Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಕೈಯಲ್ಲಿ ತಿರಂಗಾ, ಮನದಲ್ಲಿ ಭಗವಾ...!?

ಕೈಯಲ್ಲಿ ತಿರಂಗಾ, ಮನದಲ್ಲಿ ಭಗವಾ...!?

ಶಿವಸುಂದರ್ಶಿವಸುಂದರ್21 May 2025 10:39 AM IST
share
ಕೈಯಲ್ಲಿ ತಿರಂಗಾ, ಮನದಲ್ಲಿ ಭಗವಾ...!?
ತಿರಂಗಾದ ಬಗ್ಗೆ ಸಂಘಿಗಳಿಗಿದ್ದ ಸೈದ್ಧಾಂತಿಕ ತಿರಸ್ಕಾರದ ಇತಿಹಾಸವನ್ನು ಅರ್ಥಮಾಡಿಕೊಳ್ಳದೆ ಸಂಘಿಗಳ ತಿರಂಗಾ ಯಾತ್ರಾದ ಹೂರಣವನ್ನು ಅರ್ಥ ಮಾಡಿಕೊಳ್ಳಲಾಗದು. ತಿರಂಗಾದ ಬದಲು ಭಗವಾಧ್ವಜವನ್ನು ಭಾರತದ ಬಾವುಟವನ್ನಾಗಿ ಮಾಡುವುದೇ ಅಂದಿಗೂ ಇಂದಿಗೂ ಅವರ ನಿಜವಾದ ಉದ್ದೇಶ. ಹಾಗೆ ನೋಡಿದರೆ ಭಾರತದ ಇತಿಹಾಸ ತಿರಂಗಾ ಮತ್ತು ಭಗವಾಗಳ ಸಂಘರ್ಷದ ಇತಿಹಾಸವೂ ಆಗಿದೆ.

ಬಾಯಲ್ಲಿ ಅಂಬೇಡ್ಕರ್

ಬಗಲಲ್ಲಿ ಸಾವರ್ಕರ್

ಮಾತಲ್ಲಿ ಸಂವಿಧಾನ

ಕೃತಿಯಲ್ಲಿ ಸನಾತನ

ಕೈಯಲ್ಲಿ ತಿರಂಗಾ

ಮನದಲ್ಲಿ ಭಗವಾ..

ಭಗವಾ ಬಿತ್ತಿದಲ್ಲಿ

ತಿರಂಗಾ ಬೆಳೆವುದುಂಟೇ ?

ಇಂತಿಪ್ಪ ಬಿಜೆಪಿ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ತನ್ನ ಸರಕಾರದ ಯೋಜಿತ ನಿರ್ಲಕ್ಷ್ಯವನ್ನು ಮುಚ್ಚಿಟ್ಟುಕೊಳ್ಳಲು ಯುದ್ಧೋನ್ಮಾದವನ್ನು ಬಡಿದೆಬ್ಬಿಸಿತಷ್ಟೆ. ಆದರೆ ಅಷ್ಟೇ ಅವಸರವಸರದಿಂದ ಯುದ್ಧ ವಿರಾಮವನ್ನು ಘೋಷಿಸಿ ತಾನೇ ಹುಟ್ಟಿಸಿರುವ ನರಭಕ್ಷಕ ಭಕ್ತ ಪಡೆ ಯಿಂದ ಟ್ರೋಲ್‌ಗೆ ಒಳಗಾಗಿದೆ. ಈಗ ಅದನ್ನು ಮುಚ್ಚಿಟ್ಟುಕೊಳ್ಳಲು ಮತ್ತು ಆಪರೇಷನ್ ಸಿಂಧೂರ ಅನ್ನು ಚುನಾವಣೆ ಉದ್ದೇಶದಿಂದ ಆಪರೇಷನ್ ಬಿಹಾರ, ಆಪರೇಷನ್ ಉತ್ತರ ಪ್ರದೇಶಕ್ಕೆ ಬಳಸಿಕೊಳ್ಳಲು ದೇಶಾದ್ಯಂತ ತಿರಂಗಾ ಯಾತ್ರೆ ನಡೆಸುತ್ತಿದೆ. ವಿರೋಧ ಪಕ್ಷಗಳೆಲ್ಲವೂ ಪಾಕಿಸ್ತಾನ ಪರ, ತಾನು ಮಾತ್ರ ನಿಜವಾದ ರಾಷ್ಟ್ರಪ್ರೇಮಿ, ದೇಶ ರಕ್ಷಕ ಮತ್ತು ಸಂವಿಧಾನ ರಕ್ಷಕ ಎಂದು ಪ್ರಚಾರ ಮಾಡಿಕೊಳ್ಳುವುದು ಈ ತಿರಂಗಾ ಯಾತ್ರೆಯ ಉದ್ದೇಶ.

