ಮತ್ತೆ ಕೊರೋನ ಗುಮ್ಮ!

ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಹಲ್ಗಾಮ್ ಹತ್ಯಾಕಾಂಡ, ಆಪರೇಷನ್ ಸಿಂಧೂರ ಇವೆಲ್ಲದರ ಸಾಧಕ, ಬಾಧಕಗಳು ದೇಶಾದ್ಯಂತ ಚರ್ಚೆಯಲ್ಲಿರುವಾಗಲೇ ಆ ಚರ್ಚೆಯ ದಿಕ್ಕನ್ನು ಕೆಡಿಸುವ ರೀತಿಯಲ್ಲಿ ಮಾಧ್ಯಮಗಳು ಮತ್ತೆ ಕೊರೋನ ಸೋಂಕಿನ ಸಾವುಗಳ ಲೆಕ್ಕ ಹಾಕಲು ಶುರು ಹಚ್ಚಿದೆ. ಆಪರೇಷನ್ ಸಿಂಧೂರದಲ್ಲಿ ದೇಶಕ್ಕಾಗಿರುವ ಹಿನ್ನಡೆ, ಪಹಲ್ಗಾಮ್ ಭದ್ರತಾ ವೈಫಲ್ಯಗಳ ಕುರಿತಂತೆ ಜನರು ಪ್ರಶ್ನೆ ಎತ್ತುತ್ತಿದ್ದಂತೆಯೇ ಸರಕಾರ ‘‘ಶ್...ಕೊರೋನ ಬಂದಿದೆ...ಬಾಯಿ ಮುಚ್ಕೊಳ್ಳಿ... ಮಾಸ್ಕ್ ಹಾಕ್ಕೊಳ್ಳಿ’’ ಎನ್ನುತ್ತಿದೆ. ದಿಲ್ಲಿ, ಮುಂಬೈ, ಕೇರಳ ಸೇರಿದಂತೆ ವಿವಿಧೆಡೆಗಳಿಂದ ಕೊರೋನ ಸೋಂಕಿತರ ಸಂಖ್ಯೆ ಪ್ರಕಟವಾಗುತ್ತಿವೆ. ದಿಲ್ಲಿಯಲ್ಲಿ 100ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರ್ನಾಟಕದಲ್ಲೂ ಈಗಾಗಲೇ 100ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಮಾಧ್ಯಮಗಳು ಹೇಳುತ್ತಿವೆ. ಮಾಧ್ಯಮಗಳು ಕೊರೋನ ಪುಂಗಿ ಊದುತ್ತಿದ್ದಂತೆಯೇ ಸರಕಾರ ಅದಕ್ಕೆ ತಕ್ಕ ಹಾಗೆ ತಲೆದೂಗ ತೊಡಗಿದೆ. ಕೊರೋನವನ್ನು ಸೂಕ್ತ ಚಿಕಿತ್ಸೆಯ ಮೂಲಕ ಎದುರಿಸುವ ಸ್ಪಷ್ಟ ದಾರಿಗಳು ಇಲ್ಲದೇ ಇರುವುದರಿಂದ, ಸರಕಾರ ಎಂದಿನಂತೆಯೇ ಗಾಳಿಯಲ್ಲಿ ಕತ್ತಿ ಬೀಸುತಿದೆ. ಕೆಲವೆಡೆ ಮಾಸ್ಕ್ ಧರಿಸುವುದರ ಬಗ್ಗೆ ಸೂಚನೆಗಳು ಹೊರ ಬಿದ್ದಿವೆ. ಕೊರೋನ ಸೋಂಕು ಪರೀಕ್ಷೆಗಳೂ ಶುರುವಾಗಿವೆ. ರಾಜ್ಯದಲ್ಲೂ ಕೆಲವು ಸೂಚನೆ, ಎಚ್ಚರಿಕೆಗಳನ್ನು ಸರಕಾರ ಹೊರಡಿಸಿದೆ.
