ಕಲಕಿದ ನೀರು

ಇತ್ತೀಚೆಗೆ ತಮಿಳುನಾಡಿನ ವಿಧಾನಸಭೆಯು ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿದ ಅನೇಕ ಮಸೂದೆಗಳನ್ನು ಅಂಗೀಕರಿಸದೆ ಮತ್ತು ಮರಳಿಸದೆ ಅಥವಾ ಮರಳಿಸಿ ಅವು ಮತ್ತೆ ಒಪ್ಪಿಗೆಗಾಗಿ ಬಂದಾಗ ಅವನ್ನು ರಾಷ್ಟ್ರಪತಿಯ ಒಪ್ಪಿಗೆಗಾಗಿ ಕಳುಹಿಸಿ ವಿಳಂಬಿಸಿದ ‘ತಮಿಳುನಾಡು ಸರಕಾರ ವರ್ಸಸ್ ತಮಿಳುನಾಡು ರಾಜ್ಯಪಾಲರು’ [WRIT PETITION (CIVIL) NO. 1239 OF 2023] ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು 08.04.2025ರಂದು ತೀರ್ಪು ನೀಡಿ ರಾಜ್ಯಪಾಲರ ಸರ್ಕಸ್ಸನ್ನು ಒಪ್ಪದೆ ರಾಜ್ಯಸರಕಾರದಿಂದ ಅಂಗೀಕೃತವಾದ ಮಸೂದೆಗಳನ್ನು ಅನಗತ್ಯ ವಿಳಂಬವಿಲ್ಲದೆ ಶೀಘ್ರವಾಗಿ ನಿರ್ಧರಿಸದೆ ಅಥವಾ ತಿರಸ್ಕರಿಸಿ ಮರಳಿಸಿದಾಗ ಅವು ಪುನಃ (ತಿದ್ದುಪಡಿಗಳೊಂದಿಗೆ ಅಥವಾ ಹಾಗೆಯೇ) ಅಂಗೀಕೃತವಾಗಿ ಬಂದಾಗ ಒಪ್ಪದಿದ್ದಲ್ಲಿ ಅವು ತಾವಾಗಿ ಕಾನೂನಾಗಿ ಅಂಗೀಕೃತವಾಗಿವೆಯೆಂದು ವಿಧಿಸಿದ್ದು ಮಾತ್ರವಲ್ಲ, ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗೆ ಹೀಗೆ ನಿರ್ಧರಿಸಲು ರಾಜ್ಯಪಾಲರಿಗೆ 1 ತಿಂಗಳು ಹಾಗೂ ರಾಷ್ಟಪತಿಗೆ 3 ತಿಂಗಳು ಗಡುವು ನೀಡಿತು.
ಬೇಗ ಅರ್ಥವಾಗಬಲ್ಲ ಊಟದ ಉದಾಹರಣೆ ನೀಡುವುದಾದರೆ- ಪ್ರಜಾಪ್ರಭುತ್ವದಲ್ಲಿ ದೇಶಜೀವಿಗಳೇ ಸರಕಾರ ನೀಡುವ ಸವಲತ್ತುಗಳಿಗೆ ಅರ್ಹ ಅತಿಥಿಗಳು. ಕೇಂದ್ರ/ರಾಜ್ಯ ಸರಕಾರ ಮಸೂದೆಯನ್ನು ಅಂಗೀಕರಿಸುವುದೆಂದರೆ ಜನರಿಗೆ ಉಣಬಡಿಸಲು ಸರಕಾರವು ಅಡುಗೆ ಮಾಡುವುದು; ಅದನ್ನು ಔಪಚಾರಿಕ ಹಿರಿಯರಾದ ರಾಷ್ಟ್ರಪತಿ/ ರಾಜ್ಯಪಾಲರು ಒಪ್ಪಿ ಸಹಿ ಹಾಕುವುದೆಂದರೆ ಆ ಮೂಲಕ ಪ್ರಜೆಗಳನ್ನು ಊಟಕ್ಕೆ ಆಹ್ವಾನಿಸುವುದು. ಮಸೂದೆಯೊಂದು ಕಾನೂನಾಗುವುದೆಂದರೆ ಮನೆಯ ವ್ಯಾವಹಾರಿಕ ಯಜಮಾನ ತಯಾರುಮಾಡಿಸಿದ ಅಡುಗೆಯನ್ನು ಅತಿಥಿಗಳಿಗೆ ಬಡಿಸುವುದು. ಆದರೆ ಊಟ ತಯಾರಾದರೂ ಮನೆಯ ಸಾಂಕೇತಿಕ/ಔಪಚಾರಿಕ ಯಜಮಾನ ಸ್ಥಾನದ ಹಿರಿಯರು ಮಡಿಹಚ್ಚಿ ಆಹ್ವಾನಿಸದಿದ್ದರೆ ಆತಿಥೇಯರಿಗೆ ಸಂದಿಗ್ಧ; ಅತಿಥಿಗಳಿಗೆ ಊಟ ಮಾಡಲಾಗದ ಪರಿಸ್ಥಿತಿ. ಪರಿಣಾಮವಾಗಿ ಅಡುಗೆ ತಣಿಯುತ್ತದೆ; ಕೆಲವೊಮ್ಮೆ ಹಳಸುತ್ತದೆ. ತಮಿಳುನಾಡಿನ ಮಸೂದೆಗಳು ವರ್ಷಾನುಗಟ್ಟಲೆ ಹೀಗೆ ರಾಜ್ಯಪಾಲರ ಶೈತ್ಯಾಗಾರದಲ್ಲಿ ತಣಿದು, ಕೊನೆಗೆ ಶವಾಗಾರದಲ್ಲಿ ಕೊಳೆತು, ಪುನರ್ಜನ್ಮವಿಲ್ಲದೆ ಪರಿತಪಿಸುವ ಮತ್ತು ನಿಷ್ಫಲವಾಗುವ ಸಾಧ್ಯತೆಯ, ದುಸ್ಥಿತಿಯನ್ನು ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಪರಿಹರಿಸಿತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ತನ್ನ ಪಕ್ಷದ ಹೊರತು ಇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳನ್ನು ಮಣಿಸಲು ಇನ್ನು ಇಂತಹ ವಿಳಂಬ ನೀತಿಯನ್ನು ಅನುಸರಿಸುವಂತಿಲ್ಲ. (ಈ ಕುರಿತ ಮಾಹಿತಿ 24.04.2025ರ ಇದೇ ಅಂಕಣದ ನನ್ನ ಲೇಖನದಲ್ಲಿದೆ.)
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರಸರಕಾರದ ಅಧಿಕಾರವ್ಯಾಧಿಗ್ರಸ್ತ ರಾಜಕೀಯ ಈ ತೀರ್ಪಿನಿಂದಾಗಿ ಭಾರೀ ಮುಖಭಂಗವನ್ನು ಅನುಭವಿಸಿದೆ. ರಾಷ್ಟ್ರಪತಿಯು ಮೌನವಾಗಿದ್ದರೂ ಈ ಆದೇಶವು ಕೇಂದ್ರ ಸರಕಾರದ ಸರ್ವಾಧಿಕಾರ ನೀತಿಯ ಆಕಾಂಕ್ಷೆಯನ್ನು ಕೆಣಕಿದಂತಾಗಿದ್ದು ಅದು ಈ ವ್ಯೆಹದಿಂದ ಹೊರಬರಲು ಮಾರ್ಗೋಪಾಯಗಳನ್ನು ಹುಡುಕುತ್ತಿತ್ತು. ಸ್ವತಃ ವಕೀಲರಾಗಿದ್ದ ಉಪರಾಷ್ಟ್ರಪತಿ ತನ್ನ ಹುದ್ದೆಯು ನಿರೀಕ್ಷಿಸುವ/ಅಪೇಕ್ಷಿಸುವ ಅಲಿಪ್ತತೆಯನ್ನು ಮರೆತು ಮೈಪರಚಿಕೊಂಡರು; ಸಿಟ್ಟಿಗೆದ್ದರು; ಈ ಅದೇಶವು ಸರ್ವೋಚ್ಚ ನ್ಯಾಯಾಲಯವು ಪ್ರಯೋಗಿಸಿದ ಕ್ಷಿಪಣಿ (Missile) ಯೆಂದು ಟೀಕಿಸಿದ್ದರು.
