ಭ್ರಷ್ಟಾಚಾರ ತನಿಖೆಯೇ ಭ್ರಷ್ಟಾಚಾರಕ್ಕೆ ಕಾರಣವಾದರೆ?

Photo: Facebook/ED
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡತೊಡಗಿದರೆ ಅದು ಹೇಗೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ ಎನ್ನುವುದಕ್ಕೆ ಈ.ಡಿ.(ಜಾರಿ ನಿರ್ದೇಶನಾಲಯ)ಯ ಸದ್ಯದ ಸ್ಥಿತಿ ಅತ್ಯುತ್ತಮ ಉದಾಹರಣೆಯಾಗಿದೆ. ಇಂದು ಭ್ರಷ್ಟರ ವಿರುದ್ಧ ತನಿಖೆ ನಡೆಸಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾಗಿದ್ದ ಈ.ಡಿ.ಯು ತಾನೇ ಪದೇ ಪದೇ ಕಟಕಟೆಯಲ್ಲಿ ನಿಲ್ಲುವ ಮೂಲಕ ಸುದ್ದಿಯಲ್ಲಿದೆ. ನಾಲ್ದೆಸೆಗಳಿಂದ ಈ.ಡಿ. ಟೀಕೆಗಳಿಗೆ, ಖಂಡನೆಗಳಿಗೆ, ತಪರಾಕಿಗಳಿಗೆ ಗುರಿಯಾಗುತ್ತಿದೆ. ವಿವಿಧೆಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಭ್ರಷ್ಟ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ನಿರ್ದೇಶನಾಲಯದ ಅಧಿಕಾರಿಗಳೇ ಬಂಧನಕ್ಕೊಳಗಾಗಿ ಮಾಧ್ಯಮಗಳ ಮುಖಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಈ.ಡಿ. ಭ್ರಷ್ಟಾಚಾರದ ವಿರುದ್ಧ ನಡೆಸಿದ ಎಲ್ಲ ತನಿಖೆಗಳು ಪ್ರಶ್ನಾರ್ಹವಾಗುತ್ತಿವೆ.ಕೆಲವೊಮ್ಮೆ ಅದು ನಿಜವಾದ ಭ್ರಷ್ಟರಿಗೆ ಬಲೆ ಬೀಸಿದರೂ, ಜನರು ಅನುಮಾನದಿಂದಲೇ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರೀಂಕೋರ್ಟ್ ಈ.ಡಿ.ಯ ಕುರಿತಂತೆ ಭ್ರಮನಿರಸನಕ್ಕೊಳಗಾಗಿದೆ.
ತಮಿಳುನಾಡು ಸರಕಾರದ ಒಡೆತನದ ಮದ್ಯ ಮಾರಾಟ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ನಡೆಸಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಗೆ ಸುಪ್ರೀಂಕೋರ್ಟ್ ಇದೀಗ ತಡೆಯಾಜ್ಞೆ ವಿಧಿಸಿದೆ. ಮಾತ್ರವಲ್ಲ, ‘‘ತನಿಖಾ ಸಂಸ್ಥೆಯು ತನ್ನ ಎಲ್ಲ ಎಲ್ಲೆಗಳನ್ನು ಮೀರಿದೆ. ಮತ್ತು ಒಕ್ಕೂಟ ವ್ಯವಸ್ಥೆಯನ್ನೇ ಉಲ್ಲಂಘಿಸಿದೆ’’ ಎಂದು ಈ ಸಂದರ್ಭದಲ್ಲಿ ಹೇಳಿದೆ. ತಮಿಳು ನಾಡು ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ನಡೆಯುತ್ತಿರುವ ತಿಕ್ಕಾಟ ಇಂದು ನಿನ್ನೆಯದಲ್ಲ. ಇದು ನೇರವಾಗಿ ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮಗಳನ್ನು ಬೀರುತ್ತಾ ಬಂದಿದೆ. ಜೊತೆಗೇ ಸುಪ್ರೀಂಕೋರ್ಟ್ ಮತ್ತು ರಾಷ್ಟ್ರಪತಿಯ ನಡುವಿನ ಸಂಘರ್ಷದ ರೂಪವನ್ನು ಪಡೆದುಕೊಂಡಿದೆ. ಇದೀಗ ಸುಪ್ರೀಂಕೋರ್ಟ್ ಈ.ಡಿ.ಯ ವಿರುದ್ಧ ವ್ಯಕ್ತಪಡಿಸಿದ ಕಳವಳ ಕೂಡ, ಕೇಂದ್ರ ಮತ್ತು ರಾಜ್ಯದ ನಡುವಿನ ಸಂಘರ್ಷದ ಮುಂದುವರಿದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿಯೇ ‘‘ಈ.