ಭಟ್ಕಳದಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆಯಿಂದ ತಂಪಿನ ವಾತಾವರಣ ನಿರ್ಮಾಣವಾಗಿದ್ದು, ಪಟ್ಟಣದ ಮುಖ್ಯ ರಸ್ತೆಗಳು, ವೃತ್ತಗಳಲ್ಲಿ ಮಳೆ ನೀರು ತುಂಬಿ ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಮಳೆ ಸಂಜೆಯವರೆಗೂ ಬಿಡುವಿಲ್ಲದೇ ಸುರಿದಿದ್ದು, ಬುಧವಾರವೂ ಮುಂದುವರೆದಿದೆ. ಇದರಿಂದ ಬೇಸಿಗೆಯ ಬಿಸಿಲಿನಿಂದ ಬಳಲಿದ್ದ ಜನತೆಗೆ ತಂಪಿನ ವಾತಾವರಣದ ಅನುಭವ ಸಿಕ್ಕರೂ, ದಿನವಿಡೀ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಭಾರೀ ಮಳೆಯಿಂದ ಬಾವಿ, ಕೆರೆ, ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ, ಪಟ್ಟಣದ ಮುಖ್ಯ ವೃತ್ತಗಳು, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಪಟ್ಟಣದ ಬಂದರ್ ರಸ್ತೆಯಿಂದ ಸಾಗರ ರಸ್ತೆಯ ಪೊಲೀಸ್ ವಸತಿಗೃಹದವರೆಗಿನ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯ ಮೇಲೆಯೇ ಹರಿಯಿತು. ವೃತ್ತದ ಒಂದು ಬದಿಯಲ್ಲಿ ಮೊಣಕಾಲಿನವರೆಗೆ ನೀರು ತುಂಬಿದ್ದು, ಅಂಗಡಿಕಾರರು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಸರಿಯಾಗಿ ಮುಚ್ಚದಿರುವುದರಿಂದ ಮೊದಲ ಮಳೆಗೆ ರಸ್ತೆಗಳು ಕೆಸರುಮಯವಾದವು. ಗಟಾರದ ಹೂಳು ತೆಗೆಯದಿರುವುದರಿಂದಲೂ ಮಳೆ ನೀರು ರಸ್ತೆಯ ಮೇಲೆಯೇ ಹರಿಯುವಂತಾಯಿತು.
ಗ್ರಾಮಾಂತರ ಭಾಗಗಳಲ್ಲಿಯೂ ಗಟಾರದ ಹೂಳು ತೆಗೆಯದಿರುವುದರಿಂದ ರಸ್ತೆಗಳ ಮೇಲೆ ನೀರು ಹರಿಯಿತು. ಮಳೆಯ ನಂತರ ಕಸ, ಕಡ್ಡಿ, ಕಲ್ಲು, ಮಣ್ಣಿನ ರಾಶಿಗಳು ರಸ್ತೆಯ ಮೇಲೆ ಸೇರಿದ್ದು, ಕೆಲವೆಡೆ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಆದರೆ ಸಕಾಲದಲ್ಲಿ ಸುರಿದ ಮಳೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಪುರಸಭೆ ಮತ್ತು ಪಂಚಾಯತ್ ಅಧಿಕಾರಿಗಳು ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಮತ್ತು ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.