ಕೋಚ್ ದಾಹಿಯರಿಂದ ಕ್ಷಮೆ ಕೋರಿದ ಬಜರಂಗ್ ಪೂನಿಯ

PC : PTI
ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ನ (ಡಬ್ಲ್ಯೂಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ವೇಳೆ, ‘‘ಹೆಸರು ಕೆಡಿಸಿರುವುದಕ್ಕಾಗಿ’’ ಕುಸ್ತಿ ಕೋಚ್ ನರೇಶ್ ದಾಹಿಯರಿಂದ ಒಲಿಂಪಿಕ್ಸ್ ಪದಕ ವಿಜೇತ ಬಜರಂಗ್ ಪೂನಿಯ ನಿಶ್ಶರ್ತ ಕ್ಷಮೆ ಕೋರಿದ್ದಾರೆ.
ಹಲವಾರು ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಟೋಕಿಯೊ ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ವಹಿಸಿದ್ದರು.
2023 ಮೇ 10ರಂದು ಜಂತರ್-ಮಂತರ್ನಲ್ಲಿ ನಡೆದ ಧರಣಿಯ ವೇಳೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬಜರಂಗ್ ಪೂನಿಯ, ಸ್ವತಃ ನರೇಶ್ ದಾಹಿಯರೇ ಅತ್ಯಾಚಾರ ಆರೋಪಿಯಾಗಿದ್ದಾರೆ, ಹಾಗಾಗಿ ತಮ್ಮ ಪ್ರತಿಭಟನೆಯನ್ನು ಪ್ರಶ್ನಿಸುವ ಹಕ್ಕು ಅವರಿಗಿಲ್ಲ ಎಂದಿದ್ದರು.
ದಹಿಯ, ಪೂನಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ತನ್ನ ವಿರುದ್ಧದ ಆರೋಪಗಳನ್ನು ಅದಾಗಲೇ ವಜಾಗೊಳಿಸಿದೆ ಎಂದು ಅವರು ವಾದಿಸಿದ್ದರು.
ನ್ಯಾಯಾಲಯವು ಪುನಿಯಗೆ ಸಮನ್ಸ್ ಜಾರಿಗೊಳಿಸಿತ್ತು. ನ್ಯಾಯಾಲಯವು ಅವರಿಗೆ ಜಾಮೀನು ಕೂಡ ಮಂಜೂರು ಮಾಡಿತ್ತು.
ಮೇ 17ರಂದು ಬಜರಂಗ್ , ಕೋಚ್ ರ ಕ್ಷಮೆ ಕೇಳಿದ್ದಾರೆ ಮತ್ತು ತನ್ನ ಹೇಳಿಕೆಗಳಿಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.