ಮೇಲ್ನೋಟಕ್ಕೆ ಕೇಂದ್ರಸರಕಾರ ಅಥವಾ ತಮಿಳುನಾಡಿನ ರಾಜ್ಯಪಾಲರು ಈ ತೀರ್ಪಿನ ಪುನರ್ರ್ವಿಮರ್ಶೆ (Review)ಯನ್ನು ಕೋರಬಹುದಿತ್ತು. ಅದೂ ವಿಫಲವಾದಲ್ಲಿ ಸರಿಪಡಿಸುವ (Curative) ಅರ್ಜಿಯನ್ನು ಹಾಕಬಹುದಿತ್ತು. ಆದರೆ ಇವೆರಡರ ಫಲಿತಾಂಶವು ತನ್ನ ಅಧಿಕಾರ ರಾಜಕೀಯಕ್ಕೆ ಬೇಕಾದಂತೆ ಬರಲಾರದೆಂದು ಕೇಂದ್ರಸರಕಾರವು ಯೋಚಿಸಿದಂತಿದೆ; ಅದೀಗ ಹೊಸ ದಾರಿಯೊಂದನ್ನು ಕಂಡುಕೊಂಡು ರಾಷ್ಟ್ರಪತಿಯಲ್ಲಿ ದತ್ತವಾದ ಅನುಚ್ಛೇದ 143(1)ರ ಅಧಿಕಾರದನ್ವಯ ಸರ್ವೋಚ್ಚ ನ್ಯಾಯಾಲಯವು 142ನೇ ಅನುಚ್ಛೇದದ ಅಡಿಯಲ್ಲಿ ಸಂವಿಧಾನಬದ್ಧ ಹೊಣೆಗಾರಿಕೆ ಹಾಗೂ ಅನುಚ್ಛೇದ 200ರಡಿ ವಿಧಿವತ್ತಾದ ವಿವೇಚನಾತ್ಮಕ ಅಧಿಕಾರವಿರುವ, ರಾಜ್ಯಪಾಲರುಗಳು ಮತ್ತು ರಾಷ್ಟ್ರಪತಿಯ ಅಧಿಕಾರವ್ಯಾಪ್ತಿಗೆ ಅಂಕುಶ ಹಾಕಬಹುದೇ ಎಂಬ ಅಂಶವನ್ನು ವಿಸ್ತರಿಸಿ 13.5.2025ರ ಒಂದು ಪತ್ರದ ಮೂಲಕ ಸಲ್ಲಿಸಿದೆ. ಅಲ್ಲಿರುವ ಪೀಠಿಕೆ ಮತ್ತು 14 ಪ್ರಶ್ನೆಗಳು ಮೇಲೆ ಹೇಳಿದ ತೀರ್ಪಿನಲ್ಲಿ ಅಡಕವಾಗಿದ್ದು ಅಭಿಪ್ರಾಯ ಕೋರಿಕೆಯ ಬಿಡಿಭಾಗಗಳಂತಿದ್ದರೂ ಎಲ್ಲೂ ತೀರ್ಪಿನ ಉಲ್ಲೇಖವಿಲ್ಲದಿರುವುದು ದುರುದ್ದೇಶವನ್ನು ಸಾಬೀತುಮಾಡಿದಂತಿದೆ. ಈ ‘ಸಮಾಲೋಚನೆ’ಯ ಉದ್ದೇಶವು ರಾಷ್ಟ್ರಪತಿಯ ಮೂಲಕ ತಮಿಳುನಾಡು ಪ್ರಕರಣದ ಆದೇಶವನ್ನು ಹಿಂಬಾಗಿಲ ಮೂಲಕ ನಿರಸನಗೊಳಿಸುವ ಹತಾಶ ಪ್ರಯತ್ನವಾಗಿದೆ.
ಅಂದರೆ ಕೇಂದ್ರ ಸರಕಾರದ ಉದ್ದೇಶ/ದುರುದ್ದೇಶಗಳೇನೇ ಇರಲಿ, ರಾಷ್ಟ್ರಪತಿಯು ಸರ್ವೋಚ್ಚ ನ್ಯಾಯಾಲಯದ ಮುಂದೆ ತನ್ನ ಪ್ರಶ್ನೆಗಳನ್ನಿಟ್ಟು ಆ ಕುರಿತು ಅಭಿಪ್ರಾಯವನ್ನು ನೀಡಲು ನಿರ್ಬಂಧವಿಲ್ಲ. ಇಲ್ಲಿ ಸದ್ಭಾವನೆ/ದುರ್ಭಾವನೆಯ (Good Faith/Bad Faith) ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಅನುಚ್ಛೇದ 142ಕ್ಕೆ ಮೀಸಲಾಗಿಲ್ಲ. ‘ವಿಹಿತವೆನಿಸುವಂಥ ಸ್ವಭಾವದ ಮತ್ತು ಸಾರ್ವಜನಿಕ ಮಹತ್ವವುಳ್ಳಂಥ ಕಾನೂನಿನ ಅಥವಾ ಸಂಗತಿಯ ಪ್ರಶ್ನೆಯು’ ಎಂಬುದು ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಅನುಚ್ಛೇದ 143ರ ಶೀರ್ಷಿಕೆಯಲ್ಲಿ ಈ ‘ಅಭಿಪ್ರಾಯ’ವೆಂಬ ಪದವಿಲ್ಲ. ಅಲ್ಲಿರುವುದು ‘ಸಮಾಲೋಚಿಸುವ ಅಧಿಕಾರ’; ಕಾನೂನು ತಜ್ಞರೊಂದಿಗೆ ಅಭಿಪ್ರಾಯಯಾಚನೆ. ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿರುವ ಸಂದರ್ಭದಲ್ಲಿ ಅರ್ಥಕ್ಕಿಂತ ಆಶಯ ಹೆಚ್ಚು ಮಹತ್ವವನ್ನು ಪಡೆಯುತ್ತದೆ.
ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ; ಮತ್ತು ಕಾನೂನು ಹಾಗೂ ಸಂವಿಧಾನದ ವ್ಯಾಪ್ತಿಯೊಳಗೆ ಚರ್ಚಿಸಬಹುದಾಗಿದೆ. ರಾಷ್ಟ್ರಪತಿಯ ಕ್ರಮವು ಯಾವುದೇ ನ್ಯಾಯಾಲಯದ ಮುಂದಿರುವ ‘ಪ್ರಕರಣ’ವಲ್ಲದ್ದರಿಂದ ಇದನ್ನು ಚರ್ಚಿಸುವುದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣದ, ಸಮಾನಾಂತರ ಅಥವಾ ಪರ್ಯಾಯ ವಿಚಾರಣೆ/ವಾದ (Sub judice) ಅಲ್ಲ.
ಅನುಚ್ಛೇದ 142(1) ಹೀಗೆ ಹೇಳಿದೆ: ಸರ್ವೋಚ್ಚ ನ್ಯಾಯಾಲಯವು, ತನ್ನ ಅಧಿಕಾರವ್ಯಾಪ್ತಿಯನ್ನು ಚಲಾಯಿಸುವಲ್ಲಿ ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯ ಅಥವಾ ಇತರ ವಿಷಯದಲ್ಲಿ ಪೂರ್ಣ ನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ ಡಿಕ್ರಿಯನ್ನು ಮಾಡಬಹುದು ಅಥವಾ ಅಂಥ ಆದೇಶವನ್ನು ಕೊಡಬಹುದು ಮತ್ತು ಹಾಗೆ ಮಾಡಿದ ಡಿಕ್ರಿ ಅಥವಾ ಆದೇಶವು, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ವಿಧಾಯಕವಾಗಬಹುದಾದಂಥ ರೀತಿಯಲ್ಲಿ ಭಾರತದ ರಾಜ್ಯ ಕ್ಷೇತ್ರದಾದ್ಯಂತ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೆ ರಾಷ್ಟ್ರಪತಿಯು ಆದೇಶದ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಅದನ್ನು ಜಾರಿಗೊಳಿಸಬಹುದಾಗಿರತಕ್ಕುದು. (ದಪ್ಪಕ್ಷರ ಮತ್ತು ಅಡಿಗೆರೆ ನನ್ನದು-ಲೇ.) [ಅನುಚ್ಛೇದ 142 (2) ಇಲ್ಲಿ ಪ್ರಸ್ತುತವಲ್ಲ.]
ಅನುಚ್ಛೇದ 143(1) ಹೀಗೆ ಹೇಳಿದೆ: ಸರ್ವೋಚ್ಚನ್ಯಾಯಾಲಯದ ಅಭಿಪ್ರಾಯವನ್ನು ಪಡೆದುಕೊಳ್ಳುವುದು ವಿಹಿತವೆನಿಸುವಂಥ ಸ್ವಭಾವದ ಮತ್ತು ಸಾರ್ವಜನಿಕ ಮಹತ್ವವುಳ್ಳಂಥ ಕಾನೂನಿನ ಅಥವಾ ಸಂಗತಿಯ ಪ್ರಶ್ನೆಯು ಉದ್ಭವಿಸಿದೆ ಎಂದು ಅಥವಾ ಉದ್ಭವಿಸುವ ಸಂಭವವಿದೆಯೆಂದು ಯಾವುದೇ ಕಾಲದಲ್ಲಿ ರಾಷ್ಟ್ರಪತಿಗೆ ಕಂಡುಬಂದರೆ, ಅವರು, ಈ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯದ ಪರ್ಯಾಲೋಚನೆಗಾಗಿ ಕಳುಹಿಸಬಹುದು ಮತ್ತು ಸರ್ವೋಚ್ಚ ನ್ಯಾಯಾಲಯವು ಸೂಕ್ತವೆಂದು ಭಾವಿಸುವಂಥ ಸುನಾವಣೆಯನ್ನು ಮಾಡಿದ ನಂತರ, ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡಬಹುದು. [ಅನುಚ್ಛೇದ 143(2) ಇಲ್ಲಿ ಪ್ರಸ್ತುತವಲ್ಲ.]
