Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ವಕ್ಫ್ ತಿದ್ದುಪಡಿ ಕಾಯ್ದೆ-2025 |...

ವಕ್ಫ್ ತಿದ್ದುಪಡಿ ಕಾಯ್ದೆ-2025 | ಸುಪ್ರೀಂನಲ್ಲಿ ಮೋದಿ ಸರಕಾರದ ವಿತಂಡವಾದ ಮತ್ತು ಕೋಮುವಾದ

ಶಿವಸುಂದರ್ಶಿವಸುಂದರ್28 May 2025 10:25 AM IST
share
ವಕ್ಫ್ ತಿದ್ದುಪಡಿ ಕಾಯ್ದೆ-2025 | ಸುಪ್ರೀಂನಲ್ಲಿ ಮೋದಿ ಸರಕಾರದ ವಿತಂಡವಾದ ಮತ್ತು ಕೋಮುವಾದ

ಮೋದಿ ಸರಕಾರವು ತನ್ನ ಸಂಸದೀಯ ಬಹುಮತದ ಮೂಲಕ ಸಾಂವಿಧಾನಿಕ ವ್ಯವಸ್ಥೆಯನ್ನೇ ಕಳಚಲು ನೋಡುತ್ತಿದೆ, ಶಾಸಕಾಂಗದ ಕ್ರಮಗಳ ಮೇಲೆ ನ್ಯಾಯಿಕ ಪರಿಶೀಲನೆಯನ್ನೇ ವ್ಯರ್ಥಗೊಳಿಸಲು ನೋಡುತ್ತಿದೆ. ಉಪರಾಷ್ಟ್ರಪತಿ ಧನ್ಕರ್ ಕೂಡಾ ನ್ಯಾಯಾಲಯಗಳಿಗಿಂತ ಸಂಸತ್ ಮೇಲು ಎಂದು ಪದೇಪದೇ ಹೇಳುತ್ತಿದ್ದಾರೆ. ತನ್ನ ವಕ್ಫ್ ಕುರಿತಾದ ಪ್ರಮಾಣಪತ್ರದಲ್ಲೂ ಮೋದಿ ಸರಕಾರ ತನ್ನ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ವಾದವನ್ನು ಇನ್ನಷ್ಟು ಪ್ರತಿಪಾದಿಸಿದೆ.

ಇದು ವಕ್ಫ್ ಅಥವಾ ಮುಸ್ಲಿಮರ ಮೇಲಿನ ದಾಳಿಯಷ್ಟೇ ಅಲ್ಲ; ಮೋದಿ ಸರಕಾರ ಸಂವಿಧಾನದ ಸರ್ವೋಚ್ಚತೆಯ ಮೇಲೆಯೇ ದಾಳಿ ನಡೆಸುತ್ತಿದೆ.

ಮೋದಿ ಸರಕಾರವು ಕುತಂತ್ರದಿಂದ ಜಾರಿ ಮಾಡಿರುವ ವಕ್ಫ್ ತಿದ್ದುಪಡಿ ಕಾಯ್ದೆ- 2025ಕ್ಕೆ ಮಧ್ಯಂತರ ತಡೆಯಾಜ್ಞೆ ಕೊಡಬಹುದೇ ಮತ್ತು ಯಾವ ವಿಷಯಗಳ ಬಗ್ಗೆ ಕೊಡಬೇಕಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ ನ್ಯಾ. ಗವಾಯಿ ಮತ್ತು ನ್ಯಾ. ಆಗಸ್ಟಿನ್ ಮಸಿಹ ಅವರ ದ್ವಿಸದಸ್ಯ ಪೀಠವು ಸುದೀರ್ಘ ಮೂರು ದಿನಗಳ ವಿಚಾರಣೆಯನ್ನು ನಡೆಸಿ ತಮ್ಮ ತೀರ್ಮಾನವನ್ನು ಕಾದಿರಿಸಿದೆ.

ಸರಕಾರದ ಕಾಯ್ದೆಯನ್ನು ವಿರೋಧಿಸಿ ಅಹವಾಲುದಾರರು ಮಂಡಿಸಿರುವ ವಾದವನ್ನು ವಿರೋಧಿಸಿ ಭಾರತ ಸರಕಾರ 1,332 ಪುಟಗಳ ಕೌಂಟರ್ ಅಫಿಡವಿಟನ್ನು ಸಲ್ಲಿಸಿತ್ತು ಹಾಗೂ ಅದನ್ನೇ ಮುಂದಿಟ್ಟುಕೊಂಡು ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಮ್ಮ ಸುದೀರ್ಘ ಪ್ರತಿವಾದವನ್ನು ಹೋದವಾರ ಸುಪ್ರೀಂನಲ್ಲಿ ಮಂಡಿಸಿದರು.

ತುಷಾರ್ ಮೆಹ್ತಾ ಅವರ ಪ್ರತಿವಾದ ಮತ್ತು ಸರಕಾರದ ಕೌಂಟರ್ ಅಫಿಡವಿಟ್‌ಗಳು, ವಕ್ಫ್ ಬಗ್ಗೆ, ಮುಸ್ಲಿಮರ ಬಗ್ಗೆ ಮತ್ತು ಇಸ್ಲಾಮಿನ ಬಗ್ಗೆ ಮೋದಿ ಸರಕಾರಕ್ಕೆ ಇರುವ ಆಳವಾದ ತಿರಸ್ಕಾರ ಮತ್ತು ಈ ತಿದ್ದುಪಡಿಯ ಹಿಂದಿನ ಕೋಮುವಾದಿ ಉದ್ದೇಶಗಳನ್ನು ನಿಚ್ಚಳವಾಗಿ ಬಯಲು ಮಾಡಿವೆ.

