ಉಡುಪಿ: ಯಕ್ಷಗಾನ ಕಲಾವಿದರ ಸಮಾವೇಶ ಉದ್ಘಾಟಿಸಿದ ಶಿವರಾಮ ಶೆಟ್ಟಿ

ಉಡುಪಿ: ನಮ್ಮ ಹಿರಿಯರು ಬಹಳ ಶ್ರದ್ಧಾಭಕ್ತಿಯಿಂದ ತುಂಬಾ ಕಷ್ಟಪಟ್ಟು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಅವರ ಶ್ರಮದಿಂದ ಇಂದು ಈ ಕಲೆ ಇಷ್ಟು ಎತ್ತರಕ್ಕೆ ಬೆಳೆದಿದೆ. ಈ ಕಲೆಯಲ್ಲಿ ವಿದ್ವಾಂಸರು ಸೇರಿದಂತೆ ವಿದ್ಯಾವಂತರು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಂದು ಕೆಲವು ಕಲಾವಿದರಿಂದ ಕಲೆಗೆ ಅಪಚಾರ ಎಸಗುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಅಕಾಡೆಮಿಗೆ ದೂರುಗಳು ಬರುತ್ತಿವೆ. ವೇಷಕ್ಕೆ ಸಂಬಂಧಪಡದ ಇತರ ವಿಚಾರಗಳನ್ನು ಪ್ರಸ್ತಾಪಿಸಿ ಕಲೆಯ ಗೌರವಕ್ಕೆ ಚ್ಯುತಿ ತರಲಾಗುತ್ತಿದೆ. ಕಲಾವಿದರು ಕಲೆಯಲ್ಲಿ ಬೇರೆ ವಿಚಾರಗಳನ್ನು ತುರುಕಿಸುವುದು ಸರಿಯಲ್ಲ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಯಕ್ಷಗಾನ ಕಲಾವಿದರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲೆಯನ್ನು ಜನರಿಗೆ ಮುಟ್ಟಬೇಕೆಂಬ ನಿಟ್ಟಿನಲ್ಲಿ ಗೋವಾ, ಮಹಾರಾಷ್ಟ್ರ, ಹೈದರಬಾದ್ ಸೇರಿದಂತೆ ಹೊರರಾಜ್ಯಗಳಲ್ಲೂ ಅಕಾಡೆಮಿ ಯಿಂದ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಮಕ್ಕಳಿಗೂ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಿದ್ದೇವೆ. ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಸುವುದರ ಜೊತೆಗೆ ಕಲೆಯ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯ ವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಲ್ಪೆಯ ಉದ್ಯಮಿ ಗೋಪಾಲ ಸಿ.ಬಂಗೇರ ಮಾತನಾಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ನಮ್ರತ ಸ್ವಾಗತಿಸಿದರು. ಸದಸ್ಯ ಸತೀಶ್ ಅಳಪ ವಂದಿಸಿದರು. ಎಲ್ಲೂರು ಗಣೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಕಲಾವಿದರಿಗೆ ಕೆಎಂಸಿ ಮಣಿಪಾಲ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು. ಬಳಿಕ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ಇಞ್ಞಿಲಕುಡ, ತ್ರಿಶೂರ್ ಇವರಿಂದ ಕೂಡಿಯಾಟ್ಟಂ, ಸೀತಾಪಹರಣಂ- ಜಟಾಯುವಧಂ ಪ್ರದರ್ಶನಗೊಂಡಿತು.