ಇದು ರಾಷ್ಟ್ರಪತಿಗಳನ್ನು ದುರ್ಬಳಕೆ ಮಾಡಿದಂತಲ್ಲವೇ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರ ಇರಬೇಕೆಂದು ಬಯಸುವುದು ಹಾಗೂ ಭಿನ್ನ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ರಾಜ್ಯಪಾಲರ ಮೂಲಕ ಕಿರಿಕಿರಿ ಉಂಟು ಮಾಡುವುದು ಕಳೆದ ಹತ್ತು ವರ್ಷಗಳಿಂದ ಸಾಮಾನ್ಯವಾಗಿದೆ.ಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳದ ನಿರಂಕುಶ ಸರ್ವಾಧಿಕಾರಿ ಮನೋಭಾವದ ಶಕ್ತಿಗಳು ಮಾತ್ರ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತವೆ. ಉದಾಹರಣೆಗೆ ತಮಿಳುನಾಡಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ವಿರುದ್ಧ ಹಗೆ ಸಾಧಿಸುತ್ತಿರುವ ಅಲ್ಲಿನ ರಾಜ್ಯಪಾಲ ರವಿ ಅವರ ಮೂಲಕ ಕೇಂದ್ರ ಸರಕಾರ ಯಾವ ಪರಿ ಕಿರುಕುಳ ನೀಡುತ್ತಿದೆ ಎಂಬುದು ಹೊಸದೇನಲ್ಲ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕದೆ ತಮ್ಮ ಬಳಿ ಇಟ್ಟುಕೊಂಡು ಕುಳಿತರು. ಪದೇ ಪದೇ ಮನವಿ ಮಾಡಿದರೂ ಸ್ಪಂದಿಸದಿದ್ದಾಗ ಅಲ್ಲಿನ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಸರಕಾರ ಕಳಿಸಿದ ವಿಧೇಯಕಕ್ಕೆ ಅಂಕಿತ ಹಾಕಲು ಹಾಗೂ ರಾಷ್ಟ್ರಪತಿಗಳಿಗೆ ಕಳಿಸಲು ಒಂದು ಕಾಲಮಿತಿ ಇರಬೇಕೆಂದು ರಾಜ್ಯಪಾಲರಿಗೆ ಸೂಚಿಸಿತು. ಸುಪ್ರೀಂ ಕೋರ್ಟಿನ ಈ ಕ್ರಮದಿಂದ ಕೇಂದ್ರ ಸರಕಾರ ಎಷ್ಟು ಗಾಬರಿಯಾಗಿದೆಯೆಂದರೆ ಉಪ ರಾಷ್ಟ್ರಪತಿಯ ಮೂಲಕ ಸುಪ್ರೀಂ ತೀರ್ಪಿನ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಡಿಸಿತು. ಕೆಲವು ಸಂಸದರು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಬಾಯಿಗೆ ಬಂದಂತೆ ಮಾತಾಡತೊಡಗಿದರು. ಇದು ಸಾಲದೆಂಬಂತೆ ಈಗ ರಾಷ್ಟ್ರ ಪತಿಗಳನ್ನೇ ಸುಪ್ರೀಂ ವಿರುದ್ಧ ತಿರುಗಿ ನಿಲ್ಲಿಸಲಾಗಿದೆ.
