ಕನ್ನಡವನ್ನು ತಮಿಳಿನ ವಿರುದ್ಧ ಎತ್ತಿಕಟ್ಟಲು ಹೊರಟ ಕಮಲ್

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು, ರೈಲ್ವೇ ಇಲಾಖೆಗಳು, ಹೊಟೇಲುಗಳಲ್ಲಿ ಕನ್ನಡ ವಿರೋಧಿ ಧೋರಣೆಗಳು ಹೆಚ್ಚುತ್ತಿವೆ. ಹಿಂದಿ ಗೊತ್ತಿಲ್ಲದ ಕನ್ನಡಿಗರು ಇಲ್ಲಿ ಅನ್ಯರಂತೆ ಕೀಳರಿಮೆಯಿಂದ ವ್ಯವಹರಿಸುವ ವಾತಾವರಣ ನಿರ್ಮಾಣವಾಗಿದೆ. ಕನ್ನಡದಲ್ಲಿ ಮಾತನಾಡಿದರೆ ಯಾವುದೋ ವಿದೇಶಿಯರನ್ನು ಕಂಡವರಂತೆ ವರ್ತಿಸುತ್ತಾ ‘ಕನ್ನಡ ಬರುವುದಿಲ್ಲ. ಹಿಂದಿಯಲ್ಲಿ ಮಾತನಾಡಿ’ ಎಂದು ಕನ್ನಡಿಗರಿಗೆ ಒತ್ತಾಯ ಮಾಡುವ ಪ್ರವೃತ್ತಿ ಹೆಚ್ಚುತ್ತಿವೆ. ‘ನಮಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ’’ ಎಂದರೆ ಅತ್ಯಂತ ನಿಕೃಷ್ಟವಾಗಿ ಅವರೊಂದಿಗೆ ವರ್ತಿಸುವ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಎಸ್ಬಿಐ ಶಾಖೆಯೊಂದರಲ್ಲಿ ಅದರ ಮ್ಯಾನೇಜರ್ ಒಬ್ಬರು ಕನ್ನಡದಲ್ಲಿ ವ್ಯವಹರಿಸಿದ ಗ್ರಾಹಕನೊಂದಿಗೆ ‘ಕನ್ನಡ ಬರುವುದಿಲ್ಲ ಹಿಂದಿಯಲ್ಲಿ ಮಾತನಾಡಿ’ ಎಂದು ದಬ್ಬಾಳಿಕೆ ನಡೆಸಿದ್ದೇ ಅಲ್ಲದೆ, ಹಿಂದಿಯಲ್ಲದೆ ಬೇರೆ ಭಾಷೆಯಲ್ಲಿ ವ್ಯವಹರಿಸುವುದಿಲ್ಲ ಎಂದು ಗ್ರಾಹಕರೊಂದಿಗೆ ಜಗಳಕ್ಕಿಳಿದರು. ಬ್ಯಾಂಕುಗಳು ಗ್ರಾಹಕರೊಂದಿಗೆ ಸೌಹಾರ್ದ ಸಂಬಂಧಗಳನ್ನು ಇಟ್ಟುಕೊಳ್ಳಬೇಕು. ಕಾರಣಾಂತರಗಳಿಂದ ಉತ್ತರ ಭಾರತದಿಂದ ವರ್ಗಾವಣೆಯಾಗಿ ಬಂದ ಅಧಿಕಾರಿಗಳೂ ಸ್ಥಳೀಯ ಭಾಷೆಯನ್ನು ಕಲಿಯುವ ಪ್ರಯತ್ನ ನಡೆಸಬೇಕೇ ಹೊರತು, ತನ್ನ ಭಾಷೆಯನ್ನು ಸ್ಥಳೀಯರು ಕಲಿಯಬೇಕು ಎಂದು ಬಯಸಬಾರದು. ಗ್ರಾಹಕರಿಂದ ಬ್ಯಾಂಕುಗಳೇ ಹೊರತು, ಬ್ಯಾಂಕುಗಳಿಂದ ಗ್ರಾಹಕರಲ್ಲ. ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು ಎನ್ನುವುದನ್ನು ಆರ್ಬಿಐ ನೀತಿಯೂ ಹೇಳುತ್ತದೆ. ಆದರೆ ಎಷ್ಟೋ ಅಧಿಕಾರಿಗಳು ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಕಲಿಯುವುದು ಸ್ಥಳೀಯರ ಕರ್ತವ್ಯ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿಯನ್ನು ಸ್ಥಳೀಯರ ಮೇಲೆ ಹೇರುವುದಕ್ಕಾಗಿ ಇಂತಹ ಸಿಬ್ಬಂದಿಯನ್ನು ಕೇಂದ್ರ ಸರಕಾರ ಪರೋಕ್ಷವಾಗಿ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳೂ ಇವೆ. ಇಂದು ಬ್ಯಾಂಕುಗಳು ಹಿಂದಿ ದಿನಾಚರಣೆಯನ್ನು ಆಚರಿಸುತ್ತವೆ. ದಿನಕ್ಕೊಂದು ಪದ ಎಂದು ಹಿಂದಿಯನ್ನು ಗ್ರಾಹಕರಿಗೆ ಕಲಿಸಲು ಹೊರಟಿವೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ದಿನಕ್ಕೊಂದು ಪದ ಎಂಬಂತೆ ಕನ್ನಡವನ್ನು ಕಲಿಸುವ ವ್ಯವಸ್ಥೆಯಾಗಬೇಕಾಗಿದೆ.
ವಿವಿಧ ಇಲಾಖೆಗಳ ಸಿಬ್ಬಂದಿ, ಹೋಟೆಲ್ ಮಾಲಕರ ವಿಷಯ ಪಕ್ಕಕ್ಕಿರಲಿ. ಭಾಷೆ, ಸಂಸ್ಕೃತಿಯ ಬಗ್ಗೆ ಮಾತನಾಡಬೇಕಾದಾಗ ಅತ್ಯಂತ ಎಚ್ಚರದಲ್ಲಿರಬೇಕಾಗಿರುವ ಸಂವೇದನಾ ಶೀಲರೆಂದು ಗುರುತಿಸಿಕೊಂಡಿರುವ ಕಲಾವಿದರೇ ಕನ್ನಡ ಭಾಷೆಯ ವಿಷಯದಲ್ಲಿ ಉಡಾಫೆಯ ಮಾತುಗಳನ್ನಾಡುತ್ತಿರುವುದು ಕಳವಳಕಾರಿಯಾಗಿದೆ. ಖ್ಯಾತ ಗಾಯಕ ಸೋನು ನಿಗಮ್ ಹಿಂದಿಯಲ್ಲಿ ಮಾರುಕಟ್ಟೆಯನ್ನು ಕಳೆದುಕೊಂಡಾಗ ಅವರನ್ನು ಕನ್ನಡ ಭಾಷೆ ಎತ್ತಿ ಹಿಡಿಯಿತು. ‘ಮುಂಗಾರು ಮಳೆ’ಯ ಹಾಡುಗಳ ಬಳಿಕ ಕನ್ನಡಿಗನಂತೆಯೇ ಇಲ್ಲಿನ ಜನರು ಆತನನ್ನು ನಡೆಸಿಕೊಂಡರು. ಆತನ ಹಾಡುಗಳಿಗೆ ಮುಗಿ ಬಿದ್ದರು. ಕನ್ನಡದ ಉಚ್ಚಾರದಲ್ಲಿ ತಪ್ಪುಗಳಿದ್ದರೂ ಆತನ ಮಧುರ ಕಂಠಕ್ಕಾಗಿ ಅವುಗಳನ್ನು ಸಹಿಸಿಕೊಂಡು ಆತನನ್ನು ಬೆಳೆಸಿದರು. ಆದರೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ಕನ್ನಡದ ಹಾಡುಗಳಿಗಾಗಿ ಬೇಡಿಕೆಯಿಟ್ಟ ಅಭಿಮಾನಿಗಳನ್ನು ಅದೇ ವೇದಿಕೆಯಲ್ಲಿ ಸೋನುನಿಗಂ ‘ಉಗ್ರಗಾಮಿ’ಗಳಿಗೆ ಹೋಲಿಸಿದರು. ಇದು ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ತನ್ನನ್ನು ಬೆಳೆಸಿದ ಅಭಿಮಾನಿಗಳು ಕರ್ನಾಟಕದ ನೆಲದಲ್ಲಿ ಕನ್ನಡದ ಹಾಡುಗಳಿಗೆ ಬೇಡಿಕೆಯಿಟ್ಟರೆ ಅದರಲ್ಲಿ ಉಗ್ರವಾದವನ್ನು ಕಾಣಲು ಸೋನು ನಿಗಮ್ಗೆ ಹೇಗೆ ಸಾಧ್ಯವಾಯಿತು? ಹಿಂದಿಯ ಕುರಿತಂತೆ ಆತನಿಗಿರುವ ಮೇಲರಿಮೆ, ಕನ್ನಡ ಭಾಷೆಯ ಬಗ್ಗೆ ಇರುವ ಹಗುರ ಅಭಿಪ್ರಾಯಗಳೇ ಆತನನ್ನು ಅಂತಹ ಮಾತುಗಳನ್ನಾಡಲು ಪ್ರೇರೇಪಿಸಿತು. ಇದನ್ನು ಕನ್ನಡಿಗರು ಒಂದಾಗಿ ಪ್ರತಿಭಟಿಸಿದ ಬಳಿಕ ವಿಷಾದದ ಮಾತುಗಳನ್ನಾಡಿದರೂ, ತಪ್ಪಿ ಆಡಿದ ಮಾತುಗಳಿಗೆ ಕ್ಷಮೆಯಾಚನೆಯನ್ನು ಮಾಡಲೇ ಇಲ್ಲ.
ಇದೀಗ ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ ‘ಥಗ್ ಲೈಫ್’ ಸಿನೆಮಾ ಬಿಡುಗಡೆಯಾಗುವ ಹೊತ್ತಿಗೆ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುವಾಗಲು ಹೊರಟಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡುತ್ತಾ, ತಮಿಳಿನಿಂದ ಕನ್ನಡ ಹುಟ್ಟಿತು ಎನ್ನುವ ಉಡಾಫೆಯ ಹೇಳಿಕೆಯನ್ನು ಅವರು ನೀಡಿದರು. ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎನ್ನುವುದನ್ನು ಹೇಳಲು ಅವರು ಭಾಷಾ ವಿದ್ವಾಂಸರಲ್ಲ. ‘ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡಲು ಸಮರ್ಥರಲ್ಲ’ ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಇಷ್ಟು ಗೊತ್ತಿದ್ದ ಮೇಲೂ ಕನ್ನಡ ಯಾವ ಭಾಷೆಯಿಂದ ಹುಟ್ಟಿತು ಎನ್ನುವ ಸಂಶೋಧನೆಯನ್ನು ಆ ಸಮಾರಂಭದಲ್ಲಿ ಯಾಕೆ ಮಂಡಿಸಿದರು? ಹೇಳಿಕೆ ವಿವಾದವಾದ ಬಳಿಕ, ಅದನ್ನು ಸಮರ್ಥಿಸಿಕೊಳ್ಳುತ್ತಾ ‘ಆ ಮಾತನ್ನು ನಾನು ಪ್ರೀತಿಯಿಂದ ಆಡಿದ್ದು, ಪ್ರೀತಿ ಎಂದೂ ಕ್ಷಮೆ ಕೇಳುವುದಿಲ್ಲ’ ಎಂದು ಸೆಗಣಿ ಸಾರಿಸಲು ನೋಡಿದರು. ನಿಜಕ್ಕೂ ಅವರು ಕನ್ನಡದ ಮೇಲಿನ ಪ್ರೀತಿಯಿಂದ ಆಕಸ್ಮಿಕವಾಗಿ ಆಡಿದ ಮಾತು ಅದಾಗಿದ್ದರೆ, ಕನ್ನಡಿಗರಿಗೆ ನೋವಾಗಿದೆ ಎನ್ನುವುದು ಗೊತ್ತಾದಾಕ್ಷಣ ಕ್ಷಮೆಯಾಚಿಸುತ್ತಿದ್ದರು. ಕ್ಷಮೆಯಾಚಿಸುವುದಿಲ್ಲ ಎನ್ನುವ ಅವರ ಉತ್ತರವೇ, ಅವರ ಹೇಳಿಕೆಯ ಹಿಂದಿರುವ ದುರುದ್ದೇಶವನ್ನು ಮತ್ತು ಅವರ ದಾರ್ಷ್ಟ್ಯವನ್ನು ಪ್ರಕಟಪಡಿಸುತ್ತದೆ.
