ಅವಕಾಶವಾಣಿಯಾಗಿಸಿದ ಆಕಾಶವಾಣಿ ಪ್ರಭು

‘‘ಅತ್ಯಂತ ಕ್ಲಿಷ್ಟಕರ ಅಭಿನಯ ರೇಡಿಯೊ ನಾಟಕ. ಮೊದಲು ರೀಡಿಂಗ್ ಆಮೇಲೆ ರಿಹರ್ಸಲ್. ಬಳಿಕ ರೆಕಾರ್ಡಿಂಗ್. ನಮ್ಮ ಮೈಕ್ ಎದುರು ಲಕ್ಷಾಂತರ ಪ್ರೇಕ್ಷಕರು ಇದ್ದಾರೆಂದು ತಿಳಿದು ಮಾತಾಡಬೇಕು. ನಾಟಕದ ರೆಕಾರ್ಡಿಂಗ್ ಎಂದರೆ ಗೆಟ್ ಟುಗೆದರ್ ಇದ್ದ ಹಾಗೆ ಮಾಡಿದೆ’’ ಎಂದು ಪ್ರಭುಸ್ವಾಮಿ ಮಳಿಮಠ ಹೇಳಿದರು.
ಜೂನ್ 1ರಂದು ಮೈಸೂರಿನ ವಿಜಯ ವಿಠಲ ಕಾಲೇಜಿನ ಆವರಣದಲ್ಲಿ ಸಮುದ್ಯತಾ ಶ್ರೋತೃ ಸಂಘ, ಮೈಸೂರು ಆಕಾಶವಾಣಿ ಕೇಳುಗರ ಬಳಗ ಹಾಗೂ ಮೈಸೂರು ಆಕಾಶವಾಣಿ ನಾಟಕ ಕಲಾವಿದರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದ್ದು ಅರ್ಥಪೂರ್ಣ. ಧಾರವಾಡದಲ್ಲಿ ನಾವಿಬ್ಬರೂ ಓದುವಾಗಿನಿಂದ ಗೆಳೆಯರು. ಹೀಗಾಗಿ ಹಳೆಯ ಗೆಳೆಯ ಹಾಗೂ ಏಕವಚನದ ಗೆಳೆಯ. ಇಂಥ ಗೆಳೆಯ ಹುಟ್ಟಿದ್ದು ಹಾವೇರಿಯಲ್ಲಿ. ಬ್ಯಾಡಗಿಯಲ್ಲಿ ಹೈಸ್ಕೂಲಿನವರೆಗೆ ಓದಿ ಪಿಯುಸಿಗೆ ಧಾರವಾಡ ಸೇರಿದವರು ಧಾರವಾಡದವರೇ ಆದರು. ಬಿಎ ನಂತರ ಎಲ್ಎಲ್ಬಿ ಪದವಿ ಪಡೆಯುವುದರೊಳಗೆ ಹವ್ಯಾಸಿ ನಾಟಕ ಕಲಾವಿದನಾಗಿ ಹಾಗೂ ನಿರ್ದೇಶಕನಾಗಿ ಮನ್ನಣೆ ಗಳಿಸಿದ್ದ. ಜೊತೆಗೆ ಧಾರವಾಡ ಆಕಾಶವಾಣಿಯ ನಾಟಕ ಕಲಾವಿದನಾಗಿದ್ದರು. ಇದರಿಂದ ಆಗ ಧಾರವಾಡ ಆಕಾಶವಾಣಿಯಲ್ಲಿದ್ದ ಲೇಖಕರೂ ಆದ ಎಂ.ಎಸ್.ಕೆ. ಪ್ರಭು ಅವರು ತಾತ್ಕಾಲಿಕ ಉದ್ಘೋಷಕನೆಂದು ನೇರವಾಗಿ ನೇಮಿಸಿದರು ಅಂದರೆ ಲಿಖಿತ ಪರೀಕ್ಷೆ, ಸಂದರ್ಶನವಿಲ್ಲದೆ.