ಮುಸ್ಲಿಮರ ಹಕ್ಕನ್ನು ಕಸಿಯಲು ಸೆಕ್ಯುಲರ್ ಸಿದ್ಧಾಂತವನ್ನು ಬಳಸುವುದು ಮತ್ತು ಹಿಂದುತ್ವವನ್ನು ಹೇರಲು ಬಹುಸಂಖ್ಯಾತರ ಶ್ರದ್ಧೆಗೆ ಪುರಾವೆ ಬೇಕಿಲ್ಲ ಎಂಬ ವಿತಂಡವಾದ ಮಂಡಿಸುವುದು ಬಿಜೆಪಿ ಮತ್ತು ಸಂಘಪರಿವಾರ ಮೊದಲಿಂದಲೂ ಬಳಸುತ್ತಿರುವ ಕುತಂತ್ರ.

ದುರದೃಷ್ಟವಶಾತ್ ಕೋರ್ಟುಗಳೂ ಕೂಡ ಈ ವಿತಂಡವಾದವನ್ನು ಪುರಸ್ಕರಿಸುತ್ತಾ ಒಂದೆಡೆ ಬಾಬರಿ ಮಸೀದಿಗೆ ಪುರಾವೆಗಳಿದ್ದರೂ ನಿರಾಕರಿಸಿ ಬಹುಸಂಖ್ಯಾತರ ಶ್ರದ್ಧೆಗೆ ಪುರಾವೆ ಬೇಕಿಲ್ಲವೆಂದು ರಾಮಮಂದಿರಕ್ಕೆ ಅನುಮತಿ ನೀಡುತ್ತದೆ. ಮತ್ತೊಂದು ಕಡೆ ವಕ್ಫ್ ಹಿಜಾಬಿಗೆ, ಆಝಾನಿಗೆ ಪೈಗಂಬರ್‌ರ ಪುರಾವೆ ಕೇಳುವ ಇಬ್ಬಗೆಯ ನ್ಯಾಯದಂಡವನ್ನು ಅನುಸರಿಸುತ್ತಾ ಬಂದಿವೆ.

ವಕ್ಫ್ ಪ್ರಕರಣದಲ್ಲೂ ಮೋದಿ ಸರಕಾರವು ವಕ್ಫ್ ಎಂಬುದು ಧಾರ್ಮಿಕ ವಿಷಯವೇ ಅಲ್ಲ, ಅದೊಂದು ದಾನ-ದತ್ತಿಯಂಥ ಸೆಕ್ಯುಲರ್ ವಿಷಯವೆಂಬ ಸೋಗಲಾಡಿ ಸೆಕ್ಯುಲರ್ ವಾದವನ್ನು ಮುಂದಿಟ್ಟಿದೆ. ಆ ಮೂಲಕ ವಕ್ಫ್‌ಗಳನ್ನು ಮತ್ತು ಅದನ್ನು ನಿರ್ವಹಣೆ ಮಾಡಿಕೊಳ್ಳಲು ಸಂವಿಧಾನ ಕೊಡುವ ಆರ್ಟಿಕಲ್ 26ರ ಸಂರಕ್ಷಣೆಯನ್ನೇ ಕಸಿಯುವ ಹುನ್ನಾರವನ್ನು ಮಾಡಿದೆ.

ಅದೇ ರೀತಿ ಕಾಯ್ದೆಯ ಉದ್ದೇಶ ವಕ್ಫ್ ಸಬಲೀಕರಣ ಎಂದಿದ್ದರೂ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಅಸ್ತಿ ಎಂದು ವ್ಯಾಖ್ಯಾನಿಸಿ ಸರಕಾರ ಹಾಗೂ ಖಾಸಗಿಯವರು ಹಂತಹಂತವಾಗಿ ಕಬಳಿಸಲು ಪೂರಕವಾದ ಅಂಶಗಳನ್ನು ಸೇರಿಸಿದೆ.

ಅವೆಲ್ಲವನ್ನೂ ಸಂಸತ್ತಿನಲ್ಲಿ ತನಗಿರುವ ಸಂಖ್ಯಾಬಲವನ್ನು ಬಳಸಿಕೊಂಡು ಹಾಗೂ ವಿರೋಧ ಪಕ್ಷಗಳ ಮತ್ತು ಭಿನ್ನಮತಗಳ ಎಲ್ಲಾ ಧ್ವನಿಗಳಿಗೆ ಯಾವುದೇ ಮಾನ್ಯತೆ ಕೊಡದೆ ನೆಪ ಮಾತ್ರಕ್ಕೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿ ಜಾರಿ ಮಾಡಿದೆ. ಈಗ ಅದನ್ನೇ ಮುಂದುಮಾಡಿ ಒಂದು ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಜಾರಿಯಾದ ಕಾಯ್ದೆಗೆ ಮಧ್ಯಂತರ ಆದೇಶ ಕೊಡುವ ಅಧಿಕಾರ ಸಂವಿಧಾನಕ್ಕೆ ಇಲ್ಲ ಎಂದು ಪ್ರಬಲವಾಗಿ ಸುಪ್ರೀಂ ಮುಂದೆ ವಾದಿಸಿದೆ.

