Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಭಾರತ-ಪಾಕಿಸ್ತಾನ ನಡುವಿನ ಯುದ್ಧಗಳು...

ಭಾರತ-ಪಾಕಿಸ್ತಾನ ನಡುವಿನ ಯುದ್ಧಗಳು ಮತ್ತು ಸಂಘರ್ಷಗಳು

ಆರ್. ಜೀವಿಆರ್. ಜೀವಿ13 May 2025 10:00 AM IST
share
ಭಾರತ-ಪಾಕಿಸ್ತಾನ ನಡುವಿನ ಯುದ್ಧಗಳು ಮತ್ತು ಸಂಘರ್ಷಗಳು

ಪಹಲ್ಗಾಮ್ ದಾಳಿಗೆ ಪ್ರತೀಕಾರದ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಹೆಸರಿನ ಕಾರ್ಯಾಚರಣೆ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಭಾರತ ಪಾಕಿಸ್ತಾನದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸದೆ, ಭಯೋತ್ಪಾದಕ ನೆಲೆಗಳನ್ನಷ್ಟೇ ಧ್ವಂಸಗೊಳಿಸಿತ್ತು. ಆದರೆ ಪಾಕಿಸ್ತಾನ ಭಾರತದ ನಾಗರಿಕರನ್ನು ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಹಲವು ಅಮಾಯಕರ ಬಲಿ ತೆಗೆದುಕೊಂಡಿತು. ಗಡಿ ಪ್ರದೇಶಗಳ ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತಾಗಿದೆ. ಭಾರತ ಕೂಡ ಅಷ್ಟೇ ತೀವ್ರ ಪ್ರತ್ಯುತ್ತರ ಕೊಟ್ಟ ಬಳಿಕ ಪಾಕಿಸ್ತಾನ ತತ್ತರಿಸಿದೆ. ಕದನ ವಿರಾಮದ ನಡುವೆಯೂ ಪಾಕಿಸ್ತಾನ ತನ್ನದೇ ಬುದ್ಧಿ ತೋರಿಸಿದರೆ ಪ್ರತ್ಯುತ್ತರಕ್ಕೆ ಭಾರತ ಸನ್ನದ್ಧವಾಗಿಯೇ ಇತ್ತು. ಈ ಹೊತ್ತಿನಲ್ಲಿ ಭಾರತ ಪಾಕಿಸ್ತಾನ ನಡುವಿನ ಈವರೆಗಿನ ಯುದ್ಧಗಳು ಮತ್ತು ಸಂಘರ್ಷಗಳ ಒಂದು ಹಿನ್ನೋಟ ಇಲ್ಲಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಈವರೆಗೆ ಪ್ರಮುಖವಾಗಿ ನಾಲ್ಕು ಯುದ್ಧಗಳು ಸಂಭವಿಸಿವೆ. ಮೊದಲ ಇಂಡೋ-ಪಾಕ್ ಯುದ್ಧ ವಿಶ್ವಸಂಸ್ಥೆ ಕದನ ವಿರಾಮ ಘೋಷಿಸುವುದರೊಂದಿಗೆ ಕೊನೆಯಾಯಿತು. ಅನಂತರದ ಮೂರೂ ಯುದ್ಧಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲು ಕಂಡಿದೆ.

1947ರಲ್ಲಿ ಬ್ರಿಟಿಷ್ ಭಾರತದ ವಿಭಜನೆಯಾಗಿ, ಭಾರತ ಮತ್ತು ಪಾಕಿಸ್ತಾನ ಎಂದು ಎರಡು ದೇಶಗಳ ರಚನೆಯಾದ ನಂತರ ಯುದ್ಧಗಳು, ಸಂಘರ್ಷಗಳು ಮತ್ತು ಮಿಲಿಟರಿ ಮುಖಾಮುಖಿ ನಡೆಯುತ್ತಲೇ ಇವೆ. ಕಾಶ್ಮೀರದ ಕುರಿತಾದ ದೀರ್ಘಕಾಲದ ವಿವಾದ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣ. 1971ರ ಭಾರತ-ಪಾಕಿಸ್ತಾನ ಯುದ್ಧ ಮಾತ್ರ ಇದಕ್ಕೆ ಹೊರತಾಗಿತ್ತು. ಆಗ ಬಾಂಗ್ಲಾದೇಶ ಲಿಬರೇಷನ್ ಯುದ್ಧದಲ್ಲಿ ಬಾಂಗ್ಲಾದ ಪರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧಕ್ಕಿಳಿದಿತ್ತು.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಪ್ರಮುಖ ಯುದ್ಧಗಳು:

