ಮೇ 29ರಂದು ʼಎರಡು ವರ್ಷ, ಶಿಕ್ಷಣದಲ್ಲಿ ಹರ್ಷʼ ಕಾರ್ಯಕ್ರಮ : ಮಧು ಬಂಗಾರಪ್ಪ

ಶಿವಮೊಗ್ಗ, ಮೇ 24: ‘ಎರಡು ವರ್ಷ; ಶಿಕ್ಷಣದಲ್ಲಿ ಹರ್ಷ’ ಎಂಬ ಕಾರ್ಯಕ್ರಮ ಮೇ 29ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಲಾಗಿದೆ. ಮಕ್ಕಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ಉತ್ತಮ ಫಲಿತಾಂಶ ಬಂದಿದೆ. ವಾರದಲ್ಲಿ ಆರು ದಿನ ಮೊಟ್ಟೆ ನೀಡಲು ಕ್ರಮ ತೆಗೆದುಕೊಂಡಿದ್ದೇವೆ. ನಾವು ಭರವಸೆ ನೀಡಿದಂತೆ ಈ ಶೈಕ್ಷಣಿಕ ವರ್ಷ ಪ್ರಾರಂಭದಿಂದಲೇ 51 ಸಾವಿರ ಶಿಕ್ಷಕರನ್ನು ನೇಮಕ ಮಾಡುತ್ತಿದ್ದೇವೆ. ಮಾತಿನಂತೆ ಅವರಿಗೆ 2,000 ರೂ. ಹೆಚ್ಚುವರಿವಾಗಿ ನೀಡುತ್ತಿದ್ದೇವೆ. ಮೇ 31ರಂದು ಅಧಿಕೃತವಾಗಿ ಶಾಲೆಗಳು ಆರಂಭವಾಗುತ್ತಿದೆ ಎಂದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯವರ ‘ಕಲಬುರಗಿ ಚಲೋ’ ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಕಾಲದಲ್ಲಿ ಗೂಂಡಾಯಿಸಂ ಎಷ್ಟಿತ್ತು? ಎಲ್ಲೆಲ್ಲಿ, ಯಾವ್ಯಾವ ನಾಯಕರು ಎಷ್ಟು ಗೂಂಡಾಗಿರಿ ಮಾಡಿದ್ದಾರೆ?. ಅವರ ಕಾಲದಲ್ಲಿ ಏನಾಗಿತ್ತು?. ಈ ಬಗ್ಗೆ ಪಟ್ಟಿ ಕೊಡಲಾ ಎಂದು ಪ್ರಶ್ನಿಸಿದರು.
ರಾಮನಗರ ಹೆಸರಿನಲ್ಲಿ ರಾಮ ಎಂದು ಇರುವುದರಿಂದ ಹೆಸರು ಬದಲಾಯಿಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದೇನು ಕಾನೂನು ಬಾಹಿರವಾ? ಎಲ್ಲದರಲ್ಲೂ ತಪ್ಪು ಹುಡುಕುವುದೇ ಅವರ ಕೆಲಸ ಎಂದು ಟೀಕಿಸಿದರು.
ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ಅವರನ್ನು ರಾಯಭಾರಿ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ಉಂಟಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಶಿವರಾಜ್ ಕುಮಾರ್ ಕೂಡಾ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ತಮನ್ನಾ ಅವರ ಚಿತ್ರವನ್ನು ನೋಡುವುದು ಬಿಡುತ್ತೀರಾ ? ಮಾರುಕಟ್ಟೆಯ ವಾತಾವರಣ ನೋಡಿ ಜಾಹೀರಾತಿಗೆ ಮೀಸಲಾದ ಸಮಿತಿಯವರು ತಮ್ಮ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಅವರಿಗಿರುವ ಹಕ್ಕಿನಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಉತ್ತರಿಸಲಾಗುವುದಿಲ್ಲ ಎಂದರು.
ಅರಣ್ಯದ ಮೇಲಿನ ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಜಿಲ್ಲೆಯಲ್ಲಿ ಮಂಗನಹಾವಳಿ ನಿಯಂತ್ರಣಕ್ಕೆ ಮಂಕಿಪಾರ್ಕ್ ಹಾಗೂ ಆನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನಾನು ಮತ್ತೊಮ್ಮೆ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಡಿ. ಮಂಜುನಾಥ್, ವಿಜಯಕುಮಾರ್, ಬಲ್ಕೀಸ್ ಬಾನು, ಆರ್. ಪ್ರಸನ್ನಕುಮಾರ್ ಮತ್ತಿತರರಿದ್ದರು.