ಸುಪ್ರೀಂ ಕೋರ್ಟು ಸಹ ಅತ್ಯಂತ ಬಲವಾದ ಕಾರಣಗಳಿಲ್ಲದೆ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಜಾರಿಯಾದ ಕಾಯ್ದೆಯನ್ನು ಕೋರ್ಟ್ ಗಳು ಸಂವಿಧಾನ ಬದ್ಧವೇ ಆಗಿರುತ್ತದೆ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿಬಿಟ್ಟಿದೆ.

ಅದೇನೇ ಇರಲಿ ಸದ್ಯಕ್ಕೆ ಮಧ್ಯಂತರ ವಿಚಾರಣೆ ಮುಗಿದು ಮಧ್ಯಂತರ ಆದೇಶ ಕಾದಿರಿಸಲಾಗಿದೆ. ಸುಪ್ರೀಂ ಕೋರ್ಟು ಯಾವುದೇ ಬಗೆಯ ಮಧ್ಯಂತರ ಆದೇಶ ನೀಡಿದರೂ, ಅದರ ಸಂಪೂರ್ಣ ವಿಚಾರಣೆ ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಅಥವಾ ಇದೇ ಪೀಠದಲ್ಲಿ ಮುಂದುವರಿದರೂ ಸಮಗ್ರ ವಿಚಾರಣೆ ನಡೆದು ಅಂತಿಮ ನ್ಯಾಯಾದೇಶ ಬರುವುದು ಕೆಲವು ವರ್ಷಗಳಾಗಬಹುದು.

ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ, ಈಗ ಆದೇಶಿಸಿರುವಂತೆ, ತಿದ್ದುಪಡಿ ಕಾಯ್ದೆಯ ಅತ್ಯಂತ ಕೋಮುವಾದಿ ಅಂಶಗಳಿಗೆ ತಡೆಯಾಜ್ಞೆ ಮುಂದುವರಿಸದಿದ್ದರೆ ಮುಸ್ಲಿಮರ ಧಾರ್ಮಿಕ ಅಸ್ಮಿತೆ ಮತ್ತು ಆಚರಣೆಯ ಮೇಲೆ ದೊಡ್ಡ ಹೊಡೆತ ಕೊಟ್ಟಂತಾಗುತ್ತದೆ ಮತ್ತು ಅಂತಹ ಹೊಡೆತ ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಹೀಗಾಗಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತಗೊಳ್ಳುವುದು ಕೂಡ ಮೋದಿ ಸರಕಾರದ ಕೋಮು ಅಜೆಂಡಾಗೆ ಯಶಸ್ಸನ್ನು ತಂದುಕೊಡುತ್ತದೆ.

ಆದ್ದರಿಂದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ದಮನಿತ ಜನರೆಲ್ಲರೂ ಸೇರಿ ಬೃಹತ್ ಜನಾಂದೋಲನವನ್ನು ಕಟ್ಟುವ ಅಗತ್ಯವಿದೆ. ಹಾಗೂ ಅದರ ಅಗತ್ಯವನ್ನು ಮನಗಾಣಲು ವಕ್ಫ್ ತಿದ್ದುಪಡಿ ಕಾಯ್ದೆಯ ಹಿಂದಿನ ಉದ್ದೇಶವನ್ನು ಅರಿಯಬೇಕಿದೆ.

ಮೋದಿ ಸರಕಾರ ಕೌಂಟರ್ ಅಫಿಡವಿಟ್‌ನಲ್ಲಿ ಆ ಕೋಮುವಾದಿ ಉದ್ದೇಶವೂ ಸ್ಪಷ್ಟವಾಗಿ ವ್ಯಕ್ತವಾಗಿರುವುದರಿಂದ ಈ ಲೇಖನದಲ್ಲಿ ಆ ಅಫಿಡವಿಟ್‌ನ ವಿಶ್ಲೇಷಣೆಯನ್ನು ಮುಂದಿಡಲಾಗಿದೆ.

ಅದರಂತೆ, ಮೋದಿ ಸರಕಾರವು 1,332 ಪುಟಗಳ ಪ್ರಮಾಣ ಪತ್ರವನ್ನು ಅನೇಕ ಅಡಕಗಳೊಂದಿಗೆ ಸಲ್ಲಿಸಿದೆ. ಈ ಪ್ರಮಾಣಪತ್ರದ ಮೇಲೆ ಹಾಗೇ ಕಣ್ಣಾಡಿಸಿದರೂ ಮೋದಿ ಸರಕಾರದ ದುಷ್ಟ ಉದ್ದೇಶ, ನಿರಂಕುಶ ಮತ್ತು ಕೋಮುವಾದಿ ಹವಣಿಕೆ ಜಾಹೀರಾಗುತ್ತದೆ.

ವಕ್ಫ್ ನಾಶದ ಬಹಿರಂಗ ಘೋಷಣೆ

ಲೈವ್ ಲಾ ವರದಿ ಮಾಡಿದಂತೆ, ಮೋದಿ ಸರಕಾರದ ಪ್ರಮಾಣಪತ್ರ, ‘‘ತಿದ್ದುಪಡಿಗಳು ಕೇವಲ ಆಸ್ತಿ ನಿರ್ವಹಣೆಯ ಧರ್ಮ ನಿರಪೇಕ್ಷ ನಿಯಂತ್ರಣದ ಬಗ್ಗೆಯಷ್ಟೇ ಇದೆ; ಆದ್ದರಿಂದ ಸಂವಿಧಾನದ ವಿಧಿ 25 ಮತ್ತು 26 ಖಚಿತಪಡಿಸುವ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ’’ ಎಂದು ಪುನರುಚ್ಚರಿಸುತ್ತದೆ.

