕ ಸಹೃದಯರು ನಮ್ಮ ಬೆಂಬಲಕ್ಕೆ ಬಂದಿದ್ದಾರೆ. ಮಾಧ್ಯಮವೂ ನನ್ನ ಪ್ರಯಾಣದಲ್ಲಿ ದೊಡ್ಡ ಪಾತ್ರ ವಹಿಸಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ನನ್ನ ಯಶೋಗಾಥೆಯನ್ನು ಪ್ರಸಾರ ಮಾಡಲಾರಂಭಿಸಿತು. ನನ್ನ SSLC ಪರೀಕ್ಷೆಗಳ ನಂತರ, ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ನನಗೆ ಸನ್ಮಾನ ಮಾಡಿದಾಗ ಸುಮಾರು 100 ಪತ್ರಕರ್ತರು ಸೇರಿದ್ದರು. ಆ ದಿನ ಆ ಸುದ್ದಿ ವ್ಯಾಪಕವಾಗಿ ಹರಡಿತು.

ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ ಎನ್ನುವುದು ಸತ್ಯ. ಆದರೆ ಹಲವು ಸಹೃದಯರು, ವೈಯಕ್ತಿಕವಾಗಿ, ರಾಮಕೃಷ್ಣ ಮಿಷನ್, ಜಿಲ್ಲಾಡಳಿತ, ಮತ್ತು ನನ್ನ ತಂದೆ-ತಾಯಿಗಳು – ಎಲ್ಲರೂ ನನ್ನ ಬೆಂಬಲಕ್ಕೆ ಬಂದರು. ಈಗ ಪರೋಪಕಾರ ಮನೋಭಾವದ ಸಂಸ್ಥೆಗಳು ಮತ್ತು ಮಾಧ್ಯಮಗಳು ನನಗೆ ಸಹಾಯ ಮಾಡುತ್ತಿವೆ. ಆದ್ದರಿಂದಲೇ ಪ್ರಾರಂಭದಿಂದ ಇಂದಿನವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಸಾಧ್ಯವಾಗಿದೆ.

ಪ್ರಶ್ನೆ: ಶಾಲೆಯ ಪ್ರಸಕ್ತ ಸ್ಥಿತಿ ಏನು? ಯಾವ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ? ಎಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದಾರೆ?

ಉತ್ತರ: ನಾನು ಈ ಪ್ರಯಾಣದಲ್ಲಿ 22 ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. 2024 ಅಕ್ಟೋಬರ್ 19ರಂದು 22ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಇಂದಿನವರೆಗೆ ಸುಮಾರು 8,000 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣ ಪಡೆದಿದ್ದಾರೆ. ನಮ್ಮಲ್ಲಿ ಶಾಲೆಯ ಪ್ರವೇಶಾತಿ ಅರ್ಜಿಗೂ ಶುಲ್ಕವಿಲ್ಲ. ಪೇರಳೆ ಮರದ ಕೆಳಗೆ ಆರಂಭವಾದ ಶಾಲೆ ಇಂದು ಉತ್ತಮ ಕಟ್ಟಡ, ಆಧುನಿಕ ತಂತ್ರಜ್ಞಾನ, ಗ್ರಂಥಾಲಯ, ಕಂಪ್ಯೂಟರ್ ಕಲಿಕೆ ಸೌಲಭ್ಯಗಳೊಂದಿಗೆ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

ಆರಂಭಿಕ ಕಟ್ಟಡ ನಿರ್ಮಾಣಕ್ಕೆ ಬಹುತೇಕ ಸಹಾಯ ಕರ್ನಾಟಕದಿಂದಲೇ ಬಂದಿದೆ. ಶ್ರೀರಾಮ್ ಸರ್ ಎಂಬ ಇಂಜಿನಿಯರ್ ಸುಮಾರು 20 ಬಾರಿ ಮುರ್ಶಿದಾಬಾದ್‌ಗೆ ಬಂದು ಸಹಾಯ ಮಾಡಿದ್ದಾರೆ. ನನ್ನ ಮಾರ್ಗದರ್ಶಕರ ಪೈಕಿ ಅಲ್ಮಿತ್ರಾ ಎಚ್. ಪಟೇಲ್ ಅವರು ಬೆಂಗಳೂರು ಮೂಲದವರು. ಕಟ್ಟಡ ನಿರ್ಮಾಣ ಆರಂಭಿಸಲು ಸಹಕರಿಸಿದ ಮೊದಲ ವ್ಯಕ್ತಿ ಅವರೇ.

