ಏಕಾಏಕಿ ವಾಹನ ಅಡ್ಡಗಟ್ಟುವಂತಿಲ್ಲ, ಕೀ ಕಸಿಯುವಂತಿಲ್ಲ : ಸಂಚಾರಿ ಪೊಲೀಸರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಡಿಜಿಪಿ

Photo | deccanherald
ಬೆಂಗಳೂರು: ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡು ಬಂದರೆ ಮಾತ್ರ ವಾಹನಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕು ಎಂದು ಸಂಚಾರಿ ಪೊಲೀಸರಿಗೆ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಅವರು ಬಿಡುಗಡೆ ಮಾಡಿದ್ದಾರೆ.
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ನಿಂದ ಬಿದ್ದ ಮಗು ಲಾರಿ ಹರಿದು ಮೃತಪಟ್ಟ ಘಟನೆ ಮತ್ತು ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣದ ಬೆನ್ನಲ್ಲೇ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿರುವ ಸಲೀಂ ಅವರು ನೂತನ ಆದೇಶವನ್ನು ಹೊರಡಿಸಿದ್ದಾರೆ.
ನೂತನ ಆದೇಶದಲ್ಲಿ ಏನೇನಿದೆ?
►ಸಂಚಾರ ಪೊಲೀಸರು ಸಂಚಾರ ನಿಯಮಗಳ ಉಲ್ಲಂಘನೆ ಕಂಡುಬಂದಾಗ ಮಾತ್ರ ವಾಹನಗಳನ್ನು ನಿಲ್ಲಿಸಬೇಕು ಮತ್ತು ಯಾವುದೇ ಕಾರಣವಿಲ್ಲದೆ ದಾಖಲೆಗಳನ್ನು ಪರಿಶೀಲಿಸಲು ನಿಲ್ಲಿಸಬಾರದು.
►ಹೆದ್ದಾರಿಗಳಲ್ಲಿ ಜಿಗ್ ಜಾಗ್ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು.
►ರಸ್ತೆ ಮಧ್ಯೆ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
►ಬೈಕ್ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನದ ಕೀಲಿ ಕೈ ತೆಗೆದುಕೊಳ್ಳುವುದನ್ನು ಮಾಡಬಾರದು.
►ವೇಗವಾಗಿ ವಾಹನ ಚಲಾಯಿಸಿ ಕೊಂಡು ಬರುವ ಸವಾರರನ್ನು ಬೆನ್ನಟ್ಟದೆ ಆ ವಾಹನಗಳ ನೋಂದಣಿ ಸಂಖ್ಯೆ ಗುರುತು ಮಾಡಿ, ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಿ ಪ್ರಕರಣವನ್ನು ದಾಖಲಿಸಬೇಕು.
►ವಾಹನಗಳ ತಪಾಸಣೆ ವೇಳೆ ಪೊಲೀಸರು ಸುರಕ್ಷತೆಗಾಗಿ ರಿಪ್ಲೆಕ್ಟಿವ್ ಜಾಕೆಟ್ ಧರಿಸಬೇಕು ಮತ್ತು ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು. ಸಂಜೆ ಮತ್ತು ರಾತ್ರಿ ವೇಳೆ ಎಲ್ಇಡಿ ಲಾಠಿಗಳನ್ನು ಕಡ್ಡಾಯವಾಗಿ ಬಳಸಬೇಕು.
►ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್ಟಿಆರ್ ದಾಖಲಿಸಲು ತಂತ್ರಜ್ಞಾನವನ್ನು ಅನುಸರಿಸಬೇಕು.
►ರಾತ್ರಿ ಮತ್ತು ತಡರಾತ್ರಿಯಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್ಗಳ ಬದಿಯಲ್ಲೇ ವಾಹನ ತಪಾಸಣೆ ಮಾಡಬೇಕು.
►ವಾಹನಗಳ ವೇಗ ತಗ್ಗಿಸಲು ತಪಾಸಣೆ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಪ್ಲೆಕ್ಟಿವ್ ರಬ್ಬರ್ ಕೋನ್ ಮತ್ತು ಸುರಕ್ಷತಾ ಸಲಕರಣೆ ಅಳವಡಿಸಬೇಕು ಎಂದು ಡಿಜಿಪಿ ಆದೇಶದಲ್ಲಿ ತಿಳಿಸಿದ್ದಾರೆ.