ಮಾಧ್ಯಮಗಳು ಈ ರೀತಿಯಲ್ಲಿ ಕೊರೋನದ ಲೆಕ್ಕಗಳನ್ನು ತೋರಿಸುತ್ತಾ ಜನರನ್ನು ಭಯಭೀತಗೊಳಿಸುವ ಪ್ರಕ್ರಿಯೆಗೆ ಆಸ್ಪತ್ರೆಗಳು ಮತ್ತು ಸರಕಾರ ಸಹಕರಿಸುತ್ತಿರುವುದು ಸರಿಯೇ ಎನ್ನುವ ಪ್ರಶ್ನೆ ಮತ್ತೆ ಎದ್ದಿದೆ. ಈ ಹಿಂದೆ, ಕೊರೋನಕ್ಕಿಂತಲೂ ಅದರ ಹೆಸರಿನಲ್ಲಿ ಹರಡಿದ ಭಯವೇ ಭಾರೀ ಸಾವುನೋವುಗಳಿಗೆ ಕಾರಣವಾಯಿತು. ಆರಂಭದಲ್ಲಿ ಸರಕಾರದ ನೇತೃತ್ವದಲ್ಲೇ ಕೊರೋನ ಪರೀಕ್ಷೆಗಳನ್ನು ನಡೆಸಿದ್ದು, ಕೊರೋನ ಸೋಂಕಿತರು ಆತಂಕದಿಂದ ಆಸ್ಪತ್ರೆಗಳಿಗೆ ಧಾವಿಸತೊಡಗಿದ್ದು, ಆಸ್ಪತ್ರೆಗಳಲ್ಲಿ ಎದುರಾದ ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿಗಳು ಸಾಂಕ್ರಾಮಿಕ ರೋಗದ ಭೀಕರತೆಯನ್ನು ಹೆಚ್ಚಿಸಿದವು. ಡಯಾಲಿಸಿಸ್, ಕ್ಯಾನ್ಸರ್, ಕ್ಷಯ ಮೊದಲಾದ ಮಾರಕ ರೋಗಗಳಿಂದ ತತ್ತರಿಸುತ್ತಿದ್ದ ರೋಗಿಗಳಿಗೆ ಸೂಕ್ತ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಸಿಗಲಿಲ್ಲ. ಇತರ ರೋಗಗಳಿಗೆ ಚಿಕಿತ್ಸೆ ನೀಡಬೇಕಾದರೆ ಕೊರೋನ ಪರೀಕ್ಷೆ ಕಡ್ಡಾಯ ಎಂಬ ಸೂಚನೆಯಿಂದಾಗಿಯೇ, ತಕ್ಷಣದ ಚಿಕಿತ್ಸೆ ಲಭಿಸದೆ ನೂರಾರು ಜನರು ಮೃತಪಟ್ಟರು. ಹಾಗೆ ಮೃತಪಟ್ಟವರನ್ನು ಕೊರೋನ ಸಂತ್ರಸ್ತರೆಂದೇ ಘೋಷಿಸಲಾಯಿತು. ಬೀದಿಬದಿಯಲ್ಲಿ ಬದುಕು ಸಾಗಿಸುತ್ತಿದ್ದ ಜನರನ್ನು, ಈ ದೇಶದ ಬಡವರನ್ನು ಕೊರೋನ ನಿರುದ್ಯೋಗ, ಬಡತನ, ಹಸಿವಿನ ರೂಪದಲ್ಲಿ ಕಾಡಿತೇ ಹೊರತು, ಸೋಂಕಿನ ರೂಪದಲ್ಲಿ ಅಲ್ಲ. ಕೊರೋನಕ್ಕೆ ಬಲಿಯಾದವರಲ್ಲಿ ಬಹುತೇಕರು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಸೇರಿದವರು. ಈ ದೇಶದ ಬಡವರು, ವಲಸೆ ಕಾರ್ಮಿಕರು ‘ಉದ್ಯೋಗ, ಆಹಾರ’ ಎಂದು ಹಾಹಾಕಾರ ಮಾಡುತ್ತಿದ್ದರೇ ಹೊರತು, ಲಸಿಕೆಗಾಗಿ ಚೀರಾಡುತ್ತಿರಲಿಲ್ಲ.
ಕೊರೋನಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುವ ಮೊದಲು, ಕೇಂದ್ರ ಸರಕಾರ ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗಿದೆ. ಮುಖ್ಯವಾಗಿ ಕೊರೋನ ಸೋಂಕಿತರು ಗುಣಮುಖರಾದರೆ ದೇಹ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಮತ್ತು ದೇಹ ಕೊರೋನವನ್ನು ಎದುರಿಸಲು ಶಕ್ತವಾಗಿರುತ್ತದೆ ಎಂದು ತಜ್ಞರು ಪದೇ ಪದೇ ಹೇಳಿಕೆಗಳನ್ನು ನೀಡಿದ್ದಾರೆ. ಇಷ್ಟಾಗಿಯೂ ಕೊರೋನ ಬಂದು