ಬಸವ ಸಂಸ್ಕೃತಿ ಅಭಿಯಾನ ಸೆ.18ಕ್ಕೆ ಉಡುಪಿಗೆ ಆಗಮನ

ಉಡುಪಿ, ಸೆ.16: ಶುದ್ಧ ಬಸವತತ್ವವನ್ನು ಪ್ರಚಾರ, ಪ್ರಸಾರ ಹಾಗೂ ಅನುಷ್ಠಾನ ಮಾಡುವ ಆಶಯದೊಂದಿಗೆ ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ದ ಚಿಂತನೆಯ ಫಲವಾಗಿ ಸೆ.1ರಿಂದ ಅ.1ರವರೆಗೆ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಸೆ.18ರಂದು ಉಡುಪಿಗೆ ಆಗಮಿಸಲಿದ್ದು, ವಚನ ಸಂವಾದ, ಸಾಮರಸ್ಯದ ನಡಿಗೆ ಹಾಗೂ ಸಾರ್ವಜನಿಕ ಸಮಾವೇಶದೊಂದಿಗೆ ‘ಜಂಗಮದೆಡೆಗೆ’ ನಾಟಕವನ್ನು ಪ್ರಸ್ತುತ ಪಡಿಸಲಿದೆ ಎಂದು ಉಡುಪಿ ಜಿಲ್ಲಾ ಸ್ವಾಗತ ಸಮಿತಿಯ ಡಾ. ನಿರಂಜನ ಚೋಳಯ್ಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಲವು ಲಿಂಗಾಯತ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ ಎಂದರು.
ಸೆ.18ರ ಗುರುವಾರ ಬೆಳಗ್ಗೆ 11ಗಂಟೆಗೆ ಅಜ್ಜರಕಾಡಿನ ಪುರಭವನದಲ್ಲಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನ ಸಂವಾದ ನಡೆಯಲಿದೆ. ಇದರಲ್ಲಿ ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮಿಗಳೊಂದಿಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಡಂಬಳ-ಗದಗ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಡಾ.ಗಂಗಾಮಾತಾಜಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಪರಾಹ್ನ 3:30ಕ್ಕೆ ನಗರದ ಸರ್ವಿಸ್ ಬಸ್ನಿಲ್ದಾಣದ ಬಳಿ ಇರುವ ಗಂಧಾ ಸ್ಮಾರಕದಿಂದ ಪುರಭವನದವರೆಗೆ ಸಾಮರಸ್ಯ ನಡಿಗೆಯನ್ನು ಆಯೋಜಿಸ ಲಾಗಿದೆ. ಬಳಿಕ ಸಂಜೆ 5:00ಗಂಟೆಗೆ ಪುರಭವನದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ ನಡೆಯಲಿದೆ. ಇದರಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪ್ರದಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮ್ದಾರ್ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಉಡುಪಿ ಜಂಗಮ ಮಠ ಹಾಗೂ ಚಿತ್ರಕಲಾ ಮಂದಿರದ ನಿರ್ದೇಶಕರಾಗಿರುವ ಡಾ.ನಿರಂಜನ್ ತಿಳಿಸಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಶಾಂತವೀರ ಮಹಾಸ್ವಾಮಿಗಳು ‘ಲಿಂಗಾಯತ ಧರ್ಮದ ನೀತಿ ಶಾಸ್ತ್ರ’ ಎಂಬ ವಿಷಯದ ಕುರಿತು ಹಾಗೂ ಬೆಂಗಳೂರು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ.ಬಸವರಾಜ ಸಾದರ ‘ಶರಣರ ರಾಜಕೀಯ ಪರಿಕಲ್ಪನೆ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.
ಸಂಜೆ ಶಿವಸಂಚಾರ ಸಾಣೇಹಳ್ಳಿಯಿಂದ ವಚನ ಗೀತೆಗಳಲ್ಲದೇ, ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ‘ಜಂಗಮದೆಡೆಗೆ’ ನಾಟಕವನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದು ಡಾ.ನಿರಂಜನ್ ವಿವರಿಸಿದರು.
ಉಡುಪಿ ಬಸವ ಸಮಿತಿಯ ಅಧ್ಯಕ್ಷ ಗಂಗಾಧರ ಅವರು ಮಾತನಾಡಿ, ಜನರಲ್ಲಿ ಆಳವಾಗಿ ಬೇರೂರಿರುವ ಹೊಸ ದೇನನ್ನೂ ಸ್ವೀಕರಿಸಲು ಬಿಡದ ವೈದಿಕ ಪರಂಪರೆಯ ಬೇರುಗಳನ್ನು ಕಿತ್ತೆಸೆದು, ಬಸವ ಚಿಂತನೆಯ ಸಸಿಗಳನ್ನು ನೆಟ್ಟು ಬೆಳೆಸಲು, ಶುದ್ಧ ಬಸವತತ್ವವನ್ನು ಪ್ರಚಾರ, ಪ್ರಸಾರ ಪಡಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನಾಡಿನಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಸೆ.1ರಂದು ಬಸವನಬಾಗೇವಾಡಿಯಲ್ಲಿ ಉದ್ಘಾಟನೆಗೊಂಡ ಈ ಅಭಿಯಾನ ಶಿವಮೊಗ್ಗದಿಂದ ಉಡುಪಿಗೆ ಆಗಮಿಸಲಿದ್ದು, ಸೆ.19ರಂದು ಮಂಗಳೂರಿಗೆ ತೆರಳಲಿದೆ. ಕಾರ್ಯಕ್ರಮದಲ್ಲಿ 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿದ್ಧಬಸಯ್ಯ ಚಿಕ್ಕಮಠ, ಸ್ವಾಗತ ಸಮಿತಿಯ ರಾಮನಗೌಡ ಚೌಧರಿ, ಮಹಾದೇವಪ್ಪ ಗೌಡ ಉಪಸ್ಥಿತರಿದ್ದರು.