ತೊಂಡೆ ಚಪ್ಪರದ ನೆರಳಲ್ಲಿ...

ತೊಂಡೆ ಚಪ್ಪರ ಕನ್ನಡದ ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆಯವರ ಮೊದಲ ಕಾದಂಬರಿ. ಮಲೆನಾಡಿನ ಒಂದು ಪರಿಸರದಲ್ಲಿ ನಡೆದ ಕಥೆಯಾಗಿದ್ದರೂ, ತೊಂಭತ್ತರ ದಶಕದ ಆಸುಪಾಸಿನಲ್ಲಿ ಬಹುಶಃ ಬಹುತೇಕ ಹಳ್ಳಿಯಲ್ಲಿ ಬದುಕುತ್ತಿದ್ದ ಜನರ ಜೀವನದ ಕಥೆ-ವ್ಯಥೆಯನ್ನು ಅಕ್ಷರಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ತೊಂಡೆ ಚಪ್ಪರ ಎಂದ ಕೂಡಲೇ ಹಳ್ಳಿಯಲ್ಲಿ ಬೆಳೆದವರೆಲ್ಲರಿಗೂ ನೆನಪಾಗುವುದು, ನಮ್ಮ ಅಜ್ಜಿ, ಅಮ್ಮ ನಾವು ಚಿಕ್ಕವರಿರುವಾಗ ಮನೆಯ ಹಿತ್ತಲಲ್ಲಿ ನಾಲ್ಕು ಗೂಟ ನಿಲ್ಲಿಸಿ ಚಪ್ಪರ ಮಾಡಿ, ಮಧ್ಯೆ ತೊಂಡೆಯ ಬಳ್ಳಿಯನ್ನು ಒಂದು ಗೂಟದ ಮೂಲಕ ಹಬ್ಬಿಸಿ, ಪ್ರತಿನಿತ್ಯವೂ ಮಕ್ಕಳಂತೆ ಸಾಕಿ ಸಲಹುತ್ತಿದ್ದುದು. ಹಾಗೆಯೇ ಇಲ್ಲಿ ನಾಗಿ ಎನ್ನುವ ಹೆಣ್ಣುಮಗಳು, ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡು, ಏಕಾಂಗಿಯಾಗಿ ಬದುಕಿನ ಹೋರಾಟ ನಡೆಸಲು ಕಾಠಿಣ್ಯತೆಯನ್ನು ಅಳವಡಿಸಿಕೊಳ್ಳುವ ಪರಿ ನೋಡಬಹುದು. ಆ ಕಡೆ ತಾಯ್ತನದ ಸುಖವೂ ಇಲ್ಲದೆ, ಗಂಡನ ಸಾಂಗತ್ಯವೂ ಇಲ್ಲದೆ ಬದುಕುವ ಒಬ್ಬಂಟಿ ಹೆಣ್ಣು, ಒಂದು ಕ್ಷಣ ತನ್ನ ಬದುಕಿನ ಹಾದಿ ಬದಲಿಸಿದಾಗ ಆಕೆಯ ಬದುಕು ಹೇಗೆ ತೊಂಡೆಯು ಸೂರ್ಯನ ಬಿಸಿಲಿಗೆ ಬಾಡುವುದು ಹಾಗೆಯೇ ಬಾಡುವುದೇ ಅಥವಾ ಅರಳುವುದೇ ಎನ್ನುವುದು ಈ ಕಥೆಯ ಕುತೂಹಲ.
ಪ್ರಮೋದ್ ಮರವಂತೆಯವರ ಸಾಹಿತ್ಯವನ್ನು ಗುನುಗಿದ್ದವರು ಈ ಪುಸ್ತಕದ ಮೂಲಕ ಮಲೆನಾಡಿನ ಭಾಷೆಯ ಘಮವನ್ನು ಅನುಭವಿಸ ಬಹುದು ಮತ್ತು ಆ ಭಾಷೆಯ ಮೇಲೆ ಲೇಖಕರಿಗಿರುವ ಪ್ರೀತಿ ಮತ್ತು ಹಿಡಿತವನ್ನು ನೋಡಬಹುದು. ಹಾಗೆಯೇ ಸರಳವಾಗಿ ಒಂದು ಕಥೆಯನ್ನು ನಿರೂಪಿಸಿರುವ ರೀತಿಯನ್ನು ಇಲ್ಲಿ ನಾವು ಕಾಣಬಹುದಾಗಿದೆ.!
