ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆಗೆ ಸಿದ್ದತೆ : ದಿನೇಶ್ ಗುಂಡೂರಾವ್
"ದ.ಕ.ದಲ್ಲಿ ಅಹಿತಕರ ಘಟನೆಗಳು ನಡೆದರೆ ಪ್ರವಾಸೋದ್ಯಮಕ್ಕೆ, ಬಂಡವಾಳ ಹೂಡಿಕೆಗೆ ಯಾರು ಬರುತ್ತಾರೆ?"

ದಿನೇಶ್ ಗುಂಡೂರಾವ್
ಶಿವಮೊಗ್ಗ: ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆಗೆ ಎಲ್ಲಾ ಸಿದ್ದತೆ ನಡೆಯುತ್ತಿದೆ ಎಂದು ಸಚಿವ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆಯ ಬಗ್ಗೆ ಗೃಹ ಸಚಿವರು ಈ ಹಿಂದೆಯೇ ಹೇಳಿದ್ದಾರೆ. ಟಾಸ್ಕ್ ಫೋರ್ಸ್ ರಚನೆಗೆ ಎಲ್ಲಾ ವ್ಯವಸ್ಥೆ ನಡೀತಿದೆ. ಅಲ್ಲದೇ, ಆ್ಯಂಟಿ ಕಮ್ಯೂನಲ್ ಫೋರ್ಸ್ ಅನ್ನು ಮಾಡಬೇಕಾಗುತ್ತದೆ ಎಂದರು.
ಕೋಮುವಾದ ಸಮಾಜವನ್ನು ವಿಭಜನೆ ಮಾಡುತ್ತದೆ. ಕೋಮುವಾದದ ವಿರುದ್ಧ ಕಾನೂನು ಹಾಗೂ ಸಾಮಾಜಿಕ ಹೋರಾಟ ಮಾಡಬೇಕಾಗುತ್ತದೆ. ಪ್ರತಿ ಮನೆಯ ಹತ್ತಿರ ಪೊಲೀಸರು ಇರೋಕೆ ಆಗಲ್ಲ. ಮೊನ್ನೆ ಪ್ರಚೋದನಕಾರಿಯಾಗಿ ಕೆಲವರು ಭಾಷಣ ಮಾಡಿದ್ದರು. ಅವರ ಮೇಲೂ ಸಹ ಕೇಸ್ ಆಗಿದೆ. ಉದ್ರೇಕಕಾರಿ ಭಾಷಣವನ್ನು ಸಂಘ-ಪರಿವಾರದವರು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಘಟನೆ ನಡೆದರೆ ಪ್ರವಾಸ ಅಥವಾ ಬಂಡವಾಳ, ಉದ್ಯಮ ಮಾಡೋಕೆ ಯಾರು ಬರುತ್ತಾರೆ ಎಂದು ಸಚಿವರು ಪ್ರಶ್ನಿಸಿದರು
ಶರಣ್ ಪಂಪ್ವೆಲ್ ಬಂದ್ ಕರೆ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಚೋದನೆ ಮಾಡುವವರಿಗೆ ಇದೇ ಕೆಲಸ. ಹಿಂದುತ್ವದ ಅಡಿಯಲ್ಲಿ ರಕ್ಷಣೆ ತೆಗೆದುಕೊಳ್ಳುತ್ತಾರೆ. ಒಬ್ಬರನ್ನು ಸಾಯಿಸಿದರೆ ಧರ್ಮದ ಬೆಂಬಲವಿದೆ ಅಂದು ಕೊಳ್ಳುತ್ತಾರೆ. ಹಿಂದುತ್ವವನ್ನು ಉಪಯೋಗಿಸಿಕೊಂಡು, ಮಾಡಬಾರದ ಕೆಲಸ ಮಾಡುತ್ತಾರೆ. ಮರಳು ದಂಧೆ ಮಾಡುವವರು, ರೌಡಿಗಳನ್ನೂ ಸಹ ಉಪಯೋಗಿಸಿಕೊಳ್ಳುತ್ತಾರೆ. ಇದು ನಿಜವಾದ ವಸ್ತುಸ್ಥಿತಿ ಎಂದರು.
ದಕ್ಷಿಣ ಕನ್ನಡದಲ್ಲಿ ಈಗಾಗಲೇ ಅಲ್ಲಿ ಸೆಕ್ಷನ್ 144 ಹಾಕಲಾಗಿದೆ. ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ತೀವ್ರ ತರವಾದ ಕ್ರಮವನ್ನು ಸರಕಾರ ಹಾಗೂ ಪೊಲೀಸರು ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದರು.