ಮತ್ತೊಮ್ಮೆ ಭಾರತಕ್ಕಾಗಿ ಆಡಲು ಸಿದ್ಧನಾಗಿದ್ದೇನೆ: ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ | PC : PTI
ಹೊಸದಿಲ್ಲಿ: ಭಾರತದ ಬ್ಯಾಟಿಂಗ್ ಆಧಾರಸ್ತಂಭಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನೊಂದೆಡೆ, ವೇಗದ ಬೌಲರ್ ಮುಹಮ್ಮದ್ ಶಮಿ ದೈಹಿಕ ಕ್ಷಮತೆಯ ಕಾರಣಗಳಿಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈಗ ಎಲ್ಲರ ಗಮನ ಶುಭಮನ್ ಗಿಲ್ ನೇತೃತ್ವದ ಭಾರತೀಯ ತಂಡದ ಮೇಲಿದೆ. ಇದನ್ನು ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ಪ್ರವಾಸಗೈಯುವ ಅತ್ಯಂತ ಅನನುಭವಿ ತಂಡ ಎಂಬುದಾಗಿ ಪರಿಗಣಿಸಲಾಗಿದೆ.
ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ ಭಾರತೀಯ ಬ್ಯಾಟಿಂಗ್ ಸರದಿ ದುರ್ಬಲವಾಗಿದೆ. ಅಗ್ರ ಬ್ಯಾಟಿಂಗ್ ಕ್ರಮಾಂಕವನ್ನು ಬಲಪಡಿಸಲು ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಅಥವಾ ಅಜಿಂಕ್ಯ ರಹಾನೆಯನ್ನು ಆಯ್ಕೆಗಾರರು ಪರಿಗಣಿಸಬಹುದಾಗಿತ್ತೇ ಎಂಬ ಪ್ರಶ್ನೆಯು ಅಭಿಮಾನಿಗಳ ಮನಸ್ಸಿನಲ್ಲಿ ಹುಟ್ಟಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಇಂಗ್ಲೆಂಡ್ ಪ್ರವಾಸಕ್ಕೆ ಸಂಬಂಧಿಸಿ ಪ್ರಧಾನ ಕೋಚ್ ಗೌತಮ್ ಗಂಭೀರ್ ನಿಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂಬುದಾಗಿ ಪೂಜಾರರನ್ನು ಕೇಳಲಾಗಿತ್ತು.
‘‘ಇಲ್ಲ, ಇನ್ನೂ ಇಲ್ಲ’’ ಎಂಬುದಾಗಿ ಪೂಜಾರ ‘ಲಲನ್ಟಾಪ್’ಗೆ ಉತ್ತರಿಸಿದ್ದರು. ಆದರೆ, ಅವಕಾಶ ಸಿಕ್ಕಿದರೆ ತಂಡಕ್ಕೆ ಮರಳುವ ಉತ್ಸುಕತೆಯನ್ನು ಪೂಜಾರ ವ್ಯಕ್ತಪಡಿಸಿದ್ದಾರೆ.
‘‘ನಾನು ಸಿದ್ಧನಾಗಿದ್ದೇನೆ. ಆದರೆ, ಅವರು ನನ್ನನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನನಗೆ ಅವಕಾಶ ಸಿಕ್ಕಿದರೆ, ಅದು ದೇಶವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಿಕ್ಕ ಗೌರವವೆಂದು ನಾನು ಭಾವಿಸುತ್ತೇನೆ. ನಾನು ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದೇನೆ. ನನಗೆ ಅವಕಾಶ ಸಿಕ್ಕಿದರೆ, ತಂಡದ ಭಾಗವಾಗಲು ಅತೀವ ಸಂತೋಷಪಡುತ್ತೇನೆ’’ ಎಂದು ಪೂಜಾರ ಹೇಳಿದರು.
ಪೂಜಾರ ಅವರು 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.