ವಾರ್ಡ್ ನಂಬರ್: 6 ಅನ್ಯಾಯ ಮರೆಸುವುದಕ್ಕೆ ನಾಳಿನ ಕನಸು...

ಈಗಾಗಲೇ ಆಂಟನಿ ಚೆಕಾಫ್ನ ‘ಡೋರ್ ನಂಬರ್ ಸಿಕ್ಸ್’ ಎನ್ನುವ ನಾಟಕ ‘ಕತ್ತಲೆ ದಾರಿ ದೂರ’ವೆಂದು ಹಲವಾರು ಪ್ರಯೋಗಗಳನ್ನು ಕಂಡಿದೆ. ಮೈಸೂರು ರಂಗಾಯಣದ ಕಲಾವಿದರಾಗಿದ್ದ ಮೈಮ್ ರಮೇಶ್ ಅವರು ತಮ್ಮ ಜಿಪಿಐಇಆರ್ ತಂಡದ ಮೂಲಕ ಕಳೆದ ವಾರ ಪ್ರಯೋಗಿಸಿದ ನಾಟಕ ‘ವಾರ್ಡ್ ನಂಬರ್: 6’
ಯಾವಾಗಲೂ ಹೊಸ ಹುಡುಗರನ್ನು ಕಟ್ಟಿಕೊಂಡು ನಾಟಕವಾಡುವ ಮೈಮ್ ರಮೇಶ್ ಅಭಿನಂದನಾರ್ಹರು. ಈ ಮೂಲಕ ರಂಗಭೂಮಿಗೆ ಹೊಸ ತಲೆಮಾರನ್ನು ಪರಿಚಯಿಸುತ್ತಿದ್ದಾರೆ. ಇದು ಗಮನಾರ್ಹ. ಆದರೆ ಹೊಸ ಹುಡುಗರು ಬದ್ಧತೆಯಿಂದ ರಂಗಭೂಮಿಯಲ್ಲಿ ಉಳಿಯಬೇಕಾದ ಅಗತ್ಯವಿದೆ. ಹಾಗೆಯೇ ಇತರರ ನಾಟಕಗಳನ್ನು ನೋಡಿ ಕಲಿಯುವ ಅಗತ್ಯವೂ ಇದೆ.
ನಾಟಕ ಶುರುವಾಗುವುದೇ ಹೃದಯವಂತರೆಂಬ ನಾಲ್ಕು ಪಾತ್ರಗಳ ಮೂಲಕ. ಒಬ್ಬ ಹಾಳುಕೊಂಪೆಯಾಗಿರುವ ಊರಿನಲ್ಲಿ ಬೆಳವಣಿಗೆಯಾಗಬೇಕೆಂದು ಶಾಲೆ, ಆಸ್ಪತ್ರೆ, ಮಹಿಳಾ ಸಮಾಜ ಆರಂಭಿಸಲು ಮುಂದಾಗುತ್ತಾನೆ. ಇನ್ನೊಬ್ಬ ಹೃದಯವಂತ ಶಾಲೆ ಕಟ್ಟಿಸಿ, ಗ್ರಂಥಾಲಯ ತೆರೆದ. ಆದರೆ ಜನರು ಗ್ರಂಥಾಲಯದಲ್ಲಿ ಮಲಗಲು ಶುರು ಮಾಡಿದ ಮೇಲೆ ಕಾಯಿಲೆಗೆ ಬಿದ್ದರು. ಆಗ ಆಸ್ಪತ್ರೆ ಕಟ್ಟಿಸಿದ. ಮತ್ತೊಬ್ಬ ಹೃದಯವಂತ ಇನ್ನೂರು ಗುಡಿಸಲುಗಳನ್ನು ಕೆಡವಿ ಪ್ರಾಣಿಗಳಿಗೆ ಇರಲು ಕಟ್ಟಡ ಕಟ್ಟಿಸುತ್ತಾನೆ. ಈ ಕಟ್ಟಡಕ್ಕೆ ಪ್ರಾಣಿ ದಯಾ ಸಂಘ ಎನ್ನುವ ಹೆಸರು. ‘‘ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯ ಭಯಂಕರವಾದುದು. ಹಾಗಾಗಿ ಈಗಿರೋ ಆಸ್ಪತ್ರೆಗೆ ಒಂದು ಹೊಸ ವಾರ್ಡ್ ಸೇರಿಸಿ ಅಲ್ಲಿ ಹುಚ್ಚರನ್ನು ಕೂಡಿ ಹಾಕಿದ್ದೇನೆ. ಈ ಮಾನಸಿಕ ರೋಗಿಗಳನ್ನು ಹೀಗೆ ಬಿಟ್ರೆ ಸಮಾಜದ ಶಾಂತಿಗೆ ಭಂಗ ಬರುತ್ತೆ. ಇದಕ್ಕಾಗಿ ಅವ್ರನ್ನೆಲ್ಲ ವಾರ್ಡ್ ನಂಬರ್ ಆರರಲ್ಲಿ ಇಟ್ಟಿದ್ದೇವೆ’’ ಎನ್ನುವ ಮಾತು ಗಂಭೀರವಾದುದು.