ಗುಣಮುಖರಾದವರಿಗೂ ಸರಕಾರ ಬಲವಂತವಾಗಿ ಕೊರೋನ ಲಸಿಕೆಯನ್ನು ನೀಡಿತು. ‘ಬಲವಂತವಾಗಿ ಹೇರಿಕೆ ಮಾಡಿಲ್ಲ’ ಎಂದು ಸರಕಾರ ಹೇಳಿಕೊಂಡರೂ, ಬೇರೆ ಬೇರೆ ತಂತ್ರಗಳ ಮೂಲಕ ಕೊರೋನ ಲಸಿಕೆ ತೆಗೆದುಕೊಳ್ಳಬೇಕು ಎನ್ನುವಂತಹ ಅನಿವಾರ್ಯ ಸ್ಥಿತಿಯನ್ನು ಸರಕಾರ ಜನರ ಪಾಲಿಗೆ ಸೃಷ್ಟಿಸಿತು. ಜನರು ಲಸಿಕೆ ತೆಗೆದುಕೊಂಡ ದಾಖಲೆ ಅಂಕಿಅಂಶಗಳನ್ನು ಕೇಂದ್ರ ಸರಕಾರ ತನ್ನ ಸಾಧನೆಯಾಗಿ ಆಚರಿಸಿಕೊಂಡಿತು. ಇಷ್ಟೆಲ್ಲ ಆದ ಮೇಲೂ ಮತ್ತೆ ಹೇಗೆ ಕೊರೋನ ದೇಶದೊಳಗೆ ಕಾಲಿಟ್ಟಿದೆ? ಕೊರೋನ ಸೋಂಕಿತರು ತಮ್ಮ ಕೈಯಲ್ಲಿರುವ ಪ್ರಧಾನಿ ಮೋದಿಯವರ ಭಾವಚಿತ್ರ ಸಹಿತವಾದ ಲಸಿಕೆ ಪ್ರಮಾಣ ಪತ್ರವನ್ನು ಈಗ ಏನು ಮಾಡಬೇಕು? ಲಸಿಕೆಯನ್ನು ನೀಡಿ ದೇಶದ ಜನರ ಪ್ರಾಣವನ್ನು ಕಾಪಾಡಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿರುವ ಪ್ರಧಾನಿ ಮೋದಿಯವರೇ ಈ ಪ್ರಶ್ನೆಗೆ ಉತ್ತರಿಸಬೇಕು.
ಕೊರೋನ ಹೆಸರಿನಲ್ಲಿ ನಡೆದ ವೈದ್ಯಕೀಯ ಹಗರಣಗಳ ಪ್ರಾಮಾಣಿಕೆ ತನಿಖೆ ನಡೆದು ಕೊರೋನದ ಹೆಸರಿನಲ್ಲಿ ಯಾರ್ಯಾರು ಲೂಟಿ ಹೊಡೆದಿದ್ದಾರೆ ಎನ್ನುವುದು ಬಹಿರಂಗವಾಗಿದ್ದರೆ ಇಂದು ಮತ್ತೆ ಕೊರೋನ ಗುಮ್ಮ ಕಾಣಿಸಿಕೊಳ್ಳುತ್ತಿರಲಿಲ್ಲವೇನೋ. ನಿಜಕ್ಕೂ ಇಂದು ದೇಶದಲ್ಲಿ ಚರ್ಚೆಯಾಗಬೇಕಾಗಿರುವುದು ಕೊರೋನವಲ್ಲ, ಏಕಾಏಕಿ ಹೃದಯ ಸ್ತಂಭನದಿಂದ ಕುಸಿದು ಬಿದ್ದು ಸಾಯುತ್ತಿರುವ ಈ ದೇಶದ ಯುವಕರ ಬಗ್ಗೆ ಚರ್ಚೆಯಾಗಬೇಕಾಗಿದೆ. ಈ ಸಾವುಗಳ ಹಿಂದೆ ಕೊರೋನ ಲಸಿಕೆಯ ಕೈವಾಡವಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. 40 ವರ್ಷದೊಳಗಿನ ಯುವಕ, ಯುವತಿಯರು ಏಕಾಏಕಿ ಹೃದಯಾಘಾತದಿಂದ ಕುಸಿದು ಬೀಳುವುದು ದೇಶದ ಪಾಲಿಗೆ ಹೊಸತು. ಕೊರೋನ ಕಾಲದಲ್ಲಿ ನೀಡಿದ ಲಸಿಕೆಯ ದುಷ್ಪರಿಣಾಮಗಳನ್ನು ಇದೀಗ ದೇಶ ಅನುಭವಿಸುತ್ತಿದೆ ಎನ್ನುವ ಆರೋಪವನ್ನು ವೈದ್ಯಕೀಯ ತಜ್ಞರೇ ಮಾಡುತ್ತಿದ್ದಾರೆ. ಕೊರೋನ ಸೋಂಕಿನಿಂದ ಸತ್ತವರಿಗಿಂತ, ಲಸಿಕೆಯ ದುಷ್ಪರಿಣಾಮಗಳಿಂದ ಸತ್ತವರ ಸಂಖ್ಯೆಯೇ ಅಧಿಕವಿದೆ ಎನ್ನಲಾಗುತ್ತಿದೆ. ಈ ಸಾವುಗಳ ಕಾರಣದಿಂದಾಗಿ ಎದ್ದಿರುವ ಪ್ರಶ್ನೆಗಳನ್ನು ಮುಚ್ಚಿ ಹಾಕುವುದಕ್ಕಾಗಿ ಮತ್ತೆ ಕೊರೋನ ಬಗ್ಗೆ ಗದ್ದಲ ಎಬ್ಬಿಸಲಾಗುತ್ತಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.