ಇಂತಹ ಸಮಾಲೋಚನೆ ಇದೇ ಮೊದಲೇನಲ್ಲ. ನನ್ನಲ್ಲಿರುವ ಮಾಹಿತಿಯಂತೆ 1951ರಿಂದ ಸುಮಾರು 14 ಬಾರಿ ಇಂತಹ ಸಮಾಲೋಚನೆ ನಡೆದಿದೆ. 1993ರಲ್ಲಿ ರಾಮಜನ್ಮಭೂಮಿ ವಿವಾದದ ಸಂದರ್ಭದಲ್ಲೂ ಇದು ನಡೆದಿದೆ. ಇಂತಹ ಅಭಿಪ್ರಾಯಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಪಕ್ಷಕಾರರು ಇರುವುದಿಲ್ಲ. ನ್ಯಾಯಾಲಯವು ತನಗೆ ಅಗತ್ಯವಿರುವ ಕಾನೂನು ನೆರವನ್ನು ಪಡೆಯಬಹುದು. ಮುಖ್ಯವಾಗಿ ನೆನಪಿಡಬೇಕಾದದ್ದೆಂದರೆ ಸರ್ವೋಚ್ಚ ನ್ಯಾಯಾಲಯವು ಇದು ಅಭಿಪ್ರಾಯ ನೀಡಬೇಕಾದ ವಿಚಾರವಲ್ಲವೆಂದೂ ಉತ್ತರಿಸಬಹುದು. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇದು ತೀರ್ಪಲ್ಲ. ಸರ್ವೋಚ್ಚ ನ್ಯಾಯಾಲಯದ ಯಾವುದೇ ತೀರ್ಪು ಇಡೀ ದೇಶದ ಉದ್ದಗಲಕ್ಕೆ ಅನ್ವಯಿಸಿದರೆ, ಇದು ರಾಷ್ಟ್ರಪತಿಗಷ್ಟೇ ಸಂಬಂಧಿಸಿದ ವಿಚಾರ. ಆದ್ದರಿಂದ ಯಾವುದೇ ಅಭಿಪ್ರಾಯವೂ ತೀರ್ಪನ್ನು ಅನೂರ್ಜಿತಗೊಳಿಸದು.
ಈಚೆಗೆ ತಮಿಳುನಾಡು ಪ್ರಕರಣದಲ್ಲಿ ಅನುಚ್ಛೇದ 200 ಮತ್ತು 201 ಚರ್ಚಿಸಲ್ಪಟ್ಟವು ಮತ್ತು ಸಂವಿಧಾನದ ಈ ಅನುಚ್ಛೇದಗಳ ಆಶಯಕ್ಕನು ಗುಣವಾಗಿ ಸರ್ವೋಚ್ಚ ನ್ಯಾಯಾಲಯವು ಉಲ್ಲೇಖಿತ ಆದೇಶವನ್ನು ನೀಡಿತು. ಈ ಆದೇಶವು ರಾಜ್ಯಪಾಲರ ಅಧಿಕಾರವ್ಯಾಪ್ತಿಯೊಂದಿಗೆ ರಾಷ್ಟ್ರಪತಿಯ ಅಧಿಕಾರವ್ಯಾಪ್ತಿಯನ್ನೂ ಚರ್ಚಿಸಿತು ಮತ್ತು ಅನುಚ್ಛೇದ 142 (1)ರಲ್ಲಿ ಉಲ್ಲೇಖಿಸಲಾದ ‘ಯಾವುದೇ ವ್ಯಾಜ್ಯ’ (ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದ್ದು) ಮತ್ತು ‘ಅಥವಾ ಇತರ ವಿಷಯದಲ್ಲಿ’ (ಎಲ್ಲ ರಾಜ್ಯಪಾಲರ ಹಾಗೂ ರಾಷ್ಟ್ರಪತಿಯ ಅಧಿಕಾರವ್ಯಾಪ್ತಿಯ ಕುರಿತಂತೆ) ಚಲಾಯಿಸಿದ್ದಾಗಿದೆ. ಆಗಲೂ ಈ ಆದೇಶದ ಕುರಿತು ಒಂದು ಪ್ರಶ್ನೆ ಉದ್ಭವಿಸಬಹುದು: ರಾಷ್ಟ್ರಪತಿಯ ಅಧಿಕಾರದ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿಯಂತ್ರಣ ಅಥವಾ ಅಧಿಕಾರವನ್ನು ಚಲಾಯಿಸಿದಂತಾಗುವುದಿಲ್ಲವೇ? (ಈ ಪ್ರಶ್ನೆಯನ್ನು ಉಪರಾಷ್ಟ್ರಪತಿ ಮತ್ತು ಕೆಲವು ಕೇಂದ್ರ ಸಚಿವರು ಹಾಗೂ ರಾಜಕಾರಣಿಗಳು ಎತ್ತಿದ್ದರು.) ಇಲ್ಲ. ಏಕೆಂದರೆ ಅನುಚ್ಛೇದ 142(1)ರಲ್ಲಿ ಮೇಲೆ ಉಲ್ಲೇಖಿಸಿದ ಪದಗಳ ಬಳಿಕ ‘ಪೂರ್ಣ ನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ’ ಎಂಬ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂಥ ಪದಗಳಿವೆ. ಈಗಷ್ಟೇ ನಿವೃತ್ತರಾದ ಭಾರತದ ಮುಖ್ಯ ನ್ಯಾಯಮೂರ್ತಿ ಖನ್ನಾ ಹೇಳಿದಂತೆ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಯ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸಿಲ್ಲ. ಸಂವಿಧಾನವು ಸರ್ವೋಚ್ಚ. ರಾಷ್ಟ್ರಪತಿ ಹೇಗೋ ಹಾಗೆಯೇ ಸರ್ವೋಚ್ಚ ನ್ಯಾಯಾಲಯವೂ ಸಂವಿಧಾನಕ್ಕೆ ಬದ್ಧ. ಸಂವಿಧಾನವನ್ನು ಅಂದರೆ ಅದರ ಆಶಯವನ್ನು ರಕ್ಷಿಸುವುದು ಎಲ್ಲರ ಕರ್ತವ್ಯ; ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನವನ್ನು ಅರ್ಥವಿಸುವುದು ಮತ್ತು ನಿಷ್ಠಸೇವಕನಂತೆ ಅದರ ರಕ್ಷಣೆಗಾಗಿ ಅಗತ್ಯ ಅಧಿಕಾರವನ್ನು ಚಲಾಯಿಸುವುದೂ ಅಗತ್ಯ. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಸಮಾನರು-ಸಂವಿಧಾನದಡಿಯಲ್ಲಿ. ವಿಶೇಷವೆಂದರೆ ಸರ್ವೋಚ್ಚ ನ್ಯಾಯಾಲಯವು 415 ಪುಟಗಳ ತನ್ನ ಈ ತೀರ್ಪಿನಲ್ಲಿ ಸಂವಿಧಾನದ ಈ ಭಾಗಗಳ ಚರಿತ್ರೆಯನ್ನೂ, ಹಿನ್ನೆಲೆಯನ್ನೂ, ಕಾಮನ್ವೆಲ್ತ್ ದೇಶಗಳ ಮಾತ್ರವಲ್ಲ, ಯುರೋಪ್, ಅಮೆರಿಕ ದೇಶಗಳ ಸಂವಿಧಾನಗಳ ಸಂಬಂಧಿತ ಅಂಶಗಳನ್ನೂ, ಸರಕಾರಿಯಾ ಹಾಗೂ ಪುಂಛಿ ಆಯೋಗಗಳ ವರದಿಯನ್ನೂ ಮತ್ತು ಅಂತಿಮವಾಗಿ ಕೇಂದ್ರಸರಕಾರವು 04.02.2016ರಂದು ಹೊರಡಿಸಿದ 2 ಮಾರ್ಗದರ್ಶಿಸೂತ್ರಗಳನ್ನೂ (ಇವುಗಳಲ್ಲಿ ರಾಷ್ಟ್ರಪತಿಗೆ 3 ತಿಂಗಳ ಗಡುವನ್ನು ವಿಧಿಸಿದೆ!) ಆಧರಿಸಿದೆ. ಮಸೂದೆಗಳು ರಾಜ್ಯಪಾಲರ/ರಾಷ್ಟ್ರಪತಿಯ ಕಚೇರಿಯಲ್ಲಿ ಅನಗತ್ಯ ವಿಳಂಬದ ಅಥವಾ ‘ನಾನು ಒಪ್ಪಿಗೆಯನ್ನು ತಡೆಹಿಡಿದಿದ್ದೇನೆ’ ಎಂದು ಯಾವುದೇ ಮಸೂದೆಯನ್ನು ಅನಿರ್ದಿಷ್ಟಾವಧಿಗೆ ತಳ್ಳುವ, ‘ಕಿಸೆತಡೆ’ಯೆಂಬ ಹೊಸ ಪ್ರಮೇಯದ (ಭಾರತದಲ್ಲಿ ಪ್ರಚಲಿತವಿಲ್ಲದ Pocket Veto!) ಮೂಲಕ ಕೊಳೆಯುವುದನ್ನು ತಪ್ಪಿಸಲು ಈಗಿನ ಕೇಂದ್ರ ಸರಕಾರ 2016ರಲ್ಲಿ ಹೊರಡಿಸಿದ ಸೂತ್ರಗಳಿವು. ಈ ಸೂತ್ರಗಳಡಿ ರಾಷ್ಟ್ರಪತಿಯು 3 ತಿಂಗಳ ಒಳಗೆ ತನ್ನ ನಿರ್ಧಾರವನ್ನು ತಿಳಿಸಬೇಕೆಂದು ಹೇಳಿದೆ. (1948ರ ಕರಡು ಸಂವಿಧಾನದಲ್ಲಿ ಈ ಅವಧಿಯು 6 ವಾರಗಳಾಗಿತ್ತು. ಇದನ್ನು ಎಚ್.ವಿ. ಕಾಮತ್ ಮತ್ತಿತರರು ಬೆಂಬಲಿಸಿದರು. ಆದರೆ ಅಂತಿಮವಾಗಿ ಡಾ. ಅಂಬೇಡ್ಕರ್ ಗೌರವಾನ್ವಿತ ಹುದ್ದೆಯಲ್ಲಿರುವವರು ಅನಗತ್ಯ ವಿಳಂಬವನ್ನು ಮಾಡಲಾರರೆಂಬ ವಿಶ್ವಾಸವನ್ನು ಎಲ್ಲರೂ ತಾಳಬೇಕೆಂದು ಹೇಳಿ ಬಹುಮತದ ಬೆಂಬಲದೊಂದಿಗೆ ಸಾಧ್ಯವಾದಷ್ಟೂ ಬೇಗ ಎಂದು ಬದಲಾಯಿಸಿದರೆಂದು ದಾಖಲೆಗಳು ಹೇಳುತ್ತವೆ!)
