ಮಧುಗಿರಿ | ದೇವಾಲಯ ಪ್ರವೇಶಿಸಿದ್ದಕ್ಕೆ ದಲಿತ ಯುವಕನಿಗೆ ಸವರ್ಣೀಯರಿಂದ ಜಾತಿ ನಿಂದನೆ ; ಆರೋಪ

ಸಾಂದರ್ಭಿಕ ಚಿತ್ರ | PC : istockphoto
ತುಮಕೂರು : ದೇವರ ಪೂಜೆಗೆಂದು ದೇವಾಲಯದ ಒಳ ಪ್ರವೇಶಿಸಿದ ದಲಿತ ಯುವಕನನ್ನು ಸವರ್ಣೀಯರ ಗುಂಪೊಂದು ದೇವಾಲಯದ ಹೊರೆಗೆ ಕಳುಹಿಸಿ, ನಿಮ್ಮ ಜಾತಿಯವರು ದೇವಾಲಯದ ಒಳ ಬರಬಾರದು ಎಂದು ಜಾತಿ ನಿಂದನೆ ಮಾಡಿರುವ ಆರೋಪ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ಕೇಳಿ ಬಂದಿದೆ.
ಕವಣದಾಲ ಗ್ರಾಮದ ಶ್ರೀವೀರಾಂಜನೇಯ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಲೆಂದು ಮಾದಿಗ ಸಮುದಾಯಕ್ಕೆ ಸೇರಿದ ಸ್ವಾಮಿನಾಥ್ ಎಂಬ ಯುವಕ ದೇವಾಲಯದ ಒಳ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಇದನ್ನು ಕಂಡ ಸವರ್ಣೀಯರು ಆತನನ್ನು ದೇವಾಲಯದಿಂದ ಹೊರ ಬರುವಂತೆ ತಾಕೀತು ಮಾಡಿದ್ದಲ್ಲದೆ, ನೀನು ದೇವಾಲಯದ ಒಳ ಪ್ರವೇಶಿಸುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬೆನ್ನಲ್ಲೇ ಇಂದು ಗ್ರಾಮಕ್ಕೆ ಮಧುಗಿರಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕವಣದಾಲ ಗ್ರಾಮದಲ್ಲಿ ನಡೆದ ದೇವಾಲಯ ಪ್ರವೇಶ ನಿರಾಕರಣೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿವೆ.
ಮಧುಗಿರಿ ತಾಲೂಕು ಕವಣದಾಲ ಗ್ರಾಮದಲ್ಲಿ ನಡೆದ ಜಾತಿ ನಿಂದನೆ, ದೇವಾಲಯ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ತಹಶೀಲ್ದಾರ್ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಎರಡು ಸಮುದಾಯದ ಜನರ ನಡುವೆ ಶಾಂತಿ ಸಭೆ ನಡೆದಿದ್ದು, ದೇವಾಲಯ ರ್ಸಾವಜನಿಕರ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರಿಗೂ ಸೇರಿದ್ದಾಗಿದೆ. ಮುಕ್ತ ಪ್ರವೇಶ ನಿರಾಕರಿಸಿದರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಇದುವರೆಗೂ ಎನಾಗಿದೆ ಎಂಬುದು ಮುಖ್ಯವಲ್ಲ. ಇನ್ನು ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು. ತಹಶೀಲ್ದಾರ್ ಮತ್ತು ಡಿವೈಎಸ್ಪಿ ಅವರ ಮಾತಿಗೆ ಎಲ್ಕರೂ ಒಪ್ಪಿಗೆ ಸೂಚಿಸಿದ್ದು, ಸಮಸ್ಯೆಗೆ ಇತೀಶ್ರೀ ಹಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