ಹಾಗೆಯೇ ಸರಕಾರವು ಸಂವಿಧಾನದ ವಿಧಿ 26(ಡಿ) ಧಾರ್ಮಿಕ ಸಮುದಾಯವು ತನ್ನ ಆಸ್ತಿಯನ್ನು ನಿರ್ವಹಿಸುವ ಹಕ್ಕನ್ನು ನೀಡಿದರೂ, ಅದು ‘ಕಾನೂನಿಗೆ ಅನುಗುಣವಾಗಿ’ ಇರಬೇಕು ಎಂದು ವಾದಿಸುತ್ತದೆ.

ಕಾನೂನು ಈ ಆಸ್ತಿಯ ಉದ್ದೇಶದ ಧರ್ಮನಿರಪೇಕ್ಷ ಪರಿಶೀಲನೆಗೆ ಅವಕಾಶ ನೀಡುತ್ತದೆಯೇ ವಿನಃ ಈ ಆಸ್ತಿಯನ್ನು ಸಮುದಾಯದಿಂದ ವಿರಹಿತಗೊಳಿಸುವುದಿಲ್ಲ.

ಆದರೆ ವಕ್ಫ್, ಝಕಾತ್‌ನಂತಹ ದತ್ತಿ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಇಸ್ಲಾಮಿಕ್ ಧಾರ್ಮಿಕತೆಯನ್ನು ಈ ಪ್ರಮಾಣಪತ್ರ ನಿರಾಕರಿಸುವಲ್ಲಿ ಮೋದಿ ಸರಕಾರದ ನಿಜವಾದ ಉದ್ದೇಶ ಬಯಲಾಗುತ್ತದೆ. ವಕ್ಫ್‌ನ ಹಣಕಾಸಿನ ದುರುಪಯೋಗ ಕುರಿತಂತೆ, ಈಗಾಗಲೇ ಲಾಗೂ ಇರುವ ಶಾಸನಗಳ ಮೂಲಕ ಧರ್ಮ ನಿರಪೇಕ್ಷ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಇದ್ದೇ ಇದೆ; ಆದರೆ ಮೋದಿ ಸರಕಾರವು ಈ ದತ್ತಿಗಳ ಧಾರ್ಮಿಕತೆಯ ಬಗ್ಗೆ ಮೂಗು ತೂರಿಸಿ ಯಾರು ಮುಸ್ಲಿಮ್, ವಕ್ಫ್ ಎಂದರೇನು ಎಂಬುದನ್ನೇ ಶಾಸನವಾಗಿಸಲು ಹೊರಟಿದೆ. ಇವು ಮೂಲತಃ ಧರ್ಮದ ವ್ಯಾಪ್ತಿಗೆ ಸೇರಿದ್ದು. ಈ ಹಂತದಲ್ಲಿ ಸರಕಾರದ ಧರ್ಮ ನಿರಪೇಕ್ಷ ಮಧ್ಯಪ್ರವೇಶದ ಸೋಗಿನಲ್ಲಿ ತನಗಿರುವ ಕೋಮುವಾದಿ ಉದ್ದಿಶ್ಯಗಳನ್ನು ಈ ಪ್ರಮಾಣಪತ್ರ ಬಯಲು ಮಾಡುತ್ತದೆ. ವಕ್ಫ್ ಅನುಭೋಗದಲ್ಲಿ ಎಂಬ ಉಪನಿಯಮದ ದುರುಪಯೋಗದ ಮೂಲಕ ಹೇಗೆ ಸರಕಾರಿ ಮತ್ತು ಖಾಸಗಿ ಜಮೀನುಗಳನ್ನು ಅತಿಕ್ರಮಿಸಲಾಗಿದೆ, ಇದು ಸ್ಫೋಟಕ ಪ್ರಮಾಣದಲ್ಲಿದೆ ಎಂದು ಹಲವಾರು ರಾಜ್ಯಗಳಿಂದ ಉದಾಹರಣೆಗಳನ್ನು ಮುಂದಿಟ್ಟು ವಾದಿಸಲಾಗಿದೆ. 2013ರ ತಿದ್ದುಪಡಿ ಬಳಿಕ ರಾಜ್ಯಗಳಲ್ಲಿ ವಕ್ಫ್ ಆಸ್ತಿಗಳ ಪ್ರಮಾಣ ಶೇ. 116 ಏರಿಕೆ ಕಂಡಿದೆ. ವಕ್ಫ್ ಅನುಭೋಗದಲ್ಲಿ ಎಂಬ ನಿಯಮ ಮೂಲಕ ವಕ್ಫ್ ಬೋರ್ಡಿನಿಂದ ದೊಡ್ಡ ಪ್ರಮಾಣದ ಅತಿಕ್ರಮಣ ನಡೆದಿದೆ ಎಂದು ಈ ಪ್ರಮಾಣಪತ್ರ ಹೇಳುತ್ತದೆ.

