ವಿಜಯಪುರ | ಬಸವನಬಾಗೇವಾಡಿ ಕೆನರಾ ಬ್ಯಾಂಕ್ ನಿಂದ 58 ಕೆ.ಜಿ ಚಿನ್ನಾಭರಣ ಕಳ್ಳತನ
ದುಷ್ಕರ್ಮಿಗಳ ಪತ್ತೆಗಾಗಿ ಎಂಟು ತಂಡ ರಚನೆ

ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಇತ್ತೀಚಿಗೆ ವಿಜಯಪುರ ಜಿಲ್ಲೆಯ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ನ ಮುಂಭಾಗದ ಬಾಗಿಲಿನ ಕೀ ಮುರಿದು ಕಳ್ಳತನ ಮಾಡಿರುವಂತಹ ಘಟನೆ ನಡೆದಿತ್ತು.
ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬ್ಯಾಂಕಿನ ಮುಖ್ಯ ದ್ವಾರದ ಶೆಟರ್ಸ್ ಗೆ ಹಾಕಿದ ಕೀಲಿ ಮತ್ತು ಕಿಟಕಿಯ ಸರಳುಗಳನ್ನು ಮುರಿದು ಒಳಗೆ ಪ್ರವೇಶಿಸಿದ ದರೋಡೆಕೋರರು, ಬಂಗಾರದ ಆಭರಣ ಮತ್ತು ನಗದು ಇಟ್ಟಿದ್ದ ಸೇಪ್ ಲಾಕರ್ ನ ಕೀಲಿ ತೆಗೆದು ಅದರ ಒಳಗೆ ಇರುವ ಕಬ್ಬಿಣದ ಬಾಗಿಲಿನ ಸರಳುಗಳನ್ನು ಕಟ್ ಮಾಡಿ ಒಳ ಹೊಕ್ಕು, ಕಬ್ಬಿಣದ ಟ್ರಜರಿಯಲ್ಲಿ ಇದ್ದ ಚಿನ್ನಾಭರಣ, ನಗದು ಹೊತ್ತೊಯ್ದಿದ್ದರು ಎಂದು ತಿಳಿಸಿದ್ದಾರೆ.
ಮೇ 23ರಿಂದ 25ರ ನಡುವೆ ಬ್ಯಾಂಕಿನ ದರೋಡೆ ನಡೆದಿದ್ದು, ಈ ಸಂಬಂಧ ಮೇ 26ರಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಕಲ್ಮೇಶ ಪೂಜಾರಿ ಎಂಬವರು ದೂರು ನೀಡಿದ್ದರು. ದರೋಡೆಕೋರರ ಪತ್ತೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಮತ್ತು ಪತ್ತೆ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.