Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ದರ್ಗಾಮಾಳದ ಚಿತ್ರಗಳು

ದರ್ಗಾಮಾಳದ ಚಿತ್ರಗಳು

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ8 May 2025 10:35 AM IST
share
ದರ್ಗಾಮಾಳದ ಚಿತ್ರಗಳು
ಈ ಲೇಖನಗಳಲ್ಲಿ ಆರಂಭದಿಂದ ಅಂತ್ಯದವರೆಗೆ ಬೆಳೆಸಬಲ್ಲ ಕಥೆಯಿಲ್ಲ. ಒಂದೊಂದೂ ಚುರುಕು ಮುಟ್ಟಿಸುವ ಕಿರು ಲಲಿತ ಕಥಾನಕಗಳು. ಇಲ್ಲಿ ಸ್ಥಳ, ಕಾಲದ ಚರಿತ್ರೆಯಾಗಲಿ, ಪ್ರವೇಶಿಕೆಯಾಗಲೀ ಇಲ್ಲ. ನೇರ ಹೆಲಿಕಾಪ್ಟರಿನಲ್ಲಿ ನಮ್ಮನ್ನು ಒಯ್ದು ‘ದರ್ಗಾಮಾಳ’ದಲ್ಲಿಳಿಸಿ ಬರೆಹದ ಮೂಲಕ ಅಲ್ಲಿನ ಪ್ರಸಂಗಗಳನ್ನು ಅನುಭವಿಸುವಂತೆ ಲೇಖನಗಳಿವೆ. ಸುಮಾರು 15ರಷ್ಟು ಲೇಖನಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷನಾಗುವ ರಹೀಮನಂತಹ ವ್ಯಕ್ತಿಗಳು ನಮ್ಮನ್ನು ಆವರಿಸುವಷ್ಟು ಮತ್ತು ಲೇಖಕರೂ ರಹೀಮನಂಥವರೂ ಬದುಕುವ ಪ್ರಪಂಚ ನಮ್ಮ ಮನೆಯ ಬಾಗಿಲು ತೆರೆದರೆ ಸಾಕು, ಕಾಣುವಷ್ಟು ಬೆಳೆಯುತ್ತವೆ.

ದಲಿತ ಚಿಂತಕ, ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯನವರ ‘ದರ್ಗಾಮಾಳದ ಚಿತ್ರಗಳು’ ಎಂಬ 169 ಪುಟಗಳ ಕೃತಿಯು ಒಳ್ಳೆಯ ಮತ್ತು ಆರಾಮದ ಓದನ್ನು ನೀಡುತ್ತದೆ. ಅವರ ಇತರ ಕೃತಿಗಳನ್ನು ನಾನು ಓದಿಲ್ಲ. ಅವರೊಬ್ಬ ದಲಿತ ಚಿಂತಕ, ರಂಗಕರ್ಮಿ ಮತ್ತು ಸಾಹಿತಿ ಎಂದಷ್ಟೇ ಕೇಳಿದ್ದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಇಂದಿನ ಭಾರತವನ್ನು ಕುರಿತು ಈಗ ಎಚ್ಚೆತ್ತುಕೊಳ್ಳದಿದ್ದರೆ ತ್ರಿವರ್ಣಧ್ವಜದ ಬದಲು ಭಗವಾಧ್ವಜವು ಈ ದೇಶವನ್ನಾಳುವ ಅಪಾಯವನ್ನು ನಿರ್ಭೀತವಾಗಿ ಹೇಳಿದ್ದನ್ನು ಓದಿದ್ದೆ. ಈ ಕೃತಿಯನ್ನು ಓದಿದ ಮೇಲೆ ಅವರ ಇತರ ಕೃತಿಗಳು ಯಾವುವು ಎಂಬ ಮಾಹಿತಿಯನ್ನು ಅರಸಿ ಪಡೆದೆ. ಅವು ‘ಸಿಂಧ್ ಮಾದಿಗರ ಸಂಸ್ಕೃತಿ’, ‘ನನ್ನಜ್ಜ’, ‘ಗಂಗಾಭಾರತ’, ‘ಕಾಗೆಕಣ್ಣು ಇರುವೆಬಲ’, ‘ರತ್ನಪಕ್ಷಿ’, ‘ನಾಯಿತಿಪ್ಪ’. ‘ದರ್ಗಾಮಾಳದ ಚಿತ್ರಗಳು’ ಕೃತಿಯನ್ನು ಓದಿದ ಮೇಲೆ ಈ ಇತರ ಕೃತಿಗಳನ್ನು ಓದಿಲ್ಲವೆಂದು ವಿಷಾದವಾಗುತ್ತಿದೆ.