1. ಮೊದಲ ಇಂಡೋ-ಪಾಕ್ ಯುದ್ಧ -1947

ಸ್ವಾತಂತ್ರ್ಯಾನಂತರ ಪಾಕಿಸ್ತಾನದೊಂದಿಗೆ ಭಾರತ ನಡೆಸಿದ ಮೊದಲ ಯುದ್ಧ ಇದಾಗಿತ್ತು. ಮೊದಲ ಕಾಶ್ಮೀರ ಯುದ್ಧ ಎಂದೂ ಇದನ್ನು ಕರೆಯಲಾಗುತ್ತದೆ. ಕಾಶ್ಮೀರ ಮತ್ತು ಜಮ್ಮುವಿನ ಮಹಾರಾಜರು ಭಾರತ ಒಕ್ಕೂಟವನ್ನು ಸೇರುತ್ತಾರೆ ಎಂದು ಭಯಪಟ್ಟ ಪಾಕಿಸ್ತಾನ ದಾಳಿ ನಡೆಸಿದಾಗ 1947ರ ಅಕ್ಟೋಬರ್‌ನಲ್ಲಿ ಈ ಯುದ್ಧ ಪ್ರಾರಂಭವಾಯಿತು.

ರಾಜಪ್ರಭುತ್ವದ ರಾಜ್ಯಗಳಲ್ಲಿ ಅತಿ ದೊಡ್ಡದಾದ ಜಮ್ಮು- ಕಾಶ್ಮೀರವನ್ನು ಆಗ ಮಹಾರಾಜ ಹರಿಸಿಂಗ್ ಆಳುತ್ತಿದ್ದರು. ಪಾಕಿಸ್ತಾನದ ಸೈನ್ಯದ ಬೆಂಬಲದೊಂದಿಗೆ ಬುಡಕಟ್ಟು ಸೇನಾ ಪಡೆಗಳು ರಾಜಪ್ರಭುತ್ವದ ಕೆಲ ಭಾಗಗಳ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡವು. ಆಗ ಮಹಾರಾಜ ಹರಿಸಿಂಗ್ ಭಾರತೀಯ ಮಿಲಿಟರಿ ನೆರವು ಪಡೆದು ಜಮ್ಮು-ಕಾಶ್ಮೀರವನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದರು. ಭಾರತ ಆ ಪ್ರದೇಶವನ್ನು ರಕ್ಷಿಸಲು ಸೇನೆಯನ್ನು ಕಳಿಸಿತು.

ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷ ನಡೆಯಿತು.

1949ರವರೆಗೂ ಯುದ್ಧ ಮುಂದುವರಿದಿತ್ತು. ಬಳಿಕ ವಿಶ್ವಸಂಸ್ಥೆ 1949ರ ಜನವರಿ 1ರಂದು ಔಪಚಾರಿಕ ಕದನ ವಿರಾಮವನ್ನು ಘೋಷಿಸಿತು. ಇದರ ಪರಿಣಾಮವಾಗಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಭಜನೆಯಾಯಿತು. ಜಮ್ಮು ಕಾಶ್ಮೀರದ ಸುಮಾರು ಮೂರನೇ ಎರಡರಷ್ಟು ಭಾಗದ ಮೇಲೆ, ಅಂದರೆ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್ ಮೇಲೆ ಭಾರತ ಹಿಡಿತ ಸಾಧಿಸಿತು. ಪಾಕಿಸ್ತಾನ ಕಾಶ್ಮೀರದ ಸರಿಸುಮಾರು ಮೂರನೇ ಒಂದು ಭಾಗ, ಅಂದರೆ ಆಝಾದ್ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ಗಳನ್ನು ಆಕ್ರಮಿಸಿತು. ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳನ್ನು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಕರೆಯಲಾಗುತ್ತದೆ.

2. ಎರಡನೇ ಇಂಡೋ-ಪಾಕ್ ಯುದ್ಧ-1965

ಈ ಯುದ್ಧ ಪಾಕಿಸ್ತಾನದ ಆಪರೇಷನ್ ಜಿಬ್ರಾಲ್ಟರ್ ನಂತರ ಪ್ರಾರಂಭವಾಯಿತು. ಅದು ಭಾರತದ ವಿರುದ್ಧ ದಂಗೆಯನ್ನು ಪ್ರಚೋದಿಸಲು ಜಮ್ಮು-ಕಾಶ್ಮೀರಕ್ಕೆ ಪಡೆಗಳ ಒಳನುಸುಳುವಿಕೆಗಾಗಿ ನಡೆದ ಕಾರ್ಯಾಚರಣೆಯಾಗಿತ್ತು. ಸಾವಿರಾರು ಪಾಕಿಸ್ತಾನಿ ಸೈನಿಕರು ಸ್ಥಳೀಯ ದಂಗೆಕೋರರ ಸೋಗಿನಲ್ಲಿ ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆ ಮೂಲಕ ಭಾರತದೊಳಕ್ಕೆ ನುಸುಳಿದ್ದರು.

1965ರ ಆಗಸ್ಟ್ 5ರಂದು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಭಾರತ ಪಶ್ಚಿಮ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು.

1965ರ ಸೆಪ್ಟಂಬರ್ 23ರವರೆಗೆ ಯುದ್ಧ ಮುಂದುವರಿದಿತ್ತು. ಬಳಿಕ ಸೋವಿಯತ್ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಪರಿಣಾಮವಾಗಿ ಕದನ ವಿರಾಮ ಘೋಷಣೆಯಾಯಿತು. ಕದನ ವಿರಾಮ ಘೋಷಿಸಿದಾಗ ಭಾರತ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿತ್ತು.

3. ಬಾಂಗ್ಲಾದೇಶ ಲಿಬರೇಷನ್ ಯುದ್ಧ 1971

ಈ ಯುದ್ಧಕ್ಕೆ ಕಾಶ್ಮೀರದ ಸಮಸ್ಯೆ ಕಾರಣವಾಗಿರಲಿಲ್ಲ. ಆದರೆ, ಈಗ ಬಾಂಗ್ಲಾದೇಶ ಎಂದಾಗಿರುವ ಪೂರ್ವ ಪಾಕಿಸ್ತಾನದ ನಾಯಕ ಶೇಕ್ ಮುಜೀಬುರಹ್ಮಾನ್ ಮತ್ತು ಪಶ್ಚಿಮ ಪಾಕಿಸ್ತಾನದ ನಾಯಕರಾದ ಯಹ್ಯಾ ಖಾನ್ ಮತ್ತು ಝುಲ್ಫಿಕರ್ ಅಲಿ ಭುಟ್ಟೋ ನಡುವೆ ನಡೆದ ರಾಜಕೀಯ ಯುದ್ಧದಿಂದ ಉಂಟಾದ ಬಿಕ್ಕಟ್ಟಿನಿಂದ ಈ ಯುದ್ಧಸ್ಥಿತಿ ತಲೆದೋರಿತ್ತು. ಅಂತಿಮವಾಗಿ ಇದು ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರವಾಗುವುದರೊಂದಿಗೆ ಕೊನೆಯಾಗಿತ್ತು.