ಆಮೇಲೆ ಹೊಸಪೇಟೆ ಆಕಾಶವಾಣಿಗೆ ಉದ್ಘೋಷಕನೆಂದು ನೇಮಕಗೊಂಡರು. ಅಲ್ಲಿ ಎಂಟು ವಿಭಾಗಗಳನ್ನು ನಿರ್ವಹಿಸಿದ ಅನುಭವ ಗಳಿಸಿಕೊಂಡು ಧಾರವಾಡ ಆಕಾಶವಾಣಿಗೆ ವರ್ಗಾವಣೆಗೊಂಡರು. ಅಲ್ಲಿಂದ ಮೈಸೂರು ಆಕಾಶವಾಣಿಗೆ ಬಂದ ಮೇಲೆ ಹಿರಿಯ ಉದ್ಘೋಷಕನಾಗಿ ನಿವೃತ್ತಿಯಾದರು. ಮೈಸೂರು ಆಕಾಶವಾಣಿ ನಾಟಕ ವಿಭಾಗದ ಮೂಲಕ 200ಕ್ಕೂ ಅಧಿಕ ನಾಟಕಗಳನ್ನು ನಿರ್ಮಿಸಿ, ನಿರ್ದೇಶಿಸಿರು.
ರಂಗದ ಮೇಲಾಡುವ ನಾಟಕಕ್ಕಿಂತ ರೇಡಿಯೊ ನಾಟಕ ಭಿನ್ನ. ರಂಗದ ಮೇಲೆ ಉಡುಪು, ರಂಗಸಜ್ಜಿಕೆ, ಪ್ರಸಾಧನ, ಲೈಟಿಂಗ್ ವ್ಯವಸ್ಥೆ ಇರುತ್ತದೆ. ಇವೆಲ್ಲ ರೇಡಿಯೊ ನಾಟಕದಲ್ಲಿ ಇರುವುದಿಲ್ಲ. ಏನೇ ಇದ್ದರೂ ಮಾತಿನೊಳಗೆ ಇರಬೇಕು. ಹೀಗಿರುವಾಗ ರೇಡಿಯೊ ನಾಟಕಕ್ಕೆ ಭಾಷಾ ಶುದ್ಧತೆ ಬೇಕು. ಆಂಗಿಕ ಅಭಿನಯ ಇರುವುದರಿಂದ ರಂಗದ ಮೇಲಾಡುವ ನಾಟಕಗಳಲ್ಲಿ ಭಾಷಾ ಶುದ್ಧತೆಗೆ ಗಮನ ಕೊಡದಿರುವ ಉದಾಹರಣೆಗಳು ಸಾಕಷ್ಟಿವೆ. ಉದಾಹರಣೆಗೆ ಅಕಾರ, ಹಕಾರ ವ್ಯತ್ಯಾಸಗಳನ್ನು ಗಮನಿಸುವುದಿಲ್ಲ. ಶಕುನಿಗೆ ಸಕುನಿ ಎನ್ನುತ್ತಾರೆ. ಆದರೆ ರೇಡಿಯೊ ನಾಟಕದಲ್ಲಿ ಕೇಳುಗರು ಲಕ್ಷ್ಯ ಕೊಟ್ಟು ಕೇಳುತ್ತಾರೆ. ‘ಹಕ್ಕಿ ಹಾರಿ ಹೋಯಿತು’ ಎನ್ನುವ ಬದಲು ‘ಅಕ್ಕಿ ಹಾರಿ ಹೋಯಿತು’ ಎನ್ನಲಾಗದು. ಹೀಗೆ ಭಾಷಾ ಶುದ್ಧತೆ ಕಲಿಯಲು ರೇಡಿಯೊ ನಾಟಕ, ರೂಪಕ, ಸರಣಿಗಳನ್ನು ಕೇಳಬೇಕು. ಆಕಾಶವಾಣಿಯ ನಾಟಕ ವಿಭಾಗಕ್ಕೆ ಆಯ್ಕೆಯಾದ ನಟರು ಶ, ಷ, ಸ ಅಲ್ಲದೆ ಅ, ಹ ಹಾಗೂ ಲ-ಳ, ಅಲ್ಪಪ್ರಾಣ, ಮಹಾಪ್ರಾಣಗಳ ವ್ಯತ್ಯಾಸ ಅರಿತು ಸಂಭಾಷಣೆ ಹೇಳುತ್ತಾರೆ. ಹೃಸ್ವ, ದೀರ್ಘಗಳ ವ್ಯತ್ಯಾಸವನ್ನೂ ರೇಡಿಯೊ ನಾಟಕ ಕಲಿಸುತ್ತದೆ. ಇದರಿಂದ ಸರಿಯಾದ ಉಚ್ಚಾರಣೆ ಸಾಧ್ಯವಾಗುತ್ತದೆ. ಮುಖ್ಯವಾಗಿ ರೇಡಿಯೊ ನಾಟಕಗಳು ನಮ್ಮ ಕಲ್ಪನಾಶಕ್ತಿಯನ್ನು, ಸೃಜನಶೀಲತೆಯನ್ನು ಹಾಗೂ ವಿವೇಚನಾಶಕ್ತಿಯನ್ನು ಹೆಚ್ಚಿಸುತ್ತವೆ. ಹೇಗೆಂದರೆ ರಂಗದ ಮೇಲೆ ತಾಜ್ಮಹಲನ್ನು ಚಿತ್ರದ ಮೂಲಕ, ಬ್ಯಾನರ್ ಮೂಲಕ ತೋರಿಸಬಹುದು. ಆದರೆ ರೇಡಿಯೊದಲ್ಲಿ ‘ನಾವೀಗ ತಾಜ್ಮಹಲಿನ ಎದುರು ನಿಂತಿದ್ದೇವೆ. ಎಷ್ಟು ಸುಂದರ ಇದೆ!’ ಎನ್ನುವ ವಿವರ ಮೂಲಕ ಕಟ್ಟಿಕೊಡಬಹುದು ಎನ್ನುವ ಪ್ರಭುಸ್ವಾಮಿಯವರ ಗಮನಾರ್ಹ ಸಾಧನೆ ಎಂದರೆ ಆಕಾಶವಾಣಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೈಸೂರು ಆಕಾಶವಾಣಿ ಹಾಗೂ ಮೈಸೂರು ರಂಗಾಯಣ ಸಹಯೋಗದಲ್ಲಿ ರಂಗಾಯಣದ ಶ್ರೀರಂಗ ರಂಗಮಂದಿರದಲ್ಲಿ ‘ರಂಗ ಬಾನುಲಿ’ ಕಾರ್ಯಕ್ರಮ ಆಯೋಜಿಸಿದ್ದರು. ಕತ್ತಲಿನಲ್ಲಿಯೇ ನಾಟಕ ಕೇಳಿಸಿದರು. ನಾಟಕ ಮುಗಿದ ಮೇಲೆ ಲೈಟ್ ಹಾಕಲಾಯಿತು. ಸಮುದ್ರದ ಸದ್ದು ಕೇಳಿದಾಗ ಮಂಗಳೂರು ಬೀಚ್ ನೆನಪಾಯಿತು, ಗೋವಾ ನೆನಪಾಯಿತು ಎಂದು ಕೇಳುಗರು ಹೇಳಿದರು. ಹೀಗೆ ಅವರವರು ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಹೀಗೆ ರೇಡಿಯೊ ನಾಟಕದಿಂದ ಅಲ್ಪವಿರಾಮ, ಪೂರ್ಣವಿರಾಮ, ನಿಶ್ಶಬ್ದತೆ ಗಮನಿಸಲು ಸಾಧ್ಯವಾಗುತ್ತದೆ. ಪ್ರತೀ ಶಬ್ದದ ಮೇಲೆ ಒತ್ತಡ ಹಾಕಿ ಮಾತನಾಡಿದಾಗ ಅರ್ಥವೇ ಬದಲಾಗುತ್ತದೆ. ಮೈಸೂರಿನ ಗೋವಿಂದಾಚಾರಿ, ಕಾಳಿಹುಂಡಿ ಶಿವಕುಮಾರ್ ಅವರು ನಿರಂತರವಾಗಿ ರೇಡಿಯೊ ಕೇಳುಗರು ಮತ್ತು ಇತರರು ರೇಡಿಯೊ ಕೇಳುವ ಹಾಗೆ ಶ್ರಮಿಸುವವರು. ಹೀಗೆ ರೇಡಿಯೊ ಕೇಳುವ ಮೂಲಕ ಭಾಷಾ ಸ್ಪಷ್ಟತೆ ಗಳಿಸಿಕೊಂಡವರು ಅನೇಕರು. ಹಾಗೆಯೇ ರೇಡಿಯೊ ನಾಟಕದ ಕಲಾವಿದರು ಸಿನೆಮಾ, ಸೀರಿಯಲ್ಗಳಲ್ಲಿ ಮಿಂಚಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಟ ಕೆ.ಎಸ್.ಅಶ್ವಥ್. ಮೈಸೂರು ಆಕಾಶವಾಣಿಯ ನಾಟಕ ಕಲಾವಿದರಾಗಿದ್ದ ಅವರು ಸಿನೆಮಾಗಳಲ್ಲಿ ನಟಿಸಿದರು. ಪೋಷಕ ಪಾತ್ರಗಳಿಗೆ ಪ್ರಸಿದ್ಧರಾದ ಅವರು ಪಾರ್ವತಮ್ಮ ರಾಜಕುಮಾರ್ ನಿರ್ಮಾಣದ ಎಲ್ಲ ಸಿನೆಮಾಗಳಲ್ಲೂ ಆಸ್ಥಾನ ಕಲಾವಿದರಾದರು. ಅಂದರೆ ವರನಟ ಡಾ. ರಾಜಕುಮಾರ್ ಅವರು ತಮ್ಮ ಎಲ್ಲ ಸಿನೆಮಾಗಳಲ್ಲಿ ಕೆ.ಎಸ್.ಅಶ್ವಥ್ ಅವರಿಗೆ ನಟಿಸಲು ಅವಕಾಶ ನೀಡಿದರು. ‘‘ಅಶ್ವಥ್, ಬಾಲಣ್ಣ, ತೂಗುದೀಪ ಶ್ರೀನಿವಾಸ್ ಇವರೆಲ್ಲ ಇದ್ದರೆ ನಾನು ನಾಯಕನಾಗಲು ಸಾಧ್ಯ’’ ಎನ್ನುತ್ತಿದ್ದರು ಡಾ. ರಾಜಕುಮಾರ್.