ನಮ್ಮ ಶಾಲೆಗೆ ಪಶ್ಚಿಮ ಬಂಗಾಳ ಪ್ರೌಢಶಿಕ್ಷಣ ಮಂಡಳಿಯಿಂದ ಮಾನ್ಯತೆ ಇದೆ. ಇಲ್ಲಿ ಶಿಕ್ಷಣ ಸಂಪೂರ್ಣ ಉಚಿತ. RTE ಪ್ರಕಾರ, ಹತ್ತನೇ ತರಗತಿಯವರೆಗೆ 500 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯವಿದೆ.

ಪ್ರಶ್ನೆ: ಸ್ವತಃ ನಿಮ್ಮ ಶಿಕ್ಷಣ ಏನಾಯಿತು ? ಏನೆಲ್ಲಾ ಕಲಿತಿರಿ ?

ಉತ್ತರ: 2013ರಲ್ಲಿ ಇಂಗ್ಲೀಷ್‌ ಆನರ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿದೆ. 2015ರಲ್ಲಿ ಇಂಗ್ಲೀಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. 2017ರಲ್ಲಿ ಇತಿಹಾಸದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಶಿಕ್ಷಕರ ತರಬೇತಿ ಕೋರ್ಸ್ ಪೂರ್ಣಗೊಳಿಸಿದ್ದೇನೆ.

ಪ್ರಶ್ನೆ: ನಿಮ್ಮ ಶಾಲೆಯ ಪ್ರಭಾವವೇನು? ಒಟ್ಟಾರೆಯಾಗಿ ಯಾವ ಬದಲಾವಣೆ ಕಂಡಿದ್ದೀರಿ?

ಉತ್ತರ: ಮೊದಲ ಸವಾಲು ಮಕ್ಕಳಿಗೆ ಶಿಕ್ಷಣ ಕೊಡುವುದು. ಅವರ ಆಸಕ್ತಿಯನ್ನು ಉಳಿಸುವುದು.

ಮಂಗಳೂರಿನಂತಹ ನಗರದಲ್ಲಿಯೂ ಬಂಗಾಳದಿಂದ ಬಂದ ವಲಸೆ ಕಾರ್ಮಿಕರ ಮಕ್ಕಳಿದ್ದಾರೆ. ವಯಸ್ಸಿನ ಒಂದು ಹಂತಕ್ಕೆ ಬಂದ ಬಳಿಕ ಅವರು ಶಾಲೆಗೆ ಹೋಗುವುದನ್ನು ಬಿಟ್ಟು ಬಿಡುತ್ತಾರೆ. ವಿಶೇಷವಾಗಿ ಆ ಸಮಯದಲ್ಲಿ ಹುಡುಗಿಯರು ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದ್ದರು. ಅನೇಕ ವಿದ್ಯಾರ್ಥಿಗಳು ಶಾಲೆಗೆ ಸೇರಿದಾಗ ಒಂದು ಅಂಕ ಕೂಡ ಪಡೆಯಲಾಗದ ಸ್ಥಿತಿಯಲ್ಲಿದ್ದರು. ಆದರೆ ಸಂತಸದ ಕಲಿಕೆ, ಪ್ರೀತಿ ಮತ್ತು ಸಮರ್ಪಣೆಯಿಂದ ನಾವು ಅವರನ್ನು ಉತ್ತಮ ಮಾನವರನ್ನಾಗಿ ರೂಪಿಸಿದ್ದೇವೆ.

