ತುಮಕೂರು | ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಹೋರಾಟ; ಪ್ರತಿಭಟನೆ ಹತ್ತಿಕ್ಕುವ ಪೊಲೀಸರ ಕ್ರಮಕ್ಕೆ ರೈತರ ಆಕ್ರೋಶ

ತುಮಕೂರು: ನಿಷೇಧಾಜ್ಞೆ ನಡುವೆಯೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ರೈತರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಮಠಾಧೀಶರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಇದಕ್ಕೆ ಆಸ್ಪದ ನೀಡದೆ ಪೊಲೀಸರು ಹೋರಾಟ ಹತ್ತಿಕ್ಕುವ ಸಲುವಾಗಿ ಪ್ರತಿಭಟನೆ ನಡೆಸಲು ಬಂದ ಶಾಸಕ ಸುರೇಶ್ಗೌಡ ಸೇರಿದಂದಂತೆ ಹಲವು ರಾಜಕೀಯ ಮುಖಂಡರು ಹಾಗೂ ರೈತರನ್ನು ವಶಕ್ಕೆ ಪಡೆದರು.
ಹೋರಾಟ ನಡೆಸಲು ಮುಂದಾದ ಶಾಸಕ ಸುರೇಶ್ಗೌಡ, ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ರೈತ ಮೋರ್ಚಾ ಮುಖಂಡರಾದ ಬ್ಯಾಟರಂಗೇಗೌಡ, ದಿಲೀಪ್ಕುಮಾರ್, ಚಂದ್ರಶೇಖರ್, ರೈತ ಸಂಘದ ಗೋವಿಂದರಾಜು, ವಿವಿಧ ಮಠಾಧೀಶರು ಸೇರಿದಂತೆ ಮೂರು ಬಸ್ಗಳಲ್ಲಿ ಬಂದ ನೂರಕ್ಕೂ ಹೆಚ್ಚು ಹೋರಾಟಗಾರರನ್ನು ಅಡಿಷನಲ್ ಎಸ್ಪಿ ಗೋಪಾಲ್, ಸಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಜಿಲ್ಲೆಯ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ನಿಟ್ಟೂರು ಸಮೀಪದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹೋರಾಟಗಾರರು ಸಮಾವೇಶಗೊಂಡಿದ್ದರು. ಈ ಮಾಹಿತಿ ತಿಳಿದಪೊಲೀಸರು ತಕ್ಷಣ ಧಾವಿಸಿ ಇವರನ್ನು ವಶಕ್ಕೆ ಪಡೆದಿದ್ದಾರೆ.ಗುಬ್ಬಿ ತಾಲೂಕಿನ ಸಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಇಂದು ನೂರಾರು ಮಂದಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈಗಾಗಲೇ ಜಿಲ್ಲಾಡಳಿತ ಹಾಗೂ ಗುಬ್ಬಿ ತಾಲೂಕು ಆಡಳಿತ ಸುಂಕಾಪುರ ಹಾಗೂ ಡಿ.ರಾಂಪುರ ಗ್ರಾಮದ 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಇಂದು ಬೆಳಗ್ಗೆಯಿಂದಲೇ ಈ ಮಾರ್ಗದಲ್ಲಿ ಓಡಾಡುವವರನ್ನು ಪೊಲೀಸರು ತಪಾಸಣೆ ನಡೆಸಿಯೇ ಬಿಡುತ್ತಿದ್ದದ್ದು ಕಂಡು ಬಂತು.
ನಿಟ್ಟೂರು, ಸುಂಕಾಪುರ ಹಾಗೂ ಡಿ.ರಾಂಪುರ ಸೇರಿದಂತೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಪ್ರತಿಭಟನಾಕಾರರು ಈ ಸ್ಥಳಗಳಿಗೆ ಯಾರೂ ಬಾರದಂತೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ 4 ಡಿವೈಎಸ್ಪಿ, 23 ಇನನ್ಸ್ ಪೆಕ್ಟರ್, 900 ಪೊಲೀಸರು ಸೇರಿದಂತೆ 1 ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ 3 ಕೆಎಸ್ಆರ್ಪಿ ತುಕಡಿಗಳನ್ನು ಕಾಮಗಾರಿ ಸ್ಥಳದ ಸುತ್ತಮುತ್ತ ಬಂದೋಬಸ್ತ್ ಕಾರ್ಯಕ್ಕೆ ಹಾಕಲಾಗಿತ್ತು..