ಆದರೆ 2013ರವರೆಗೆ ವಕ್ಫ್ ನೋಂದಣಿ ಗಂಭೀರವಾಗಿರಲಿಲ್ಲ, ವಕ್ಫ್ ಆಸ್ತಿಗಳಿಗೆಂದೇ ಇರುವ WಂಒSI(ವಂಸಿ) ಪೋರ್ಟಲ್‌ನಲ್ಲಿ ಈ ನೋಂದಣಿ 2013ರ ಬಳಿಕವಷ್ಟೇ ದ್ವಿಗುಣಗೊಂಡಿತು ಎಂಬ ಸತ್ಯವನ್ನು ಈ ಪ್ರಮಾಣಪತ್ರ ಕಡೆಗಣಿಸಿದೆ. ಒಂದುವೇಳೆ 2013ರ ಬಳಿಕ ವಕ್ಫೇತರ ಆಸ್ತಿಗಳ ಅತಿಕ್ರಮಣ ನಡೆದಿದ್ದರೆ ಟ್ರಿಬ್ಯೂನಲ್‌ನಲ್ಲಿ ಇದೇ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಯಾಕೆ ಜಾಸ್ತಿಯಾಗಲಿಲ್ಲ ಎಂಬ ಸರಳ ಸತ್ಯವನ್ನು ಈ ಪ್ರಮಾಣಪತ್ರ ವಿವರಿಸಲು ಸೋಲುತ್ತದೆ.

ಆದ್ದರಿಂದ, ಈ ತಿದ್ದುಪಡಿಗೊಂಡ ಶಾಸನದ ಶೀರ್ಷಿಕೆ, ‘‘ಸಂಯುಕ್ತ ವಕ್ಫ್, ನಿರ್ವಹಣೆ, ದಕ್ಷತೆ, ಸಶಕ್ತೀಕರಣ ಮತ್ತು ಅಭಿವೃದ್ಧಿ’’ಎಂದಿದ್ದರೂ; ವಕ್ಫ್ ಆಸ್ತಿಗಳ ರಕ್ಷಣೆಯನ್ನು ಹೆಚ್ಚಿಸುವ ಉದಾತ್ತ ಉದ್ದಿಶ್ಯವನ್ನು ಪ್ರಕಟಿಸಿದರೂ ಈ ಕಾನೂನಿನ ತಿದ್ದುಪಡಿ ಮೂಲತಃ ವಕ್ಫ್ ಆಸ್ತಿಗಳ ಅತಿಕ್ರಮಣದ ಉದ್ದೇಶ ಹೊಂದಿದೆ ಎಂಬುದನ್ನು ಪ್ರಮಾಣಪತ್ರ ಸ್ಪಷ್ಟಗೊಳಿಸುತ್ತದೆ.

ಈ ಹೊಸ ಶಾಸನ ಜಾರಿಗೆ ಬರುವ ಮೊದಲು ನೋಂದಣಿಗೊಂಡ ಆಸ್ತಿಗಳ ಮೇಲೆ ಈ ತಿದ್ದುಪಡಿ ಪರಿಣಾಮ ಬೀರುವುದಿಲ್ಲ ಎಂದು ಪ್ರಮಾಣಪತ್ರ ಭರವಸೆ ನೀಡುತ್ತದೆ. ಆದರೆ ಶತಮಾನಗಳಿಂದ ವಕ್ಫ್ ಉಪಭೋಗದಲ್ಲಿದ್ದು, ದಾಖಲೆಗಳ ಅಭಾವದಿಂದ ನೋಂದಣಿಯಾಗದ ಆಸ್ತಿಗಳಿಗೆ ಈ ಹೊಸ ವಕ್ಫ್ ಉಪಭೋಗದ ನಿಯಮದಡಿ ರಕ್ಷಣೆ ದೊರಕುತ್ತದೆಯೇ ಎಂಬ ಬಗ್ಗೆ ಈ ಅಫಿಡವಿಟ್ ಸ್ಪಷ್ಟನೆ ನೀಡುವುದಿಲ್ಲ. ನೋಂದಣಿಗೆ ಯಾವ ದಾಖಲೆಯ ಪುರಾವೆಯೂ ಬೇಕಿಲ್ಲ ಎಂದು ಪ್ರಮಾಣ ಪತ್ರ ಹೇಳಿದರೂ ಶಾಸನ ಮಾತ್ರ ಈ ವಿಷಯ ಕುರಿತಂತೆ ಮೌನ ತಾಳಿದೆ.

ಹಿಂದೂ ಧಾರ್ಮಿಕ ದತ್ತಿಗಳಂತಲ್ಲದೆ ವಕ್ಫ್ ಇನ್ನೂ ವಿಕಾಸಗೊಳ್ಳುತ್ತಿರುವ ಪರಿಕಲ್ಪನೆ; ಆದ್ದರಿಂದ ವಕ್ಫನ್ನು ಇತರ ಧಾರ್ಮಿಕ ದತ್ತಿಗಳ ಜೊತೆ ಹೋಲಿಸುವುದು ಸರಿಯಲ್ಲ ಎಂದು ಪ್ರಮಾಣಪತ್ರ ಹೇಳುತ್ತದೆ. ಆದರೆ, ‘‘ಮುಸ್ಲಿಮೇತರರ ಆಸ್ತಿಗಳ ಮೇಲೂ ವಕ್ಫ್ ನಿಯಂತ್ರಣ ಚಲಾಯಿಸುತ್ತಿದೆ, ಆದ್ದರಿಂದ ಮುಸ್ಲಿಮೇತರರ ಸೇರ್ಪಡೆ ಸಾಂವಿಧಾನಿಕ ಸಮತೆಯನ್ನು ಇತ್ತಂಡಗಳಿಗೂ ನೀಡುತ್ತದೆ’’ಎಂದೂ ಹೇಳುತ್ತದೆ. ವಕ್ಫ್ ಕೌನ್ಸಿಲ್ ಮತ್ತು ಬೋರ್ಡ್‌ಗಳೆರಡೂ ಧರ್ಮ ನಿರಪೇಕ್ಷ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಕಾರಣ ಮುಸ್ಲಿಮೇತರರ ಭಾಗವಹಿಸುವಿಕೆ ತಪ್ಪಲ್ಲ ಎಂದೂ ಹೇಳುತ್ತದೆ.

