ವಿಜಯನಗರ | ʼವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ’
ಹದಿಹರೆಯದವರಲ್ಲಿ ಸ್ಕಿಜೋಫ್ರೀನಿಯಾ ಸಮಸ್ಯೆ ಹೆಚ್ಚು : ಡಾ.ಅನಿಲ್ ಕುಮಾರ್
ವಿಜಯನಗರ(ಹೊಸಪೇಟೆ) : ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುವ ಸ್ಕಿಜೋಫ್ರೀನಿಯಾ ಸಮಸ್ಯೆಯು ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣಮುಖವಾಗಲು ಸಾಧ್ಯವಿದೆ ಎಂದು ಮನೋವೈದ್ಯ ಡಾ.ಜಿ.ಅನಿಲ್ ಕುಮಾರ್ ಹೇಳಿದರು.
ನಗರದ ಸಂಕ್ಲಾಪುರ ಟಿಎಂಎಇ ಸಂಸ್ಥೆಯ ಸ್ಕೂಲ್ ಮತ್ತು ಕಾಲೇಜು ಆಪ್ ನರ್ಸಿಂಗ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಏರ್ಪಡಿಸಿದ್ದ ‘ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಬುಧವಾರ ಮಾತನಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ವಿನೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕವಾಗಿ 300 ವ್ಯಕ್ತಿಗಳಲ್ಲಿ, ಒಬ್ಬರಿಗೆ ಸ್ಕಿಜೋಫ್ರೀನಿಯಾ ರೋಗ ಕಾಣಿಸಿಕೊಳ್ಳುತ್ತದೆ. ಪದೇ ಪದೇ ತೀವ್ರತರವಾದ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರಬಹುದು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಟೆಲಿ ಮನಸ್ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದರು. ಈ ವೇಳೆ ಟಿಎಂಎಇ ಸಂಸ್ಥೆಯ ನಿರ್ದೇಶಕರಾದ ಟಿ.ಎಂ.ಶಿವಶಂಕರ, ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಎನ್.ಸೋಮಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಜಿಲ್ಲಾ ಮಾನಸಿಕ ಆರೋಗ್ಯ ಸಮಾಜ ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಯವರು ಮತ್ತು ಟಿಎಂಎಇ ಸಂಸ್ಥೆಯ ಕಾಲೇಜು ಆಪ್ ನರ್ಸಿಂಗ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.