ಭಾರತ ಬಾಂಗ್ಲಾದೇಶ ವಿಮೋಚನಾ ಚಳವಳಿಯಲ್ಲಿ ಮಧ್ಯಪ್ರವೇಶಿಸಿತ್ತು. ಪಾಕಿಸ್ತಾನದ ದೊಡ್ಡ ಪ್ರಮಾಣದ ದಾಳಿಯ ನಂತರ, ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಯಿತು. ಪಾಕಿಸ್ತಾನ ಭಾರತದೊಂದಿಗಿನ ತನ್ನ ಪಶ್ಚಿಮ ಗಡಿಯಲ್ಲಿ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿತು. ಆದರೆ ಭಾರತೀಯ ಸೇನೆ ಯಶಸ್ವಿಯಾಗಿ ಅದನ್ನು ಎದುರಿಸಿತ್ತು.

ಭಾರತೀಯ ಸೇನೆ ಪಾಕಿಸ್ತಾನ ಸೇನೆಯ ನಡೆಗಳಿಗೆ ತೀವ್ರ ಮತ್ತು ತ್ವರಿತ ರೀತಿಯಲ್ಲಿ ಪ್ರತಿಕ್ರಿಯಿಸಿತಲ್ಲದೆ, ಪಾಕಿಸ್ತಾನದ ಸುಮಾರು 15,010 ಚದರ ಕಿಲೋಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿತು. ಪಾಕಿಸ್ತಾನಿ ಪಂಜಾಬ್ ಮತ್ತು ಸಿಂಧ್ ವಲಯಗಳನ್ನು ಭಾರತ ವಶಪಡಿಸಿಕೊಂಡಿತ್ತು. ಆದರೆ 1972ರ ಶಿಮ್ಲಾ ಒಪ್ಪಂದದಲ್ಲಿ ಅದನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲಾಯಿತು. ತೀವ್ರ ಹೋರಾಟ ಎರಡು ವಾರಗಳವರೆಗೆ ನಡೆದು, ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆ ಭಾರತ ಮತ್ತು ಬಾಂಗ್ಲಾದೇಶ ಪಡೆಗಳ ಜಂಟಿ ಹೋರಾಟದೆದುರು ಶರಣಾಯಿತು. ನಂತರ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ ರಚನೆಯಾಯಿತು. ಈ ಯುದ್ಧದ ಪರಿಣಾಮವಾಗಿ ಪಾಕಿಸ್ತಾನ ತನ್ನ ನೌಕಾಪಡೆಯ ಅರ್ಧದಷ್ಟು, ವಾಯುಪಡೆಯ ಕಾಲು ಭಾಗ ಮತ್ತು ಸೈನ್ಯದ ಮೂರನೇ ಒಂದು ಭಾಗವನ್ನು ಕಳೆದುಕೊಂಡಿತು ಎನ್ನಲಾಗಿದೆ.

4. ಕಾರ್ಗಿಲ್ ಯುದ್ಧ-1999

1999ರ ಆರಂಭದಲ್ಲಿ ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆ ದಾಟಿ ಭಾರತದ ಭೂಪ್ರದೇಶವನ್ನು ಪ್ರಮುಖವಾಗಿ ಕಾರ್ಗಿಲ್ ಜಿಲ್ಲೆಯಲ್ಲಿ ಆಕ್ರಮಿಸಿಕೊಂಡವು. ಪಾಕಿಸ್ತಾನಿ ನುಸುಳುಕೋರರನ್ನು ಓಡಿಸಲು ಭಾರತ ಪ್ರಮುಖ ಮಿಲಿಟರಿ ಮತ್ತು ರಾಜತಾಂತ್ರಿಕ ದಾಳಿಯನ್ನು ಪ್ರಾರಂಭಿಸಿತು. 1999ರ ಮೇನಿಂದ ಜುಲೈ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕಾರ್ಗಿಲ್ ಯುದ್ಧ ನಡೆಯಿತು. ಇದಕ್ಕೆ ಭಾರತ ಆಪರೇಷನ್ ವಿಜಯ್ ಎಂದು ಹೆಸರಿಟ್ಟಿತ್ತು.