ಒಂದು ಕಡೆ ತನ್ನ ಹಿಂದೂ ರಾಷ್ಟ್ರದ ಹುನ್ನಾರಕ್ಕೆ ತಿರಂಗಾದ ಮುಖವಾಡ ತೊಡಿಸಿ, ಪುಲ್ವಾಮಾದಿಂದ ಪಹಲ್ಗಾಮ್‌ವರೆಗಿನ ಎಲ್ಲವೂ ಮೋದಿ ಸರಕಾರದ ಯೋಜಿತ ನಿರ್ಲಕ್ಷ್ಯ ಮತ್ತು ಈ ಪ್ರಕರಣಗಳ ರಾಜಕೀಯ ಬಳಕೆಗಳ ಬಗ್ಗೆ ಪ್ರಶ್ನೆ ಕೇಳಿದವರನ್ನು ದೇಶದ್ರೋಹಿಗಳೆಂಬ ಸನ್ನಿ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ಈ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಿರಲಿ ಜಗತ್ತಿನೆಲ್ಲೆಡೆ ಮೋದಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ತಾವೇ ನೇತೃತ್ವ ವಹಿಸುತ್ತಿವೆ. ಈ ನಿಯೋಗದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಡಿಎಂಕೆಗಳು ಶಾಮೀಲಾಗಿವೆ.

ರಾಷ್ಟ್ರದ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಿಗಳು ನಡೆಸುತ್ತಿರುವ ಹಿಂದುತ್ವದ ಕುತಂತ್ರವನ್ನು ಬಯಲಿಗೆಳೆಯದೆ, ಭಕ್ತರ ಅಬ್ಬರಕ್ಕೆ ಬಲಿಯಾಗಿ, ಅವರ ದಾರಿಗೆ ಸರಿಯುತ್ತಿರುವ ವಿರೋಧ ಪಕ್ಷಗಳ ಈ ಅಧೀನತೆ, ಜನರ ಮೇಲೆ ಹಿಂದುತ್ವದ ಯಾಜಮಾನ್ಯ ಇನ್ನಷ್ಟು ಹೆಚ್ಚಿಸುತ್ತದೆ. ಇದು ಭಾರತದ ಚುನಾವಣಾ ವಿರೋಧ ಪಕ್ಷಗಳು ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜೊತೆಗಾರರಾಗಲಾರರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.

ತಿರಂಗಾದ ಬಗ್ಗೆ ಸಂಘಿಗಳಿಗಿದ್ದ ಸೈದ್ಧಾಂತಿಕ ತಿರಸ್ಕಾರದ ಇತಿಹಾಸವನ್ನು ಅರ್ಥಮಾಡಿಕೊಳ್ಳದೆ ಸಂಘಿಗಳ ತಿರಂಗಾ ಯಾತ್ರಾದ ಹೂರಣವನ್ನು ಅರ್ಥ ಮಾಡಿಕೊಳ್ಳಲಾಗದು. ತಿರಂಗಾದ ಬದಲು ಭಗವಾಧ್ವಜವನ್ನು ಭಾರತದ ಬಾವುಟವನ್ನಾಗಿ ಮಾಡುವುದೇ ಅಂದಿಗೂ ಇಂದಿಗೂ ಅವರ ನಿಜವಾದ ಉದ್ದೇಶ. ಹಾಗೆ ನೋಡಿದರೆ ಭಾರತದ ಇತಿಹಾಸ ತಿರಂಗಾ ಮತ್ತು ಭಗವಾಗಳ ಸಂಘರ್ಷದ ಇತಿಹಾಸವೂ ಆಗಿದೆ. ಆದ್ದರಿಂದ ಈ ಅಂಕಣದಲ್ಲಿ ಅದರ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಲಾಗಿದೆ.

ತ್ರಿವರ್ಣ ಧ್ವಜ V/S ಭಗವಾಧ್ವಜ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ಎಲ್ಲಾ ಬಗೆಯ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆಯಾಗಿ ಬದಲಾದ ಮೇಲೆ ಭಾರತದ ಸ್ವಾತಂತ್ರ್ಯ ಚಳವಳಿಗೊಂದು ಅರ್ಥಾತ್ ಸ್ವತಂತ್ರ ಭಾರತದ ಆಶಯಕ್ಕೊಂದು ಬಾವುಟವನ್ನು ರೂಪಿಸುವ ಪ್ರಯತ್ನಗಳು ಪ್ರಾರಂಭವಾಯಿತು. ಈ ದೇಶದ ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶದ ಆಶಯವನ್ನು ಪ್ರತಿಬಿಂಬಿಸುವ ಧ್ವಜವೊಂದನ್ನು ರೂಪಿಸುವ ಪ್ರಯತ್ನಗಳು ಮೇಡಂ ಕಾಮೂ ಅವರ ಮುಂದೊಡಗಿನಿಂದ ಪ್ರಾರಂಭವಾಯಿತು. ಈ ಪ್ರಯತ್ನಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ವೆಂಕಯ್ಯನವರು ಮುಂದುವರಿಸಿದರು.

