ದ್ವೇಷ ಭಕ್ತ ಗೆದ್ದಲುಗಳು ಸೃಷ್ಟಿಸಿದ ರೆಜಿಮೆಂಟಾಯಣ

ಹಿಮಾಂಶಿ ನರ್ವಾಲ್ ಮತ್ತು ಸೋಫಿಯಾ ಖುರೇಷಿ
ಭಾಗ- 1
ಸ್ವತಃ ಸುಳ್ಳಿಗೆ ಹುಟ್ಟಿ ಸುಳ್ಳನ್ನೇ ನಿತ್ಯ ಹುಟ್ಟಿಸುತ್ತಿರುವ ವಿಚಾರಧಾರೆ ನಮ್ಮ ಸಮಾಜದಲ್ಲಿ ಯಾವ ಮಟ್ಟಿಗೆ ತನ್ನ ಜಾಲ ಬೀಸಿದೆ? ಇದನ್ನು ನಮಗೆ ಮನವರಿಕೆ ಮಾಡಿಸಿ ನಮ್ಮನ್ನು ಎಚ್ಚರಿಸುವ ಕೆಲವು ಘಟನೆಗಳು ಇತ್ತೀಚೆಗೆ ನಡೆದವು.
ಪಹಲ್ಗಾಮ್ನಲ್ಲಿ ಭಯೋತ್ಪಾದಕ ರಾಕ್ಷಸರು 26 ಮಂದಿ ಮಾನವರನ್ನು ಕೊಂದು ಓಡಿಹೋದರು. ಆ ದುರಂತದ ಬೆನ್ನಿಗೇ, ಆ ಭಯೋತ್ಪಾದಕರ ಸಹಾಯಕರು ದೇಶದೆಲ್ಲೆಡೆ ಸಕ್ರಿಯರಾಗಿಬಿಟ್ಟರು. ದೇಶಭಕ್ತ, ಧರ್ಮ ರಕ್ಷಕ ಇತ್ಯಾದಿ ಮುಖವಾಡಗಳನ್ನು ಹೊತ್ತು ಎಲ್ಲೆಂದರಲ್ಲಿ ಅಲೆದಾಡುವ ಈ ಮಂದಿ ಸಮಾಜವನ್ನು ವಿಭಜಿಸಿ ನಾಶಮಾಡುವ ಕಾಯಕದಲ್ಲಿ ತೊಡಗಿಕೊಂಡರು. ಭಯೋತ್ಪಾದಕರಿಗೆ ತಮ್ಮ ಬಂದೂಕುಗಳಿಂದ ಸಾಧಿಸಲು ಸಾಧ್ಯವಾಗದ ಕೆಲಸವನ್ನು ಈ ವಿಭಜಕ ಶಕ್ತಿಗಳು ತಮ್ಮ ಲೇಖನಿ, ನಾಲಿಗೆ ಮತ್ತು ಮಾಧ್ಯಮ ಚಾತುರ್ಯಗಳ ಮೂಲಕ ಸಾಧಿಸಲು ಹೊರಟರು. ಒಂದು ಕಾಲದಲ್ಲಿ ಇವರು ಧರ್ಮಗ್ರಂಥಗಳನ್ನು ಬಳಸಿ ಜಾತಿಯ ಹೆಸರಲ್ಲಿ ಸಮಾಜವನ್ನು ವಿಭಜಿಸಿ ಸಮಾಜದ ಬಹುಜನರನ್ನು ತಮ್ಮ ದಾಸರಾಗಿಸಿಕೊಂಡಿದ್ದರು. ಆಧುನಿಕ ಯುಗದಲ್ಲಿ ಬಹುಜನರು ತಮ್ಮ ಮಾನವೀಯ ಹಕ್ಕುಗಳಿಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸತೊಡಗಿದಾಗ ಇವರು ಸುಳ್ಳು ವದಂತಿಗಳನ್ನು ಬಳಸಿ ಬಹುಜನರ ಸಮಾಜದ ವಿವಿಧ ವರ್ಗಗಳನ್ನು ಪರಸ್ಪರ ಕದನಕ್ಕಿಳಿಸುವ ಸಂಚಿಗೆ ಶರಣಾದರು.
ಪಹಲ್ಗಾಮ್ ದುರಂತವನ್ನು ಕಂಡು ಬೆಚ್ಚಿಬಿದ್ದ ದೇಶದ ಜನರೆಲ್ಲಾ ತಮ್ಮ ತಾತ್ಕಾಲಿಕ ಭಿನ್ನಮತಗಳನ್ನು ಒತ್ತಟ್ಟಿಗಿಟ್ಟು ನಿಜಾರ್ಥದಲ್ಲಿ ರಾಷ್ಟ್ರೀಯ ಭಾವೈಕ್ಯ ಮೆರೆಯತೊಡಗಿದ್ದರು. ಕೊಂದವರ ಅಥವಾ ಸತ್ತವರ ಜಾತಿ, ಧರ್ಮ ಯಾವುದೆಂದು ಕೇಳದೆ, ದುರಂತದ ಬೆನ್ನಿಗೇ ಎಲ್ಲ ಭಾರತೀಯರೂ ಒಕ್ಕೊರಲಿನಿಂದ ಹಂತಕರನ್ನು ಮತ್ತು ಹಿಂಸೆಯನ್ನು ತೀವ್ರವಾಗಿ ಖಂಡಿಸಿ, ಅಮಾನುಷ ಹಿಂಸೆಗೆ ಬಲಿಯಾದವರ ಪರ ಗರಿಷ್ಠ ಸಹಾನುಭೂತಿ ಪ್ರಕಟಿಸಿದ್ದರು. ಭಯೋತ್ಪಾದಕರನ್ನು ಮತ್ತು ಅವರ ವಿದೇಶಿ ಪೋಷಕರನ್ನು ನೀವು ಅತ್ಯುಗ್ರವಾಗಿ ಶಿಕ್ಷಿಸಿ, ಈ ವಿಷಯದಲ್ಲಿ ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು ಎಲ್ಲರೂ ಪಕ್ಷಭೇದ ಮರೆತು, ಸರಕಾರಕ್ಕೆ ಆಶ್ವಾಸನೆ ನೀಡಿದ್ದರು.