ಸಂಘರ್ಷದ ಎರಡು ತಿಂಗಳ ನಂತರ ಭಾರತೀಯ ಪಡೆಗಳು ಒಳನುಸುಳುಕೋರರು ಆಕ್ರಮಿಸಿಕೊಂಡಿದ್ದ ಹೆಚ್ಚಿನ ಭಾಗಗಳನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಂಡವು. ಮಿಲಿಟರಿ ಸಂಘರ್ಷದಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗುವ ಭಯದಿಂದ, ಯುಎಸ್ ನೇತೃತ್ವದ ಅಂತರ್‌ರಾಷ್ಟ್ರೀಯ ಸಮುದಾಯ ಉಳಿದ ಭಾರತೀಯ ಪ್ರದೇಶದಿಂದ ಪಡೆಗಳನ್ನು ಹಿಂದೆಗೆದುಕೊಳ್ಳುವಂತೆ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಿತು. ಆಗಲೇ ದುರ್ಬಲವಾಗಿದ್ದ ಪಾಕಿಸ್ತಾನಿ ಆರ್ಥಿಕತೆಯು ಮತ್ತಷ್ಟು ದುರ್ಬಲಗೊಂಡಿತ್ತು.

ಪಾಕಿಸ್ತಾನ ಆರಂಭದಲ್ಲಿ ತನ್ನ ಅನೇಕ ಸಾವುನೋವುಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ನಂತರ ನವಾಝ್ ಷರೀಫ್ ಈ ಕಾರ್ಯಾಚರಣೆಯಲ್ಲಿ 4,000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ ಸೋತಿದೆ ಎಂದು ಹೇಳಿದರು. 1999ರ ಜುಲೈ ಅಂತ್ಯದ ವೇಳೆಗೆ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಗೆ ದೊಡ್ಡ ಸೋಲಾಗಿತ್ತು. 1999ರ ಜುಲೈ 26ರಂದು ಭಾರತ ತನ್ನ ನಿಯಂತ್ರಣವನ್ನು ಮರಳಿ ಪಡೆಯುವುದರೊಂದಿಗೆ ಯುದ್ಧ ಕೊನೆಗೊಂಡಿತು. ಆ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ.

ಇವು ಭಾರತ-ಪಾಕ್ ನಡುವಿನ ಪ್ರಮುಖ ಯುದ್ಧಗಳಾದರೆ, ಇದರ ಹೊರತಾಗಿ ಆಗಾಗ ಎರಡೂ ರಾಷ್ಟ್ರಗಳ ನಡುವೆ ಪ್ರಾದೇಶಿಕ ಸಂಘರ್ಷಗಳು ನಡೆದಿವೆ. ಅವು ಸಂಪೂರ್ಣ ಯುದ್ಧದ ಹಂತಕ್ಕೆ ಹೋಗಿರಲಿಲ್ಲ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1. ಕಛ್ ಸಂಘರ್ಷ-1965

ಕಛ್ ಸಂಘರ್ಷ 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಕ್ಷಿಪ್ತ ಆದರೆ ಮಹತ್ವದ ಮಿಲಿಟರಿ ಮುಖಾಮುಖಿಯಾಗಿತ್ತು. ಇದು ಭಾರತದ ಪಶ್ಚಿಮ ಭಾಗದಲ್ಲಿರುವ ವಿವಾದಿತ ಪ್ರದೇಶವಾದ ಕಛ್‌ನ ರಣ್ ಸುತ್ತ ಕೇಂದ್ರೀಕೃತವಾಗಿತ್ತು. ಆಪರೇಷನ್ ಡಸರ್ಟ್ ಹಾಕ್ ಹೆಸರಿನಲ್ಲಿ ಪಾಕಿಸ್ತಾನ ಸೇನೆ ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆ ಸಮಯದಲ್ಲಿ, ರಣ್ ಆಫ್ ಕಛ್ ಭಾರತದ ನಿಯಂತ್ರಣದಲ್ಲಿತ್ತು. ಆದರೆ ಅದರ ಗಡಿ 1947ರ ಭಾರತದ ವಿಭಜನೆಯಿಂದ ಉಂಟಾದ ಕೆಲ ಬಗೆಹರಿಯದ ಪ್ರಾದೇಶಿಕ ವಿವಾದಗಳಲ್ಲಿ ಒಂದಾಗಿ ಉಳಿದಿದೆ.