ಅದಾದ ನಂತರದಲ್ಲಿ ಇಂದಿನ ಭಾರತದ ಬಾವುಟಕ್ಕೆ ಅಂತಿಮ ರೂಪವನ್ನು ಕೊಟ್ಟು ರೂಪಿಸಿದ್ದು ಸುರಯ್ಯಾ ತ್ಯಾಬ್ಜಿ ಎಂಬ ಸುಶಿಕ್ಷಿತ ಮುಸ್ಲಿಮ್ ಹೋರಾಟಗಾರ್ತಿ. ಆಕೆಯ ಪತಿ ಬದ್ರುದ್ದೀನ್ ತ್ಯಾಬ್ಜಿಯವರು ಮುಂಬೈ ಹೈಕೋರ್ಟ್‌ನ ಪ್ರಥಮ ಮುಖ್ಯ ನ್ಯಾಯಾಧೀಶರಾಗಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ರೂಪಿತವಾದ ಆ ಬಾವುಟದಲ್ಲಿ ಕೇಸರಿ, ಹಸಿರು ಬಣ್ಣಗಳು ಈ ದೇಶದ ಎರಡು ಪ್ರಮುಖ ಧರ್ಮವಾದ ಹಿಂದೂ ಮತ್ತು ಮುಸ್ಲಿಮರನ್ನು ಹಾಗೂ ಬಿಳಿಯ ಬಣ್ಣವು ಇತರ ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುತ್ತಿತ್ತು. ಅದರ ಜೊತೆಗೆ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದಗಳ ಸಂಕೇತವಾಗಿಯೂ ಆ ಬಣ್ಣಗಳನ್ನು ಬಳಸಲಾಗಿತ್ತು. ವೆಂಕಯ್ಯನವರು ರೂಪಿಸಿದ್ದ ಧ್ವಜದಲ್ಲಿ ಮೂರೂ ಬಣ್ಣಗಳ ಹಿನ್ನೆಲೆಯಲ್ಲಿ ಚರಕವಿತ್ತು. ಆದರೆ ಚರಕ ಕೇವಲ ಕಾಂಗ್ರೆಸ್ ಪಕ್ಷದ ಸಂಕೇತವಾಗಿ ಅರ್ಥವಾಗುವುದರಿಂದ ಅಂತಿಮ ವಿನ್ಯಾಸದಲ್ಲಿ ನಡುವಿನ ಬಿಳಿಯ ಬಣ್ಣದ ಮೇಲೆ ಅಶೋಕ ಚಕ್ರವನ್ನು ಅಳವಡಿಸಿಕೊಳ್ಳಲಾಯಿತು.

ಇದಕ್ಕೆ ಪ್ರಧಾನ ಕಾರಣ ಭಾರತವು ತನ್ನ ಇತಿಹಾಸದಲ್ಲಿ ಅತಿಯಾಗಿ ಹೆಮ್ಮೆ ಪಡಬಹುದಾದದ್ದು ಹಾಗೂ ಭವಿಷ್ಯಕ್ಕೂ ರೂಢಿಸಿಕೊಳ್ಳಬೇಕಾದದ್ದು ಅಶೋಕನ ಬುದ್ಧಸತ್ವದ ಆಳ್ವಿಕೆಯನ್ನು ಎಂಬ ಗ್ರಹಿಕೆಯಾಗಿತ್ತು. ಅದರ ಜೊತೆಗೆ ಸಾರಾನಾಥದ ಬುದ್ಧ ಸ್ತೂಪದಲ್ಲಿರುವ ನಾಲ್ಕು ಸಿಂಹದ ತಲೆಗಳೂ ಕೂಡ ಮುಂದೆ ಸ್ವತಂತ್ರ ಭಾರತದ ಮುದ್ರೆಯಾಯಿತು.

ಅಂದರೆ ಸಾರದಲ್ಲಿ ತ್ರಿವರ್ಣ ಧ್ವಜವನ್ನು ಸಕಲ ಧರ್ಮೀಯರ ಅಸ್ಮಿತೆಗಳನ್ನು ಮತ್ತು ಸಮಾನತೆಯ ಆಶಯಗಳನ್ನು ಒಳಗೊಳ್ಳುವ ಧ್ವಜವನ್ನಾಗಿ ರೂಪಿಸಲಾಯಿತು. ಇದು ತಿರಂಗಾದ ಇತಿಹಾಸ.

ಅದರ ಆಶಯಗಳಿಗೆ ತಕ್ಕ ಹಾಗೆ ಸ್ವಾತಂತ್ರ್ಯೋತ್ತರ ಭಾರತ ರೂಪುಗೊಂಡಿತೇ ಎನ್ನುವುದು ಬೇರೆ ವಿಷಯ. ಆದರೆ ತಿರಂಗಾದ ಹಿಂದಿದ್ದ ಆಶಯವಂತೂ ಸರ್ವಧರ್ಮೀಯರ ಶಾಂತಿಯ ತೋಟವಾಗಬೇಕೆಂಬುದಾಗಿತ್ತು.

ಆರೆಸ್ಸೆಸ್‌ನ ಭಗವಾಧ್ವಜ-ಮನುವಿನ ವಿಜಯ ಪತಾಕೆ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರ್‌ರ ಹಿಂದೂ ಮಹಾಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ ಮಾಲಕ ಮತ್ತು ಬಂಡವಾಳಶಾಹಿಗಳ ಆಧಿಪತ್ಯವನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ-ಆರೆಸ್ಸೆಸ್ 1925ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರಿಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡ್ಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ ಇಂತಹ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಬೇಕಿದ್ದರೆ ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘವಾಗಿ ಕೂಡದೆಂಬ ನಿರ್ದೇಶನವಿತ್ತಿದ್ದರು.