ವ್ಯಾಪಕ ಭಾವೈಕ್ಯದ ಈ ದೃಶ್ಯ ಕಂಡು ಭಯೋತ್ಪಾದಕರು ಖಂಡಿತ ಅಂಜಿರಬಹುದು. ಆದರೆ ಅವರಿಗಿಂತ ಹೆಚ್ಚು ಅಂಜಿದ್ದು ಇಲ್ಲಿರುವ ಅವರ ಆಪ್ತ ಸಹಾಯಕರು. ಜನರನ್ನು ವಿಭಜಿಸುವುದೊಂದೇ ಅಧಿಕಾರಕ್ಕಿರುವ ಸುಲಭದ ದಾರಿ ಎಂದು ನಂಬಿರುವ ರಾಷ್ಟ್ರೀಯ ಸುಳ್ಳರ ಸಂಘದ ವಿಷಮರಿಗಳು. ಅವರು ಸಮಾಜದ ಬಹುಜನರನ್ನು ವಿಂಗಡಿಸಿ ಆಳುವ ಪ್ರಾಚೀನ ಅನುಭವ ಉಳ್ಳವರು. ಪಹಲ್ಗಾಮ್ ಹೆಸರಲ್ಲಿ ಹಠಾತ್ತನೆ ಒಂದಾಗಿ ಬಿಟ್ಟಿರುವ ದೇಶವಾಸಿಗಳೆಲ್ಲಾ ಈ ರೀತಿ ಒಂದಾಗಿ ಉಳಿದರೆ ನಮ್ಮ ಗತಿ ಏನು? ನಮ್ಮ ಕೈಯಲ್ಲಿರುವ ಸರ್ವಾಧಿಕಾರದ ಗತಿಯೇನು? ನಮ್ಮ ಕೃಪಾಪೋಷಿತ ಕುಬೇರರ ಗತಿ ಏನು? ನಾವು ದೇಶವನ್ನೇ ಕುಬ್ಜವಾಗಿಸುವಷ್ಟು ದೊಡ್ಡದಾಗಿ ಬೆಳೆಸಿರುವ ಬಂಡವಾಳಶಾಹಿ ವ್ಯವಸ್ಥೆಯ ಗತಿ ಏನು? ಸದ್ಯದ ಏಕತೆ ಎಲ್ಲಾದರೂ, ಹಕ್ಕು ಅಧಿಕಾರಗಳನ್ನು ಕೇಳುವ ಮತ್ತು ನ್ಯಾಯವನ್ನು ಕಿತ್ತುಕೊಳ್ಳುವ ಏಕತೆಯಾಗಿ ಮಾರ್ಪಟ್ಟರೆ ನಾವೆಲ್ಲಿ ಅಡಗಿಕೊಳ್ಳಬೇಕು? ಎಂದೆಲ್ಲಾ ಆಲೋಚಿಸಿ ಅವರು ನಡುಗತೊಡಗಿದರು. ಇದಕ್ಕೆಲ್ಲ ತಕ್ಷಣವೇ ಅವರು ಒಂದು ಪರಿಹಾರವನ್ನೂ ಕಂಡುಕೊಂಡರು. ಭಯೋತ್ಪಾದಕರು ಮತ್ತು ಪಾಕ್ ಸರಕಾರದ ವಿರುದ್ಧ ಭುಗಿಲೆದ್ದ ಆಕ್ರೋಶವನ್ನು ಆಂತರಿಕ ಸಂಶಯ ಹಾಗೂ ಪರಸ್ಪರ ವಿದ್ವೇಷವಾಗಿ ಪರಿವರ್ತಿಸುವುದೇ ಆ ಪರಿಹಾರ. ಅದಕ್ಕಾಗಿ ಅವರು ತಮ್ಮ ಟಿ.ವಿ. ಚಾನೆಲ್ಗಳು, ಸ್ಲೀಪರ್ ಸೆಲ್, ಐಟಿ ಸೆಲ್ ಇತ್ಯಾದಿಗಳು, ಒಂದು ಸಂದೇಶ ಕಳಿಸಿ ಎರಡು ರೂಪಾಯಿ ಕೂಲಿ ಸಂಪಾದಿಸುವ ಸೋಷಿಯಲ್ ಮೀಡಿಯಾ ಕೀಟಗಳು, ದ್ವೇಷ ಮಾತ್ರ ಉಗುಳಬಲ್ಲ ಭಾಷಣಕಾರರು ಮತ್ತಿತರರನ್ನೆಲ್ಲ ‘ಸಮಾಜ ವಿಭಜಿಸಿ’ ಆಪರೇಷನ್ಗೆ ಇಳಿಸಿ ಬಿಟ್ಟರು. ಇವರೆಲ್ಲಾ ಮಾಡಿದ್ದೇನು ಗೊತ್ತೇ? ಭಯೋತ್ಪಾದಕರು ಜನರ ಧರ್ಮ ಕೇಳಿ ಅವರ ಕುರಿತು ತಮ್ಮ ನಿಲುವು ನಿರ್ಧರಿಸಿದಂತೆ ನಾವು ಕೂಡಾ ಜನರ ಧರ್ಮ ನೋಡಿ ಟಾರ್ಗೆಟ್ ಮಾಡೋಣ ಎಂಬ ಸಂದೇಶವನ್ನು ಎಲ್ಲೆಡೆಗೆ ಪದೇಪದೇ ತಲುಪಿಸಿದ್ದು ಮತ್ತು ಆ ಮೂಲಕ ಸಮಾಜದಲ್ಲಿ ದೊಡ್ಡ ಮಟ್ಟದ ಬಿರುಕು ಮೂಡಿಸಲು ಪ್ರಯತ್ನಿಸಿದ್ದು. ಇವರ ವಿಷ ಯಾವ ಮಟ್ಟದ್ದಾಗಿತ್ತೆಂಬುದನ್ನು ಈ ಕೆಳಗಿನ ಮೂರು ಘಟನೆಗಳಿಂದ ಅಳೆಯಬಹುದು:
* ಪಹಲ್ಗಾಮ್ ದುರಂತದ ಬೆನ್ನಿಗೇ ದೇಶದ್ರೋಹಿಗಳು ಕಾಶ್ಮೀರದ ಎಲ್ಲ ನಾಗರಿಕರನ್ನು ಅಪರಾಧಿಗಳಾಗಿ ಬಿಂಬಿಸತೊಡಗಿದರು. ಭದ್ರತಾ ವೈಫಲ್ಯ ಮತ್ತು ಕೇಂದ್ರ ಸರಕಾರದ ಅಸಾಮರ್ಥ್ಯವನ್ನು ಅಪ್ಪಿತಪ್ಪಿಯೂ ಅವರು ಪ್ರಸ್ತಾಪಿಸಲಿಲ್ಲ. ಕಾಶ್ಮೀರದವರೆಲ್ಲ ಸಹಕರಿಸಿದ್ದರಿಂದ ಮಾತ್ರ ನೆರೆದೇಶದ ಭಯೋತ್ಪಾದಕರು ಗಡಿದಾಟಿ ಬಂದು ನರಮೇಧ ನಡೆಸಲು ಸಾಧ್ಯವಾಯಿತು ಎಂಬ ಸುಳ್ಳು ಸಂದೇಶವನ್ನು ಅವರು ಪದೇ ಪದೇ ಆವರ್ತಿಸಿದರು. ಆ ಬಳಿಕ ದೇಶದ ವಿವಿಧೆಡೆ ಕಾಲೇಜುಗಳಲ್ಲಿ ಅಥವಾ ಹಾಸ್ಟೆಲ್ಗಳಲ್ಲಿ ಇದ್ದ ಮುಗ್ಧ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಮತ್ತು ಸಣ್ಣಪುಟ್ಟ ಅಂಗಡಿ ಅಥವಾ ಬೀದಿಬದಿ ವ್ಯಾಪಾರ ನಡೆಸುತ್ತಿದ್ದ ಕಾಶ್ಮೀರಿಗಳಿಗೆ ಕಿರುಕುಳ ನೀಡುವ, ಅವರನ್ನು ಬೆದರಿಸುವ, ಬಹಿಷ್ಕರಿಸುವ ಮತ್ತು ಅವರ ಮೇಲೆ ಹಲ್ಲೆಗೆ ಪ್ರಯತ್ನಿಸುವ ಘಟನೆಗಳ ಸರಣಿಯೇ ಆರಂಭವಾಗಿ ಬಿಟ್ಟಿತು. ಇದು ಖಂಡಿತ ದೇಶಪ್ರೇಮದ ಘಟನೆಯಾಗಿರಲಿಲ್ಲ. ನಿಜವಾಗಿ ಇದು ಕಾಶ್ಮೀರದ ಜನತೆಯನ್ನು ಭಾವನಾತ್ಮಕವಾಗಿ ಇತರ ಭಾರತೀಯರಿಂದ ದೂರಗೊಳಿಸುವ ಭಯೋತ್ಪಾದಕರ ಅಜೆಂಡಾದ ಪೂರ್ತೀಕರಣವಾಗಿತ್ತು. ಈ ರೀತಿ ದೇಶಭಕ್ತಿಯ ಮುಖವಾಡ ಹೊತ್ತು, ದೇಶವಾಸಿಗಳ ನಡುವೆ ಸಂಶಯ, ದ್ವೇಷ ಮತ್ತು ಪ್ರತ್ಯೇಕತೆಯ ಬೀಜ ಬಿತ್ತುತ್ತಾ ತಿರುಗಾಡುತ್ತಿರುವ ಮತ್ತು ಆ ಮೂಲಕ ಭಯೋತ್ಪಾದಕರಿಗೆ ನೆರವಾಗುತ್ತಿರುವವರ ಒಂದು ದೊಡ್ಡ ಸಂಘಟಿತ ಪಡೆ ದೇಶದಲ್ಲಿ ಎಲ್ಲೆಂದರಲ್ಲಿ ಸಕ್ರಿಯವಾಗಿದೆ ಎಂಬುದು ಎಲ್ಲರ ಗಮನಕ್ಕೆ ಬಂತು.
