ಮೌಲಿಕ ಕೃತಿಯೊಂದರ ಅನುವಾದ

ಮಿತ್ರಾ ವೆಂಕಟ್ರಾಜ್ ಅವರ ಪ್ರಥಮ ಕನ್ನಡಾನುವಾದ, ‘ಒಂದು ಪುರಾತನ ನೆಲದಲ್ಲಿ’ ಓದು ಸಂಪನ್ನವಾದ ಖುಶಿ!
ಡಾ. ಅಮಿತಾಬ್ ಘೋಷ್ ಅವರ ‘In An Antique Land’ ಕೃತಿಯನ್ನು ಓದಿ, ಅದರ ಕಾವ್ಯಾತ್ಮಕ ಭಾಷಾ ಸೊಗಸಿಗೆ ಮಾರುಹೋದ ಮಿತ್ರಾ, ಕೂಡಲೇ ಅದನ್ನು ಕನ್ನಡಕ್ಕೆ ತರುವ ಇಚ್ಛೆಯಿಂದ ಅನುವಾದಕ್ಕೆ ಇಳಿದರು.
1978ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರ ವ್ಯಾಸಂಗದಲ್ಲಿ ತೊಡಗಿದ್ದ ಘೋಷ್, ಅಲ್ಲಿ ದೊರಕಿದ ಪ್ರೊ.ಎಸ್.ಡಿ. ಗೊಯ್ಬೀನ್ ಅವರ ‘ಮಧ್ಯಕಾಲೀನ ಯಹೂದಿ ವರ್ತಕರ ಪತ್ರಗಳು’ ಎಂಬ ಅನುವಾದ ಕೃತಿಯಿಂದ ಆಕರ್ಷಿತರಾದರು. ಕೈರೋದ ಪುರಾತನ ಸಿನೆಗಾಗ್ ಬಳಿಯೇ ಗೆನಿಝಾ ಎಂಬ ಉಗ್ರಾಣದಲ್ಲಿನ ಆ ಪತ್ರಗಳಲ್ಲಿ, 1146ರಲ್ಲಿ ಅಬ್ರಹಾಂ ಬೆನ್ ಯಿಜು ಎಂಬ ವರ್ತಕರಿಗೆ ಖಸಫ್ ಇಬ್ನ್ ಇಷಾಕ್ ಎಂಬ ವ್ಯಾಪಾರಿಯು ಬರೆದ ಪತ್ರದಲ್ಲಿದ್ದ ಗುಲಾಮನ ಉಲ್ಲೇಖವು ಘೋಷ್ ಅವರಲ್ಲಿ ಆಸಕ್ತಿ ಮೂಡಿಸಿ, ಅವರು ಆ ಪ್ರಯುಕ್ತ ಸಂಶೋಧನೆಗೆಂದು ಈಜಿಪ್ಟ್ಗೆ ಬರುವಂತೆ ಮಾಡಿತು.
ಹದಿನೆಂಟು ವರ್ಷಗಳ ಕಾಲ ನಮ್ಮ ಮಂಗಳೂರಿನಲ್ಲಿದ್ದ ಯಹೂದಿ ವರ್ತಕ ಬೆನ್ ಯಿಜು ಮತ್ತವನ ಗುಲಾಮ ಬೊಮ್ಮನ ಕಥೆಯ ಅನ್ವೇಷಣೆಯಲ್ಲಿ ಸಾಗಿದ ಅಮಿತಾಬ್ ಘೋಷ್, ಇತಿಹಾಸ, ಪ್ರವಾಸ ಕಥನ, ಕಾದಂಬರಿ ಇವೆಲ್ಲವೂ ಎನ್ನಬಹುದಾದ ರೀತಿಯಲ್ಲಿ ತಮ್ಮ ಈ ಕೃತಿಯನ್ನು ಆಕರ್ಷಕವಾಗಿ ರೂಪಿಸಿದ್ದಾರೆ. ಕೃತಿಯಲ್ಲಿ ಬರುವ ನಮ್ಮ ಮಂಗಳೂರ ಬೊಮ್ಮನ ಪಾತ್ರ ತನ್ನನ್ನು ಬಹುವಾಗಿ ಆಕರ್ಷಿಸಿತು ಎಂದು ಮಿತ್ರಾ ತಮ್ಮ ಮುನ್ನುಡಿಯಲ್ಲಿ ಹೇಳಿ ಕೊಂಡಿದ್ದಾರೆ. ಅವರನ್ನುವಂತೆ ಕೃತಿಯಲ್ಲಿ ಕಾಲದ ವಿವಿಧ ಘಟ್ಟಗಳ ನಡುವೆ ಕಥೆಯನ್ನು ಹೆಣೆದ ಪರಿ ನಿಜಕ್ಕೂ ಅಸಾಧಾರಣವಾಗಿದೆ.