ಕೋಲಾರದ ಬಳಿಯ ಪಾಪರಾಜನಹಳ್ಳಿಯ ಬಳಿಯಿರುವ ದರ್ಗಾಮಾಳ (ಈ ಪದವೇ ಚಿಂತನಶೀಲವಾಗಿದೆ!) ಮತ್ತು ಅದರ ಸುತ್ತಮುತ್ತ ಇರುವ ಸ್ಥಳಗಳ ಮತ್ತು ಲೇಖಕರಿಗೆ ಸಲುಗೆಯಿರುವ ಅಥವಾ ಆತ್ಮೀಯರಾಗಿರುವ ಜನಪದರ ಬಗ್ಗೆ ಇಲ್ಲಿ 41 ಲೇಖನಗಳಿವೆ. ಇವನ್ನು ಪ್ರಬಂಧ, ಪ್ರಹಸನ ಹರಟೆಗಳೆಂದು ಹೇಳಲೋ, ಎಂಬ ಮತ್ತು ಇವು ವಾಸ್ತವವೋ, ಲೇಖಕರ ಸೃಜನಶೀಲ ಸೃಷ್ಟಿಯೋ ಎಂಬ ಸಂದಿಗ್ಧವು ಹುಟ್ಟುವಂತೆ ಇಲ್ಲಿನ ಬರೆಹಗಳ ರಚನೆಯಿದೆ. ಮನುಷ್ಯನೊಬ್ಬನ ವಾಸ್ತವ ಅನುಭವವು ಇಷ್ಟಿರುವುದು ಅಪರೂಪ. (ಇಲ್ಲವೆಂದು ಹೇಳುವುದು ಅಂತಹ ಒಬ್ಬ ಲೇಖಕನಿದ್ದರೆ ಆತನಿಗೆ ಅನ್ಯಾಯವಾಗಬಹುದು.) ಕಲ್ಪನೆಯ ಕುದುರೆಗೆ ಹಾರುವ ಹಕ್ಕಿಯ ಉಡ್ಡಯಣ. ಮಿತಿಯಿಲ್ಲ; ಅಗಾಧ, ಅನಂತ, ವ್ಯಾಪ್ತಿ. ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ ವಿಹರಿಸಬಹುದು. ಸಾಹಿತ್ಯದ ಪರಿಭಾಷೆಯಲ್ಲಿ ಪ್ರತ್ಯೇಕ ಅರ್ಥವಿರುವ ಮಾಯಾ ವಾಸ್ತವವೆನ್ನಬಹುದು.

ಲೇಖಕರು ಅವರೇ ಸ್ಥಾಪಿಸಿದ ತೇರಳ್ಳಿಬೆಟ್ಟದ ‘ಲಿವಿಂಗ್ ಸ್ಕೂಲ್’/ ‘ಆದಿಮ’ ರಂಗಮಂಟಪದ ರೂವಾರಿ. ಇಲ್ಲಿನ ಶ್ರೀಸಾಮಾನ್ಯರನ್ನು ಅವರು ಬಲ್ಲರು. ಅವರು ಅಲ್ಲಿ ಚಿರಪರಿಚಿತರು. ಈ ಸಂಬಂಧಗಳು ಸ್ನೇಹದಲ್ಲಿ ಹೇಗೋ ಜಗಳದಲ್ಲೂ ಹಾಗೇ-ಚೇತೋಹಾರಿ. ಕಾಣ್ಕೆಯ ಬಿಕ್ಕಟ್ಟು ಕೃತಿಯ ಮಹತ್ವಕ್ಕೆ ಅಡ್ಡಿಯಾಗುವುದಿಲ್ಲ. ಆದರೂ ನಾನು ಇಲ್ಲಿನ ವಿವರಣೆಗಳೆಲ್ಲ ಪ್ರಥಮ ವಿಭಕ್ತಿಯಲ್ಲೇ ಇರುವುದರಿಂದ ಲೇಖಕರೆೆಂದೇ ಉಲ್ಲೇಖಿಸುತ್ತೇನೆ.