1928ರ ಸುಮಾರಿಗೆ ಆರೆಸ್ಸೆಸ್ ಭಗವಾಧ್ವಜವನ್ನು ತನ್ನ ಲಾಂಛನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಾಧ್ವಜವನ್ನು ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು ಎಂಬ ಬಗ್ಗೆ ಹೆಡ್ಗೇವಾರರ ಸಹಚರನಾಗಿದ್ದ ಎನ್.ಎಚ್. ಪಾಲ್ಕರ್ ಅವರು ತಮ್ಮ ‘Saffron Flag’ ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಾಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ.

ಆರೆಸ್ಸೆಸ್ ಪ್ರಕಾರ ಭಗವಾಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು.

ಆದರೆ ಆ ನಂತರ ಭಗವಾಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ.

ಆದರೆ ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದುತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಇದೇ ಬಾವುಟವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆಯೇ ಪುರಾವೆ ಹೊರತು ಸಾಕ್ಷ್ಯಾಧಾರಗಳು ಇರುವುದಿಲ್ಲ.

ಆದರೆ ಪರಕೀಯರಾದ ಆರ್ಯರು ದಾಳಿ ನಡೆಸಿದಾಗ ಇಲ್ಲಿನ ದ್ರಾವಿಡರು ಅಥವಾ ಆರ್ಯರಿಗೆ ಮುಂಚೆಯೇ ಇಲ್ಲಿಗೆ ವಲಸೆ ಬಂದಿದ್ದ ಜನಾಂಗದವರು ಯಾವ ಬಾವುಟವನ್ನಿಟ್ಟುಕೊಂಡು ವಿರೋಧಿಸಿದರು ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿರುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಮೊಗಲರ ಸಾಮ್ರಾಜ್ಯದ ವಿರುದ್ಧ ನಡೆದ ಎಲ್ಲಾ ಸಾಮಂತರ ಬಂಡಾಯಗಳನ್ನು ಮುಸ್ಲಿಮ್ ಆಳ್ವಿಕೆಯ ವಿರುದ್ಧದ ಹಿಂದೂ ಬಂಡಾಯವೆಂದೇ ಕಥೆ ಕಟ್ಟುವ ಆರೆಸ್ಸೆಸ್, ಇತಿಹಾಸಕ್ಕೆ ಹೋಗಿ ಆ ಎಲ್ಲಾ ರಾಜರಿಗೂ ಭಗವಾಧ್ವಜವನ್ನು ಕೊಟ್ಟು ಬಂದಿದೆ!

ಅವರ ಪ್ರಕಾರ ಈ ದೇಶದ ಗುಲಾಮಗಿರಿಯೆಂದರೆ ಬ್ರಿಟಿಷ್ ದಾಸ್ಯವಲ್ಲ. ಮುಸ್ಲಿಮ್ ಆಳ್ವಿಕೆ ಮತ್ತು ಮುಸ್ಲಿಮರು ಈ ದೇಶದವರಲ್ಲ. ಹಾಗೆಯೇ ಕ್ರಿಶ್ಚಿಯನ್ನರು ಕೂಡ.

ಈ ದೇಶದ ಚರಿತ್ರೆಯಲ್ಲಿ ನಾವು ವೈಭವದ ಯುಗವೆಂದು ಪರಿಗಣಿಸಬೇಕಿರು ವುದು ಹಾಗೂ ಪುನರ್ ಸ್ಥಾಪಿಸಬೇಕಿರುವುದು ಬುದ್ಧಧರ್ಮವನ್ನು ನಾಶ ಮಾಡಿದ ಗುಪ್ತರ ಕಾಲದ ಬ್ರಾಹ್ಮಣ್ಯವನ್ನು. ಹೀಗಾಗಿ ಭಗವಾಧ್ವಜವೇ ಅವರ ಚರಿತ್ರೆ ಹಾಗೂ ಭವಿಷ್ಯದ ಆಶಯಗಳ ಸಂಕೇತ.

ಆದ್ದರಿಂದ ಅವರು ಪ್ರತಿಪಾದಿಸುತ್ತಿರುವುದು ಸನಾತನ ಭಗವಾಧ್ವಜವನ್ನು ಅಲ್ಲ. ಆರೆಸ್ಸೆಸ್ ಮಾರ್ಪಡಿಸಿರುವ ಭಗವಾಧ್ವಜವನ್ನು!

ಹೀಗೆ ತಿರಂಗಾ ಮತ್ತು ಭಗವಾಧ್ವಜಗಳು ಎರಡು ತದ್ವಿರುದ್ಧ ಆಶಯ, ಚರಿತ್ರೆ ಮತ್ತು ಭವಿಷ್ಯಗಳ ಪ್ರತೀಕಗಳೇ ಆಗಿವೆ. ಆದ್ದರಿಂದಲೇ ಸಂಘಪರಿವಾರವು ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ನಂತರವೂ ತಿರಂಗಾ ಧ್ವಜಕ್ಕೆ ನಿರಂತರ ಅವಮಾನವನ್ನೇ ಮಾಡುತ್ತಲೇ ಬಂದಿದೆ.