2. ಸಿಯಾಚಿನ್ ಸಂಘರ್ಷ - 1984-2003

ಸಿಯಾಚಿನ್ ಸಂಘರ್ಷವನ್ನು ಸಿಯಾಚಿನ್ ಹಿಮನದಿ ಸಂಘರ್ಷ ಅಥವಾ ಸಿಯಾಚಿನ್ ಯುದ್ಧ ಎಂದು ಕರೆಯಲಾಗುತ್ತದೆ.

ಇದು ಕಾಶ್ಮೀರದ ವಿವಾದಿತ 1,000 ಚದರ ಮೈಲಿ ಸಿಯಾಚಿನ್ ಹಿಮನದಿ ಪ್ರದೇಶದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವಾಗಿತ್ತು. 1984ರಲ್ಲಿ ಭಾರತ ಆಪರೇಷನ್ ಮೇಘದೂತ್ ಭಾಗವಾಗಿ ಸಿಯಾಚಿನ್ ಹಿಮನದಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡಾಗ ಈ ಸಂಘರ್ಷ ಪ್ರಾರಂಭವಾಯಿತು. 1987ರಲ್ಲಿ ಆಪರೇಷನ್ ರಾಜೀವ್ ನಡೆಯುವುದರೊಂದಿಗೆ ಈ ಸಂಘರ್ಷ ಮುಂದುವರಿಯಿತು.

ಭಾರತ 70 ಕಿ.ಮೀ. ಉದ್ದದ ಸಿಯಾಚಿನ್ ಹಿಮನದಿ ಮತ್ತು ಅದರ ಉಪನದಿಗಳನ್ನು ಹಾಗೂ ಸಿಯಾ ಲಾ, ಬಿಲಾಫೊಂಡ್ ಲಾ ಮತ್ತು ಗ್ಯೋಂಗ್ ಲಾ ಸೇರಿದಂತೆ ಹಿಮನದಿಯ ಪಶ್ಚಿಮಕ್ಕೆ ಸಾಲ್ಟೊರೊ ರಿಡ್ಜ್‌ನ ಎಲ್ಲಾ ಮುಖ್ಯ ಪಾಸ್‌ಗಳು ಮತ್ತು ಎತ್ತರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. 2003ರಲ್ಲಿ ಕದನ ವಿರಾಮ ಜಾರಿಗೆ ಬಂತು.

ಆದರೆ ಎರಡೂ ದೇಶಗಳು ಈ ಪ್ರದೇಶದಲ್ಲಿ ಭಾರೀ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಂಡಿವೆ.

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಗಮನಾರ್ಹ ಮಿಲಿಟರಿ ಘರ್ಷಣೆಗಳು, ಗಡಿ ಘಟನೆಗಳು ಮತ್ತು ಬಿಕ್ಕಟ್ಟುಗಳದ್ದೇ ಒಂದು ಪಟ್ಟಿಯಿದೆ. ಅವುಗಳಲ್ಲಿ ಉರಿ ದಾಳಿ ಮತ್ತು ಪುಲ್ವಾಮಾ ದಾಳಿಗೆ ಭಾರತದ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಗಳೂ ಸೇರಿವೆ.

1. ಭಾರತ-ಪಾಕಿಸ್ತಾನ ನಡುವಿನ 1986-1987ರ ಬಿಕ್ಕಟ್ಟು

ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಲು ಕಾರಣವಾಗಿತ್ತು. ಮತ್ತೊಂದು ಯುದ್ಧಕ್ಕೆ ಕಾರಣವಾಗಬಹುದು ಎಂಬ ಭಯದ ವಾತಾವರಣ ಉಂಟಾಗಿತ್ತು.