ಒಂದು ಕೃತಿ ಓದುಗನನ್ನು ವಿಶಿಷ್ಟ ಕಾರಣಗಳಿಂದಾಗಿ ಆಕರ್ಷಿಸಬಲ್ಲುದು. ಇದು ಓದುವ ಮೊದಲು ಮೂಡುವ ಆಕರ್ಷಣೆಯಲ್ಲ. ಓದಿನ ನಂತರದ್ದು. ಆದ್ದರಿಂದ ಅನೇಕ ಒಳ್ಳೆಯ ಕೃತಿಗಳು ನಮ್ಮ ಓದಿಗೆ ಸಿಕ್ಕದೆ ದಾಟಿಹೋಗಬಹುದು. ಈ ಕೃತಿ ಆತ್ಮವೃತ್ತವಲ್ಲ. ನೆನಪಿನ ಭಿತ್ತಿಯೂ ಅಲ್ಲ. ಅನುಭವದ ಹರಹು. ಲೇಖಕರ ಸುತ್ತ ಒಂದಷ್ಟು ಮಂದಿ ತೀರಾ ಸಾಮಾನ್ಯರಿದ್ದಾರೆ. ಆದರೆ ಅವರೆಲ್ಲ ವಿಶಿಷ್ಟವಾದ ವ್ಯಕ್ತಿಗಳು. ಹಾಗೆ ನೋಡಿದರೆ ಭೂಮಿಯ ಮೇಲಿರುವ ಎಲ್ಲರೂ ಒಂದೊಂದು ವೈಶಿಷ್ಟ್ಯವನ್ನು ಹೊಂದಿದವರೇ ಆದರೂ ಎಲ್ಲರೂ ನಮಗೆ ಗುರುತಾಗುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ನಾವು ನಿತ್ಯ ನೋಡುವ ಮಂದಿಯನ್ನೂ ನಿರ್ಮಮವಾಗಿ ಸಮಾನರಾಗಿ, ಗುರುತಿಸುವ, ಕಾಣುವ ಗುಣಗ್ರಾಹಿತನ ನಮ್ಮಲ್ಲಿದ್ದರೆ ಆಗ ಈ ಕೃತಿಯಲ್ಲಿರುವಂತಹ ಪಾತ್ರಗಳು ಸೃಷ್ಟಿಯಾಗುತ್ತವೆ. ಲೇಖಕರು ಬಳಸುವ ಶೈಲಿಯಿಂದಾಗಿ ಈ ಪಾತ್ರಗಳು ನಮ್ಮ ನಡುವೆ ಓಡಾಡುತ್ತಿರುವಂತೆ ಕಾಣಿಸುತ್ತಾರೆ.