ತ್ರಿವರ್ಣ ಧ್ವಜಕ್ಕೆ ಆರೆಸ್ಸೆಸ್ ಮಾಡಿರುವ ಅಪಮಾನದ ಇತಿಹಾಸ

ಉದಾಹರಣೆಗೆ 1930ರಲ್ಲಿ ಕಾಂಗ್ರೆಸ್ ಅಧಿವೇಶನವು ಅಧಿಕೃತವಾಗಿ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆಯನ್ನು ನೀಡಿ 1930ರ ಜನವರಿ 26 ರಂದು ಸ್ವತಂತ್ರ ಭಾರತದ ಘೋಷಣೆಯ ಭಾಗವಾಗಿ ಎಲ್ಲೆಡೆ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸಲು ಕರೆ ನೀಡುತ್ತದೆ.

ಆಗ ಆರೆಸ್ಸೆಸ್‌ನ ಮೊದಲ ಸರಸಂಘ ಚಾಲಕ ಹೆಡ್ಗೇವಾರ್ ಅವರು:

‘‘ಕೊನೆಗೂ ನಮ್ಮ ಘೋಷಣೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದ್ದಕ್ಕೆ ನಾವು ಅಭಿನಂದಿಸುತ್ತೇವೆ. ಹೀಗಾಗಿ ನಮ್ಮ ಎಲ್ಲಾ ಶಾಖಾ ಕಚೇರಿಗಳಲ್ಲೂ ಭಗವಾಧ್ವಜವನ್ನು ಹಾರಿಸಬೇಕು’’ ಎಂದು ಅದೇಶಿಸುತ್ತಾರೆ!

1947ರ ಸೆಪ್ಟಂಬರ್‌ನಲ್ಲಿ ಬಿಜೆಪಿಯ ಪಿತಾಮಹ ಶಾಮ ಪ್ರಸಾದ್ ಮುಖರ್ಜಿಯವರು ನೆಹರೂ ಮಂತ್ರಿಮಂಡಲದ ಸದಸ್ಯರಾಗಿದ್ದರೂ ತಮ್ಮ ಅಧಿಕೃತ ನಿವಾಸದ ಮೇಲೆ ಭಾರತದ ಬಾವುಟವನ್ನು ಹಾರಿಸದೆ ಹಿಂದೂ ಮಹಾಸಭಾದ ಬಾವುಟವನ್ನು ಹಾರಿಸುತ್ತಾರೆ.

ಅದೇ ವರ್ಷ ನವೆಂಬರ್‌ನಲ್ಲಿ ಸಂಘಪರಿವಾರದ ಮುಖಪತ್ರಿಕೆ ‘ಆರ್ಗನೈಸರ್’ನಲ್ಲಿ ಬರೆಯಲಾದ ಸಂಪಾದಕೀಯವೊಂದು:

‘ವಿಧಿಯಾಟದ ಭಾಗವಾಗಿ ಅಧಿಕಾರ ಪಡೆದುಕೊಂಡಿರುವ ಇಂದಿನ ಸರಕಾರವು ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿದೆ. ಆದರೆ ಭಾರತದ ಜನರೆಂದೂ ತ್ರಿವರ್ಣ ಧ್ವಜವನ್ನು ತಮ್ಮ ಬಾವುಟವನ್ನಾಗಿ ಅಂಗೀಕರಿಸಲಾರರು. ಏಕೆಂದರೆ ಮೂರು ಎಂಬ ಸಂಖ್ಯೆ ಭಾರತೀಯರ ಪಾಲಿಗೆ ಕೆಟ್ಟ ಶಕುನವಾಗಿದೆ’ ಎನ್ನುತ್ತದೆೆ.

ತ್ರಿಶೂಲ, ತ್ರಿಮೂರ್ತಿ ಎಂದೆಲ್ಲಾ ತ್ರಿವಳಿಗಳನ್ನೇ ಆರಾಧಿಸುವ ಹಿಂದೂ ಧರ್ಮದ ವಕ್ತಾರರು ನೀಡಿದ ಹೇಳಿಕೆಯಿದು.

ಸ್ವಾತಂತ್ರ್ಯಾನಂತರದಲ್ಲೂ ಮುಂದುವರಿದ ದೇಶದ್ರೋಹ- ಧ್ವಜದ್ರೋಹ

ಸ್ವಾತಂತ್ರ್ಯ ಬಂದ ಮರುವರ್ಷ 1948ರ ಜನವರಿ 30ರಂದು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದಿಂದ ತರಬೇತಿ ಹೊಂದಿದ ನಾಥೂರಾಮ್ ಗೋಡ್ಸೆ ಎಂಬ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಗಾಂಧಿಯನ್ನು ಕೊಂದ ನಂತರ ಆರೆಸ್ಸೆಸ್ ನಿಷೇಧವಾಗುತ್ತದೆ.