ರಾಜ್ಯ ಸರಕಾರಗಳ ವಿಧೇಯಕಗಳಿಗೆ ಅಂಕಿತ ಹಾಕುವುದಕ್ಕೆ ಕಾಲಮಿತಿಯೊಂದನ್ನು ನಿಗದಿಪಡಿಸಿ ಎಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರ ಕುರಿತು ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದಾರೆ. ಇದು ಅವರ ಮೂಲಕ ಕೇಂದ್ರ ಸರಕಾರ ಬರೆಸಿದ ಪತ್ರ ಎಂಬುದು ಚಿಕ್ಕ ಮಗುವಿಗೂ ಗೊತ್ತಾಗುತ್ತದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ 7 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಸುಪ್ರೀಂ ಕೋರ್ಟ್ಗೆ ರಾಷ್ಟ್ರಪತಿಗಳು ಬರೆದ ಪತ್ರದ ಬಗ್ಗೆ ಐಕ್ಯ ಪ್ರತಿರೋಧವನ್ನು ವ್ಯಕ್ತಪಡಿಸುವ ಅಗತ್ಯದ ಬಗ್ಗೆ ಮನವಿ ಮಾಡಿದ್ದಾರೆ. ಕರ್ನಾಟಕ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿಗಳಿಗೆ ಶನಿವಾರ ಪತ್ರವೊಂದನ್ನು ಬರೆದ ಸ್ಟಾಲಿನ್ ಸಂವಿಧಾನದ ಮೂಲಭೂತ ಸ್ವರೂಪಕ್ಕೆ, ಅಡಿಪಾಯಕ್ಕೆ ಧಕ್ಕೆಯಾಗುತ್ತಿರುವುದನ್ನು ಎಲ್ಲರೂ ಒಂದಾಗಿ ತಡೆಯಬೇಕೆಂದು ಕೇಳಿಕೊಂಡಿದ್ದಾರೆ.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೇಂದ್ರದ ಒಕ್ಕೂಟ ಸರಕಾರದ ಏಜೆಂಟರಂತೆ ವರ್ತಿಸುತ್ತಿರುವ ಕೆಲವು ರಾಜ್ಯಪಾಲರು ರಾಜ್ಯದ ಚುನಾಯಿತ ಸರಕಾರದ ವಿರುದ್ಧ ನಿರಂತರವಾಗಿ ಸಂಘರ್ಷ ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ತಮಿಳುನಾಡಿನ ರಾಜ್ಯಪಾಲ ರವಿ ಅವರು ಆಡಳಿತಕ್ಕೆ ಸಂಬಂಧಿಸಿದ ಹತ್ತು ವಿಧೇಯಕಗಳನ್ನು ಅನಿರ್ದಿಷ್ಟಾವಧಿಗೆ ತಡೆ ಹಿಡಿದಿದ್ದಾರೆ. ಇದು ತಪ್ಪು ಹಾಗೂ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆ ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ ದೊರಕಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಅದು ಹೇಳಿದೆ. ಸುಪ್ರೀಂ ಕೋರ್ಟಿನ ಈ ತೀರ್ಪಿನ ಬಗ್ಗೆ ಕೇಂದ್ರದ ಮೋದಿ ಸರಕಾರ ತನ್ನ ನಿಲುವನ್ನು ಹೇಳದೆ ಮೌನವಾಗಿದೆ. ಆದರೆ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟ್ಗೆ ಕೇಳಿರುವ 14 ಪ್ರಶ್ನೆಗಳನ್ನು ಗಮನಿಸಿದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರಕಾರ ಒಪ್ಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಸುಪ್ರೀಂ ಕೋರ್ಟ್ಗೆ ರಾಷ್ಟ್ರಪತಿಯವರು ಪತ್ರದ ಮೂಲಕ ಕೇಳಿರುವ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇದಕ್ಕೆ ರಾಷ್ಟ್ರಪತಿ ಅವರು ಅಂಕಿತ ಹಾಕಿರಬಹುದು, ಆದರೆ ಇವು ಕೇಂದ್ರ ಸರಕಾರ ರೂಪಿಸಿರುವ ಪ್ರಶ್ನಾವಳಿ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರಕಾರಗಳು ಅಂಗೀಕರಿಸುವ ವಿಧೇಯಕಗಳನ್ನು ರಾಜ್ಯಪಾಲರು ಈ ಹಿಂದಿನಂತೆ ತಡೆ ಹಿಡಿಯಲು ಇನ್ನು ಮುಂದೆ ಅವಕಾಶವಿಲ್ಲ. ಅದಷ್ಟೇ ಅಲ್ಲ, ರಾಷ್ಟ್ರಪತಿ ಅವರನ್ನು ತೀರ್ಪಿನ ವ್ಯಾಪ್ತಿಗೆ ತರಲಾಗಿದೆ. ಇದರಿಂದ ನಿರಂಕುಶ ಸರ್ವಾಧಿಕಾರದ ಪಿತ್ತ ನೆತ್ತಿಗೇರಿದ ಕೇಂದ್ರ ಸರಕಾರ ದಿಗಿಲುಗೊಂಡಿರುವುದು ಸ್ಪಷ್ಟವಾಗುತ್ತದೆ
ರಾಷ್ಟ್ರಪತಿಗಳ ಪತ್ರವನ್ನು ಸುಪ್ರೀಂ ಕೋರ್ಟ್ ಪರಾಮರ್ಶೆಗೊಳಪಡಿಸಬಹುದು.ಆದರೆ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮನ ಬಂದಂತೆ ವರ್ತಿಸುತ್ತಿದ್ದ ಹಾಗೂ ಸೂತ್ರಧಾರರು ಕುಣಿಸಿದಂತೆ ಕುಣಿಯುತ್ತಿದ್ದ ರಾಜ್ಯಪಾಲರಿಗೆ ಕಡಿವಾಣ ಹಾಕಿದಂತಾಗಿದೆ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಗೆ ಬಲ ಬಂದಂತಾಗಿದೆ. ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ರಾಜ್ಯಪಾಲರ ಹುದ್ದೆಗಿಂತ ಚುನಾಯಿತ ಸರಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ರಾಜ್ಯಪಾಲರಿಗೆ ಚುನಾಯಿತ ಸರಕಾರದ ಮೇಲೆ ಸವಾರಿ ಮಾಡುವಂತಹ ಪರಮಾಧಿಕಾರವಿಲ್ಲ ಎಂಬುದು ಖಚಿತವಾಗುತ್ತದೆ.