ಚರಿತ್ರಕಾರನ ನೀರಸ ವಿವರಗಳ ಬದಲಿಗೆ ಅಲ್ಲಿನ ಜನರ ಬದುಕಿನ ಆತ್ಮೀಯ ಒಳನೋಟಗಳು ಇವೆ. ನಮ್ಮಿಂದ ದೂರದ ವಿಭಿನ್ನ ಸಮಾಜವೇ ಆದರೂ, ಅಲ್ಲಿನ ಜನರು ಅಷ್ಟೊಂದು ಕುಟುಂಬ ಕೇಂದ್ರಿತರಾಗಿದ್ದು, ಪರಸ್ಪರರ ಏಳಿಗೆಗಾಗಿ ಶ್ರಮಿಸುವ, ಮಧುರ ಬಾಂಧವ್ಯ ಬೆಸೆಯುವ ಶ್ರಮಿಕ, ರೈತಾಪಿ ಜನರಿಂದ ಕೂಡಿದ ಮಾನವೀಯ ಜನಾಂಗವಾಗಿ ನಮ್ಮ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತಾರೆ. ದೈತ್ಯಾಕಾರದ ಮನೆ ಮಾಲಕ ಅಬು ಅಲಿ, ಇಲಿಯಂತಹ ಚತುರ ಖಮೀಸ್, ಇಮಾಮ್, ನೇಕಾರ ಝಫ್ಲೌಲ, ಜಬೀರ್, ನಬೀಲ್ ಎಲ್ಲರೂ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.
ಜನರ ಬದುಕಿನ ಬಗ್ಗೆ ಘೋಷ್ ಅವರಿಗಿರುವ ಮುಕ್ತ ಕುತೂಹಲ, ಅವರ ಸೂಕ್ಷ್ಮ ಅವಲೋಕನ ಶಕ್ತಿ, ಆರೋಗ್ಯಕರ ಹಾಸ್ಯಪ್ರಜ್ಞೆಗಳಿಂದ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಪುಸ್ತಕವು, ವಿಪುಲವಾದ ವಿವರಣೆ, ಉಪಕಥೆಗಳಿಂದ ತುಂಬಿದೆ ಎಂದು ಮಿತ್ರಾ ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ.
ಗುಲಾಮನ ಜಾಡನ್ನು ಅರಿಯಲು ಮಂಗಳೂರಿಗೆ ಹೋದ ಲೇಖಕ, ಅಲ್ಲಿ ನಮ್ಮ ಉದ್ದಾಮ ಸಾಹಿತಿ ಡಾ. ವಿವೇಕ ರೈ ಅವರನ್ನು ಭೇಟಿಯಾಗುವ, ಅವರ ಮಾರ್ಗದರ್ಶನ ಪಡೆವ ವಿವರ ಮೈ ನವಿರೇಳಿಸಿತು.
ಡಾ. ರೈ ಅವರೊಡನೆ ನಗರದ ಸುತ್ತ ಸಂಚರಿಸಿದ ಬೊಮ್ಮನ ಜೊತೆಯಲ್ಲೇ ನಾವೂ ಸಾಗಿದಂತೆ, ಮಲಬಾರ್ ಕರಾವಳಿಯುದ್ದಕ್ಕೂ ಜೊತೆಯಾದಂತಹ ಅಪೂರ್ವ ಅನುಭವ ನನ್ನದಾಗಿತ್ತು.