ಆದರೆ ಪರೋಕ್ಷವಾಗಿ ಹಿಂದುತ್ವ ಪಕ್ಷಪಾತಿಯಾಗಿದ್ದ ಆಗಿನ ಗೃಹಮಂತ್ರಿ ಸರ್ದಾರ್ ಪಟೇಲರಿಗೂ ಕೂಡಾ ಆರೆಸ್ಸೆಸ್‌ನ ನಡೆಗಳೂ ಅತಿಯೆನಿಸುತ್ತವೆ. ಆದರೂ ಆರೆಸ್ಸೆಸ್ ಮತ್ತೆ ಮುಖ್ಯಧಾರೆಗೆ ಮರಳುವ ಬಗ್ಗೆ ಒಲವು ಹೊಂದಿದ್ದ ಪಟೇಲರು ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲು:

‘‘ಆರೆಸ್ಸೆಸ್ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳಬೇಕು. ಭಾರತದ ಬಾವುಟ, ಲಾಂಛನಗಳಿಗೆ ಮರ್ಯಾದೆ ಕೊಡಬೇಕು ಹಾಗೂ ತನ್ನ ರಹಸ್ಯ ಕಾರ್ಯಾಚರಣೆಯನ್ನು ನಿಲ್ಲಿಸಿ ತನ್ನ ಸಂಘಟನೆಗೂ ಒಂದು ಬಹಿರಂಗ ಪ್ರಣಾಳಿಕೆ ಹಾಗೂ ಕಾರ್ಯವಿಧಾನ ಘೋಷಿಸಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಮಾತ್ರ ಕೆಲಸ ಮಾಡಬೇಕು’’ ಎಂದು ತಾಕೀತು ಮಾಡುತ್ತಾರೆ.

ಆ ಷರತ್ತಿನ ಮೇಲೆ ಆರೆಸ್ಸೆಸ್ ಮೇಲಿನ ನಿಷೇಧವನ್ನು 1949ರ ಜುಲೈನಲ್ಲಿ ಹಿಂದೆಗೆದುಕೊಳ್ಳಲಾಗುತ್ತದೆ.

ಭಾರತದ ಸಂವಿಧಾನ ಮತ್ತು ಬಾವುಟಕ್ಕೆ ಒಳಪಡುವ ಷರತ್ತಿನ ಮೇಲೆ ಹೊರಬಂದ ಆರೆಸ್ಸೆಸ್ ಮಾಡಿದ್ದೇನು?

1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಪ್ರಕ್ರಿಯೆ ಪೂರ್ಣವಾಗುತ್ತದೆ. ನವೆಂಬರ್ 30ರಂದು ‘ಆರ್ಗನೈಸರ್’ ಸಂಪಾದಕೀಯವು ಭಾರತದ ಸಂವಿಧಾನವನ್ನು ಹೀಗೆಳೆಯುತ್ತಾ:

‘ಭಾರತದ ಸಂವಿಧಾನದಲ್ಲಿ ಸನಾತನ ಭಾರತದಲ್ಲಿ ವಿಕಸನಗೊಂಡ ಸಂವಿಧಾನದ ಉಲ್ಲೇಖವೇ ಇಲ್ಲ. ಈಗಲೂ ಜಗತ್ತಿನಾದ್ಯಂತ ಮನುಸ್ಮತಿಯು ಅಪಾರವಾದ ಗೌರವವನ್ನೂ ಮತ್ತು ಎಲ್ಲರ ಸ್ವಪ್ರೇರಿತ ಮನ್ನಣೆಯನ್ನೂ ಪಡೆದುಕೊಳ್ಳುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದರ ಬಗ್ಗೆ ಅರಿವೇ ಇಲ್ಲ’ ಎಂದು ಸಮಾನತೆಯ ಸಂವಿಧಾನದ ಬದಲಿಗೆ ತಾರತಮ್ಯದ ಮನುಸ್ಮತಿಯನ್ನು ಎತ್ತಿಹಿಡಿಯುತ್ತದೆ.

ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರು ತಮ್ಮ ‘ಬಂಚ್ ಆಫ್ ಥಾಟ್ಸ್’ ಬರಹ ಸಂಕಲನದಲ್ಲಿ ತ್ರಿವರ್ಣ ಧ್ವಜವನ್ನು ಭಾರತದ ಧ್ವಜವನ್ನಾಗಿ ಮಾಡಿದ್ದನ್ನು ತೀವ್ರವಾಗಿ ಟೀಕಿಸುತ್ತಾರೆ:

‘ನಮ್ಮ ನಾಯಕರು ನಮ್ಮ ದೇಶಕ್ಕೆ ಹೊಸ ಬಾವುಟ ಮತ್ತು ಹೊಸ ರಾಷ್ಟ್ರಗೀತೆಯನ್ನು ಕೊಟ್ಟಿದ್ದಾರೆ. ಏಕೆ ಹೀಗೆ? ಅತ್ಯಂತ ಸನಾತನವಾದ ನಮ್ಮ ರಾಷ್ಟ್ರಕ್ಕೆ ಒಂದು ಬಾವುಟ ಇರಲಿಲ್ಲವೇ? ರಾಷ್ಟ್ರಗೀತೆ ಇರಲಿಲ್ಲವೇ? ಇತ್ತು. ಹಾಗಿದ್ದ ಮೇಲೆ ಏಕೀ ವಿಸ್ಮತಿ?’ ಎಂದು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾರೆ.

