ಸಾಗರ | ಜಮೀನು ಖರೀದಿ ವಿಚಾರದಲ್ಲಿ ವ್ಯಕ್ತಿಗೆ ಗುಂಪಿನಿಂದ ಹಲ್ಲೆ ; ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಸಾಗರ : ಜಮೀನು ಖರೀದಿ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ ಘಟನೆ ಸಾಗರರದ ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆತವಾಡಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಆತವಾಡಿ ಗ್ರಾಮದ ಅಬ್ದುಲ್ ಮುಹೀಬ್ (ಮುನ್ನಾ) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ʼಜಮೀನು ಖರೀದಿ ವಿಚಾರದಲ್ಲಿ 2016ರಲ್ಲಿ ಪರಶುರಾಮ್ ಅವರ ಜತೆ 9.80 ಲಕ್ಷ ರೂ.ಗೆ ಮಾತುಕತೆ ನಡೆದಿತ್ತು, ಅದರಂತೆ 2017ರಲ್ಲಿ ಪರಶುರಾಮ್ 3 ಲಕ್ಷ ರೂ.ಮುಂಗಡ ಹಣ ನೀಡಿದ್ದರು. ಬಳಿಕ ಉಳಿದ ಹಣ ನೀಡದೆ ಜಮೀನು ರಿಜಿಸ್ಟರ್ ಮಾಡಿಕೊಡುವಂತೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಪೂರ್ತಿ ಹಣ ನೀಡದೆ ರಿಜಿಸ್ಟರ್ ಮಾಡಿಕೊಡಲು ಒಪ್ಪದಿದ್ದಾಗ ಪರಶುರಾಮ್ ಮತ್ತು ಸವಿತಾ ದಂಪತಿಗಳು ಸುಮಾರು ಹತ್ತು ಜನರ ಗುಂಪು ಕಟ್ಟಿಕೊಂಡು ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆʼ ಎಂದು ಅಬ್ದುಲ್ ಮುಹೀಬ್ ಆರೋಪಿಸಿದ್ದಾರೆ.
ʼತಾಯಿಯೊಂದಿಗೆ ಮನೆಯಲ್ಲಿ ಇದ್ದಾಗ ಏಕಾಏಕಿ ನುಗ್ಗಿದ ಹತ್ತು ಜನರ ಗುಂಪು, ನನ್ನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆʼ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಯನ್ ಕುಮಾರ್, ಅಜಯ್ ಕುಮಾರ್ ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಪ್ರಮುಖ ಆರೋಪಿಗಳಿಗಾಗಿ ಪೋಲೀಸರು ಹುಡುಗಾಟ ಆರಂಭಿಸಿದ್ದಾರೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.