ವಿಜಯನಗರ | ರಾಜ್ಯದಲ್ಲಿ ನಟ ಕಮಲ್ ಹಾಸನ್ ನಟನೆಯ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಕರವೇ ಪ್ರತಿಭಟನೆ

ವಿಜಯನಗರ : ನಟ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ವಿಜಯನಗರ ಜಿಲ್ಲಾ ಕರವೇ (ನಾರಾಯಣ ಗೌಡ) ಬಣದ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪರವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಮಲ್ ಹಾಸನ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ, ಕನ್ನಡ ಭಾಷೆ ಹುಟ್ಟಿದ್ದೇ ತಮಿಳು ಭಾಷೆಯಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಚಿತ್ರನಟ ಕಮಲ್ ಹಾಸನ್ ಹೇಳಿಕೆ ಖಂಡನೀಯ. ಈ ಮೂಲಕ ಅಸಂಖ್ಯಾತ ಕನ್ನಡಿಗರ ಭಾವನೆಗಳನ್ನು ಕಮಲ್ ಹಾಸನ್ ಕೆಣಕಿದ್ದಾರೆ. ಹಾಗಾಗಿ ಅವರ ನಟನೆಯ ಮುಂದಿನ ಎಲ್ಲ ಸಿನಿಮಾಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಂತೆ ಸರಕಾರ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಾಫರ್, ಪ್ರಶಾಂತ್, ಸುರೇಶ, ಶಮಾ, ಯೋಗಲಕ್ಷ್ಮಿ, ಆರ್ಮುಗಂ, ರಾಘವೇಂದ್ರ, ಕಟಕಿ ಸಾದಿಕ್, ಹುಲಗಪ್ಪ ಮತ್ತು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.