ಹಿಂದಿಯ ಸರ್ವಾಧಿಕಾರವನ್ನು ಕನ್ನಡ ಭಾಷೆ ಮಾತ್ರವಲ್ಲ ತಮಿಳು ಭಾಷೆಯೂ ಸವಾಲಾಗಿ ತೆಗೆದುಕೊಂಡಿದೆ. ಹಿಂದಿ ಹೇರಿಕೆಯ ವಿರುದ್ಧದ ಹೋರಾಟದಲ್ಲಿ ಕನ್ನಡ ಮತ್ತು ತಮಿಳು ಭಾಷೆ ಜೊತೆಯಾಗಿ ಹೆಜ್ಜೆ ಇಡುತ್ತಿವೆ. ಇಂತಹ ಹೊತ್ತಿನಲ್ಲಿ, ನಟ ಕಮಲ್ ಹಾಸನ್ ಅವರು ಕನ್ನಡವನ್ನು ಉದ್ದೇಶಪೂರ್ವಕವಾಗಿ ತಮಿಳಿನ ವಿರುದ್ಧ ಎತ್ತಿಕಟ್ಟಲು ಯತ್ನಿಸಿದ್ದಾರೆ. ಇದು ಕಿಡಿಗೇಡಿತನದಿಂದ ಕೂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾವಿದನಾಗಿ ಕಮಲ್ ಹಾಸನ್ ತನ್ನ ಮಾಂತ್ರಿಕತೆಯನ್ನು ಎಂದೋ ಕಳೆದುಕೊಂಡಿದ್ದಾರೆ. ವಿಶ್ವರೂಪಂ ಬಳಿಕ ಅವರ ಚಿತ್ರಗಳು ಸಾಲುಸಾಲಾಗಿ ಸೋತಿವೆ. ವಿವಾದಗಳ ಮೂಲಕ ತನ್ನ ಸಿನೆಮಾಗಳನ್ನು ಚಿತ್ರಮಂದಿರಗಳಲ್ಲಿ ಓಡಿಸುವ ವಿಫಲ ಪ್ರಯತ್ನವನ್ನು ಅವರು ನಡೆಸುತ್ತಾ ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಕಲಾವಿದನಿಗಿಂತ ರಾಜಕಾರಣಿಯಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಯನ್ನು ಪ್ರವೇಶಿಸುವ ತಯಾರಿಯಲ್ಲಿರುವ ಕಮಲ್ ಹಾಸನ್ ತನ್ನ ಹೊಸ ವಿವಾದದ ಮೂಲಕ ತಮಿಳು ಭಾಷಿಗರನ್ನು ಮೆಚ್ಚಿಸುವ ಪ್ರಯತ್ನದಲ್ಲಿರುವಂತೆ ಕಾಣುತ್ತಿದೆ. ಅಷ್ಟೇ ಅಲ್ಲ, ತನ್ನ ಹೊಸ ಚಿತ್ರಕ್ಕೆ ಈ ಮೂಲಕ ಪ್ರಚಾರಕೊಡುವ ದುರುದ್ದೇಶವನ್ನು ಅವರು ಹೊಂದಿರುವಂತಿದೆ. ಕನ್ನಡ, ತಮಿಳು ಎರಡೂ ದ್ರಾವಿಡ ಭಾಷೆಗಳು. ತಮ್ಮವೇ ಆದ ಸ್ವಂತಿಕೆಯನ್ನು, ಪ್ರಾಚೀನತೆಯನ್ನು