ಇನ್ನೋರ್ವ ಹೃದಯವಂತ ‘‘ವಾರ್ಡ್ ನಂಬರ್ ಆರರಲ್ಲಿರುವ ಹುಚ್ಚರನ್ನು ಕಾಯಲು ಮಿಲಿಟರಿ ಸುಬೇದಾರ್ ಗೋವಿಂದ ಅವರನ್ನು ಸೆಲೆಕ್ಟ್ ಮಾಡಿದ್ದೀನಿ’’ ಎನ್ನುವ ಮೂಲಕ ಹೊರಗಡೆ ಇರುವ ನಾವು ಹುಚ್ಚರಲ್ಲ. ಹುಚ್ಚರೆಂದು ತಿಳಿದು ಕೂಡಿ ಹಾಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತೇವೆ ಎನ್ನುವ ಮಾತು ಗಮನಾರ್ಹ. ಹೀಗೆ ತಿಳಿದುಕೊಂಡು ವರ್ತಿಸುವ ಹೃದಯವಂತರ ಬಣ್ಣ ಬಯಲು ಮಾಡುವ ನಾಟಕವಿದು. ಹೀಗೆ ಸಾಗುವ ನಾಟಕದಲ್ಲಿ ವಾರ್ಡ್ ನಂಬರ್ ಆರರಲ್ಲಿ ನಡೆಯುವ ವಿದ್ಯಮಾನಗಳ ಅನಾವರಣವಿದೆ. ಅಪ್ಪನ ಒತ್ತಾಯಕ್ಕೆ ಡಾಕ್ಟರ್ ಆದ, ಮಾನಸಿಕ ರೋಗಿಗಳನ್ನು ನೋಡಿಕೊಳ್ಳುವ ಆನಂದ್: ‘‘ಈ ಊರಿನಲ್ಲಿ ಇರೋದು ಎರಡೇ ತರಹದ ಜನ. ಒಂದು ದುಡ್ಡಿರೋ ಹಂದಿಗಳು. ಇನ್ನೊಂದು ದುಡ್ಡಿಲ್ದೆ ಇರೋ ಮೂಕರು. ಇಂಥೋರ ಜತೆ ನಾನು ಹ್ಯಾಗೆ ಜೀವನ ನಡೆಸಲಿ. ಯಾಕೋ ನನ್ನ ಎಲ್ಲ ಆಸೆಗಳು ಹಾರಿ ಹೋಗ್ತಾ ಇವೆ. ಹಾಗೆ ಗಾಳಿಯಲ್ಲಿ ಕರಗಿ ಹೋಗ್ತಾ ಇವೆ’’ ಎಂದು ನಿರಾಸೆಯಿಂದ ನುಡಿಯುತ್ತಾನೆ. ಇಂಥ ಆನಂದ್ ಕನಸು ಕಾಣುವ ಬಗೆ ಹೀಗಿದೆ ‘‘ಒಂದಿನ ಬರಬಹುದುಂತೀನಿ. ಜಗತ್ತಿನಲ್ಲಿ ಯಾರೂ ಹುಚ್ಚರಿರಲ್ಲ. ರೋಗಿಗಳಿರಲ್ಲ, ಅಪರಾಧಿರಗಳಿರಲ್ಲ. ಯಾವ ಕಟ್ಟಡಗಳಿಗೂ ಕಬ್ಬಿಣದ ಬೇಲಿಗಳಿರುವುದಿಲ್ಲ. ಎಲ್ಲ ಸುಭೀಕ್ಷದಿಂದ ಸಂತೋಷದಿಂದ ಬದುಕುವ ದಿನ ಬರುತ್ತೆ ಒಂದಿಲ್ಲ ಒಂದು ದಿನ’’ ಎನ್ನುತ್ತಾನೆ. ಇದಕ್ಕೆ ಪೂರಕವಾಗಿ ಚಿಕಿತ್ಸೆ ಪಡೆಯುತ್ತಿರುವ ಜಗನ್ನಾಥ್ ಹೇಳುವ ಮಾತಿದು ‘‘ಇವತ್ತಿನ ಅನ್ಯಾಯ ಮರಿಸೋದಕ್ಕೆ ನಾಳಿನ ಕನಸು ನನಸು ಆಗುತ್ತೆ. ಅಂಥ ಒಂದಿನ ಈ ಲೋಕದಲ್ಲಿ ಬಂದೇ ಬರುತ್ತೆ. ನನ್ನ ಮೂಳೆ ಬುಡದಿಂದ ಬರೋ ಕಂಪನ ಹೇಳುತ್ತೆ. ಅಂದು ಬಂದೇ ಬರಬೇಕು. ಆಗ ನಿಮ್ಮಂಥ ಬೇಟೆನಾಯಿಗಳು, ಕ್ರೂರಿಗಳು, ಕೊಲೆಗಡುಕರು ಯಾರೂ ಇರುವುದಿಲ್ಲ. ನ್ಯಾಯಕ್ಕೆ ಗೆಲುವು ಖಂಡಿತಾ ಬರುತ್ತೆ. ಆದರೆ ಅದು ಇವತ್ತಿನ ಬಸಿರನ್ನು ಬಗಿದುಕೊಂಡೇ ಬರಬೇಕು’’ ಎನ್ನುವ ಕನಸು ಅವನದು.