ಈ ಲೇಖನಗಳಲ್ಲಿ ಆರಂಭದಿಂದ ಅಂತ್ಯದವರೆಗೆ ಬೆಳೆಸಬಲ್ಲ ಕಥೆಯಿಲ್ಲ. ಒಂದೊಂದೂ ಚುರುಕು ಮುಟ್ಟಿಸುವ ಕಿರು ಲಲಿತ ಕಥಾನಕಗಳು. ಇಲ್ಲಿ ಸ್ಥಳ, ಕಾಲದ ಚರಿತ್ರೆಯಾಗಲಿ, ಪ್ರವೇಶಿಕೆಯಾಗಲೀ ಇಲ್ಲ. ನೇರ ಹೆಲಿಕಾಪ್ಟರಿನಲ್ಲಿ ನಮ್ಮನ್ನು ಒಯ್ದು ‘ದರ್ಗಾಮಾಳ’ದಲ್ಲಿಳಿಸಿ ಬರೆಹದ ಮೂಲಕ ಅಲ್ಲಿನ ಪ್ರಸಂಗಗಳನ್ನು ಅನುಭವಿಸುವಂತೆ ಲೇಖನಗಳಿವೆ. ಸುಮಾರು 15ರಷ್ಟು ಲೇಖನಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷನಾಗುವ ರಹೀಮನಂತಹ ವ್ಯಕ್ತಿಗಳು ನಮ್ಮನ್ನು ಆವರಿಸುವಷ್ಟು ಮತ್ತು ಲೇಖಕರೂ ರಹೀಮನಂಥವರೂ ಬದುಕುವ ಪ್ರಪಂಚ ನಮ್ಮ ಮನೆಯ ಬಾಗಿಲು ತೆರೆದರೆ ಸಾಕು, ಕಾಣುವಷ್ಟು ಬೆಳೆಯುತ್ತವೆ. ಅವರು ವಿವರಿಸುವ ಯಾವುದೇ ಘಟನೆಯು ನಮ್ಮೆದುರೇ ನಡೆದಂತಿದೆ. ಇದಕ್ಕೆ ಅವರು ಬಳಸುವ ಭಾಷೆ ಕಾರಣ. ಅದು ಕೆಲವೊಮ್ಮ ತೆಲುಗಿನಲ್ಲೂ ಇರಬಹುದು; ಇನ್ನು ಕೆಲವೊಮ್ಮೆ ಕನ್ನಡದಲ್ಲೂ ಇರಬಹುದು. ಕೋಲಾರ ತೆಲುಗು-ಕನ್ನಡದ ಗಡಿಭಾಗ. (ತೆಲುಗಿನ ವಾಕ್ಯಗಳಿಗೆ ಕನ್ನಡಾನುವಾದ ಆವರಣದಲ್ಲಿದೆ.) ನಗಿಸುತ್ತಲೇ ಬೆಳೆಯುವ ಘಟನೆಗಳು ಯಾರನ್ನೂ ‘ಹೀರೋ’ ಆಗಿಸುವುದಿಲ್ಲ- ಲೇಖಕರನ್ನೂ. ಆದರೆ ಈ ಹಾಸ್ಯದ, ಕೆಲವೊಮ್ಮೆ ಹಗುರು ಮಾತುಗಳ ಹಿಂದೆ ಗಂಭೀರ ಚಿಂತನೆಯಿದೆ; ವಿಷಾದವಿದೆ. ಅದು ಅವರ ಆಸುಪಾಸಿಗಷ್ಟೇ ಅಲ್ಲ, ದೇಶದ, ಭಾಷೆಯ, ಕಾಲದ ಭಾಷ್ಯವೂ ಹೌದು. ಬಹಳಷ್ಟು ಘಟನೆಗಳು, ಸಂದರ್ಭಗಳು ರೂಪಕಗಳಂತೆ ಬಂದುಹೋಗುತ್ತವೆ. ಅವರು ಈ ಗ್ರಹಿಕೆಗಳನ್ನು ತಲ್ಲಣಗಳು, ಜೀವಗುರುತುಗಳು ಎಂದಿದ್ದಾರೆ. ಎಲ್ಲ ಲೇಖನಗಳಲ್ಲೂ ಅವರ ಓದಿನ ಮತ್ತು ಅನುಭವದ ವಿಸ್ತಾರ ಸ್ಪಷ್ಟವಾಗಿದೆ. ಸಾಂದರ್ಭಿಕವಾಗಿ ಹ್ಯಾಮ್ಲೆಟ್‌ನ ‘ಟು ಬಿ ಆರ್ ನಾಟ್ ಟು ಬಿ’ ಹೇಗೋ ಒಫೀಲಿಯಾ ನೀರಿಗೆ ಹಾರುವ, ಗೆಲಿಲಿಯೋ ನಾಟಕದಲ್ಲಿ ಗೆಲಿಲಿಯೋವಿನ ಭಂಗಿ, ಟೈಗರ್ ಬಿಸ್ಕತ್ತು ಜಾಹೀರಾತಿನಲ್ಲಿ ತೆಂಡುಲ್ಕರ್ ತೋರುವ ಆಂಗಿಕ ಅಭಿನಯ, ಗಂಗವ್ವ ಗಂಗಾಮಾಯಿ ಇವೆಲ್ಲ ಅವರ ವಿಶ್ವಾತ್ಮಕ ಚಿಂತನೆಗೆ ದಕ್ಕಿ ಲೇಖನಿಯ ಮೂಲಕ ಸ್ಥಳೀಯವಾಗಿ ಸಿಕ್ಕಿವೆ. ಹಳ್ಳಿಯ ಒಡನಾಟದ ಪ್ರೀತಿಯನ್ನು ಅವರು ‘ಆ ಕೂಟದಿಂದ ಸಿಕ್ಕುವ ಸುಖ, ಆನಂದ, ಯಾವ ಯುಜಿಸಿ ಸೆಮಿನಾರುಗಳಿಂದಲೂ ಸಿಗುವುದಿಲ್ಲ’ ಎನ್ನುತ್ತಾರೆ. ಪರಿಚಿತ ಪುಟ್ಟ ಹುಡುಗಿಯೊಬ್ಬಳು (ದೇವನೂರು) ಮಹಾದೇವರ ‘ಕುಸುಮಬಾಲೆ’ಯ ಕೆಂಪಿಯನ್ನು ನೆನಪಿಸಿದರೆ, ಒಂದು ವಿಷಾದದ ಸಂದರ್ಭ ಅವರಿಗೆ ‘ಗಾನ್ ವಿದ್ ದಿ ವಿಂಡ್’ ಸಿನೆಮಾದ ಸ್ಕಾರೆಲೆಟ್ ಓಹಾರಳನ್ನು ನೆನಪಿಸುತ್ತದೆ. ಇಂತಹ ಚಿತ್ರಗಳು ಕೃತಿಯ ತುಂಬ ಇವೆ.

