ಅರಣ್ಯ ಭೂಮಿ ಹಸ್ತಾಂತರಕ್ಕೆ ಸುಪ್ರೀಂ ಕೋರ್ಟ್ ಆದೇಶ: ಹಂಗಾಮಿ ಲಾಗಣಿದಾರರು, ಅರಣ್ಯವಾಸಿಗಳಲ್ಲಿ ಆತಂಕ

ಶಿರಸಿ: ಭಾರತದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರದ ಪರವಾನಗಿ ಇಲ್ಲದೆ ಕಂದಾಯ ಇಲಾಖೆಯಿಂದ ಹಸ್ತಾಂತರಗೊಂಡ ಅರಣ್ಯ ಭೂಮಿಯ ವರ್ಗಾವಣೆಯನ್ನು ಅಸಿಂಧು ಎಂದು ಘೋಷಿ ಸಿದ್ದು, ಇಂತಹ ಭೂಮಿಯ ಹಂಚಿಕೆಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ (SIT) ರಚಿಸಿ, ಒಂದು ವರ್ಷದೊಳಗೆ ಅರಣ್ಯ ಇಲಾಖೆಗೆ ಭೂಮಿಯನ್ನು ವಹಿಸಿಕೊಡುವಂತೆ ಆದೇಶಿಸಿದೆ.
ಈ ಆದೇಶದಿಂದ ಹಂಗಾಮಿ ಲಾಗಣಿದಾರರು, 1978ರ ಪೂರ್ವದ ಅತಿಕ್ರಮಣದಾರರು ಮತ್ತು ಅರಣ್ಯ ಭೂಮಿಯನ್ನು ಅವಲಂಬಿಸಿರುವ ಅರಣ್ಯವಾಸಿಗಳಲ್ಲಿ ಆತಂಕ ಮೂಡಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮೇ 15, 2025ರಂದು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಈ ಆದೇಶ ನೀಡಿದೆ. ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ಕುರಿತು ತನಿಖೆ ನಡೆಸಲು ನಿರ್ದೇಶಿಸಲಾಗಿದೆ.
ಕರ್ನಾಟಕದಲ್ಲಿ 14,848 ಹೆಕ್ಟೇರ್ ಭೂಮಿ ಗುರುತು: ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೆ ಬಂದ ನಂತರ, ಏಪ್ರಿಲ್ 27, 1978ಕ್ಕಿಂತ ಮುಂಚಿನ ಕರ್ನಾಟಕದ 19,348 ಪ್ರಕರಣಗಳಿಗೆ ಸಂಬಂಧಿಸಿದ 14,848.83 ಹೆಕ್ಟೇರ್ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ಸುಮಾರು 3000 ಕ್ಕೂ ಮಿಕ್ಕಿ ಹಂಗಾಮಿ ಲಾಗಣಿದಾರರು ವಾರ್ಷಿಕ ಗುತ್ತಿಗೆ ಹಣ ನೀಡಿ ನವೀಕರಣಗೊಳಿಸದೇ ಇರುವದು, ಕೇಂದ್ರ ಸರ್ಕಾರದ ಪರವಾನಗಿ ಇಲ್ಲದೆ ಕಂದಾಯ ಇಲಾಖೆಯಿಂದ 8,000ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಗಾಗಿ ಅರಣ್ಯ ಭೂಮಿಯನ್ನು ವರ್ಗಾಯಿಸಲಾಗಿದೆ. ಇದರ ಜೊತೆಗೆ, ಹಲವು ಹಂಗಾಮಿ ಲಾಗಣಿದಾರರು ವಾರ್ಷಿಕ ಗುತ್ತಿಗೆ ಶುಲ್ಕವನ್ನು ನವೀಕರಿಸದಿರುವುದು ಕೂಡ ಕಾನೂನಾತ್ಮಕ ಸಮಸ್ಯೆಗಳಿಗೆ ಕಾರಣವಾ ಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಈ ಕುಟುಂಬಗಳು ಭವಿಷ್ಯದ ಕಾನೂನು ಸವಾಲುಗಳ ಬಗ್ಗೆ ಆತಂಕಕ್ಕೊಳಗಾಗಿವೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಅರಣ್ಯೇತರ ಚಟುವಟಿಕೆಗಳಿಗೆ ವರ್ಗಾಯಿಸಲಾದ ಭೂಮಿಯನ್ನು ಮರಳಿ ಪಡೆಯಲು, ಆ ಭೂಮಿಯ ಮೌಲ್ಯವನ್ನು ಸಂಗ್ರಹಿಸಿ, ಆ ಮೊತ್ತವನ್ನು ಅರಣ್ಯೀಕರಣ, ಪುನರ್ಸ್ಥಾಪನೆ ಮತ್ತು ಸಂರಕ್ಷಣೆಗೆ ಬಳಸು ವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಕ್ರಮವು ಅರಣ್ಯ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.