ಇಡೀ ನಾಟಕದಲ್ಲಿ ಬಹಳ ಗಮನಸೆಳೆವ ಸಂಭಾಷಣೆ ಎಂದರೆ ರೋಗಿಯೆಂದು ದಾಖಲಾಗಿರುವ ಜಗನ್ನಾಥ್ ಹಾಗೂ ಡಾ.ಆನಂದ್ ಮಧ್ಯೆ. ಡಾ.ಆನಂದ್ - ‘‘ಒಂದು ಪಕ್ಷ ಜೈಲುಗಳು, ಹುಚ್ಚಾಸ್ಪತ್ರೆಗಳು ಇಲ್ಲದಿದ್ದ ದಿನ ಬಂತು ಅಂತ ಇಟ್ಕೊ. ಈ ಲೋಕದಲ್ಲಿ ಮಾತ್ರ ಮೂಲಭೂತವಾಗಿ ಯಾವುದೂ ಬದಲಾಗುವುದಿಲ್ಲ. ಜನ ಹುಚ್ಚರಾಗ್ತಾರೆ. ಕಾಯಿಲೆ ಬೀಳ್ತಾರೆ. ನರಳ್ತಾರೆ. ಒಂದಿನ ಸಾಯ್ತಾರೆ. ಈಗ ಹ್ಯಾಗೆ ನೋವಿನಲ್ಲಿ ನರಳ್ತಾರೋ ಹಾಗೆ ನರಳ್ತಾರೆ. ಅವತ್ತು ಅಷ್ಟೆ, ಇವತ್ತು ಅಷ್ಟೆ. ಅಂಥದರಲ್ಲಿ ನಿಂಗೆ ಯಾಕೆ ಅಂಥ ಸಮಾಜ ಬೇಕು’’ ಎಂದು ಕೇಳುತ್ತಾನೆ. ಇದಕ್ಕೆ ಡಾ. ಆನಂದ್ ‘‘ಯಾಕೆಂದ್ರೆ ನನಗೆ ಸುಖ ಬೇಕು. ಈ ಜೈಲಿನಲ್ಲಿ ನನ್ನ ಜೀವನದ ತಾರುಣ್ಯ ನಾಶವಾಗ್ತಾ ಇದೆ. ರಕ್ತ ಉಕ್ಕಿ ತೋಳುಗಳು ಮರದ ತೊಗಟೆ ಆಗಿಬಿಟ್ಟಿವೆ. ನನ್ನ ಬುದ್ಧಿಯೂ ಸತ್ತು ಹೋಗ್ತಾ ಇದೆ. ನಾನು ಜೀವನವನ್ನು ಪ್ರೀತಿಸ್ತೀನಿ. ಈ ಕೊಳಕು, ಈ ಗಬ್ಬು, ಈ ತೋಳನಂತಹ ವಾರ್ಡನ್ ಗೋವಿಂದನನ್ನು ಕೊಂದಾದ್ರೂ ಸರಿ ನಾನು ಆಚೆಹೋಗಬೇಕು’’ ಎನ್ನುವ ಹಂಬಲ. ಇದಕ್ಕೆ ಪೂರಕವಾಗಿ ಡಾ.ಆನಂದ್ ‘‘ಮನುಷ್ಯನಿಗೆ ಸುಖ ಅನ್ನೋದು ಹೊರಗಡೆ ಸಿಗುವುದಿಲ್ಲ. ತುಂಡು ಬಟ್ಟೆ ಉಟ್ಟು ಗವಿಗಳಲ್ಲಿ ಇದ್ದವರೆಲ್ಲ ಮಹಾತ್ಮರು ಅಲ್ಲ. ಮನುಷ್ಯನಿಗೆ ಸುಖ ಅನ್ನೋದು ಸಿಗೋದು ಒಳಗಡೆ ಅಂತರಂಗದಲ್ಲಿ ತಿಳಿತಾ? ಈ ದೇಹ ಸುಖ, ಈ ಕಣ್ಣುಗಳ ಸುಖ ಎಲ್ಲಾ ತೀರಾ ತೆಳುವಾದದ್ದು’’ ಎನ್ನುತ್ತಾನೆ.
