ಉಡುಪಿ | ಹಳೆಯ ವಿಡಿಯೋ ಶೇರ್ ಮಾಡಿ ಕೋಮುಗಲಭೆಗೆ ಪ್ರಚೋದನೆ: ಆರೋಪಿ ಮಾಜಿ ಜಿಪಂ ಸದಸ್ಯನ ಬಂಧನ

ರಾಘವೇಂದ್ರ ಕಾಂಚನ್ ಬಾರಿಕೆರೆ
ಕೋಟ: ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಮೇ 31ರಂದು ಬಂಧಿಸಿದ್ದಾರೆ.
ಉಡುಪಿ ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಬಂಧಿತ ಆರೋಪಿ. ಈತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಡಬಲ್ ಮರ್ಡರ್ ಕೇಸ್ ಹಾಗೂ ಇತರ ಅನೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಈತನನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ರಿಯಾಜ್ ಪರಂಗಿ ಪೇಟೆ ಎಂಬವರ ಹಳೆ ವಿಡಿಯೋವನ್ನು ಶೇರ್ ಮಾಡಿ(ಈಗಾಗಲೇ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ), ಸ್ಥಳೀಯ ಹಿಂದೂ ಯುವಕರನ್ನು ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿ ರಾಘವೇಂದ್ರ ಕಾಂಚನ್ ಬಾರಿಕೆರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನು. ಈತನ ವಿರುದ್ದ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2025 ಕಲಂ: 196, 56 BNS ರಂತೆ ಪ್ರಕರಣ ದಾಖಲಾಗಿದೆ.