ಆದರೆ ಈ ವಕ್ಫ್ ಪರಿಕಲ್ಪನೆ ವಿಧಿ 26 ನೀಡುವ ರಕ್ಷಣೆಯನ್ನು ನಿರಾಕರಿಸುವ ಧಾರ್ಮಿಕ ಕ್ಷೇತ್ರದಿಂದ ಧರ್ಮ ನಿರಪೇಕ್ಷ ಕ್ಷೇತ್ರಕ್ಕೆ ಹೇಗೆ ಮತ್ತು ಯಾವಾಗ ಬಂತು ಎಂಬುದನ್ನು ಸ್ಪಷ್ಟೀಕರಿಸುವುದಿಲ್ಲ. ಹಿಂದೂ ದೇವಸ್ಥಾನಗಳ ಸೆಕ್ಯುಲರ್ ಆಡಳಿತದಲ್ಲಿ ಮುಸ್ಲಿಮರನ್ನು ಇದೇ ರೀತಿ ಸೇರಿಸುತ್ತಿಲ್ಲವಷ್ಟೇ. ಯಾಕೆ ಶಾಸನ ಬದ್ಧ ಹೊಸ ಕಾನೂನುಗಳ ಪ್ರಕಾರ ಕಾಶೀ ವಿಶ್ವನಾಥ ಅಥವಾ ತಿರುಮಲ ತಿರುಪತಿ ದೇವಸ್ಥಾನಗಳ ಸೆಕ್ಯುಲರ್ ಆಡಳಿತದಲ್ಲೂ ಹಿಂದೂಗಳನ್ನಷ್ಟೇ ನಾಮಕರಣಗೊಳಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಜಾಣವಾಗಿ ಪಕ್ಕಕ್ಕಿಟ್ಟು ಮೌನ ವಹಿಸುತ್ತದೆ. ಈ ದೇವಸ್ಥಾನಗಳ ಬಹುತೇಕ ಜಮೀನು ಮತ್ತಿತರ ಸೌಲಭ್ಯಗಳನ್ನು ಧರ್ಮ ನಿರಪೇಕ್ಷ ಸರಕಾರವೇ ನೀಡಿದೆಯಷ್ಟೇ ಅಲ್ಲ, ಎಲ್ಲಾ ಧರ್ಮಗಳ ಭಕ್ತಾದಿಗಳು ದೇಣಿಗೆ ನೀಡಿದ್ದಾರಷ್ಟೆ.

ವಕ್ಫ್ ಕ್ಷೇತ್ರದ ಇನ್ನೊಂದು ಅಂಶವೆಂದರೆ, ವಕ್ಫ್‌ಗೆ ದಾನ ನೀಡಿದವನ ಧರ್ಮ ಯಾವುದೇ ಇರಲಿ, ಒಮ್ಮೆ ವಕ್ಫ್ ಎಂದು ಘೋಷಿತವಾದರೆ ಅದು ತನ್ನ ಮುಸ್ಲಿಮೇತರ ಲಕ್ಷಣವನ್ನು ಕಳೆದುಕೊಳ್ಳುತ್ತದೆ. ಆದರೆ ಈ ಹೊಸ ಕಾನೂನು ಪ್ರಕಾರ ಮುಸ್ಲಿಮೇತರರ ವಕ್ಫ್ ನೀಡಿಕೆಯನ್ನು ನಿಷೇಧಿಸಲಾಗಿದೆ. ಹಾಗಿದ್ದರೆ ಮುಸ್ಲಿಮೇತರರ ಸೇರ್ಪಡೆಗಿರುವ ಸಮರ್ಥನೆಯೇನು.?

ವಿಧಿ 26 ಒಂದೇ ಧರ್ಮದ ವ್ಯಕ್ತಿಗಳು (ಅದರ ಆಸ್ತಿಯ) ನಿರ್ವಹಣೆಯನ್ನು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಈ ಪ್ರಮಾಣಪತ್ರ ಹೇಳುತ್ತದೆ.

ಕೌನ್ಸಿಲ್ ಮತ್ತು ಬೋರ್ಡ್‌ನಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗುತ್ತಾರೆ ಎಂಬುದು ಸುಳ್ಳು ಪ್ರಚಾರ ಎಂದೂ ಹೇಳುತ್ತದೆ. ಅಫಿಡವಿಟ್ ಪ್ರಕಾರ ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ ಕೇವಲ 4 ಮಂದಿ ಮತ್ತು ರಾಜ್ಯ ಬೋರ್ಡ್ ಗಳಲ್ಲಿ ಮೂವರಷ್ಟೇ ಮುಸ್ಲಿಮೇತರರು ಇರುತ್ತಾರೆ. ಆದರೆ ಹೊಸ ಶಾಸನದ ಸೆಕ್ಷನ್ 10 ಮತ್ತು 12ನ್ನು ಓದಿದರೆ, ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲೂ (22ರಲ್ಲಿ 12) ಹಾಗೆಯೇ ರಾಜ್ಯ ಬೋರ್ಡ್‌ಗಳಲ್ಲೂ (11ರಲ್ಲಿ 7) ಮುಸ್ಲಿಮೇತರರು ಬಹುಸಂಖ್ಯಾತರಾಗುವ ಸಾಧ್ಯತೆ ಇದೆ. ಮೋದಿ ಸರಕಾರದ ಈ ಕ್ಲೈಮು ಶುದ್ಧಾಂಗ ಸುಳ್ಳು.