ಕೃತಿಯಲ್ಲಿ ಬರುವ ಅವರ ಹೊಲಗದ್ದೆಗಳ, ನಷಾವಿಯ ಗುರುವಾರ ಸಂತೆಯ ವಿವರ ಬಲು ಮನೋಜ್ಞವಾಗಿದೆ. ಉದ್ಧರಿಸ ಹೋದರೆ ಬರೆದಷ್ಟೂ ಮುಗಿಯದ, ಸಮೃದ್ಧ ಕೌಟುಂಬಿಕ ಬಂಧದ ಆ ಪ್ರದೇಶದಲ್ಲಿ ಅಮಿತಾಬ್ ಮೊದಲ ಬಾರಿಗೆ ನಬೀಲನನ್ನು ಭೇಟಿಯಾದಾಗ, ಆ ಚಹಾದ ಪಾತ್ರೆಯಲ್ಲಿ ನಿನಗೆ ಒಬ್ಬನಿಗೆ ಬೇಕಾದಷ್ಟು ನೀರನ್ನು ಹಾಕಿ ಸ್ಟೌ ಮೇಲಿರಿಸುವಾಗ, ನಿನಗೆ ಮನೆಯಲ್ಲಿ ಬಿಟ್ಟು ಬಂದ ಎಲ್ಲ ಜನರ ನೆನಪಾಗಬಹುದಲ್ಲ? ಎಂದಿದ್ದ ನಬೀಲ್, ಈಗ ವಿನಾಶದ ಅಂಚಿನಲ್ಲಿರುವ ನಗರವೊಂದರಲ್ಲಿ ಒಬ್ಬನೇ ಇರುವುದನ್ನು ಊಹಿಸಿ ಕೊಳ್ಳುವುದೇ ಕಷ್ಟವಾಗುತ್ತಿತ್ತು, ಎಂಬ ಒಕ್ಕಣೆ ನಮ್ಮ ಹೃದಯವನ್ನೂ ಕರಗಿಸುತ್ತದೆ.
ಟಿ.ವಿ. ಪರದೆಯಲ್ಲಿ ಸಮಾಚಾರ ಪ್ರಸಾರವಾಗುವಾಗ ಕಂಡ ಮಹಾ ವಲಸೆಯ -ಇxoಜus- ದೃಶ್ಯದಲ್ಲಿ ಜನಸಾಗರದಲ್ಲಿ ಎಷ್ಟು ಅರಸಿದರೂ ಕಾಣದೆ ಹೋದ ನಬೀಲನು ಚರಿತ್ರೆಯ ಅನಾಮಧೇಯತೆಯಲ್ಲಿ ಮಾಯವಾಗಿ ಹೋಗಿದ್ದ, ಎಂಬ ಮುಕ್ತಾಯವು ಹೃದಯದ ಮೇಲೆ ಭಾರವಾಗಿ ಉಳಿಯುತ್ತದೆ.
ಜನಾಂಗ ದ್ವೇಷ, ಯುದ್ಧದ ಕಾವಿನ ಈ ದಿನಗಳಲ್ಲಿ ಎಲ್ಲರ ಕಣ್ತೆರೆಸಬಹುದಾದ ಮೌಲಿಕ ಕೃತಿಯೊಂದರ ಅನುವಾದವನ್ನಿತ್ತು ಕನ್ನಡ ಸಾಹಿತ್ಯ ಸಿರಿಯನ್ನು ಹೆಚ್ಚಿಸಿದ ಗೆಳತಿ ಮಿತ್ರಾಗೆ ಪ್ರೀತಿಯ ಅಭಿನಂದನೆಗಳು!
ಮನೋಹರ್ ಗ್ರಂಥಮಾಲಾ ಪ್ರಕಟಿಸಿದ ಈ ಕೃತಿಯ ಮುಖಬೆಲೆ ರೂ.450. ಪುಟಗಳು 329