ಜಮ್ಮು ಕಾಶ್ಮೀರದ ಭದ್ರತೆಯ ಹೊಣೆ ಯಾರದ್ದು?
ಚುನಾಯಿತ ಸರಕಾರವನ್ನು ಭದ್ರತಾ ಸಭೆಯಿಂದ ಹೊರಗಿಟ್ಟ ಕೇಂದ್ರ

Photo credit: PTI
ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರು ನಿಯಂತ್ರಿಸುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ. ಪಹಲ್ಗಾಮ್ ದಾಳಿ ಹೊತ್ತಿನ ಭದ್ರತಾ ವೈಫಲ್ಯದ ಬಗ್ಗೆ ಮೋದಿ ಸರ್ಕಾರ ಉತ್ತರಿಸದೇ ಇರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಬಹು ಮುಖ್ಯವಾಗಿದೆ. ಪಹಲ್ಗಾಮ್ ಹತ್ಯಾಕಾಂಡದ ನೆರಳಿನಲ್ಲಿ ಜುಲೈ 3 ರಿಂದ ಕಾಶ್ಮೀರದಲ್ಲಿ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲೇ ಸಭೆ ನಡೆದಿದೆ.
ಅಂದರೆ, ಜಮ್ಮು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಹೊಣೆ ಸಂಪೂರ್ಣ ಕೆಂದ್ರದ ಮೋದಿ ಸರಕಾರದ್ದೇ ಆಗಿದೆ. ಚುನಾಯಿತ ಮುಖ್ಯಮಂತ್ರಿಯನ್ನು ಅವರ ಸ್ವಂತ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಂದ್ರ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಚರ್ಚೆಗಳಿಂದ ಹೊರಗಿಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯ ವಿಷಯಗಳಲ್ಲಿ ಜಮ್ಮು ಕಾಶ್ಮೀರದ ಚುನಾಯಿತ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಾಯಗಳ ಹೊರತಾಗಿಯೂ, ಮೇ 29 ರಂದು ಅಮಿತ್ ಶಾ ಅವರು ಜಮ್ಮುವಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು.
2019 ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಬಳಸಿದ ಜಮ್ಮು ಕಾಶ್ಮೀರ ಮರುಸಂಘಟನಾ ಕಾಯ್ದೆ, 2019 ರ ಅಡಿಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಲೆಫ್ಟಿನೆಂಟ್ ಗವರ್ನರ್ ವ್ಯಾಪ್ತಿಗೆ ಬರುತ್ತದೆ.
ಲೆಫ್ಟಿನೆಂಟ್ ಗವರ್ನರ್ ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟು ಕೇಂದ್ರ ಸರಕಾರಕ್ಕೆ ಉತ್ತರಿಸುವವರು. ಹಾಗಾಗಿ ಕಾನೂನು ಸುವ್ಯವಸ್ಥೆ ಅಂದ್ರೆ ಕಾಶ್ಮೀರದ ಪೊಲೀಸ್ ವ್ಯವಸ್ಥೆ ಲೆಫ್ಟಿನೆಂಟ್ ಗವರ್ನರ್ ಅಧೀನದಲ್ಲೇ ಬರುತ್ತದೆ. ಅಲ್ಲಿ ನಿಯೋಜಿತ ಸೇನೆ ಹೇಗೂ ಕೇಂದ್ರ ಸರಕಾರದ ಅಧೀನದಲ್ಲೇ ಇದೆ.
ಜಮ್ಮು ಕಾಶ್ಮೀರದ ಚುನಾಯಿತ ಸರ್ಕಾರಕ್ಕೆ ಈ ವಿಷಯದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಆದರೆ ಕಾಶ್ಮೀರಕ್ಕೆ ಬಂದು ಭದ್ರತಾ ವ್ಯವಸ್ಥೆ ಕುರಿತ ಮಹತ್ವದ ಸಭೆ ಮಾಡುವಾಗಲೂ ಕಾಶ್ಮೀರ ಸರಕಾರವನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಕಡೆಗಣಿಸಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಉಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವನ್ನು ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿತ್ತು.
ಮೇ 28 ರಂದು ಉಮರ್ ಅಬ್ದುಲ್ಲಾ ಸ್ಥಳೀಯರು ಮತ್ತು ದೇಶೀಯ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲು ಪಹಲ್ಗಾಮ್ನಲ್ಲಿ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ನಂತರ, ಅಬ್ದುಲ್ಲಾ ಉದ್ಯಮದ ಪಾಲುದಾರರು ಮತ್ತು ಸ್ಥಳೀಯರೊಂದಿಗೆ ಪ್ರವಾಸೋದ್ಯಮ ವಲಯ ಪುನರುಜ್ಜೀವನಗೊಳಿಸುವ ಕ್ರಮಗಳ ಕುರಿತು ಚರ್ಚಿಸಿದರು.