* ಹಿಮಾಂಶಿ ನರ್ವಾಲ್ ಎಂಬ ಧೀರ ಮಹಿಳೆ, ಪಹಲ್ಗಾಮ್ನಲ್ಲಿ ತನ್ನ ಪತಿ, ವಿನಯ್ ನರ್ವಾಲ್ (ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್)ರನ್ನು ಕಳೆದುಕೊಂಡು ತೀವ್ರ ಆಘಾತದ ಸ್ಥಿತಿಯಲ್ಲಿದ್ದರು. ಆಕೆ ನೈಜ ದೇಶಪ್ರೇಮಿಯಾಗಿದ್ದರಿಂದ, ಆ ಪರಮ ದುಖಃದ ಸ್ಥಿತಿಯಲ್ಲೂ, ಕಾಶ್ಮೀರದಲ್ಲಿ ನಡೆದ ದುರಂತಕ್ಕಾಗಿ ಎಲ್ಲ ಕಾಶ್ಮೀರಿಗಳನ್ನು ಮತ್ತು ಮುಸ್ಲಿಮ್ ಸಮುದಾಯವನ್ನು ದೂಷಿಸಬೇಡಿ ನಮಗೆ ಬೇಕಾಗಿರುವುದು ಶಾಂತಿ ಎಂದು ಕರೆನೀಡಿದರು. ಸಮಾಜವಿರೋಧಿ, ಅವಿವೇಕಿ, ವಿಭಾಜಕ ಶಕ್ತಿಗಳು, ಕೇವಲ ಈ ವಿವೇಕದ ಮಾತುಗಳನ್ನಾಡಿದ್ದಕ್ಕಾಗಿ ಕ್ರುದ್ಧರಾಗಿ ಆಕೆಯ ವಿರುದ್ಧ ನಿಂದನೆ, ಕಿರುಕುಳ ಮತ್ತು ಬೆದರಿಕೆಯ ವ್ಯಾಪಕ ಅಭಿಯಾನ ಆರಂಭಿಸಿದರು.
* ಸಾಕ್ಷಾತ್ ತಮ್ಮ ಪ್ರಾಣಗಳನ್ನೇ ಅಂಗೈಯಲ್ಲಿ ಹಿಡಿದು, ಸರ್ವತ್ಯಾಗ ಸನ್ನದ್ಧರಾಗಿ, ದೇಶದ ರಕ್ಷಣೆಗೆ ನಿಂತ ನಮ್ಮ ರಕ್ಷಣಾಪಡೆಗಳನ್ನು ಕೂಡಾ ಅವರು ಗುರಿಯಾಗಿಸಿದರು. ಯೋಧರ ವಿಷಯದಲ್ಲೂ, ಅವರು ಯಾವ ಧರ್ಮದವರೆಂದು ನೋಡಿ ತಮ್ಮ ನಿಲುವನ್ನು ನಿರ್ಧರಿಸತೊಡಗಿದರು. ಎಂಟು ಬಾರಿ ಶಾಸಕನಾಗಿ ಆ ಬಳಿಕ ಮಂತ್ರಿಯಾದ ಸುಳ್ಳರ ಸಂಘದ ಒಬ್ಬ ಕಟ್ಟಾ ಕಾಲಾಳು ನಮ್ಮ ದೇಶದ ಒಬ್ಬ ವೀರ ಯೋಧೆಯನ್ನು, ಮಾತ್ರವಲ್ಲ, ಎಲ್ಲ ಯೋಧರನ್ನು ಪ್ರತಿನಿಧಿಸುತ್ತಿದ್ದ ಒಬ್ಬ ಮಹಿಳಾ ಸೇನಾಧಿಕಾರಿಯನ್ನು ಭಯೋತ್ಪಾದಕರ ಸಹೋದರಿ ಎಂದು ಕರೆಯುವ ಭಂಡತನವನ್ನೂ ತೋರಿಬಿಟ್ಟದ್ದಾಯಿತು.
ದೇಶವಾಸಿಗಳು ಯಾರೂ ಆತನ ಮಾತನ್ನು ನಂಬಿ ಕರ್ನಲ್ ಸೋಫಿಯಾ ಖುರೇಷಿಯನ್ನು ಸಂಶಯಿಸಲಿಲ್ಲ. ಅವರು ಪ್ರಸ್ತುತ ದ್ವೇಷಭಕ್ತನಲ್ಲೇ ದೇಶದ್ರೋಹವನ್ನು ಗುರುತಿಸಿದರು. ದೇಶವಾಸಿಗಳೆಲ್ಲಾ ಆತನನ್ನು ವಿಭಜನವಾದಿಗಳ ಮತ್ತು ಆಂತರಿಕ ಭಯೋತ್ಪಾದಕರ ಪ್ರತಿನಿಧಿಯಾಗಿ ಕಂಡರು. ಆತನನ್ನು ರಕ್ಷಿಸಲು ಆತನ ಸಂಘದವರು, ಪಕ್ಷದವರು ಮತ್ತು ಸರಕಾರದವರು ಶತಶ್ರಮ ನಡೆಸಿದರು. ಕೊನೆಗೆ ಅವನನ್ನು ಕಟಕಟೆಗೆ ತಳ್ಳಲು ಮಧ್ಯಪ್ರದೇಶದ ಹೈಕೋರ್ಟ್ ಮತ್ತು ದೇಶದ ಸುಪ್ರೀಂ ಕೋರ್ಟ್ ಮನಸ್ಸು ಮಾಡಬೇಕಾಯಿತು.