ಟೈರ್ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ: ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ಷೇಧಾಜ್ಞೆ ನಡುವೆಯೂ ರೈತರು ಹೋರಾಟ ನಡೆಸಿದ್ದು, ಮಲ್ಲಸಂದ್ರದ ಸಮೀಪವಿರುವ ಕಳ್ಳಿಪಾಳ್ಯ ಗೇಟ್ ಬಳಿ ಹೆದ್ದಾರಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಕೆಎಸ್ಸಾರ್ಟಿಸಿ ಬಸ್ನ ಟೈರ್ ಗಾಳಿ ಬಿಟ್ಟು ಪ್ರತಿಭಟನೆ ನಡೆಸಿದ ನೂರಾರು ರೈತರು ಸರಕಾರ ಹಾಗೂ ಜಿಲ್ಲಾಡಳಿತದ ಕ್ರಮದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸುಂಕಾಪುರ ಬಳಿ ಪ್ರತಿಭಟನೆ ನಡೆಸಲು ರೈತರು ಮುಂದಾಗಿರುವುದನ್ನು ಹತ್ತಿಕ್ಕುವ ಸಲುವಾಗಿ ಗುಬ್ಬಿ ತಾಲ್ಲೂಕು ಆಡಳಿತ ನಿಷೇಧಾಜ್ಞೆ ಜಾರಿಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ರೈತರಿಂದ ಸರಕಾರವೇ ಹೊರತು ಸರಕಾರದಿಂದ ರೈತರಲ್ಲ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ನಾವು ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್ಗೌಡ ಮಾತನಾಡಿ, ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡಿದೆ. ಶಾಂತಿ ರೀತಿಯಲ್ಲಿ ಹೋರಾಟ ಮಾಡಲು ನಾವೆಲ್ಲಾ ಬಂದಿದ್ದೇವೆ. ಆದರೆ ಪೊಲೀಸರು ಬ್ರಿಟೀಷರಂತೆ ವರ್ತಿಸುತ್ತಾ ಹೋರಾಟಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಾವು ರೈತರಿಗೆ ಅನ್ಯಾಯವಾಗಿದೆ ಎಂದು ಕೇಳಲು ಬಂದಿದ್ದೇವೆ. ಆದರೆ ಪೊಲೀಸರು ಮಾತ್ರ ಸರಕಾರದ ಆದೇಶಕ್ಕೆ ತಲೆಯಾಡಿಸುತ್ತಾ ರೈತರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಕಾನೂನು ಸುವ್ಯವಸ್ಥೆ, ಅನ್ಯಾಯದ ವಿರುದ್ಧ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆಯೇ ರೈತರಿಗೆ ಅನ್ಯಾಯ ಮಾಡುತ್ತಿದೆ.
ನಾವು ಗಾಂಧೀಜಿ ತತ್ವ ಸಿದ್ದಾಂತಗಳ ಮೇಲೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದೇವೆ. ಪೊಲೀಸರ ಹತ್ತಿಕ್ಕುವ ಧೋರಣೆ ಮುಂದುವರೆದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಬಿಜೆಪಿ ಮುಖಂಡ ದಿಲೀಪ್ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಯೋಜನೆಯಿಂದ 300 ಕೋಟಿ ಕಿಕ್ಬ್ಯಾಗ್ ಬರುತ್ತದೆ. ಹಾಗಾಗಿ ಅವರು ಈ ಯೋಜನೆಯನ್ನು ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ. ಇದರಿಂದ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುವುದರ ಬಗ್ಗೆ ಇವರು ಗಮನ ಹರಿಸುತ್ತಿಲ್ಲ. ಈ ಕುರಿತು ಲೋಕಾಯುಕ್ತರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.