ಡಿ. ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿದೆ’’ ಎನ್ನುವ ಸುಪ್ರೀಂಕೋರ್ಟ್ನ ಹೇಳಿಕೆ ಮಹತ್ವವನ್ನು ಪಡೆಯುತ್ತದೆ. ಕೇಂದ್ರ ಸರಕಾರವು ಬಿಜೆಪಿಯೇತರ ಸರಕಾರಗಳನ್ನು ನಿಯಂತ್ರಿಸಲು ಈ.ಡಿ.ಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿವೆ. ಇದರ ವಿರುದ್ಧ ಈಗಾಗಲೇ ಪಶ್ಚಿಮಬಂಗಾಳ, ದಿಲ್ಲಿ, ಕೇರಳ, ಕರ್ನಾಟಕದ ವಿವಿಧ ಪಕ್ಷಗಳ ನಾಯಕರು ಧ್ವನಿಯೆತ್ತಿದ್ದಾರೆ. ಒಂದು ರೀತಿಯಲ್ಲಿ ರಾಜ್ಯ ಸರಕಾರಗಳ ಮೇಲೆ ಹಸ್ತಕ್ಷೇಪ ನಡೆಸುವುದಕ್ಕಾಗಿ ಈ.ಡಿ. ಸೇರಿದಂತೆ ಹಲವು ತನಿಖಾ ಸಂಸ್ಥೆಗಳನ್ನು ಬಹಿರಂಗವಾಗಿಯೇ ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆ ಮತ್ತು ಈ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ತನ್ನ ವಿರೋಧಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಇತ್ತೀಚೆಗೆ ಕರ್ನಾಟಕದಲ್ಲಿ ಮುಡಾ ಹಗರಣ ತನಿಖೆಯ ಸಂದರ್ಭದಲ್ಲಿ ಈ.ಡಿ. ಅನಗತ್ಯವಾಗಿ ಲೋಕಾಯುಕ್ತರ ತನಿಖೆಯಲ್ಲಿ ಮೂಗು ತೂರಿಸಲು ಹೊರಟಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಮಿಶ್ರಾರ ಅಧಿಕಾರದ ಅವಧಿ ಮೀರಿದ್ದರೂ ಕೇಂದ್ರ ಸರಕಾರ ಅದನ್ನು ವಿಸ್ತರಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಅಂತಿಮವಾಗಿ ಸುಪ್ರೀಂಕೋರ್ಟಿನ ಮೆಟ್ಟಿಲನ್ನು ಏರಿತ್ತು. ಸಂಜಯ್ ಮಿಶ್ರಾ ಅವರ ಅಧಿಕಾರವನ್ನು ವಿಸ್ತರಿಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಸರಕಾರ ಮತ್ತೆ ಮತ್ತೆ ಅವರ ಅವಧಿಯನ್ನು ವಿಸ್ತರಿಸಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಇದಕ್ಕೆ ತಡೆ ಹಾಕಿದ ಪರಿಣಾಮವಾಗಿ ಸರಕಾರ ಅನಿವಾರ್ಯವಾಗಿ ಮಿಶ್ರಾ ಅವರನ್ನು ಬದಲಿಸಬೇಕಾಗಿ ಬಂತು. ಮಿಶ್ರಾ ಅವರ ಅವಧಿ ಮುಂದೂಡಿಕೆಯನ್ನು ಸುಪ್ರೀಂಕೋರ್ಟ್ ತಪ್ಪು ಎಂದು ಹೇಳಿದೆಯಾದರೂ, ಈ ಸಂದರ್ಭದಲ್ಲಿ ಮಿಶ್ರಾ ನೇತೃತ್ವದಲ್ಲಿ ನಡೆದ ದಾಳಿಗಳು, ತನಿಖೆಗಳು ಮಾತ್ರ ಆಕ್ಷೇಪಕ್ಕೆ ಒಳಗಾಗಲಿಲ್ಲ. ಇಷ್ಟಕ್ಕೂ ಕೇಂದ್ರ ಸರಕಾರ ಯಾಕೆ ಅವಧಿ ಮುಗಿದರೂ ಮಿಶ್ರಾ ಅವರನ್ನು ಅಧಿಕಾರದಲ್ಲಿ ಮುಂದುವರಿಸಿತು? ಎನ್ನುವ ಪ್ರಶ್ನೆಯೇ ಜಾರಿ ನಿರ್ದೇಶನಾಲಯದ ತನಿಖೆಗಳ ಸ್ಥಿತಿಯನ್ನು ಹೇಳುತ್ತದೆ. ತನ್ನ ಮೂಗಿನ ನೇರಕ್ಕೆ ಕೆಲಸ ನಿರ್ವಹಿಸುವ ನಿರ್ದೇಶಕ ಕೇಂದ್ರ ಸರಕಾರಕ್ಕೆ ಬೇಕಾಗಿತ್ತು. ಆ ಕಾರಣಕ್ಕಾಗಿಯೇ ಎರಡು ಬಾರಿ ಮಿಶ್ರಾ ಅವರ ಅವಧಿಯನ್ನು ಕೇಂದ್ರ ಸರಕಾರ ಅಕ್ರಮವಾಗಿ ವಿಸ್ತರಿಸಿತ್ತು.