ಕೇಂದ್ರಸರಕಾರವು ಮಸೂದೆಗಳಿಗೆ ನ್ಯಾಯನೀಡುವ ದೃಷ್ಟಿಯಿಂದ ರಾಜ್ಯಪಾಲರಿಗೆ/ರಾಷ್ಟ್ರಪತಿಗೆ ಗಡುವು ನೀಡಬಹುದಾದರೆ, ಸರ್ವೋಚ್ಚ ನ್ಯಾಯಾಲಯವು ‘ಪೂರ್ಣ ನ್ಯಾಯದ’ ದೃಷ್ಟಿಯಿಂದ ತನ್ನ ತೀರ್ಪಿನಲ್ಲಿ ಗಡುವು ನೀಡಿದ್ದು ನ್ಯಾಯೋಚಿತವಾಗಿದೆ. ಇದನ್ನು ರಾಷ್ಟ್ರಪತಿ ಮತ್ತು ಅವರ ಹಿಂದಿನ ಸೂತ್ರಹಸ್ತಗಳು ಗಮನಿಸಿಲ್ಲ. ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸಮಾಲೋಚನೆ ಕೇಂದ್ರ ಸರಕಾರದ ದುರುದ್ದೇಶದಿಂದ ಕೂಡಿದೆಯೆಂಬುದು ಸ್ಪಷ್ಟವಾಗುತ್ತದೆ. (ಮಾಧ್ಯಮಗಳಲ್ಲಿ ‘ರಾಷ್ಟ್ರಪತಿ ದ್ರೌಪದಿ ಮುರ್ಮು’ ಎಂದು ಉಲ್ಲೇಖಿಸುವಾಗ ಅವರ ಬಗ್ಗೆ ಅನುಕಂಪ ಮೂಡಬೇಕು; ಅವರು ಕೇಂದ್ರ ಸರಕಾರವನ್ನು ಮುನ್ನಡೆಸುವವರ ಜೀ ಹುಜೂರ್ ರಬ್ಬರ್ ಸ್ಟಾಂಪ್ ಹೊರತು ಇನ್ನೇನೂ ಅಲ್ಲ!)
ನ್ಯಾಯಾಂಗದ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಸಂವಿಧಾನದ ಅನುಚ್ಛೇದ 143ರ ಮತ್ತು ರಾಷ್ಟ್ರಪತಿ ಸರ್ವೋಚ್ಚ ನ್ಯಾಯಾಲಯದೊಡನೆ ಸಮಾಲೋಚನೆ ಅಥವಾ ಅಭಿಪ್ರಾಯ ಸಂಗ್ರಹದ ಅಗತ್ಯವೇ ಇರಲಿಲ್ಲ. ಅನುಚ್ಛೇದ 143ಕ್ಕೆ ಪರ್ಯಾಯವಾಗಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಯೊಂದಿಗೆ ಸಮಾಲೋಚನೆ ಅಥವಾ ಅಭಿಪ್ರಾಯ ಕೇಳುವ ಸಂದರ್ಭವೇ ಇಲ್ಲ. ಸಂಸತ್ತು ಅಥವಾ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪರಸ್ಪರ ಪೂರಕವಾದರೂ ಸಂವಿಧಾನ ರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ ಹಿರಿದಾದದ್ದು. ಇದಕ್ಕೂ ಕಾರಣವಿದೆ. ಸಂವಿಧಾನ ನಿರ್ಮಾತೃಗಳು ಶಾಸಕಾಂಗಕ್ಕೆ ಇರುವ ಅಧಿಕಾರದಿಂದಾಗಿ ಯೋಗ್ಯರೊಂದಿಗೆ ಅಯೋಗ್ಯರೂ ಪಾಲ್ಗೊಳ್ಳುವುದನ್ನು ಮತ್ತು ಪಕ್ಷ ರಾಜಕೀಯದ ಹಿನ್ನೆಲೆಯಲ್ಲಿ, ಅಧಿಕಾರ ಗಳಿಕೆಯ ಒತ್ತಾಸೆಯ ಸಂಭ್ರಮದಲ್ಲಿ ನ್ಯಾಯಾಂಗವು ವಿಧಿಸುವ ಲಗಾಮು ಹರಿದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಏನಾದರೂ ನಡೆಯಬಹುದಾದ್ದನ್ನು ಅರಿತಿರಬಹುದು; ಅಥವಾ ನಿರೀಕ್ಷಿಸಿರಬಹುದು.
