ಕುವೆಂಪು ವಿವಿಯ ಕನ್ನಡ ಐಚ್ಚಿಕ ಪರೀಕ್ಷೆ ಮುಂದೂಡಿಕೆ
ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಅಧ್ಯಾಪಕರ ಮೇಲೆ ಕಠಿಣ ಕ್ರಮ: ಪ್ರೊ. ಗೋಪಿನಾಥ್

ಶಿವಮೊಗ್ಗ(ಮೇ. 24): ಶನಿವಾರ ನಿಗದಿಯಾಗಿದ್ದ ಬಿ. ಎ. ಆರನೇ ಸೆಮಿಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆಯ ಗೊಂದಲದಿಂದ ಮುಂದೂಡಲಾಗಿದ್ದು, ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಕನ್ನಡ ವಿಷಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನು ಕರೆಸಿ ಪರೀಕ್ಷಾ ವಿಭಾಗದಲ್ಲಿ ವಿಚಾರಣೆ ನಡೆಸಿದ್ದು, ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ, ಪರಿಶೀಲನೆ ನಡೆಸಿದ ಅಧ್ಯಾಪಕರುಗಳು ಮತ್ತು ಅಧ್ಯಕ್ಷರು ಹೊಣೆಗಾರರಾಗಿರುತ್ತಾರೆ. ಈ ಕುರಿತು ಪರೀಕ್ಷಾ ಮಂಡಳಿಯ ಅಧ್ಯಕ್ಷರು ತಪ್ಪೊಪ್ಪಿಗೆಯ ಪತ್ರ ಸಲ್ಲಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶ್ವವಿದ್ಯಾಲಯದ ಘನತೆಗೆ ಕುಂದು ತಂದಿರುವ ಮತ್ತು ವಿದ್ಯಾರ್ಥಿಗಳಿಗೆ ತೊಡಕು ಉಂಟು ಮಾಡಿರುವ ಈ ಪ್ರಕರಣಕ್ಕೆ ಸಂಬಂಧಪಟ್ಟವರ ಮೇಲೆ ಪರೀಕ್ಷಾ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದುಎಂದು ತಿಳಿಸಿದ್ದಾರೆ.