ಮೋದಿ ಸರಕಾರ ಈ ಪ್ರಮಾಣಪತ್ರದ ಮೂಲಕ ಈ ತಿದ್ದುಪಡಿಗಳ ಹಿಂದಿರುವ ನಿರ್ಲಜ್ಜ ಕೋಮು ದುರುದ್ದೇಶವನ್ನು ಜಾಹೀರುಪಡಿಸಿದೆ. ಈ ತಿದ್ದುಪಡಿ ಮೂಲತಃ ಕಾನೂನಿನ ಬಲ ಪ್ರಯೋಗದ ಮೂಲಕ ಒತ್ತುವರಿ ನೆಪದಲ್ಲಿ ವಕ್ಫ್ ಆಸ್ತಿಗಳನ್ನು ಕಬಳಿಸುವ ಉದ್ದೇಶ ಹೊಂದಿದೆ. ಮುಸ್ಲಿಮರೇ ತಮ್ಮ ಧಾರ್ಮಿಕ ಕಲಾಪಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾನೂನು ನಿರಾಕರಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಮಾಣಪತ್ರದ ಮುಖಾಂತರ ಈ ಕಾನೂನುಗಳ ಅಸಾಂವಿಧಾನಿಕ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ಗಿರುವ ಸಾಂವಿಧಾನಿಕ ಅಧಿಕಾರವನ್ನೇ ಮೋದಿ ಸರಕಾರ ಪ್ರಶ್ನಿಸುತ್ತಿದೆ.

ಸಂವಿಧಾನದ ಪಾರಮ್ಯ ಮತ್ತು ನ್ಯಾಯಾಂಗದ ಕಣ್ಗಾವಲಿನ ನಿರಾಕರಣೆ

ಮೋದಿ ಸರಕಾರದ ಪ್ರಮಾಣಪತ್ರದ ಪ್ರಕಾರ:

* ಶಾಸನ ಸಭೆಯು ಸಾಂವಿಧಾನಿಕವೆಂದು ಪರಿಗಣಿತವಾಗಿರುವ ಒಂದು ಕಾನೂನು ಜಾರಿಗೆ ತಂದರೆ ಅದನ್ನು ಬದಲಾಯಿಸುವುದಕ್ಕೆ ಅವಕಾಶವಿಲ್ಲ.

* ಅರ್ಜಿದಾರರು ಪ್ರಾರ್ಥಿಸುತ್ತಿರುವ ಯಾವುದೇ ಆಜ್ಞೆಯೂ ಸಂಸತ್ತಿನಿಂದ ಒಪ್ಪಿತವಾದ ಈ ತಿದ್ದುಪಡಿ ಶಾಸನಕ್ಕೆ ತಡೆ ನೀಡಬಲ್ಲುದು. ಈ ಕ್ರಮಕ್ಕೆ ಸಂವಿಧಾನದಲ್ಲಿ ಕಲ್ಪಿಸಲಾದ ನ್ಯಾಯಿಕ ವಿಮರ್ಶೆಯ ಚೌಕಟ್ಟಿನಲ್ಲಿ ಅವಕಾಶವಿಲ್ಲ..

ಈ ಆಧಾರದ ಮೇಲೆ ಮೋದಿ ಸರಕಾರವು ವಕ್ಫ್ ಕಾನೂನುಗಳನ್ನು ಪ್ರಶ್ನಿಸುತ್ತಿರುವ ಎಲ್ಲಾ ಅರ್ಜಿಗಳನ್ನೂ ತಿರಸ್ಕರಿಸಬೇಕೆಂದು ಒತ್ತಾಯಿಸುತ್ತಿದೆ

ಆದರೆ ಸಂವಿಧಾನ ಸಭೆಯಲ್ಲಿ ಬಹುಮತದ ಸರಕಾರಗಳು ತಮ್ಮ ಶಾಸಕಾಂಗದ ಬಹುಮತವನ್ನು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲು ದುರುಪಯೋಗಮಾಡಬಹುದು ಎಂಬ ಆತಂಕವನ್ನು ಬಾಬಾ ಸಾಹೇಬರು ವ್ಯಕ್ತಪಡಿಸಿದ್ದರು.

ಈ ಆತಂಕಕ್ಕೆ ಸ್ಪಂದಿಸಲು ಸಂವಿಧಾನವು ಈ ಕೆಳಕಂಡ ವಿಧಿಗಳನ್ನು ಅಳವಡಿಸಿಕೊಂಡಿತು.

1. ವಿಧಿ 13 (ಯಾವ ಕಾನೂನೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಬಾರದು)

2. ವಿಧಿ 32 ಮತ್ತು 226 (ಸರಕಾರದ ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟುವ ಹಕ್ಕು)

3. ವಿಧಿ 142 (ಸಂಪೂರ್ಣ ನ್ಯಾಯ ಖಚಿತಪಡಿಸಲು ಸುಪ್ರೀಂ ಕೋರ್ಟಿಗಿರುವ ವಿವೇಚನಾ ಅಧಿಕಾರ).