ಪತ್ರಿಕಾ ಸಂವಾದದ ಸಮಯದಲ್ಲಿ ಅವರು ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಕೇಂದ್ರ ಸರ್ಕಾರದೊಂದಿಗೆ ಜಮ್ಮು ಕಾಶ್ಮೀರದಲ್ಲಿನ ಭದ್ರತೆಯ ವಿಷಯ ಎತ್ತಲು ಅವರ ಸರ್ಕಾರ ಉದ್ದೇಶಿಸಿದೆಯೇ ಎಂದು ಕೇಳಿದಾಗ, ಅಬ್ದುಲ್ಲಾ ಜಮ್ಮು ಕಾಶ್ಮೀರದಲ್ಲಿನ ಬಹುಸಂಖ್ಯೆಯ ಶಕ್ತಿ ಕೇಂದ್ರಗಳ ಕಡೆ ಗಮನ ಸೆಳೆದರು. ನಾವು ವಿಚಿತ್ರವಾದ ವ್ಯವಸ್ಥೆ ಹೊಂದಿದ್ದೇವೆ. ಪ್ರವಾಸಿಗರು ನನ್ನ ಜವಾಬ್ದಾರಿ. ಆದರೆ ಪ್ರವಾಸಿಗರ ಭದ್ರತೆ ನನ್ನ ಜವಾಬ್ದಾರಿಯಲ್ಲ ಎಂದರು. ಇಲ್ಲಿ ಮೂರು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಜಮ್ಮು ಕಾಶ್ಮೀರದ ಚುನಾಯಿತ ಸರ್ಕಾರ, ಜಮ್ಮು ಕಾಶ್ಮೀರದ ಚುನಾಯಿತವಲ್ಲದ ಸರ್ಕಾರ ಮತ್ತು ಭಾರತ ಸರ್ಕಾರ ಎಂದು ಅವರು ಹೇಳಿದರು.
2019 ರಲ್ಲಿ ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮೋದಿ ಸರಕಾರ ಕಿತ್ತು ಹಾಕಿದ ಬಳಿಕ ಅಲ್ಲಿನ ಸರಕಾರಕ್ಕೆ ಸುರಕ್ಷತಾ ವ್ಯವಸ್ಥೆಯ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂಬುದು ಸಾಮಾನ್ಯ ಜ್ಞಾನದ ವಿಷಯ. ಆದರೂ ಕೆಲವು ಬಿಜೆಪಿ ನಾಯಕರು ಅಥವಾ ಅವರ ಬೆಂಬಲಿಗರು ಗೊತ್ತಿಲ್ಲದೆಯೋ ಅಥವಾ ಗೊತ್ತಿದ್ದರೂ ಬೇಕು ಬೇಕೆಂದೇ ಕಾಶ್ಮೀರದ ಸರಕಾರ ಇರುವಾಗ ಅಲ್ಲಿನ ಭದ್ರತಾ ಹೊಣೆ ಅಲ್ಲಿನ ಸರಕಾರದ್ದು ಎಂಬ ಮೂರ್ಖ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ.
ಆದರೆ ಕಾಶ್ಮೀರದ ಸರಕಾರಕ್ಕೆ ಮೋದಿ ಸರಕಾರ ಎಷ್ಟು ಕಿಮ್ಮತ್ತು ಕೊಡುತ್ತದೆ ಎಂಬುದು ಅಮಿತ್ ಶಾ ಮಾಡಿರುವ ಭದ್ರತಾ ಸಭೆಯ ಫೋಟೋ ನೋಡಿದವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವರದಿಗಳ ಪ್ರಕಾರ, ಅಮರನಾಥ ಗುಹೆಗೆ ಹೋಗುವ ಅವಳಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಕೇಂದ್ರ ಅರೆಸೈನಿಕ ಪಡೆಗಳ ಹೆಚ್ಚುವರಿ ಕಂಪನಿಗಳನ್ನು ನಿಯೋಜಿಸಲಾಗುತ್ತಿದೆ.
ಅಮರನಾಥ ಗುಹೆಗೆ ಹೋಗುವ ಎರಡು ಮಾರ್ಗಗಳಲ್ಲಿ ಒಂದು ಪಹಲ್ಗಾಮ್ ಮೂಲಕ ಹಾದುಹೋಗುತ್ತದೆ. ಅಲ್ಲಿಯೇ ಏಪ್ರಿಲ್ ತಿಂಗಳಿನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಪಹಲ್ಗಾಮ್ ದಾಳಿಯ ನಂತರ ಭದ್ರತಾ ಕ್ರಮವಾಗಿ ಪ್ರವಾಸಿಗರಿಗೆ ಮುಚ್ಚಲಾಗಿದ್ದ ಕಾಶ್ಮೀರದಲ್ಲಿನ ಪ್ರವಾಸಿ ತಾಣಗಳನ್ನು ಕ್ರಮೇಣ ಪುನಃ ತೆರೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಪಹಲ್ಗಾಮ್ನಲ್ಲಿ ನಡೆದ ಹತ್ಯಾಕಾಂಡದ ನಂತರ 48 ಪ್ರವಾಸಿ ತಾಣಗಳನ್ನು ಮುಚ್ಚಲಾಯಿತು. ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದ್ದ ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷ ಭಾರಿ ಕುಸಿತಕ್ಕೆ ಕಾರಣವಾಗಿದೆ.