ಈ ಪುಸ್ತಕದ ಆರಂಭದಿಂದ ಅಂತ್ಯದವರೆಗೆ ಪ್ರತೀ ಪುಟದಲ್ಲಿ ನಾವು ಬೆಳೆದ ಪರಿಸರದಲ್ಲಿ ಘಟಿಸಿಹೋದ ಘಟನೆಗಳನ್ನೇ ಅಕ್ಷರ ರೂಪದಲ್ಲಿ ಜೋಡಿಸಿದ್ದಾರೆ ಎನ್ನುವ ಭಾವನೆ ಓದುಗರಿಗೆ ಮೂಡದೆ ಹೋಗದು.
ಹಾಗೆಯೇ ಬರುವ ಪಾತ್ರಗಳೆಲ್ಲವೂ, ನಾವು ನಮ್ಮ ಬಾಲ್ಯದ ದಿನಗಳಲ್ಲಿ ನೋಡಿದ ಹಾಗೂ ಕೆಲವೊಮ್ಮೆ ಮನೆಯಲ್ಲಿ ಹೇಳಿ ಕೇಳಿದ ನೆನಪುಗಳು ಒಮ್ಮೆ ನಮ್ಮ ಮನದ ಪಟಲದಲ್ಲಿ ಬಂದು ಹೋಗುತ್ತದೆ. ಅವಶ್ಯಕತೆಗಿಂತ ಹೆಚ್ಚು ಯಾವ ಪಾತ್ರವನ್ನೂ ಎಳೆಯದೆ, ಹೆಣೆದು ಕೊಟ್ಟಿದ್ದು ಲೇಖಕರ ಬರವಣಿಗೆಯ ಗಟ್ಟಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಳ್ಳಿಯಲ್ಲೆ ಜನಿಸಿ ಬೆಳೆದ ಪ್ರತಿಯೊಬ್ಬರಿಗೂ ಈ ಪುಸ್ತಕದಲ್ಲಿ ಬರುವ ಒಂದಲ್ಲಾ ಒಂದು ಸನ್ನಿವೇಶ ಅನುಭವಕ್ಕೆ ಬೇರೆ ಬೇರೆ ಸಮಯದಲ್ಲಿ ಬಂದಿರುವುದರಿಂದ, ಬಾಲ್ಯದ ದಿನಗಳ ತುಂಟತನ ಆಸೆ ಮತ್ತು ನಿರಾಸೆಗಳನ್ನೂ ಇನ್ನೊಮ್ಮೆ ಮೆಲುಕು ಹಾಕಿ ಒಂದು ಮುಗುಳ್ನಗು ಮುಖದಲ್ಲಿ ಮೂಡಿಸುವುದಂತೂ ನಿಜ.
ಎರಡು ಮೂರು ದಶಕಗಳ ಹಿಂದೆ ಬದುಕಿದ್ದ ಎಲ್ಲಾ ವಯಸ್ಸಿನವರು, ಒಂದಲ್ಲಾ ಒಂದು ರೀತಿಯಲ್ಲಿ ಅನುಭವಿಸಿದ ಘಟನೆಗಳ ಮೇಲೆಯೇ ಈ ಕಾದಂಬರಿ ಇರುವುದರಿಂದ, ಪ್ರತಿಯೊಬ್ಬ ಓದುಗರಿಗೂ ತನ್ನ ಅಂದಿನ ದಿನಗಳ ಬದುಕಿನ ನೆನಪುಗಳು ಮತ್ತೊಮ್ಮೆ ಮೂಡುವುದರಲ್ಲಿ ಸಂಶಯವೇ ಇಲ್ಲ