ದುಬೈನಲ್ಲಿ ಶಾಹಿದ್ ಅಫ್ರಿದಿಗೆ ಕೇರಳ ಸಮುದಾಯದಿಂದ ಭವ್ಯ ಸ್ವಾಗತ; ವ್ಯಾಪಕ ಆಕ್ರೋಶ

PC: x.com/IndiaObserverX
ಹೊಸದಿಲ್ಲಿ: ದುಬೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕೇರಳ ಸಮುದಾಯದವರು ಪಾಕಿಸ್ತಾನಿ ಕ್ರಿಕೆಟ್ ಪಟು ಶಾಹೀದ್ ಅಫ್ರೀದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ಉಗ್ರರ ದಾಳಿ ಘಟನೆಯ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಿಸಿದ ಸಂದರ್ಭದಲ್ಲಿ ಆಫ್ರೀದಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, ಅವರಿಗೆ ಆತಿಥ್ಯ ನೀಡಿದ್ದನ್ನು ವ್ಯಾಪಕವಾಗಿ ಟೀಕಿಸಿದ್ದಾರೆ.
ಕೇರಳ ಸಮುದಾಯದವರು ಸಮಾರಂಭವೊಂದರಲ್ಲಿ ಆಫ್ರೀದಿಯವರನ್ನು ಭವ್ಯವಾಗಿ ಸ್ವಾಗತಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. "ಭಾರತದ ಕೇರಳವನ್ನು ಮತ್ತು ಅಲ್ಲಿನ ಆಹಾರವನ್ನು ನಾನು ಬಹಳಷ್ಟು ಇಷ್ಟಪಡುತ್ತೇನೆ" ಎಂದು ಅಫ್ರೀದಿ ಸಮಾರಂಭದಲ್ಲಿ ನುಡಿದಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಪ್ರಬಲ ಭಾರತ ವಿರೋಧಿ ನಿಲುವು ಹೊಂದಿದ ಕಾರಣಕ್ಕೆ ಆಫ್ರೀದಿಗೆ ಸ್ವಾಗತ ನೀಡಿರುವ ಬಗ್ಗೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.
ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಆಫ್ರೀದಿ, "ಭಾರತದಲ್ಲಿ ಪಟಾಕಿ ಸಿಡಿದರೂ ಪಾಕಿಸ್ತಾನದ ಬೆಟ್ಟು ಮಾಡಲಾಗುತ್ತಿದೆ. 8 ಲಕ್ಷ ಮಂದಿಯ ಪ್ರಬಲ ಸೇನೆ ಕಾಶ್ಮೀರದಲ್ಲಿದೆ. ಮತ್ತೂ ಜನರಿಗೆ ಭದ್ರತೆ ನೀಡಲು ಸಾಧ್ಯವಾಗದೇ ಇಂಥ ಘಟನೆ ನಡೆದಿದ್ದರೆ ನೀವು ಅಸಮರ್ಥರು; ನಿರುಪಯುಕ್ತ ಎಂದು ಹೇಳಬೇಕಾಗುತ್ತದೆ" ಎಂದು ಹೇಳಿಕೆ ನೀಡಿದ್ದರು.
"ಇದು ನಾಚಿಕೆಗೇಡು; ಹತಾಶ ಕೇರಳಿಗರು ಭಾರತ ವಿರೋಧಿ ಪಾಕಿಸ್ತಾನಿಯನ್ನು ಬೂಮ್ ಬೂಮ್ ಎಂದು ಸ್ವಾಗತಿಸಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ನೆಟ್ಟಿಗರು ಎಕ್ಸ್ ಹ್ಯಾಂಡಲ್ ನಲ್ಲಿ ವಿಡಿಯೊ ತುಣುಕು ಹಂಚಿಕೊಂಡಿದ್ದಾರೆ.
"ದೇಶಪ್ರೇಮ ಸಿಕ್ಸ್ಗೆ ಹೋಗಿದೆ; ಎಂಥ ನಾಚಿಕೆಗೇಡು; ಅವರಿಂದ ಒಳ್ಳೆಯದು ನಿರೀಕ್ಷಿಸುತ್ತೇವೆ" ಎಂದು ಮತ್ತೊಬ್ಬರು ಜಾಲತಾಣದಲ್ಲಿ ಹೇಳಿದ್ದಾರೆ. "ನೀವು ಎಷ್ಟರ ಮಟ್ಟಿಗೆ ದೇಶಕ್ಕೆ ಅನಿಷ್ಠೆ ತೋರಬಹುದು..ಸುಕ್ಷಿತರಿಂದ ಕಲಿಯಿರಿ... ಅಗೌರವ", "ಅವರು ಭಾರತ ಮೂಲದವರಲ್ಲವೇ!! ಇದು ನಡೆದಿರುವುದು ನಾಚಿಕೆಗೇಡು" ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.