ಹಾಗೆಯೇ ಈ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಅವಮಾನಗಳು ಅವರನ್ನು ಬಹಳ ಕಾಡಿ, ಅವರ ಬರೆಹದಲ್ಲಿ ಒಡಮೂಡಿವೆ. ದೇವಕೊಳವು ‘ಉರುಫ್ ಕೊಚ್ಚೆ ಬಚ್ಚಲು’ ಆಗಿದೆ. ‘‘ದೇಶಭಕ್ತಿ ಮತ್ತು ದೇಶಪ್ರೇಮಗಳು ದಗಲಬಾಜಿಗಳ ಕೈಯಲ್ಲಿ ಖೊಟ್ಟಿ ನಾಣ್ಯಗಳಾಗಿರುವಾಗ ನಾವು ಹುಟ್ಟಿ ಬೆಳೆದ ನೆಲವನ್ನು ಕಣ್ಣಿಗೊತ್ತಿಕೊಳ್ಳುವುದು ಎಂದರೆ ಏನು?’’ ಎಂದು ಪ್ರಶ್ನೆ ಹಾಕುತ್ತಾರೆ. ಕೆಲವೆಡೆ ಅವರ ವಾಕ್ಯಗಳು ಗದ್ಯಕಾವ್ಯದಂತೆ ಓದಿಸಿಕೊಳ್ಳುತ್ತವೆ.

‘‘ಯಾಕೋ ಎದೆ ಭಾರವಾಗುತ್ತಿದೆ ಅನುಕ್ಷಣ. ಬೊಗಸೆ ನೀರು ಬೆರಳ ಸಂದಿಯಲ್ಲಿ ಸೋರಿಹೋಗುವಂತೆ. ನಾನೇ ಸೋರಿಹೋಗುತ್ತಿರುವುದರಿಂದ ‘ಸೋರುತಿಹುದು ಮನೆಯ ಮಾಳಿಗೆ’ ಪದದ ಸಿಪ್ಪೆ ಬಿಡಿಸುತ್ತಿದ್ದೇನೆ. ನಮ್ಮಲ್ಲಿ ಸಿಪ್ಪೆ ಬಿಡಿಸುವುದು ಎಂದರೆ ಕಣ್ಮುಂದೆ ಬರುವುದು ಈರುಳ್ಳಿ ಸಿಪ್ಪೆ ಮಾತ್ರ. ನಿರರ್ಥಕ ಕ್ರಿಯೆಗಳಿಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ರೂಪಕ ಇದು. ಇಂಥದ್ದೇ ಮನಸ್ಥಿತಿಯಲ್ಲಿ ದಿನದೂಡುತ್ತಿದ್ದೇನೆ.’’

‘‘ಸಿಕ್ಸ್ ಪ್ಯಾಕ್ ಅಂದರೆ ಆರು ದಿನ ಊಟ ಇಲ್ಲದೆ ಇರುವಾಗ ಬರುವ ದಿವೈಡರ್‌ಗಳು, ಹಂಪ್‌ಗಳು ಮಾಂಸಖಂಡಗಳಲ್ಲಿ, ಸೆವೆನ್ ಪ್ಯಾಕ್ ಎಂದರೆ ಏಳುದಿನ ಊಟ ಇಲ್ಲದಾಗ ಬರುವ ಇಂತಹದ್ದೇ ಎಫೆಕ್ಟ್’’

‘ತಿಮ್ಮಯ್ಯನ ಗೋಗ್ರಹಣ ವೃತ್ತಾಂತ’ ಎಂಬ ಅಧ್ಯಾಯದಲ್ಲಿ ದನಮೇಯಿಸುವುದಕ್ಕೆ ಸಂಬಂಧಿಸಿದಂತೆ ಈ ಚಿತ್ರವಿದೆ:

‘‘ನಾನು ಎಷ್ಟು ಚೆನ್ನಾಗಿ ಮೇಯಿಸ್ತಾ ಇದ್ದೆ, ಸುತ್ತ ಒಂದು ಗೆರೆ ಗೀಚಿ ಕೋಲಾರಕ್ಕೆ ಹೋದ್ರೂನೂ ನಾನು ಬರೋವರ್ಗೂ ಗೀಚಿದ ಗೆರೆ ದಾಟ್ತಾ ಇರಲಿಲ್ಲ.’’

ಮತ್ತೊಂದೆಡೆ:

‘‘ತಿಮ್ಮಯ್ಯನ ಹೇಳಿಕೆಯಿಂದ ಆತ ದನ ಮೇಯಿಸುತ್ತಿದ್ದ ರೀತಿಯೊಂದು ಇದೀಗ ತಾನೆ ತಿಳಿದುಬಂತು. ಈ ತಿಮ್ಮಯ್ಯ ಹೊತ್ತಾರೆ ದನಗಳನ್ನು ಬೆಟ್ಟಕ್ಕೆ ಹೊಡೆದು, ಸುತ್ತ ರೌಂಡಿಗೆ ಗೆರೆ ಎಳೆದು, ಕೊಡಬೇಕಾದ ‘ಇನ್‌ಸ್ಟ್ರಕ್ಷನ್ಸ್’ ಎಲ್ಲಾ ಕೊಟ್ಟು, ಬೆಟ್ಟ ಇಳಿದು ಆರು ಕಿ.ಮೀ. ದೂರದ ಕೋಲಾರ ನಗರಕ್ಕೆ ಹೋಗಿ ಸಾರಾಯಿ ಕುಡಿದು ಮತ್ತೆ ಬರುವವರೆಗೂ ಆ ದನಗಳು ಹಾಕಿದ ಗೆರೆ ದಾಟುತ್ತಿರಲಿಲ್ಲ ಎಂಬುದನ್ನು ನಾನು ನಂಬಲೇಬೇಕಾಯಿತು. ಯಾಕೆಂದರೆ ಊದುವ ಪಿಳ್ಳಂಗೋವಿ ನಾದಕ್ಕೇನೆ ದನಗಳು ಶ್ರೀಕೃಷ್ಣನ ಬಳಿ ಬಂದು ನಿಂತು ಕೊಳಲುನಾದ ಆಸ್ವಾದಿಸುತ್ತಿದ್ದ ಶಿವಕಾಶಿ ಕ್ಯಾಲೆಂಡರುಗಳನ್ನು ನಾನೂ ನೋಡಿದ್ದೇನೆ. ಸಂವಿಧಾನಕ್ಕಿಂತ ಇಂಥ ಕ್ಯಾಲೆಂಡರುಗಳನ್ನು ಹೆಚ್ಚು ನಂಬುವ ದೇಶ ನಮ್ಮದು. ನಾನು ಏನು ಮಾಡಬೇಕೋ ತೋಚದೆ ತಿಮ್ಮಯ್ಯನ ಮುಖವನ್ನೇ ದಿಟ್ಟಿಸುತ್ತಿದ್ದೆ. ಆತ ಇಂಥ ಕುರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ ಸಿಕ್ಕಿದೆಯಲ್ಲ ಇದೇ ವಿಪರ್ಯಾಸ ಎನ್ನುವಂತೆ ಮರುಕವನ್ನು ಹಲ್ಲಿಯಂತೆ ಲೊಚಗುಟ್ಟುವುದರ ಮೂಲಕ ಹೊರಹಾಕಿ, ಕೋಲಾರದಿಂದ ಕೊಂಡುತಂದಿದ್ದ ಸುಟ್ಟ ಮುಸುಕಿನ ಜೋಳದ ತೆನೆಯನ್ನು ಕೈಗಿತ್ತು ‘ತಿನ್ನು’ ಎಂದು ಆದೇಶಿಸಿ ಎದ್ದುಹೋದ. ನಾನು ತೆನೆಯಿಂದ ಕಾಳುಗಳನ್ನು ಬಿಡಿಸಿ, ಉರಿದು ಪಾಪ್‌ಕಾರ್ನ್ ಮಾಡಿ ಮಾರುವುದರಿಂದ ಏನಾದರೂ ರಂಗಭೂಮಿ ಬದುಕಿ ಉಳಿಯಲು ಸಾಧ್ಯವೇ? ಎಂದು ಯೋಚಿಸುತ್ತಾ, ಅದು ಅಸಾಧ್ಯ ಎನಿಸಿ ಬಿಡಿಸಿದ ಒಂದೊಂದೇ ಕಾಳುಗಳನ್ನು ಬಾವಿಗೆಸೆದೆ....’’ ಮತ್ತು (ಬಾವಿಯಲ್ಲಿದ್ದ ಮಾರ್ವಾ ಮೀನುಗಳನ್ನು ನೆನಪಿಸಿಕೊಂಡು):

‘‘ರಹೀಮನ ಬ್ರೆಡ್ ತುಣುಕುಗಳಿಗೆ ಒಗ್ಗಿಹೋಗಿದ್ದ ಆ ಮಾರ್ವಾ ಮೀನುಗಳು ಈ ಮುಸುಕಿನ ಜೋಳದ ಕಾಳಿಗೆ ಬಾಯಿ ಹಾಕಲು ಮುಂದಾಗದೆ ರಿವರ್ಸ್ ಆಗುತ್ತಿದ್ದವು. ಮನುಷ್ಯರಂತೆ ಮೀನುಗಳೂ ರಿವರ್ಸ್ ಆಗುವುದನ್ನು ಕಂಡು ಮುಂಬರುವ ದಾರುಣ ವಾಸ್ತವ ಕುರಿತು ಯೋಚಿಸತೊಡಗಿದೆ.’’

