ನಕಲಿ ಸಿಬಿಎಸ್ಇ ಅಂಕಪಟ್ಟಿ ಹಗರಣ: ಪ್ರಾಂಶುಪಾಲ ಆನಂದ ಕುಂಬಾರ್ ವಿರುದ್ಧ ದೋಷಾರೋಪ ಪಟ್ಟಿ

ಆನಂದ ಕುಂಬಾರ್
ಬೆಂಗಳೂರು, ಜು.18: ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್ಲಾಗ್ ಹುದ್ದೆ ಪಡೆಯಲು ನಕಲಿ ಸಿಬಿಎಸ್ಇ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ ಕುಂಬಾರ್ ಎಂಬವರಿಗೆ ಸರಕಾರವು ಒಂದು ವರ್ಷದ ನಂತರ ದೋಷಾರೋಪ ವಿವರಣೆ ಪಟ್ಟಿ ಜಾರಿಗೊಳಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದ ಆನಂದ ಕುಂಬಾರ್ ಅವರು ನಕಲಿ ಸಿಬಿಎಸ್ಇ ಅಂಕಪಟ್ಟಿ ಸೃಷ್ಟಿ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಮತ್ತು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಇದಾದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಇದೀಗ ಆರೋಪಿ ಆನಂದ ಕುಂಬಾರ್ ಎಂಬವರಿಗೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1957ರ ನಿಯಮ 11ರ ಅಡಿ ನೋಟಿಸ್ ನೀಡಿದೆ. ಜತೆಗೆ ದೋಷಾರೋಪ ವಿವರಣೆ ಪಟ್ಟಿಯನ್ನೂ ಆರೋಪಿ ಆನಂದ್ ಕುಂಬಾರ್ಗೆ ಜಾರಿಗೊಳಿಸಿದೆ.
2025ರ ಜುಲೈ 8ರಂದು ಜಾರಿಗೊಳಿಸಿರುವ ನೋಟಿಸ್ ಮತ್ತು ದೋಷಾರೋಪ ವಿವರಣೆ ಪಟ್ಟಿಯು ‘the-file.in’ಗೆ ಲಭ್ಯವಾಗಿದೆ.
ಪ್ರಕರಣದ ವಿವರ: ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಪರಿಶಿಷ್ಟ ಜಾತಿಯ 182 ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಮೆರಿಟ್ ಆಧಾರದ ಮೇಲೆ 1:3 ಅನುಪಾತದಲ್ಲಿ 546 ಅಭ್ಯರ್ಥಿಗಳಿಗೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಅರ್ಹ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿಗಳ ನೈಜತೆಯ ಪರೀಕ್ಷೆಗಾಗಿ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗಳಿಗೆ ಕಳಿಸಿತ್ತು.
ಈ ಪೈಕಿ 24 ಅಭ್ಯರ್ಥಿಗಳು ಸಲ್ಲಿಸಿದ್ದ ದ್ವಿತೀಯ ಪಿಯುಸಿ ಅಂಕಪಟ್ಟಿ, 8 ಅಭ್ಯರ್ಥಿಗಳು ಸಲ್ಲಿಸಿದ್ದ ಎನ್ಐಒಎಸ್ ಅಂಕಪಟ್ಟಿ ಮತ್ತು 30 ಅಭ್ಯರ್ಥಿಗಳು ಸಲ್ಲಿಸಿದ್ದ ಸಿಬಿಎಸ್ಇ ಅಂಕಪಟ್ಟಿ ಸೇರಿದಂತೆ ಒಟ್ಟಾರೆ 62 ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿಯಾಗಿದ್ದವು. ಈ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳನ್ನು ನೀಡಿ ಉದ್ಯೋಗ ಪಡೆಯಲು ಪ್ರಯತ್ನಿಸಿದ್ದರು.
ಈ ಸಂಬಂಧ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿಯು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರನ್ನಾಧರಿಸಿ ಎಫ್ಐಆರ್ ದಾಖಲಿಸಿತ್ತು.
ನಕಲಿ ಅಂಕಪಟ್ಟಿಯನ್ನು ಸಲ್ಲಿಸಿದ್ದ ಕಲಬುರಗಿ ಜಿಲ್ಲೆಯ 25 ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಗೆ ಒಳಪಟ್ಟಿದ್ದ ಅಭ್ಯರ್ಥಿಗಳು ಆನಂದ್ ಕುಂಬಾರ್ ಅವರ ಹೆಸರನ್ನು ಬಾಯಿಬಿಟ್ಟಿದ್ದರು.
‘ಆನಂದ್ ಕುಂಬಾರ್, ಸಿಬಿಎಸ್ಇಯ ನಕಲಿ ಅಂಕಪಟ್ಟಿ ಸೃಷ್ಟಿಸುವ ಕೃತ್ಯದಲ್ಲಿ ಭಾಗಿಯಾಗಿ ನಕಲಿ ಅಂಕಪಟ್ಟಿಗಳನ್ನು ಅಭ್ಯರ್ಥಿಗಳಿಗೆ ತರಿಸಿಕೊಟ್ಟು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 2024ರ ಜುಲೈ 6ರಂದು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು’ ಎಂದು ದೋಷಾರೋಪ ವಿವರಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಆನಂದ್ ಕುಂಬಾರ್ ಅವರು 76ನೇ ಆರೋಪಿಯಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆನಂದ್ ಕುಂಬಾರ್, ಒಟ್ಟು 7 ಜನ ಅಭ್ಯರ್ಥಿಗಳೊಂದಿಗೆ ಹಣಕಾಸಿನ ವ್ಯವಹಾರ ಮಾಡಿರುವುದು ಕಂಡು ಬಂದಿತ್ತು.