‘‘ಎಂಭತ್ತರ ದಶಕದಲ್ಲಿ ನಾಟಕ ಕಂಪೆನಿ ಕಲಾವಿದರು, ಸಿನೆಮಾ ನಟರು ಆಕಾಶವಾಣಿಯ ನಾಟಕದ ಧ್ವನಿಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಿದ್ದರು. ಧ್ವನಿಪರೀಕ್ಷೆಯಲ್ಲಿ ಪಾಸಾದ ನಂತರ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಈ ಪರಂಪರೆ ಕಳಚಿದೆ’’ ಎನ್ನುವ ವಿಷಾದ ಪ್ರಭುವಿನದು.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಗ್ರೀಕ್ ರಂಗಭೂಮಿಯಿಂದ ಹಿಡಿದು 21ನೇ ಶತಮಾನದವರೆಗೆ ರಂಗಭೂಮಿ ಇತಿಹಾಸ ಕುರಿತ ‘ರಂಗನಮನ’ ಎನ್ನುವ ಸಾಕ್ಷ್ಯರೂಪಕವನ್ನು 2011ರಲ್ಲಿ ಪ್ರಭುಸ್ವಾಮಿ ಆಕಾಶವಾಣಿಗೆ ಪ್ರಸ್ತುತಪಡಿಸಿದ್ದರು. ಇದು ಆಕಾಶವಾಣಿಯ ರಾಷ್ಟ್ರೀಯ ಪುರಸ್ಕಾರ ಪಡೆದಿತ್ತು.
ಆಕಾಶವಾಣಿಯಲ್ಲಿದ್ದಾಗ ಯುವವಾಣಿಗೆ ಬರುವ ಯುವತಲೆಮಾರಿಗೆ ಭಾಷಾ ಶುದ್ಧತೆ ಕುರಿತು ತಿಳಿಸುತ್ತಿದ್ದರು. ಹಾಗೆಯೇ ನಾಟಕ ವಿಭಾಗದ ಕಲಾವಿದರಿಗೂ ಪಕ್ಕಾ ಆಗುವವರೆಗೆ ಬಿಡುತ್ತಿರಲಿಲ್ಲ. ಇದನ್ನು ಕವಿತಾ ಧನಂಜಯ್ ಅವರು ‘‘ಭಾಷಾ ಶುದ್ಧತೆ ಬಗ್ಗೆ ಹೇಳುವುದರ ಜೊತೆಗೆ ಹೀಗೆಯೇ ಬರಬೇಕೆಂದು ಹಟ ಹಿಡಿದು ಕಲಿಸಿದವರು’’ ಎಂದು ಬೀಳ್ಕೊಡುಗೆ ಸಮಾರಂಭದಲ್ಲಿ ಸ್ಮರಿಸಿದರು.
ಇಂಥ ಪ್ರಭುಸ್ವಾಮಿ ಸದ್ಯ ಮೈಸೂರಿನ ವಿಜಯ ವಿಠಲ ಪ್ರಾಥಮಿಕ ಶಾಲೆ ಹಾಗೂ ಬಿಎಸ್ಎಸ್ ವಿದ್ಯೋದಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಂಗಭೂಮಿಯ ಜೊತೆಗೆ ವ್ಯಕ್ತಿತ್ವ ವಿಕಸನ ಕುರಿತು ಪಾಠ ಮಾಡುತ್ತಿದ್ದಾರೆ.
ಹೀಗೆ ತನ್ನ ರಂಗಭೂಮಿಯ ಅನುಭವಗಳನ್ನು ಹಂಚುವ ಕಾಯಕ ನಿರಂತರವಾಗಿರಲಿ.