2. ಭಾರತೀಯ ವಾಯುಪ್ರದೇಶ ಉಲ್ಲಂಘನೆ

ಪಾಕಿಸ್ತಾನಿ ನೌಕಾಪಡೆಯ ಬ್ರೆಗುಟ್ 1150 ಅಟ್ಲಾಂಟಿಕ್ ಕಡಲ ಗಸ್ತು ವಿಮಾನವನ್ನು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ 1999ರ ಆಗಸ್ಟ್ 10ರಂದು ಭಾರತೀಯ ವಾಯುಪಡೆ ಹೊಡೆದುರುಳಿಸಿತು. ಕಾರ್ಗಿಲ್ ಯುದ್ಧದ ಕೇವಲ ಒಂದು ತಿಂಗಳ ನಂತರ, ಕಛ್‌ನ ರಣ್‌ನಲ್ಲಿ ಈ ಘಟನೆ ಸಂಭವಿಸಿತು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ವಿಮಾನದಲ್ಲಿದ್ದ ಎಲ್ಲಾ 16 ಸಿಬ್ಬಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನ ಈ ಘಟನೆಗೆ ಪರಿಹಾರ ಕೋರಿ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ದಾವೆ ಹೂಡಿತು. ಆದರೆ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಈ ವಿಷಯ ನ್ಯಾಯವ್ಯಾಪ್ತಿಯ ಕೊರತೆ ಹೊಂದಿದೆ ಎಂದು ತೀರ್ಪು ನೀಡಿ, ಪ್ರಕರಣ ವಜಾಗೊಳಿಸಿತು.

3. 2001-2002ರ ಬಿಕ್ಕಟ್ಟು

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತಯ್ಯಿಬಾ ಮತ್ತು ಜೈಶೆ ಮುಹಮ್ಮದ್ ವಿರುದ್ಧ ಭಾರತ ಆರೋಪ ಹೊರಿಸಿದಾಗ 2001-2002ರ ಅವಧಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಮತ್ತೊಮ್ಮೆ ಬಿಕ್ಕಟ್ಟು ತಲೆದೋರಿತು. ಎರಡೂ ದೇಶಗಳು ಯುದ್ಧಕ್ಕೆ ಹತ್ತಿರವಾದಂಥ ಸನ್ನಿವೇಶ ನಿರ್ಮಾಣವಾಗಿತ್ತು.

4. ಭಾರತ-ಪಾಕಿಸ್ತಾನ ಬಿಕ್ಕಟ್ಟು 2008

ಮುಂಬೈನಾದ್ಯಂತ ಹತ್ತು ಸಂಘಟಿತ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳ ನಂತರ, ಪಾಕಿಸ್ತಾನದ ಐಎಸ್‌ಐ ದಾಳಿಕೋರರನ್ನು ಬೆಂಬಲಿಸುತ್ತಿದೆ ಎಂದು ಭಾರತ ಆರೋಪಿದಾಗ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಆರೋಪವನ್ನು ಪಾಕಿಸ್ತಾನ ನಿರಾಕರಿಸಿತು. ಪಾಕಿಸ್ತಾನ ತನ್ನ ವಾಯುಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿತ್ತಲ್ಲದೆ, ಭಾರತೀಯ ಗಡಿಗೆ ಸೈನ್ಯವನ್ನು ಸ್ಥಳಾಂತರಿಸಿತು. ಆದರೆ ಅಲ್ಪಾವಧಿಯಲ್ಲಿಯೇ ಉದ್ವಿಗ್ನತೆ ತಣ್ಣಗಾಯಿತು ಮತ್ತು ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿಯಿಂದ ಹಿಂದಕ್ಕೆ ತೆಗೆದುಕೊಂಡಿತು.