ಭಾರತವೆಂಬುದು ಅಮೂರ್ತವಾದ ಒಂದು ನಾಗರಿಕತೆಯಾಗಿದ್ದರೂ ಅದು ಎಂದೂ ನಾಗರಿಕರು ಸ್ವಇಚ್ಛೆಯಿಂದ ಒಪ್ಪಿಕೊಳ್ಳುವ ಒಂದು ರಾಷ್ಟ್ರವಾಗಿರಲಿಲ್ಲ.

ರಾಷ್ಟ್ರವೆಂಬ ಪರಿಕಲ್ಪನೆಯೇ ಒಂದು ಆಧುನಿಕ ಉತ್ಪನ್ನ. ಹೀಗಿರುವಾಗ ಗೋಳ್ವಾಲ್ಕರ್ ಹೇಳುತ್ತಿರುವ ರಾಷ್ಟ್ರ ಆರೆಸ್ಸೆಸ್ ಕಟ್ಟಬಯಸುವ ಹಿಂದೂ ರಾಷ್ಟ್ರವೇ ಹೊರತು ಮತ್ತೇನಲ್ಲ. ಇಲ್ಲಿ ಅವರು ಸೂಚಿಸುತ್ತಿರುವುದು ಭಗವಾಧ್ವಜವನ್ನೇ ಹೊರತು ಬೇರೇನನ್ನೂ ಅಲ್ಲ.

ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರೀಯ ದಿನಗಳಂದೂ ತ್ರಿವರ್ಣ ಧ್ವಜವಿರುತ್ತಿರಲಿಲ್ಲ!

ಹೀಗೆ ಭಾರತ ರಾಷ್ಟ್ರ ಮತ್ತು ರಾಷ್ಟ್ರಧ್ವಜದ ಬಗ್ಗೆ ಸಂಘಪರಿವಾರದ ತಿರಸ್ಕಾರ ಮತ್ತು ಭಾರತವನ್ನು ಹಿಂದೂರಾಷ್ಟ್ರ ಅರ್ಥಾತ್ ಬ್ರಾಹ್ಮಣ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನಗಳು 47ರ ನಂತರವೂ ಮುಂದುವರಿಯಿತು.

ಹಾಗೆ ನೋಡಿದರೆ 2002ರ ವರೆಗೂ ಆರೆಸ್ಸೆಸ್ ಕಚೇರಿಗಳ ಮೇಲೆ ಭಾರತದ ಬಾವುಟ ಹಾರಾಡಲೇ ಇರಲಿಲ್ಲ. 2001ರಲ್ಲಿ ರಾಷ್ಟ್ರಪ್ರೇಮಿ ಯುವದಳ ಎಂಬ ಸಂಘಟನೆಯ ಕಾರ್ಯಕರ್ತರು ಆರೆಸ್ಸೆಸ್‌ನ ನಾಗಪುರದ ಪ್ರಧಾನ ಕಚೇರಿಯ ಮೇಲೆ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅವರನ್ನು ಹಿಡಿದು ಆರೆಸ್ಸೆಸ್‌ನ ದೇಶಭಕ್ತ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು.

ಆ ನಂತರ 2002ರಲ್ಲಿ ಮೊದಲ ಬಾರಿಗೆ ಆರೆಸ್ಸೆಸ್‌ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.

ಏಕೆ ಹೀಗೆ?

2002ರಲ್ಲಿ ವಾಜಪೇಯಿ ಸರಕಾರ ರಾಷ್ಟ್ರಧ್ವಜವನ್ನು ಖಾಸಗಿಯವರು ಹಾರಿಸಬಹುದೆಂದು ಭಾರತದ ಧ್ವಜ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಖಾಸಗಿ ವ್ಯಕ್ತಿ-ಸಂಘಟನೆಗಳು ರಾಷ್ಟ್ರಧ್ವಜವನ್ನು ಹಾರಿಸುವಂತಿರಲಿಲ್ಲವಾದ್ದರಿಂದ ಆವರೆಗೆ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬ ಸಬೂಬನ್ನು ಆರೆಸ್ಸೆಸ್ ನೀಡುತ್ತದೆ.

ಆದರೆ 1955ರ ಭಾರತದ ರಾಷ್ಟ್ರ ಧ್ವಜದ ನಿಯಮಗಳಾಗಲೀ, 1971ರ ನಿಯಮಗಳಾಗಲೀ ಖಾಸಗಿ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಮಾತ್ರ ನಿಷೇಧಿಸುತ್ತವೆ.

ಅರ್ಥಾತ್...

ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಇತ್ಯಾದಿ ಆರು ದಿನಗಳಂದು ಎಲ್ಲಾ ವ್ಯಕ್ತಿಗಳೂ ಹಾಗೂ ಸಂಘಟನೆಗಳು ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಸುತ್ತದೆ.

ಆದರೂ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಮಾತ್ರ ಹಾರುತ್ತಿರುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ.

2002ರ ತನಕ ತಮ್ಮ ಕಚೇರಿಗಳ ಮೇಲೆ ಉದ್ದೇಶಪೂರ್ವಕವಾಗಿ ರಾಷ್ಟ್ರ ಧ್ವಜ ಹಾರಿಸದ ಈ ಸಂಘಿಗಳು 1994ರಲ್ಲಿ ಹುಬ್ಬಳ್ಳಿಯಲ್ಲಿ ಅಂಜುಮಾನ್ ಮೈದಾನದ ಮೇಲೆ, ಶ್ರೀನಗರದ ಲಾಲ್ ಚೌಕಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು. ಅದರ ಹಿಂದೆ ತ್ರಿವರ್ಣ ಧ್ವಜವನ್ನು ಕೂಡಾ ಭಗವಾಧ್ವಜದ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವೇ ಇತ್ತು. ರಾಷ್ಟ್ರಭಕ್ತಿಯಲ್ಲ.

ತೀರಾ ಇತ್ತಿಚಿನ ದಿನಗಳಲ್ಲಿ ಬಿಜೆಪಿ ನಾಯಕರು ರೈತ ಹೋರಾಟದಲ್ಲಿ ಮೃತನಾದ ಹುತಾತ್ಮ ಕಿಸಾನನಿಗೆ ರಾಷ್ಟ್ರಧ್ವಜ ಸುತ್ತಿಸಿ ಅಂತಿಮ ಕಾರ್ಯಕ್ರಮವನ್ನು ಮಾಡಿದ್ದನ್ನು ಹಾಗೂ ಮೊನ್ನೆ ಕಾಂಗ್ರೆಸ್ ಪಕ್ಷವು ವಿಧಾನ ಸೌಧದಲ್ಲಿ ರಾಷ್ರಧ್ವಜವನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ಮಾಡಿದ್ದನ್ನು ರಾಷ್ಟ್ರಧ್ವಜಕ್ಕೆ ಆದ ಅಪಮಾನ ಎಂದು ಇಲ್ಲದ ಕಾನೂನನ್ನು ಉದ್ಧರಿಸುತ್ತಾ ಹುಸಿ ದೇಶಪ್ರೇಮವನ್ನು ಪ್ರದರ್ಶಿಸುತ್ತಿದ್ದಾರೆ.

ಆದರೆ ಪ್ರಧಾನಿ ಮೋದಿ ಯೋಗದಿನದಂದು ರಾಷ್ಟ್ರ ಧ್ವಜದಿಂದ ಬಹಿರಂಗವಾಗಿ ಬೆವರು ಒರೆಸಿಕೊಂಡಿದ್ದನ್ನು, 2015ರಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಖಾನ್ ಎಂಬ ಮುಗ್ಧ ವೃದ್ಧನನ್ನು ಕೊಂದ ಆರೋಪ ಹೊತ್ತಿದ್ದ ಸಿಸೋಡಿಯಾ ಎಂಬ ಬಿಜೆಪಿ ನಾಯಕ ಮೃತನಾದಾಗ ಆತನ ಹೆಣಕ್ಕೆ ರಾಷ್ಟ್ರಧ್ವಜವನ್ನು ಸುತ್ತಿ ಅಂತ್ಯಕ್ರಿಯೆ ನಡೆಸಿದ್ದನ್ನು, ಬಿಜೆಪಿಯ ನಾಯಕ ಕಲ್ಯಾಣ್ ಸಿಂಗ್ ಮೃತರಾದಾಗ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಇರಿಸಿದ್ದನ್ನು ಅಷ್ಟೇ ವಿತಂಡವಾದದಿಂದ ಸಮರ್ಥಿಸಿಕೊಳ್ಳುತ್ತಾರೆ.

ಸಾರಾಂಶವಿಷ್ಟೆ. ಬಹಿರಂಗವಾಗಿ ಭಗಾವಧ್ವಜವೇ ರಾಷ್ಟ್ರಧ್ವಜವಾಗುವ ತನಕ ಆರೆಸ್ಸೆಸ್ ಮತ್ತು ಬಿಜೆಪಿಗರು ಈಗಿನ ತ್ರಿವರ್ಣ ಧ್ವಜವನ್ನೇ ತಮ್ಮ ಹಿಂದೂ ರಾಷ್ಟ್ರದ ಉದ್ದೇಶಗಳಿಗೆ ಬಳಸಿಕೊಳ್ಳಲಿದ್ದಾರೆ.

ಇಂದು ಸಂಘಿಗಳು ನಡೆಸುತ್ತಿರುವ ತಿರಂಗಾ ಯಾತ್ರಾದ ಉದ್ದೇಶವೂ ಇದೇ.

share
ಶಿವಸುಂದರ್
ಶಿವಸುಂದರ್
Next Story
X