ಹೊಂದಿರುವ ಭಾಷೆಗಳು ಇವು. ಎರಡೂ ಭಾಷೆಗಳನ್ನು ಕೇಂದ್ರ ಸರಕಾರ ಶಾಸ್ತ್ರೀಯ ಭಾಷೆಯಾಗಿ ಗುರುತಿಸಿದೆ. ದ್ರಾವಿಡ ಅಸ್ಮಿತೆಯ ಬಗ್ಗೆ ಒಂದಿಷ್ಟು ಅರಿವು ಇದ್ದಿದ್ದರೆ, ತಮಿಳು ಮೊದಲೋ, ಕನ್ನಡ ಮೊದಲೋ ಎನ್ನುವ ಚರ್ಚೆಗೆ ಅವರು ನಾಂದಿ ಹಾಡುತ್ತಿರಲಿಲ್ಲ. ಹಾಗೆ ನೋಡಿದರೆ ಕಮಲ್ ಹಾಸನ್ ಅವರಿಗೆ ದ್ರಾವಿಡ ಚಳವಳಿಯ ಬಗ್ಗೆ, ಪೆರಿಯಾರ್ ಚಿಂತನೆಗಳ ಬಗ್ಗೆಯೇ ಅಸಹನೆಯಿದೆ. ಈ ಹಿಂದೆ ತನ್ನ ‘ದಶಾವತಾರಂ’ ಚಿತ್ರದಲ್ಲಿ ಈ ಅಸಹನೆಯನ್ನು ಸ್ಪಷ್ಟವಾಗಿಯೇ ವ್ಯಕ್ತಪಡಿಸಿದ್ದರು. ಶೈವ ಚಿಂತನೆಯನ್ನು ಅವಹೇಳನ ಮಾಡಿ, ವೈಷ್ಣವ ಚಿಂತನೆಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನೂ ಆ ಚಿತ್ರದಲ್ಲಿ ಮಾಡಿದ್ದರು. ಮುಂದೊಂದು ದಿನ ಇದೇ ಕಮಲ್ ಹಾಸನ್ ಅವರು ತಮಿಳು, ಕನ್ನಡ ಎರಡೂ ಸಂಸ್ಕೃತದಿಂದ ಹುಟ್ಟಿತು ಎನ್ನುವ ಸಂಶೋಧನೆಯನ್ನು ಮುಂದಿಟ್ಟರೂ ಅಚ್ಚರಿಯಿಲ್ಲ. ತನ್ನ ಅಗ್ಗದ ರಾಜಕೀಯಕ್ಕಾಗಿ ಕನ್ನಡ ಭಾಷೆಯ ಕುರಿತು ವೇದಿಕೆಯಲ್ಲಿ ಹಗುರವಾಗಿ ಮಾತನಾಡಿದ ಕಮಲ್ ಹಾಸನ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ಅವರ ಹೊಸ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಕನ್ನಡಿಗರು ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಹೀನಾಯವಾಗಿ, ಹಗುರವಾಗಿ ಮಾತನಾಡುವ ಧೈರ್ಯವನ್ನು ಇನ್ನೊಮ್ಮೆ ಯಾವುದೇ ಕಲಾವಿದರು ಪ್ರದರ್ಶಿಸಬಾರದು.