ತುಮಕೂರು| ದೇಶದ್ರೋಹ ಚಟುವಟಿಕೆ ಆರೋಪ; ಎಂಎಫ್ಐ ವಿರುದ್ಧ ಕ್ರಮಕ್ಕೆ ಮುಸ್ಲಿಂ ಮುಖಂಡರ ಆಗ್ರಹ

ತುಮಕೂರು: ಪಾಕಿಸ್ತಾನ ಮೂಲದ್ದು ಎನ್ನಲಾಗುತ್ತಿರುವ ಮೆಸ್ಸಿಹ್ ಫೌಂಡೇಶನ್ ಇಂಟರ್ ನ್ಯಾಷನಲ್ (ಎಂಎಫ್ಐ) ಎಂಬ ಸಂಘಟನೆಯು ದೇಶದ್ರೋಹ ಚಟುವಟಿಕೆಗಳನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರಿಗೆ ದೂರು ಸಲ್ಲಿಸಿರುವ ಮುಸ್ಲಿಂ ಮುಖಂಡರ ನಿಯೋಗ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮರ್ಕಝೆ ಮಜ್ಲಿಸ್ ಮುಶ್ವರತ್ ನೇತೃತ್ವದಲ್ಲಿ ಎಂಎಫ್ಐ ಚಟುವಟಿಕೆಗಳನ್ನು ಪ್ರಚಾರ ಮಾಡಿದ ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಘಟನೆಯ ಸದಸ್ಯರು ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ. ಇವರ ಹೆಸರುಗಳು ಮುಸ್ಲಿಮರಂತೆ ಕಾಣುತ್ತಿದ್ದರೂ, ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮದ ವಿರುದ್ಧವಾಗಿದೆ. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮೂಲದ ಇಂತಹ ಸಂಘಟನೆಗಳು ಅಗತ್ಯವಿಲ್ಲ. ಈ ಸಂಘಟನೆಯ ಚಟುವಟಿಕೆಗಳು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿವೆ. ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಈ ಸಂಘಟನೆಯ ಸದಸ್ಯರು, ತುಮಕೂರಿನ ಮಹಿಳೆಯೊಬ್ಬರ ಸಂಪರ್ಕದ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಆದ್ದರಿಂದ, ನಗರದ ಮುಸ್ಲಿಮರು ಅವರ ಪರಿಚಯ ಮಾಡಿಕೊಂಡು ಬೆಂಬಲಿಸಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ತುಮಕೂರಿನಲ್ಲಿ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಬೇಕು. ಈ ಸಂಘಟನೆಯ ಪ್ರಚಾರ ಸಭೆಗಳು ಅಥವಾ ಕರಪತ್ರಗಳನ್ನು ವಿತರಿಸುವುದನ್ನು ತಡೆಯಬೇಕು. ಅವರು ಯಾವುದೇ ಕಾನೂನುಬಾಹಿರ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ, ಅದರ ಜವಾಬ್ದಾರಿಯನ್ನು ಸಮುದಾಯದ ಮೇಲೆ ಹಾಕಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಾಹಿದ್ ಖಾನ್ ಶೀರಾನಿ, ಇಕ್ಬಾಲ್ ಅಹಮದ್, ನಯಾಝ್ ಅಹಮದ್, ಮೌಲಾನಾ ಜಿಯಾ ಉರ್ ರೆಹಮಾನ್, ನಸ್ರುಲ್ಲಾ, ಅಬೂಬಕರ್, ಬಿಲಾಲ್, ಅಕ್ರಂಉಲ್ಲಾಖಾನ್, ಲಾಯರ್ ಅಹಮದ್, ಜಿಯಾ ಉಲ್ಲಾಖಾನ್, ಬಜರ್, ಬಕಾಶ್, ಇಮ್ರಾನ್, ಸಯ್ಯೂಬ್ ಸೇರಿದಂತೆ ಹಲವರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.