ವಿಧೇಯಕಗಳಿಗೆ ಅಂಕಿತ ಹಾಕುವ ಕುರಿತು ರಾಜ್ಯಪಾಲರಿಗೆ ಕಾಲಮಿತಿ ಹಾಕಿರುವ ತೀರ್ಪಿಗೆ ಮರುಪರಿಶೀಲನೆ ಮಾಡಲು ಕೇಂದ್ರ ಸರಕಾರವೇನು ನೇರವಾಗಿ ಅರ್ಜಿ ಹಾಕಿಲ್ಲ. ಆದರೆ ರಾಷ್ಟ್ರಪತಿ ಅವರ ಮೂಲಕ ಪ್ರಶ್ನಾವಳಿಗಳನ್ನು ಕಳಿಸಲಾಗಿದೆ. ರಾಷ್ಟ್ರಪತಿ ಅವರ ಪತ್ರದ ಬಗ್ಗೆ ತೀರ್ಪು ನೀಡಿರುವ ಪೀಠವೇ ವಿಚಾರಣೆ ನಡೆಸುತ್ತದೆ. ಸಾಮಾನ್ಯವಾಗಿ ಹಿಂದೆ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಬದಲಿಸುವುದಿಲ್ಲ ಹಾಗೂ ರಾಷ್ಟ್ರಪತಿ ಅವರು ಪತ್ರದ ಮೂಲಕ ಕೇಳಿರುವ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಉತ್ತರಿಸಬೇಕೆಂದೇನಿಲ್ಲ. ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವ ಕೇಂದ್ರದ ಬಿಜೆಪಿ ಸರಕಾರ ಸುಪ್ರೀಂ ಕೋರ್ಟ್ನ ತೀರ್ಪನ್ನು ಅಪ್ರಸ್ತುತಗೊಳಿಸುವ ಹೊಸ ಹುನ್ನಾರವನ್ನು ನಡೆಸಿದೆ. ರಾಷ್ಟ್ರಪತಿ ಅವರ ಪ್ರಶ್ನೆಗಳೇನೇ ಇರಲಿ ಇದರಿಂದ ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ತೀರ್ಪು ಬದಲಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಷ್ಟ್ರಪತಿ ಅವರ ಈ ಪ್ರಶ್ನೆಗಳು ರಾಜಕೀಯ ಪ್ರೇರಿತವಾಗಿರುವ ಸಂದೇಹ ಸ್ಪಷ್ಟವಾಗಿರುವುದರಿಂದ ಬಹುಶಃ ಸುಪ್ರೀಂ ಕೋರ್ಟ್ ಉತ್ತರಿಸಲು ಹೋಗುವುದಿಲ್ಲ. ಆದರೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದಂತೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ಹಾಗೂ ರಾಜ್ಯಗಳ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗಿರುವುದಂತೂ ನಿಜ. ಇಂತಹ ಸಂದರ್ಭದಲ್ಲಿ ಸಮಾನ ಮನಸ್ಕ ಪ್ರತಿಪಕ್ಷಗಳು, ಪ್ರಜಾಪ್ರಭುತ್ವವಾದಿ ಸಂಘಟನೆಗಳು ಒಟ್ಟುಗೂಡಿ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಹಾಗೂ ಸಂವಿಧಾನವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಾಗಿದೆ. ಅದೊಂದೇ ಉಳಿದ ದಾರಿಯಾಗಿದೆ.