ನಮ್ಮ ಸರಕಾರ ಮತ್ತು ನಮ್ಮ ಪಡೆಗಳು ನೆರೆಯ ದೇಶದ ವಿರುದ್ಧ ಯುದ್ಧದಂತಹ ಸನ್ನಿವೇಶದಲ್ಲಿರುವಾಗ ದೇಶದ ಹಿತೈಷಿಗಳೆಲ್ಲಾ ದೇಶವನ್ನು ಆಂತರಿಕವಾಗಿ ಭದ್ರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಅದೇ ವೇಳೆ, ಸುಳ್ಳರ ಸಂಘದವರು ಮತ್ತು ಸುಳ್ಳಿನ ಮೂಲಕ ದ್ವೇಷದ ಸೋಂಕು ಹರಡುವ ಅವರ ಆಪ್ತ ಟಿ.ವಿ. ಆಂಕರ್ಗಳು ಮತ್ತು ಟ್ರೋಲ್ ನೌಕರರು ಮಾತ್ರ ಸಮಾಜವನ್ನು ಛಿದ್ರಗೊಳಿಸುವ ತಮ್ಮ ನಿತ್ಯಕಾಯಕದಲ್ಲೇ ಇನ್ನಷ್ಟು ಉತ್ಸಾಹದಿಂದ ಮಗ್ನರಾಗಿದ್ದರು. ಅವರು ದೇಶದ ಜನರ ನಡುವೆ ಬಿರುಕು ನಿರ್ಮಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿಕೊಂಡರು. ಸತ್ಯಗಳೆಲ್ಲವೂ ಸಾಮಾಜಿಕ ಏಕತೆಯ ಪರವಾಗಿರುವುದರಿಂದ ಈ ಮಂದಿ ಸತ್ಯದ ತಾಪದಿಂದ ಸ್ವತಃ ಬಚಾವಾಗಲು, ದೇಶವಾಸಿಗಳನ್ನು ಸತ್ಯದ ಬೆಳಕಿನಿಂದ ವಂಚಿಸಲು ಮತ್ತು ಸತ್ಯವನ್ನು ಅಡಗಿಸಿಡಲು ತಮ್ಮದೇ ಆದ ಸುಳ್ಳುಗಳ ಒಂದು ದೊಡ್ಡ ರಾಶಿಯನ್ನು ಸೃಷ್ಟಿಸಿ, ಅವುಗಳನ್ನು ತಾವು ಈ ಹಿಂದೆ ಸೃಷ್ಟಿಸಿದ್ದ ಸುಳ್ಳುಗಳ ರಾಶಿಯ ಜೊತೆ ಬೆರೆಸಿ ಅವುಗಳ ವ್ಯಾಪಕ ಚಲಾವಣೆ ಆರಂಭಿಸಿದರು. ದೇಶವೆಲ್ಲಾ ಭಯೋತ್ಪಾದನೆಯನ್ನು ಹತ್ತಿಕ್ಕುವ ಮತ್ತು ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಉಪಾಯಗಳ ಬಗ್ಗೆ ಚಿಂತಿಸುತ್ತಿದ್ದಾಗ ಈ ಮಂದಿ ಮಾಡಿದ ಹಲವು ಘಾತಕ ಕುಚೇಷ್ಟೆಗಳ ಪೈಕಿ ಒಂದು ಈಕೆಳಗಿನ ಸೋಶಿಯಲ್ ಮೀಡಿಯಾ ಸಂದೇಶದ ರೂಪದಲ್ಲಿತ್ತು. (ಸಾರಾಂಶ):
‘‘ಭಾರತೀಯ ಸೇನೆಯಲ್ಲಿ 22 ರೆಜಿಮೆಂಟುಗಳಿವೆ. ಆದರೆ ಮುಸ್ಲಿಮ್ ರೆಜಿಮೆಂಟ್ ಯಾಕಿಲ್ಲ? (ಶೀರ್ಷಿಕೆ)’’
‘‘1965ರವರೆಗೂ ಭಾರತೀಯ ಸೇನೆಯಲ್ಲಿ ಮುಸ್ಲಿಮ್ ರೆಜಿಮೆಂಟುಗಳಿದ್ದವು ಎಂಬುದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಮೂರು ಪ್ರಮುಖ ಘಟನೆಗಳ ಬಳಿಕ ಅವುಗಳನ್ನೆಲ್ಲ ಕಿತ್ತು ಹಾಕಲಾಯಿತು.
1. 1947 ಅಕ್ಟೋಬರ್ 15ರಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪಠಾಣರು ಭಾರತದ ಮೇಲೆ ದಾಳಿ ಮಾಡಿದರು. ಆಗ ಭಾರತದ ಗೂರ್ಖಾ ಕಂಪೆನಿಯ ಎಲ್ಲ ಧೀರ ಯೋಧರನ್ನು ಅದೇ ಬೆಟಾಲಿಯನ್ನಲ್ಲಿದ್ದ ಮುಸ್ಲಿಮ್ ಯೋಧರು ಕೊಂದುಹಾಕಿದರು. ಅವರಿಂದ ತಪ್ಪಿಸಿಕೊಂಡ ಕೆಲವು ಗೂರ್ಖಾ ಯೋಧರು ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದರು...
2. 1947ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದ ವೇಳೆ ಹಲವಾರು ಮುಸ್ಲಿಮ್ ಯೋಧರು ಭಾರತದ ಸೇನೆಯನ್ನು ತೊರೆದು, ಪಾಕ್ ಸೇನೆಯನ್ನು ಸೇರಿಕೊಂಡು, ಭಾರತೀಯ ಸೇನೆಯ ವಿರುದ್ಧ ಹೋರಾಡಿದರು. ಸರ್ದಾರ್ ಪಟೇಲರು ಈ ವಿಷಯವನ್ನು ದೇಶಕ್ಕೆ ತಿಳಿಸಬಯಸಿದ್ದರು. ಆದರೆ ಹಾಗೆ ಮಾಡದಂತೆ ಗಾಂಧೀಜಿಯವರು ಅವರನ್ನು ತಡೆದರು...