ನಮ್ಮ ಶಾಲೆಯ ಆರು ಹಿರಿಯ ವಿದ್ಯಾರ್ಥಿಗಳು, ವಿಶೇಷವಾಗಿ ಹುಡುಗಿಯರು, ಪದವಿ, ಸ್ನಾತಕೋತ್ತರ ಮತ್ತು ಶಿಕ್ಷಕರ ತರಬೇತಿ ಮುಗಿಸಿ ಇಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶದ ಸಮಸ್ಯೆ ಇದೆ. ಅನೇಕ ಮಕ್ಕಳು ಶಿಕ್ಷಣದ ಜೊತೆಗೆ ಸಾಮಾಜಿಕ ಬದ್ಧತೆ ಬೆಳೆಸಿಕೊಂಡಿದ್ದಾರೆ.

ನಮ್ಮ ಸಂಸ್ಥೆಯಿಂದ ವಿದ್ಯಾಭ್ಯಾಸ ಪಡೆದ ಅನೇಕ ವಿದ್ಯಾರ್ಥಿಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ಆರಂಭಿಸುತ್ತಿದ್ದಾರೆ ಎನ್ನುವುದು ಸಮಾಧಾನದ ವಿಚಾರ.

ಪ್ರಶ್ನೆ: ನಿಮ್ಮ ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರಿದ್ದಾರೆ? ಎಲ್ಲ ಸಮುದಾಯದ ಮಕ್ಕಳು ಇದ್ದಾರಾ?

ಉತ್ತರ: ಹೌದು, ನಮ್ಮ ಶಾಲೆ ಎಲ್ಲರಿಗಾಗಿ ತೆರೆಯಲಾಗಿದೆ. ಪ್ರಸಕ್ತ 10 ಮಂದಿ ಪೂರ್ಣಾವಧಿಯ ಶಿಕ್ಷಕರು, 10 ಮಂದಿ ಅತಿಥಿ ಶಿಕ್ಷಕರು ಇದ್ದಾರೆ.

ಪ್ರಶ್ನೆ: ಭವಿಷ್ಯದಲ್ಲಿ ಶಾಲೆಗೆ ಯಾವ ಯೋಜನೆಗಳಿವೆ?

ಉತ್ತರ: ಅನಂದ ಶಿಕ್ಷಾ ನಿಕೇತನವನ್ನು ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವುದು ನನ್ನ ಕನಸು. ಎಲ್ಲೆಡೆ ಶಾಲೆಗಳು, ಕಾಲೇಜುಗಳಿವೆ, ಆದರೆ ಮೌಲ್ಯಾಧಾರಿತ ಶಿಕ್ಷಣ ಮತ್ತು ಮಾನವೀಯತೆಯ ಕೊರತೆಯಿದೆ. ನಮ್ಮ ಪ್ರದೇಶದ ಅನೇಕ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ವಲಸೆ ಕಾರ್ಮಿಕರಾಗುತ್ತಾರೆ. ಹೀಗಾಗಿ, ಕೌಶಲ್ಯಾಧಾರಿತ ಕಲಿಕೆ ಕೇಂದ್ರ ಆರಂಭಿಸುವ ಯೋಜನೆ ಇದೆ.

ನನ್ನ ದೊಡ್ಡ ಕನಸು, ಎಲ್ಲರಿಗೂ ಸಮಾನ ಅವಕಾಶಗಳೊಂದಿಗೆ ಶಿಕ್ಷಣ ಒದಗಿಸುವುದು. ಇದು ಕೇವಲ ಪುಸ್ತಕ ಜ್ಞಾನವಲ್ಲ, ಗುಣಮಟ್ಟದ ಕಲಿಕೆ, ಕೌಶಲ್ಯಾಭಿವೃದ್ಧಿ ಮತ್ತು ಮಾನವೀಯತೆಯ ಶಿಕ್ಷಣ. ನಾನು ಸರ್ವತೋಮುಖ ಅಭಿವೃದ್ಧಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ದೇಶಾದ್ಯಂತ ಇದೇ ರೀತಿಯ ಶಾಲೆ ಆರಂಭಿಸುವ ಬಯಕೆಯಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X