5. ಉರಿ ದಾಳಿ - 2016

ಜಮ್ಮು-ಕಾಶ್ಮೀರದ ಉರಿಯಲ್ಲಿ ಭಾರತೀಯ ಸೇನೆಯ ಮೇಲೆ 2016ರ ಸೆಪ್ಟಂಬರ್ 18ರಂದು ನಡೆದ ಉಗ್ರಗಾಮಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಉಗ್ರರ ದಾಳಿಯಲ್ಲಿ 19 ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಸೆಪ್ಟಂಬರ್ 28 ಮತ್ತು 29ರಂದು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಲವು ಭಯೋತ್ಪಾದಕರು ಮೃತಪಟ್ಟರು.

6. ಪುಲ್ವಾಮಾ ದಾಳಿ 2019

ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14 ರಂದು ಭಾರತದ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದರು. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಶೆ ಮುಹಮ್ಮದ್ (ಜೆಇಎಂ) ಹೊತ್ತುಕೊಂಡಿತು. 12 ದಿನಗಳ ನಂತರ ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಶಿಬಿರದ ಮೇಲೆ ಏರ್‌ಸ್ಟ್ರೈಕ್ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.

ಇದೆಲ್ಲದರ ಬಳಿಕ ಇತ್ತೀಚೆಗೆ ಎಪ್ರಿಲ್ 22ರಂದು ಜಮ್ಮು -ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಮತ್ತೆ ಬಿಕ್ಕಟ್ಟು ಶುರುವಾಯಿತು. ಲಷ್ಕರೆ ತಯ್ಯಿಬಾ ಜೊತೆ ಸಂಬಂಧ ಹೊಂದಿರುವ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಆರಂಭದಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದು ಆರೋಪಿಸಿತು. ನಂತರ ಭಾರತ ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಿತು ಮತ್ತು ಪಾಕಿಸ್ತಾನದಲ್ಲಿನ ತನ್ನ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿತು.

ವೀಸಾಗಳನ್ನು ಅಮಾನತುಗೊಳಿಸಿತು, ಗಡಿಗಳನ್ನು ಮುಚ್ಚಿತು. ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯಿತು.

ಇದೆಲ್ಲದರ ನಂತರವೂ ಪಾಕಿಸ್ತಾನಕ್ಕೆ ಪ್ರಬಲ ರೀತಿಯಲ್ಲಿ ಪ್ರತ್ಯುತ್ತರ ನೀಡುವುದರ ಭಾಗವಾಗಿ ‘ಆಪರೇಷನ್ ಸಿಂಧೂರ’ ನಡೆಸಲಾಯಿತು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳನ್ನು ಈ ಕಾರ್ಯಾಚರಣೆ ಮೂಲಕ ಭಾರತ ಧ್ವಂಸಗೊಳಿಸಿತು. ಈ ಬೆಳವಣಿಗೆಯಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೊಳಗಾದ ಪಾಕಿಸ್ತಾನ ಹತಾಶ ರೀತಿಯಲ್ಲಿ ಭಾರತದ ಗಡಿ ಪ್ರದೇಶಗಳಲ್ಲಿ ನಾಗರಿಕರನ್ನು ಗುರಿಯಾಗಿಸಿ ಅಪ್ರಚೋದಿತ ದಾಳಿ ನಡೆಸಿದೆ. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ.

ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗಿದೆ. ನೂತನ ಪೋಪ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದರ ನಡುವೆಯೂ ಪಾಕಿಸ್ತಾನ ತನ್ನ ನಿಜ ಸ್ವರೂಪ ತೋರಿಸುತ್ತಲೇ ಇರುವ ವರದಿಗಳೂ ಇವೆ. ಪಾಕಿಸ್ತಾನದ ಪ್ರತಿ ದಾಳಿಗೂ ಅದಕ್ಕಿಂತ ಪ್ರಬಲ ಉತ್ತರ ಕೊಡಲು ನಮ್ಮ ಸೇನೆಯೂ ಸಿದ್ಧವಿದೆ.

share
ಆರ್. ಜೀವಿ
ಆರ್. ಜೀವಿ
Next Story
X