ಮೇ 15ರಂದು ಬೆಂಗಳೂರಿನಿಂದ ತಿರಂಗಾ ಯಾತ್ರೆ ಪ್ರಾರಂಭ : ವಿಜಯೇಂದ್ರ

ಬಿ.ವೈ.ವಿಜಯೇಂದ್ರ
ಶಿವಮೊಗ್ಗ : ಪಾಕಿಸ್ತಾನದ ವಿರುದ್ಧ ʼಆಪರೇಷನ್ ಸಿಂಧೂರʼ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲಿದ್ದು, ಮೇ.15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಪ್ರಾರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ʼಆಪರೇಷನ್ ಸಿಂಧೂರʼ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಸಲುವಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ತಿರಂಗಾ ಯಾತ್ರೆ ನಡೆಸಬೇಕು ಎಂದು ತಿಳಿಸಿದ್ದಾರೆ. ಈ ಮೂಲಕ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಸೂಚಿಸಿದ್ದಾರೆ. ತಿರಂಗಾ ಯಾತ್ರೆಯನ್ನು ರಾಜಕೀಯೇತರವಾಗಿ ಆಯೋಜನೆ ಮಾಡಲಾಗುತ್ತಿದೆ ಎಂದರು.
ಮೇ 15ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಬಳಿಕ ಮಂಗಳೂರು, ಬೆಳಗಾವಿಯಂತಹ ನಗರದಲ್ಲಿ ನಡೆಯಲಿದೆ. ಮೇ 16ರಂದು ಇತರೆ ಜಿಲ್ಲೆಯಲ್ಲಿ ನಡೆಯಲಿದೆ. ಮೇ 18ರಿಂದ 23ರವರೆಗೆ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಮೇ 16ರಂದು ಶಿವಮೊಗ್ಗದಲ್ಲಿ ನಡೆಯುವ ಯಾತ್ರೆಯಲ್ಲಿ ನಾನು ಭಾಗಿಯಾಗಲಿದ್ದೇನೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿಯೂ ತಿರಂಗಾ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಮೆರವಣಿಗೆ ನಡೆಯಲಿದೆ. ಸುಮಾರು 4-5 ಸಾವಿರ ಜನ ಸೇರಲಿದ್ದಾರೆ. ಯಾತ್ರೆಯಲ್ಲಿ ಮಾಜಿ ಸೈನಿಕರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದರು.
ಭಾರತ ಮತ್ತು ಪಾಕ್ ನಡುವೆ ಕದನವಿರಾಮ ಘೋಷಣೆಯಾದ ಮೇಲೆ ಪ್ರಿಯಾಂಕ್ ಖರ್ಗೆ ಅವರು ಭಾರತದ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷರಿಗೆ ಶರಣಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ನಿನ್ನೆ ಮೋದಿಯವರು ಕದನ ವಿರಾಮ ಉಲ್ಲಂಘಿಸಿ ಒಂದು ಗುಂಡು ಬಂದರೂ ಸಹ ಅದು ಯುದ್ದಕ್ಕೆ ಆಹ್ವಾನ ಎಂದು ತಿಳಿಸಿದ್ದಾರೆ. ಪೆಹಲ್ಗಾಮ್ ಉಗ್ರರು ಎಲ್ಲಿದ್ದಾರೆಂಬ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ. ಇಂತಹ ಸಮಯದಲ್ಲಿ ಈ ರೀತಿಯ ಮಾತುಗಳು ಸರಿಯಲ್ಲ. ನಮ್ಮ ಸಶಸ್ತ್ರ ಪಡೆಗಳು ತಯಾರಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ ಎಂದರು.