ಈ ವಾಕ್ಯಗಳಿಗೆ ಎಷ್ಟು ಆಯಾಮಗಳಿವೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟೂ ವ್ಯಾಪ್ತಿಯನ್ನು ಹೊಂದಿದ ಇಂತಹ ವಿವರಣೆಗಳು ಕೃತಿಯ ತುಂಬ ಇವೆ. ಇನ್ನೊಂದೆಡೆ ಗಂಭೀರವಾಗಿ ಮತ್ತು ಅಷ್ಟೇ ಸಂಕಟದಿಂದ ರೈತಾಪಿ ಪಶುಸಂಗೋಪನೆಯ ಆರ್ಥಿಕತೆಯ ಕುರಿತು ಹೇಳುತ್ತ-

‘‘ಕಾನೂನು ಮಾಡುವವರಿಗೆ ಬಡರೈತರ ಕಷ್ಟ ಸುಖ ಅರ್ಥವಾಗುವುದಿಲ್ಲ. ಆದ್ದರಿಂದಲೇ ಅವರು ಗೋ-ಸಂರಕ್ಷಕರ ಗೆಟಪ್‌ನಲ್ಲಿ ಪೋಸು ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ನನಗೆ ಕಸಾಯಿಖಾನೆಗಳಿಂದ ಹಸುಕರುಗಳನ್ನು ಬಿಡಿಸಿ ತಂದು ಗೋಶಾಲೆಯೊಂದನ್ನು ಮಾಡಬೇಕೆನಿಸಿದೆ. ಗೋವು, ಮೂತ್ರ, ಸೆಗಣಿ ಈ ಜ್ಞಾನಶಿಸ್ತುಗಳ ವಿಶ್ವವಿದ್ಯಾನಿಲಯದ ಗೋಶಾಲೆಗಳ ಸುತ್ತ ಹರಿದುಬರುತ್ತಿರುವ ‘ಇಕಾನಮಿ’ ನಮ್ಮ ಸಂಸ್ಕೃತಿ ಸಂಧಾನಗಳ ‘ಇಕಾನಮಿ’ಗಿಂತ ಭರವಸೆದಾಯಕ ಎಂಬುದು ಮನದಟ್ಟಾಗಿದೆ’’ ಎನ್ನುತ್ತಾರೆ. ಇದು ಮಾನವತಾವಾದವೂ ಹೌದು.

ಇನ್ನೊಂದೆಡೆ ವ್ಯಂಗ್ಯವಾಗಿ-

‘‘ಬೆಂಕಿ ಹಚ್ಚುವುದಕ್ಕೂ ಸ್ವಂತ ಕಡ್ಡಿಪೆಟ್ಟಿಗೆಯ ಕಡ್ಡಿಗಳನ್ನು ಬಳಸದಿರುವಷ್ಟು ಭವಿಷ್ಯದ ಜಾಗ್ರತೆ ಅಥವಾ ಎಚ್ಚರವನ್ನು ನಾನು ಯುಜಿಸಿ ಸ್ಯಾಲರಿ ಗ್ರೇಡಿನ ನನ್ನ ಬಂಧುಬಾಂಧವರಿಂದ ಕಲಿತಿದ್ದೇನೆಂದು ಘೋಷಿಸಲು ಹೆಮ್ಮೆಪಡುತ್ತೇನೆ.’’

ಕೆಲವೊಮ್ಮೆ ಲೇಖಕರು ಸರಳತೆಯಿಂದ ಮತ್ತು ಮುಗ್ಧರಾಗಿ

‘‘ಬಣ್ಣಗಳು ನನ್ನ ಕುತೂಹಲಕಾರಿ ಅಧ್ಯಯನದ ಆಕರಗಳು. ಕಳೆದ ಇಪ್ಪತ್ತು ವರ್ಷಗಳಿಂದ ಮಕ್ಕಳ ಕಣ್ಣಲ್ಲಿನ ಬಣ್ಣಗಳಲ್ಲಿ ನಾನು ಬಹುಪಾಲು ಕರಗಿಯೇ ಹೋಗಿದ್ದೇನೆ’’ ಎನ್ನುತ್ತಾರೆ.