ಕೇಂದ್ರ ಸರಕಾರ ಈ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಈ.ಡಿ. ಸಂಸ್ಥೆಯ ಹಲವು ಅಧಿಕಾರಿಗಳು ಸ್ವತಃ ಭ್ರಷ್ಟಾಚಾರ ಆರೋಪಿಗಳಾಗಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಕೇರಳದಲ್ಲಿ ಭ್ರಷ್ಚಾಚಾರ ನಿಗ್ರಹ ದಳವು ಈ.ಡಿ. ಅಧಿಕಾರಿಯ ವಿರುದ್ಧವೇ ಪ್ರಕರಣವನ್ನು ದಾಖಲಿಸಿ, ಆತನನ್ನು ಬಂಧಿಸಿದ ಬಳಿಕದ ಬೆಳವಣಿಗೆಗಳು ಆ ರಾಜ್ಯದಲ್ಲಿ ಬಹುದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಈ.ಡಿ. ಅಧಿಕಾರಿಗಳಿಂದ ಬ್ಲ್ಯಾಕ್ಮೇಲ್ಗೆ, ಲಂಚ ಬೇಡಿಕೆಗೆ ಒಳಗಾಗಿರುವ ದೊಡ್ಡ ಸಂಖ್ಯೆಯ ಜನರು ಇದೀಗ ಜಾರಿ ನಿರ್ದೇಶನಾಲಯದ ವಿರುದ್ಧವೇ ದೂರು ನೀಡಲು ಮುಂದೆ ಬರುತ್ತಿದ್ದಾರೆ. ಜಾರಿ ನಿರ್ದೇಶನಾಲಯವು ಮೊದಲು ನಿಯಮಿತವಾಗಿ ನೋಟಿಸ್ಗಳನ್ನು ಕಳುಹಿಸುತ್ತದೆ ಮತ್ತು ಆನಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮಧ್ಯವರ್ತಿಗಳ ಮೂಲಕ ದೊಡ್ಡ ಮೊತ್ತವನ್ನು ಸುಲಿಗೆ ಮಾಡುತ್ತದೆ ಎಂದು ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪೂರಕವಾಗಿ ಹಲವರು ಈಗಾಗಲೇ ತಮ್ಮ ದೂರುಗಳನ್ನೂ ಸಲ್ಲಿಸಿದ್ದಾರೆ. ಭ್ರಷ್ಟ ಈ.ಡಿ. ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸಂದರ್ಭದಲ್ಲಿ ಆರೋಪಿಗಳ ಅಸಹಾಯಕತೆಯನ್ನು ಈ.ಡಿ. ಅಧಿಕಾರಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ ಅಥವಾ ಕೆಲವು ರಾಜಕೀಯ ಪಕ್ಷಗಳ ನಿರ್ದೇಶನಗಳಂತೆ ದಾಳಿಗಳನ್ನು ನಡೆಸುತ್ತಾರೆ ಎನ್ನುವ ಆರೋಪಗಳಿಗೆ ಈ.ಡಿ. ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಯಾಕೆಂದರೆ, ದೇಶದ ಹಲವೆಡೆಗಳಲ್ಲಿ ಈ.ಡಿ. ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬೀಳುತ್ತಿದ್ದಾರೆ. ಸ್ವತಃ ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡು ಸುದ್ದಿಯಲ್ಲಿರುವ ತನಿಖಾ ಸಂಸ್ಥೆ ಈ ದೇಶದ ಭ್ರಷ್ಟಾಚಾರವನ್ನು ಎಷ್ಟರಮಟ್ಟಿಗೆ ನಿಗ್ರಹಿಸಬಹುದು? ಭ್ರಷ್ಟಾಚಾರ ತನಿಖೆಯ ಹೆಸರಿನಲ್ಲೇ ಭ್ರಷ್ಟಾಚಾರವನ್ನು ನಡೆಸುವ ಇಂತಹ ಒಂದು ತನಿಖಾ ಸಂಸ್ಥೆಯ ಅಗತ್ಯವಿದೆಯೆ? ಎನ್ನುವ ಪ್ರಶ್ನೆಯೆದ್ದಿದೆ. ಅದರ ಬದಲು ಈ.ಡಿ.ಯನ್ನು ಕೇಂದ್ರ ಸರಕಾರವು ತನ್ನ ಪಕ್ಷದ ಅಧಿಕೃತ ಘಟಕವಾಗಿ ಘೋಷಿಸಿಕೊಂಡು, ಭ್ರಷ್ಟಾಚಾರ ತನಿಖೆಗೆ ಇನ್ನೊಂದು ಸ್ವತಂತ್ರ ತನಿಖಾ ಸಂಸ್ಥೆಯನ್ನು ಸ್ಥಾಪಿಸುವುದು ವಾಸಿಯಲ್ಲವೆ? ಎಂದು ಜನರು ಕೇಳುವಂತಾಗಿದೆ.