ಬೃಹತ್ ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಝೆನೆಕ ಬ್ರಿಟನ್ ನ್ಯಾಯಾಲಯದಲ್ಲಿ ಕೋವಿಶೀಲ್ಡ್ನ ಮಾರಕ ಅಡ್ಡ ಪರಿಣಾಮಗಳಿಗಾಗಿ ಕಳೆದ ವರ್ಷ ವಿಷಾದ ವ್ಯಕ್ತ ಪಡಿಸಿದೆ. ‘ಈ ಲಸಿಕೆಯು ರಕ್ತದ ಮಹತ್ವದ ಭಾಗವಾಗಿರುವ ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆ ಮೂಲಕ ರಕ್ತ ಹೆಪ್ಪು ಗಟ್ಟುವಿಕೆಗೆ ಕಾರಣವಾಗಬಹುದು. ಈ ರಕ್ತ ಹೆಪ್ಪುಗಟ್ಟುವಿಕೆ ಅಂತಿಮವಾಗಿ ಸಾವಿನಲ್ಲಿ ಕೊನೆಗಾಣಬಹುದಾಗಿದೆ’ ಎಂದು ಕಂಪೆನಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿತ್ತು. ಇದಕ್ಕೆ ಸಂಬಂಧಿಸಿ ಸುಮಾರು ನೂರರಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿವೆ. ವಿಪರ್ಯಾಸವೆಂದರೆ, ಈ ಆ್ಯಸ್ಟ್ರಝೆನಕ ಜೊತೆಗೆ ಭಾರತ ಸರಕಾರವೂ ಕೈ ಜೋಡಿಸಿದೆ. ಇತರ ಲಸಿಕೆಗಳ ಬಗ್ಗೆಯೂ ಬಹಳಷ್ಟು ಆರೋಪಗಳಿವೆ. ಆದರೆ ಇದರ ಬಗ್ಗೆ ಸರಕಾರ ಈವರೆಗೆ ತುಟಿ ಬಿಚ್ಚಿಲ್ಲ. ಬದಲಿಗೆ ‘ಲಸಿಕೆ ಐಚ್ಛಿಕವಾಗಿತ್ತು. ಯಾರ ಮೇಲೂ ಅದನ್ನು ಹೇರಿಕೆ ಮಾಡಿಲ್ಲ’ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿ, ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ.
ಮಾಸ್ಕ್ನಿಂದಾಗಲಿ, ಲಾಕ್ಡೌನ್ನಿಂದಾಗಲಿ ಕೊರೋನವನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಕೊರೋನದ ಬಗ್ಗೆ ಅನಗತ್ಯವಾಗಿ ವದಂತಿ ಹರಡುವುದನ್ನು ಸರಕಾರ ತಡೆಯಬೇಕಾಗಿದೆ. ಮಾತ್ರವಲ್ಲ, ಯಾವುದೇ ಆಸ್ಪತ್ರೆಗಳು ಕೊರೋನ ಸೋಂಕಿತರ ಲೆಕ್ಕಗಳನ್ನು ಪ್ರತಿದಿನ ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು. ಉಸಿರಾಟದ ಕಾಯಿಲೆಗಳನ್ನು ಹೊಂದಿರುವ ವೃದ್ಧರ ಬಗ್ಗೆ ಆಸ್ಪತ್ರೆಗಳು ಹೆಚ್ಚಿನ ಕಾಳಜಿಯನ್ನು ವಹಿಸಿದರೆ ಸಾಕು. ಇದೇ ಸಂದರ್ಭದಲ್ಲಿ, ಕೊರೋನ ಹೆಸರಿನಲ್ಲಿ ಇತರ ಮಾರಕ ಕಾಯಿಲೆ ಹೊಂದಿರುವವರನ್ನು ನಿರ್ಲಕ್ಷಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊರೋನ ಸೋಂಕಿತರಿಗಿಂತ ಹೆಚ್ಚು ಅಪಾಯಕಾರಿ, ಕೊರೋನದ ಹೆಸರಿನಲ್ಲಿ ದಂಧೆಗಿಳಿಯುವ ಖಾಸಗಿ ಆಸ್ಪತ್ರೆಗಳು. ಮೊತ್ತ ಮೊದಲು ಈ ಖಾಸಗಿ ಆಸ್ಪತ್ರೆಗಳ ಸೋಂಕಿಗೆ ಸರಕಾರ ಚಿಕಿತ್ಸೆ ನೀಡಬೇಕಾಗಿದೆ.