ಇದಕ್ಕೆ ಹೊಂದಿಕೊಂಡಂತೆ ಸುಳ್ಳು ಸುದ್ದಿಗಾರರು ಬಂದು ‘‘ಡಾ.ಆನಂದ್ ಆಸ್ಪತ್ರೆಯಲ್ಲೇ ಇರ್ತಾರಂತೆ, ಗಂಟೆಗಟ್ಲೆ ಮಾತಾಡ್ತಾರಂತೆ, ಕಿಲಕಿಲ ನಗ್ತಾರಂತೆ, ತಲೆ ಕೆಟ್ಟವರ ಜೊತೆ ಮಾತಾಡ್ತಾರೆ’’ ಹೀಗೆ ಸುದ್ದಿ ಹರಡುತ್ತಾರೆ. ಆದರೆ ಹುಚ್ಚರಿರುವ ವಾರ್ಡಲ್ಲಿ ಡಾ. ಆನಂದ್ ಮಾತು ಗಮನಾರ್ಹ ‘‘ನೋವು ಒಂದು ಅನಿಸಿಕೆ ಅಷ್ಟೆ. ಇದು ನಾನು ಹೇಳಿರೋ ಮಾತಲ್ಲ. ಎರಡು ಸಾವಿರ ವರ್ಷಗಳ ಹಿಂದೇನೇ ಮಹಾನ್ ತತ್ವಜ್ಞಾನಿಗಳು ಹೇಳಿರೋ ಮಾತು. ನೋವಿನ ಬಗ್ಗೆ ಒಂದು ನಿರ್ಲಕ್ಷ್ಯ ಭಾವನೆ ಬೆಳೆಸ್ಕೊಬೇಕು. ಅಸಡ್ಡೆಯಿಂದ ನೋಡಬೇಕು. ನೋವು ವಿಚಿತ್ರ ಬೆಳವಣಿಗೆಗೆ ದಾರಿ ಮಾಡಿಕೊಡುತ್ತೆ’’ ಎನ್ನುತ್ತಾನೆ. ಕೊನೆಗೆ ನಾಟಕದ ಅಂತ್ಯ ಹೇಗಾಗುತ್ತದೆ ಎನ್ನುವ ಕುತೂಹಲವಿದ್ದರೆ ನೀವು ನಾಟಕ ನೋಡಬೇಕು.
ಬಹಳ ಗಂಭೀರವಾದ ಈ ನಾಟಕವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಟರು ಅಭಿನಯಿಸಬೇಕಿದೆ. ಸಂಭಾಷಣೆಯನ್ನು ಕಿರುಚದೆ, ನಿಧಾನವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳಬೇಕಾದ ಅಗತ್ಯವಿದೆ. ಸುಳ್ಳು ಸುದ್ದಿಗಾರರು ರಂಗದ ಮೇಲೆ ಹಾಡಿ, ಕುಣಿದು ಹೇಳುವ ಮಾತು ನಿಧಾನಿಸಬೇಕು. ಹಾಗೆಯೇ ಈ ಸುಳ್ಳು ಸುದ್ದಿಗಾರರು ಬಂದು ಕುಣಿಯುವಾಗ ಝಿಗ್ಝಾಗ್ ಲೈಟು ಬಳಸುವ ಅಗತ್ಯವಿಲ್ಲ.
ಒಂದೂವರೆ ಗಂಟೆಯ ಈ ನಾಟಕ ಮೊದಲ ಪ್ರಯೋಗದಿಂದ ಹೆಚ್ಚೇನೂ ನಿರೀಕ್ಷಿಸದಿದ್ದರೂ ಮುಂದಿನ ಪ್ರಯೋಗಗಳಲ್ಲಿ ಪರಿಣಾಮಕಾರಿ ಯಾಗಲಿ ಮತ್ತು ಯಶಸ್ವಿಯಾಗಲಿ. ಮುಖ್ಯವಾಗಿ ಮಾತು ತಪ್ಪದೆ, ಕಂಠಪಾಠ ಮಾಡಿದ್ದನ್ನು ಒಪ್ಪಿಸದೆ ಮಾತುಗಳನ್ನು ಸಹಜವಾಗಿ ಆಡಲಿ ಮತ್ತು ಸಹಜವಾಗಿ ಅಭಿನಯಿಸಲಿ.