3. 1965ರ ಭಾರತ ಪಾಕ್ ಯುದ್ಧದ ವೇಳೆ ಮುಸ್ಲಿಮ್ ರೆಜಿಮೆಂಟ್ನ 30 ಮಂದಿ ಯೋಧರು ಪಾಕ್ ವಿರುದ್ಧ ಹೋರಾಡಲು ನಿರಾಕರಿಸಿದ್ದು ಮಾತ್ರವಲ್ಲ, ಪಾಕಿಸ್ತಾನವನ್ನು ಬೆಂಬಲಿಸಲಿಕ್ಕಾಗಿ ಶಸ್ತ್ರಾಸ್ತ್ರಗಳ ಸಹಿತ ಅಲ್ಲಿಗೆ ಹೊರಟುಹೋದರು. ಇದರಿಂದ ಭಾರತದ ಸೇನೆಗೆ ತುಂಬಾ ನಷ್ಟವಾಯಿತು. ಏಕೆಂದರೆ ನಮ್ಮ ಸೇನೆ ಅವರನ್ನು ನಂಬಿತ್ತು. ಇದೇ ಕಾರಣಕ್ಕಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮುಸ್ಲಿಮ್ ರೆಜಿಮೆಂಟ್ ಅನ್ನು ವಿಸರ್ಜಿಸಿ ಬಿಟ್ಟರು. ಇಷ್ಟೆಲ್ಲಾ ಆಗಿಯೂ ನಮ್ಮಲ್ಲಿ ಕೆಲವು ಮೌಲಾನಾಗಳು ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು ಮತ್ತು ಭಾರತ ನಮಗೂ ಸೇರಿದ ದೇಶವಾಗಿದೆ ಎಂದು ವಾದಿಸುತ್ತಿದ್ದಾರೆ.’’
ಸಂದೇಶದ ಕೊನೆಯಲ್ಲಿ, ‘‘ನೀವು ನಿಮ್ಮ ಮಾತೃ ಭೂಮಿಯನ್ನು ಪ್ರೀತಿಸುವವರಾಗಿದ್ದರೆ ಈ ಸಂದೇಶವನ್ನು ಎಲ್ಲೆಡೆಗೆ ತಲುಪಿಸಿ’’ ಎಂಬ ಮನವಿಯೂ ಇತ್ತು.
ಮುಸ್ಲಿಮರ ವಿರುದ್ಧ ವಿದ್ರೋಹದ ಆರೋಪ ಹೊರಿಸುವ ಮೂಲಕ ಸಮಾಜವನ್ನು ವಿಂಗಡಿಸಿ ದೇಶವನ್ನು ದುರ್ಬಲಗೊಳಿಸ ಬಯಸುವ ನೈಜ ದೇಶದ್ರೋಹಿಗಳ ಒಂದು ಪಡೆ ಎಲ್ಲೆಡೆ ಸಕ್ರಿಯವಾಗಿದೆ. ಭಾರತೀಯ ಸೇನೆಯ ಮುಸ್ಲಿಮ್ ಯೋಧರು ಸೇನೆಗೆ ದ್ರೋಹ ಮಾಡಿದ್ದಾರೆ ಎಂಬ ಘೋರ ಸುಳ್ಳನ್ನು ಹರಡುವ ಕೆಲಸವನ್ನು ಈ ಪಡೆಯವರು, ಈ ಹಿಂದೆಯೂ ಮಾಡಿದ್ದರು. ಇದೀಗ ಪಹಲ್ಗಾಮ್ ದುರಂತದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ತನ್ನ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದ ದಿನವೇ ಪ್ರಸ್ತುತ ದುಷ್ಟ ಶಕ್ತಿಗಳು ಈ ನಿರ್ದಿಷ್ಟ ವಿಷ ಸಂದೇಶವನ್ನು ಬಹಳ ಸಂಘಟಿತವಾದ ತಮ್ಮ ಮಿಥ್ಯ ಪ್ರಸಾರಕ ಜಾಲಗಳ ಮೂಲಕ ಲಕ್ಷಾಂತರ ಮಂದಿಗೆ ತಲುಪಿಸಿ ಬಿಟ್ಟರು. ಕ್ರಮೇಣ, ಇದೇ ತಾತ್ಪರ್ಯದ ಸಂದೇಶವು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ವಿಭಿನ್ನ ಭಾಷೆ, ವಿಭಿನ್ನ ಶೈಲಿಗಳಲ್ಲಿ ಮತ್ತು ವಿಭಿನ್ನ ಹೆಸರುಗಳಲ್ಲಿ ದೇಶದೆಲ್ಲೆಡೆ ಚಲಾವಣೆಯಲ್ಲಿರುವುದು ತಿಳಿಯಿತು. ಮೊದಲ ನೋಟಕ್ಕೆ ಇದು ಯಾರೋ ಒಬ್ಬ ಅಸ್ವಸ್ಥನ ಕುಚೇಷ್ಟೆ ಇರಬಹುದು ಎಂದನಿಸಿತು. ಆದರೆ ಈ ಕುರಿತು ತನಿಖೆ ನಡೆಸಿದಾಗ, ಇದು ಬಹಳ ಆಳವಾದ ಬೇರುಗಳಿರುವ, ರಾಷ್ಟ್ರ ಮಾತ್ರವಲ್ಲ ಅಂತರ್ರಾಷ್ಟ್ರೀಯ ಮಟ್ಟದ ಹೀನ ಸಂಚೊಂದರ ಭಾಗ ಮತ್ತು ಇದು ಹಲವು ವರ್ಷಗಳಿಂದ ಚಲಾವಣೆಯಲ್ಲಿದೆ ಎಂಬುದು ಮನವರಿಕೆಯಾಯಿತು. ಉದಾ:
2017 ನವೆಂಬರ್ 29ರಂದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ ನೈನ್ ಅವರ ಲೇಖನವೊಂದು ಪ್ರಕಟವಾಯಿತು. ಅವರು ಆ ತಮ್ಮ ಲೇಖನದಲ್ಲಿ ಇದೇ ತರದ ವದಂತಿಯೊಂದನ್ನು ಪ್ರಸ್ತಾಪಿಸಿ ಕಟುವಾಗಿ ವಿಮರ್ಶಿಸಿದ್ದರು. ಅವರ ಪ್ರಕಾರ, ಮುಸ್ಲಿಮ್ ಯೋಧರು ಭಾರತೀಯ ಸೇನೆಗೆ ದ್ರೋಹ ಮಾಡಿದ್ದಾರೆಂಬ ವಿಷ ವದಂತಿಯನ್ನು ಮೊದಲು ಹರಿಯ ಬಿಟ್ಟದ್ದು ಪಾಕಿಸ್ತಾನದಲ್ಲಿರುವ ಶತ್ರು ಶಕ್ತಿಗಳು, ಅದರಲ್ಲೂ ವಿಶೇಷವಾಗಿ, ಅಲ್ಲಿನ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್ (ISPR) ವಿಭಾಗದವರು. ಈ ಮೂಲಕ ಅವರ ಉದ್ದೇಶ, ಭಾರತೀಯ ಸೇನೆಯಲ್ಲಿ ಗೊಂದಲ ಮೂಡಿಸುವುದಾಗಿತ್ತು. ಭಾರತೀಯ ಸೇನೆಯಲ್ಲಿ 1965ರ ತನಕವೂ ಒಂದು ಮುಸ್ಲಿಮ್ ರೆಜಿಮೆಂಟ್ ಇತ್ತು ಮತ್ತು ಆ ವರ್ಷ ನಡೆದ (ಭಾರತ-ಪಾಕ್) ಯುದ್ಧದಲ್ಲಿ ಭಾರತದ 20,000 ಮುಸ್ಲಿಮ್ ಯೋಧರು ಪಾಕಿಸ್ತಾನದ ವಿರುದ್ಧ ಹೋರಾಡಲು ನಿರಾಕರಿಸಿದ್ದರಿಂದ ಮುಸ್ಲಿಮ್ ರೆಜಿಮೆಂಟ್ ಅನ್ನು ವಿಸರ್ಜಿಸಲಾಯಿತು ಎಂಬುದೇ ಮೂಲತಃ ಪಾಕ್ ಪ್ರಾಯೋಜಿತ ಮಿಥ್ಯ ವದಂತಿಯ ಸಾರಾಂಶ. ಆದರೆ ಭಾರತೀಯ ಸೇನೆಯಲ್ಲಿ ಎಂದಾದರೂ ಒಂದು ಪ್ರತ್ಯೇಕ ‘ಮುಸ್ಲಿಮ್ ರೆಜಿಮೆಂಟ್’ ಅಸ್ತಿತ್ವದಲ್ಲಿತ್ತು ಅನ್ನುವುದೇ ಅಪ್ಪಟ ಸುಳ್ಳು. 1965ರಲ್ಲಂತೂ ಅಂತಹ ಯಾವುದೇ ರೆಜಿಮೆಂಟ್ ಖಂಡಿತ ಇರಲಿಲ್ಲ. ಭಾರತೀಯ ಸೇನೆಯ ಮುಸ್ಲಿಮ್ ಯೋಧರು, ಹಲವು ವರ್ಗಗಳಿರುವ ಮಿಶ್ರ ರೆಜಿಮೆಂಟ್ಗಳ ಸದಸ್ಯರಾಗಿಯೇ ತಮ್ಮ ಅಪ್ರತಿಮ ನಿಷ್ಠೆ, ಬದ್ಧತೆ ಮತ್ತು ಶೌರ್ಯವನ್ನು ಮೆರೆದಿದ್ದಾರೆ. 1965ರ ಯುದ್ಧದಲ್ಲಿ ಹವಿಲ್ದಾರ್ ಅಬ್ದುಲ್ ಹಮೀದ್ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್ ಪಡೆಗಳ ವಿರುದ್ಧ ಮೆರೆದ ತ್ಯಾಗ ಮತ್ತು ಸಾಹಸ ಆ ಕಾಲದಲ್ಲೇ ದೇಶಾದ್ಯಂತ ಒಂದು ದಂತಕತೆಯಾಗಿತ್ತು. ಅವರು ಆ ಯುದ್ಧದಲ್ಲಿ ಪಾಕಿಸ್ತಾನದ ಕನಿಷ್ಠ ನಾಲ್ಕು ಯುದ್ಧ ಟ್ಯಾಂಕ್ ಗಳನ್ನು ನಾಶಮಾಡಿದ್ದರು. ಅದಕ್ಕಾಗಿ ಅವರಿಗೆ (ಭಾರತೀಯ ಸೇನೆಯ ಪರಮೋಚ್ಚ ಗೌರವ) ‘ಪರಮವೀರ ಚಕ್ರ’ ವನ್ನು ಮರಣೋತ್ತರವಾಗಿ ನೀಡಲಾಯಿತು. ಇಂದು ಜನರು ಅವರನ್ನು ನೆನಪಿಸುವುದು ಕಡಿಮೆ. ಹಾಗೆಯೇ ಭಾರತೀಯ ಸೇನೆಯಲ್ಲಿ ಅಸಾಮಾನ್ಯ ಸೇವೆಸಲ್ಲಿಸಿದ ಮೇಜರ್ ಮುಹಮ್ಮದ್ ಝಕೀ (ಮುಂದೆ ಅವರು ಲೆಫ್ಟಿನೆಂಟ್ ಜನರಲ್ ಆದರು) ಮತ್ತು ಮೇಜರ್ ಅಬ್ದುಲ್ ರಫೀ ಅವರಿಗೆ ‘ವೀರಚಕ್ರ’ ಪ್ರಶಸ್ತಿಯ ಗೌರವ ಪ್ರಾಪ್ತವಾಯಿತು. (ಭಾರತೀಯ ರಕ್ಷಣಾ ಪಡೆಗಳಲ್ಲಿ ವೀರ ಚಕ್ರ ಎಂಬುದು, ಪರಮ ವೀರ ಚಕ್ರ ಮತ್ತು ಮಹಾವೀರ ಚಕ್ರದ ಬಳಿಕ ಮೂರನೆಯ ಅತ್ಯುನ್ನತ ಪ್ರಶಸ್ತಿಯಾಗಿದೆ). ಈ ಪೈಕಿ, ಪ್ರಸ್ತುತ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದ ಮೇಜರ್ ಅಬ್ದುಲ್ ರಫೀ ಅವರ ವಿಶೇಷತೆಯೇನೆಂದರೆ 1965ರ ಯುದ್ಧದಲ್ಲಿ ಅವರು ಹೋರಾಡಿದ್ದು ಪಾಕ್ ಸೇನೆಯ ಮೇಜರ್ ಜನರಲ್ ಸಾಹಬ್ ಝಾದಾ ಯಾಕೂಬ್ ಖಾನ್ ಅವರ ನೇತೃತ್ವದ ಸೇನಾ ಘಟಕದ ವಿರುದ್ಧ. ಪಾಕಿಸ್ತಾನದ ಆ ಮೇಜರ್ ಜನರಲ್ ಯಾಕೂಬ್ ಖಾನ್, ಪ್ರಸ್ತುತ ಭಾರತೀಯ ಯೋಧ ಮೇಜರ್ ಅಬ್ದುಲ್ ರಫೀ ಅವರ ಮಾವ!
ಹವಿಲ್ದಾರ್ ಅಬ್ದುಲ್ ಹಮೀದ್ ಅವರ ಕುರಿತಂತೆ ಇಲ್ಲೊಂದು ಸಣ್ಣ ಟಿಪ್ಪಣಿ ಅವಶ್ಯವಾಗಿದೆ. ಇದೇ ವರ್ಷ ಫೆಬ್ರವರಿ 18ರಂದು ‘ಹಿಂದುಸ್ತಾನ್ ಟೈಮ್ಸ್’ ನಲ್ಲಿ ವರದಿಯಾದ ಪ್ರಕಾರ, ಉತ್ತರಪ್ರದೇಶದ ಘಾಝಿಯಾಬಾದ್ ಜಿಲ್ಲೆಯ ಧಾಮೂಪುರ್ ಗ್ರಾಮದಲ್ಲಿ, ಪರಮವೀರಚಕ್ರ ಪ್ರಶಸ್ತಿ ವಿಜೇತ ಹವಿಲ್ದಾರ್ ಅಬ್ದುಲ್ ಹಮೀದ್ ಅವರು ಬಾಲ್ಯದಲ್ಲಿ ಕಲಿತ ಶಾಲೆ ಇದೆ. ಅದರ ಪ್ರವೇಶದ್ವಾರದಲ್ಲಿ ಹಲವು ದಶಕಗಳಿಂದ ‘ಶಹೀದ್ (ಹುತಾತ್ಮ) ಹಮೀದ್ ವಿದ್ಯಾಲಯ’ ಎಂಬ ದೊಡ್ಡ ಫಲಕವಿತ್ತು. ಇತ್ತೀಚೆಗೆ ಶಾಲೆಗೆ ಹೊಸದಾಗಿ ಪೈಂಟ್ ಹಚ್ಚುವ ವೇಳೆ ಆ ಫಲಕವನ್ನು ಕಿತ್ತುಹಾಕಿ ‘ಪಿಎಮ್ ಶ್ರೀ ಕಾಂಪೋಸಿಟ್ ಸ್ಕೂಲ್’ ಎಂಬ ಹೊಸ ಫಲಕವನ್ನು ಹಾಕಲಾಯಿತು. ಈ ಬಗ್ಗೆ ಅಬ್ದುಲ್ ಹಮೀದ್ ಅವರ ಬಂಧುಗಳು ಮತ್ತು ಊರವರ ಕಡೆಯಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬಳಿಕ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿ ಹೇಮಂತ್ ರಾವ್ ಅವರು ಮಧ್ಯಪ್ರವೇಶಿಸಿ ಹಳೆಯ ಫಲಕವನ್ನು ಮರುಸ್ಥಾಪಿಸಿದರು. ದೇಶಕ್ಕೆ ತಮ್ಮ ಕಡೆಯಿಂದ ದ್ವೇಷದ ಹೊರತು ಬೇರಾವ ಕೊಡುಗೆಯನ್ನೂ ನೀಡಿಲ್ಲದವರು ಈ ರೀತಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ವೀರಯೋಧರ ನೆನಪುಗಳನ್ನು ಅಳಿಸಲು ಹೊರಟಿದ್ದರಲ್ಲಿ ಅಚ್ಚರಿ ಇಲ್ಲ. ಏಕೆಂದರೆ ಆ ನೆನಪುಗಳು ಅವರು ಹರಿಯಬಿಡುವ ಘಾತಕ ಮಿಥ್ಯ ವದಂತಿಗಳು ಎಷ್ಟೇ ಪ್ರಬಲವಾಗಿದ್ದರೂ ಅವುಗಳನ್ನು ಟೊಳ್ಳಾಗಿಸಿ ಬಿಡುತ್ತವೆ.