ಈ ಬಾರಿಯ ಸಮಾಲೋಚನೆ ಒಂದು ಇಕ್ಕಟ್ಟನ್ನು, ಬಿಕ್ಕಟ್ಟನ್ನು ಸೃಷ್ಟಿಸಿದೆ. ಸರ್ವೋಚ್ಚ ನ್ಯಾಯಾಲಯವು ಹೀಗೆ ಅಭಿಪ್ರಾಯ ನೀಡುವಾಗ ಯಾವುದೇ ತೀರ್ಪನ್ನು ರದ್ದುಗೊಳಿಸಲಾಗದು. ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಈ ದೇಶದ ಕಾನೂನಾಗುತ್ತದೆ. (Law of the land). ಅದನ್ನು ಪುನರ್ವಿಮರ್ಶೆ ಅಥವಾ ಸರಿಪಡಿಸುವ ಅರ್ಜಿಗಳಿಂದ ಮಾತ್ರ ಅಥವಾ ಭವಿಷ್ಯದಲ್ಲಿ ಇಂಥದ್ದೇ ಪ್ರಕರಣ/ಪ್ರಸಂಗವು ಎದುರಾದಾಗ, ಇನ್ನೊಂದು ಇದಕ್ಕಿಂತ ದೊಡ್ಡ ನ್ಯಾಯಪೀಠವು ಮಾತ್ರ ರದ್ದುಮಾಡಬಹುದು. ಅನುಚ್ಛೇದ 143 ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲ್ಮನವಿಯಲ್ಲ. ಆದ್ದರಿಂದ ಈ ಕಾರಣದ ಮೇಲೆ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಯ ಮನವಿಯನ್ನು ನಿರಾಕರಿಸುವ ಸಾಧ್ಯತೆಯೂ ಇದೆ. ಇಲ್ಲದೇ ಹೋದರೆ ತನಗೆ ಇರಿಸು ಮುರಿಸಾಗುವ ಯಾವುದೇ ತೀರ್ಪು ಬಂದಾಗಲೂ ಕೇಂದ್ರ ಸರಕಾರವು ರಾಷ್ಟ್ರಪತಿಯ ಅಧಿಕಾರವನ್ನು ಬಳಸಿಕೊಂಡು ಇಂತಹ ಪ್ರಸಂಗಗಳನ್ನು ಸೃಷ್ಟಿಸಬಹುದು.
ಯಾವುದೇ ಸರಕಾರವೂ ತನ್ನ ಅಧಿಕಾರ, ಸಾಧ್ಯವಾದಲ್ಲಿ ಸರ್ವಾಧಿಕಾರ, ಪಾರಮ್ಯವನ್ನು ಕಾಪಾಡಿಕೊಳ್ಳಲು ದಿಟ್ಟ ಮತ್ತು ಕೆಟ್ಟ ಹೆಜ್ಜೆಗಳನ್ನಿಡಲು ಸಿದ್ಧವಿರುತ್ತದೆ. ಅದಕ್ಕೆ ಸಂವಿಧಾನದ ಪಾರಮ್ಯ ಮುಖ್ಯವಾಗುವುದಿಲ್ಲ. ಸಂಸದೀಯ ಪ್ರಜಾಪ್ರಭುತ್ವವು ಸೋಲುವುದು ಇಲ್ಲೇ. ಸಂವಿಧಾನದಡಿಯಲ್ಲಿ ಇದಕ್ಕೆ ನ್ಯಾಯಾಂಗದ ಕಡಿವಾಣವಿದೆಯೆಂಬುದೇ ಸಮಾಧಾನಕರ ಸಂಗತಿ.