ಬರೆಹ ಮೇಲ್ನೋಟಕ್ಕೆ ಏನು ಹೇಳುತ್ತಿದೆಯೋ ಅದೇ ಅದರ ಆಳದಲ್ಲೂ ಇದೆಯೆಂದು ಮತ್ತು ಇರಬೇಕೆಂದು ತೇಜಸ್ವಿ ಒಂದು ಸಂದರ್ಭದಲ್ಲಿ ಹೇಳುತ್ತಾರೆ. (ಈ ಸಂವೇದನೆಗೂ ವಾಚ್ಯಕ್ಕೂ ಅಂತರವಿದೆ!) ಹೀಗನ್ನಿಸುವ ತಾಜಾತನವು ಒಬ್ಬ ಲೇಖಕನ ಶ್ರೇಷ್ಠತೆ. ತೇಜಸ್ವಿಯವರು ಈ ಕಾರಣಕ್ಕೇ ಕನ್ನಡದ ಶ್ರೇಷ್ಠರಲ್ಲೊಬ್ಬರು ಮಾತ್ರವಲ್ಲ ಬೌದ್ಧಿಕ ವ್ಯಾಯಾಮದಿಂದ ದೂರ ಸರಿದೂ ತಾವೂ ತಮ್ಮ ಪಾತ್ರಗಳೂ ಇವೆಲ್ಲ ನಮ್ಮೊಂದಿಗೆ ನಡೆಯುವ, ನುಡಿಯುವ ನಮ್ಮದೇ ಪ್ರಪಂಚವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತಿಯ ಬರವಣಿಗೆಯ ಶೈಲಿ ಪೂರ್ಣಚಂದ್ರ ತೇಜಸ್ವಿಯವರ ಬರೆಹಗಳನ್ನು ನೆನಪಿಸಿದರೆ ಅಚ್ಚರಿಯಿಲ್ಲ. ಪ್ರಕೃತಿಯ ಮಡಿಲಿನಲ್ಲಿರುವ ಎಲ್ಲರ ದೃಷ್ಟಿಕೋನ ಸಾಮಾನ್ಯವಾಗಿ ಹೀಗೇ ಇರುತ್ತದೆ. ಈ ಕೃತಿಯ ಎಲ್ಲ ಬಗೆಯ ಬರೆಹಗಳಲ್ಲಿ ಈ ರೀತಿಯ ಭಾಷೆ, ಶೈಲಿಯ ಮತ್ತು ನಮ್ಮ ನಡುವೆ ಇದ್ದಂತೆನಿಸುವ ಪಾತ್ರಗಳಿವೆ.

ಪ್ರಾಯಃ ಈ ಕಾರಣಕ್ಕೇ ಕೃತಿಯ ಮುನ್ನುಡಿಯಲ್ಲಿ ರಂಗಕರ್ಮಿ ಹಾಗೂ ಸಾಹಿತಿ ಬಿ.ಶ್ರೀಪಾದ ಭಟ್ ಲೇಖಕರನ್ನು ‘ಉರಿಯುವ ಲೋಕಚಿಂತಕ, ಬುಡ್ಡಿದೀಪದ ಬೆಳಕು’ ಎಂದು ನ್ಯಾಯೋಚಿತವಾಗಿ ಗುರುತಿಸಿದ್ದಾರೆ. ರಾಮಯ್ಯನವರು ಅಂಬೇಡ್ಕರ್ ಚಿಂತಕರಾಗಿ ಅಕಾಡಮಿಕ್ ಆಗಿ ಗುರುತಾಗದ ಸಾಹಿತ್ಯ ಸಂದರ್ಭವನ್ನು ಅವರು ವಿಷಾದ ಮತ್ತು ಸಿಟ್ಟಿನಿಂದ ‘‘... ಎಲ್ಲವೂ ಅಕಾಡಮಿಕ್ ಮಾಫಿಯಾದ ಗೋಳ ಆಕ್ರಮಿಸಿಕೊಂಡಿರುವುದರಿಂದ ರಾಮಣ್ಣ ರೀತಿಯ ಮುಟ್ಟಿದರೆ ಮುನಿಯಂತಹ ಸಂಸ್ಕೃತಿ ಚಿಂತಕ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.’’ (ಸಾಧ್ಯವಾಗುವುದಿಲ್ಲ ಕೂಡ.)

ಈ ಲೇಖನಗಳನ್ನು ಸಂಪಾದಿಸಿ ಪರಿಚಯಿಸಿ ಪ್ರಕಟಿಸಿದ ಕೆ.ಪಿ. ಲಕ್ಷ್ಮಣ್ ಒಬ್ಬ ರಂಗಕರ್ಮಿ. ಅವರ ಶ್ರದ್ಧಾಪೂರ್ವಕ ಪರಿಶ್ರಮ ಕೃತಿಯ ವಿನ್ಯಾಸದಲ್ಲಿ ಮಾತ್ರವಲ್ಲ, ಅವರು ಹೇಳಿದಂತೆ ‘ನಮ್ಮ ಕಣ್ಣಿನ ಲಸರೆ ತೆಗೆದು ಹೊಸ ಕಣ್ಣು ಕೊಡುವ ಬರೆಹಗಳು’ ಎಂಬ ಅಭಿವ್ಯಕ್ತಿಯಲ್ಲೂ ಅರಿವಾಗುತ್ತದೆ.

ಕನ್ನಡಕ್ಕೆ ಈ ಕೃತಿ ಒಂದು ಒಳ್ಳೆಯ ಕೊಡುಗೆ.

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X