ಇಂದಿರಾ ಗಾಂಧಿಯವರ ಅವಧಿಯಲ್ಲೂ ಸರಕಾರದ ಕ್ರಮಗಳನ್ನು ನ್ಯಾಯಾಂಗದ ವಿಮರ್ಶೆಯಿಂದ ಹೊರಗಿಡುವ ಪ್ರಯತ್ನಗಳು ನಡೆದಿದ್ದವು. ಇದಕ್ಕೆ ಉತ್ತರವಾಗಿ 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ 13 ಮಂದಿಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗಿಂತ ಸರ್ವೋಚ್ಚ ಎಂದು ತೀರ್ಪು ನೀಡಿದವು.

ಸಂಸತ್ತು ಕಾನೂನುಗಳನ್ನು ಮಾಡಬಹುದಾದರೂ ಅದು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ. ಆದ್ದರಿಂದ ಮೋದಿ ಸರಕಾರದ ವಾದಕ್ಕೆ ಪ್ರತಿಯಾಗಿ, ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ ಅದು ಸ್ವಯಮೇವ ಸಾಂವಿಧಾನಿಕವಾಗಿ ಸರಿ ಎಂದೇನೂ ಆಗಬೇಕಿಲ್ಲ

ಸರಕಾರದ ನಿಲುವು, ವಿಧಿ 13ನ್ನು ಉಲ್ಲಂಘಿಸುತ್ತದೆ. ಕೇಶವಾನಂದ ಭಾರತಿ ತೀರ್ಪನ್ನೇ ತುಳಿದು ಹಾಕುತ್ತದೆ. ಅಷ್ಟೇ ಅಲ್ಲ, ಸಾಂವಿಧಾನಿಕ ನಿರ್ಬಂಧಗಳನ್ನೂ ದಾಟಿ ಬಿಡುವ ದುರುದ್ದೇಶವನ್ನು ಹೊಂದಿದೆ.

ಮೋದಿ ಸರಕಾರವು ತನ್ನ ಸಂಸದೀಯ ಬಹುಮತದ ಮೂಲಕ ಸಾಂವಿಧಾನಿಕ ವ್ಯವಸ್ಥೆಯನ್ನೇ ಕಳಚಲು ನೋಡುತ್ತಿದೆ, ಶಾಸಕಾಂಗದ ಕ್ರಮಗಳ ಮೇಲೆ ನ್ಯಾಯಿಕ ಪರಿಶೀಲನೆಯನ್ನೇ ವ್ಯರ್ಥಗೊಳಿಸಲು ನೋಡುತ್ತಿದೆ. ಉಪರಾಷ್ಟ್ರಪತಿ ಧನ್ಕರ್ ಕೂಡಾ ನ್ಯಾಯಾಲಯಗಳಿಗಿಂತ ಸಂಸತ್ ಮೇಲು ಎಂದು ಪದೇಪದೇ ಹೇಳುತ್ತಿದ್ದಾರೆ. ತನ್ನ ವಕ್ಫ್ ಕುರಿತಾದ ಪ್ರಮಾಣಪತ್ರದಲ್ಲೂ ಮೋದಿ ಸರಕಾರ ತನ್ನ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ವಾದವನ್ನು ಇನ್ನಷ್ಟು ಪ್ರತಿಪಾದಿಸಿದೆ.

ಇದು ವಕ್ಫ್ ಅಥವಾ ಮುಸ್ಲಿಮರ ಮೇಲಿನ ದಾಳಿಯಷ್ಟೇ ಅಲ್ಲ; ಮೋದಿ ಸರಕಾರ ಸಂವಿಧಾನದ ಸರ್ವೋಚ್ಚತೆಯ ಮೇಲೆಯೇ ದಾಳಿ ನಡೆಸುತ್ತಿದೆ. ತನ್ನ ಸಂಸದೀಯ ಬಹುಮತದ ಮೂಲಕ ಫ್ಯಾಶಿಸಂನ್ನು ಸಾಂಸ್ಥೀಕರಿಸಲು ನೋಡುತ್ತಿದೆ.

ಮೋದಿ ಸರಕಾರದ ಈ ಫ್ಯಾಶಿಸ್ಟ್ ಒಳಸಂಚನ್ನು ತನ್ನ ಸಾಂವಿಧಾನಿಕ ಅಧಿಕಾರದ ಮೂಲಕ ಸರ್ವೋಚ್ಚ ನ್ಯಾಯಾಲಯ ಹಿಮ್ಮೆಟ್ಟಿಸಲಿದೆಯೇ? ಕಾದು ನೋಡಬೇಕು.

ವಕ್ಫ್ ತಿದ್ದುಪಡಿಯ ವಿರುದ್ಧದ ಈ ಹೋರಾಟ ಮೂಲತಃ ಸಂವಿಧಾನದ ಮೇಲೆ ಮೋದಿ ಸರಕಾರ ನಡೆಸುತ್ತಿರುವ ದಾಳಿಯ ವಿರುದ್ಧ ಸಂವಿಧಾನವನ್ನು ರಕ್ಷಿಸುವುದೇ ಆಗಿದೆ ಎಂಬುದನ್ನು ಸಂವಿಧಾನದ ನಿಜ ಶಿಲ್ಪಿಗಳಾದ ‘ನಾವು, ಭಾರತದ ಪ್ರಜೆಗಳು’ ಅರ್ಥ ಮಾಡಿಕೊಳ್ಳಬೇಕಿದೆ.

share
ಶಿವಸುಂದರ್
ಶಿವಸುಂದರ್
Next Story
X