ʼಕ್ಷಮೆ ಕೇಳಲ್ಲ ಅಂದರೆ ಬಿಡುವವರು ಯಾರು?ʼ : ಕಮಲ್ ಹಾಸನ್ಗೆ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

ಶಿವರಾಜ ತಂಗಡಗಿ/ಕಮಲ್ ಹಾಸನ್
ಬೆಂಗಳೂರು: ಕನ್ನಡದ ಬಗ್ಗೆ ತಮ್ಮ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಕ್ಷಮೆ ಕೇಳಲು ಕಮಲ್ ಹಾಸನ್ ನಿರಾಕರಿಸಿದ ಹಿನ್ನಲೆ ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ‘ನಟ ಕಮಲ್ ಹಾಸನ್ ಕ್ಷಮೆ ಕೇಳಲ್ಲ ಅಂದರೆ ಬಿಡುವವರು ಯಾರು’ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅವರೊಬ್ಬ ಹಿರಿಯ ನಟ. ಅವರಿಗಾಗಿ ಸಿನಿಮಾ ನಿರ್ಮಿಸಿದವರಿಗೆ ಅನ್ಯಾಯ ಆಗುವುದಿಲ್ಲವೇ.? ಈ ವಿಷಯವನ್ನು ನಾವು ಸುಮ್ಮನೆ ಬಿಡುತ್ತೇವೆಯೇ? ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆ ಮಾತನಾಡಿದ್ದು, ಪರಭಾಷೆ ನಟರು ಯಾರೇ ಮಾತನಾಡಿದರೂ ಬಿಡಲ್ಲ. ನಮ್ಮ ಭಾಷೆ ವಿಚಾರದಲ್ಲಿ ಮಾತನಾಡಿದರೆ ಬಿಡುವ ಮಾತೇ ಇಲ್ಲ. ಇದರ ಬಗ್ಗೆ ವಿಶೇಷ ಕಾನೂನು ತರುವ ವಿಚಾರವಾಗಿ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರೊಬ್ಬ ಕನ್ನಡದ ಹಿರಿಯ ನಟ ಇದರ ಬಗ್ಗೆ ಅವರು ಅರ್ಥ ಮಾಡಿಕೊಳ್ಳಬೇಕು. ನಮ್ಮತನವನ್ನು ಅವರು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.