ಅಪರೂಪದ ಕ್ಲಾರಿಯೊನೆಟ್ ವಾದಕ ರಾಮು

‘‘ತೊಂಭತ್ತರ ದಶಕದಲ್ಲಿ ಕ್ಯಾಸಿಯೊ ಬಂದ ಕಾರಣ ಕ್ಲಾರಿಯೊನೆಟ್ ವಾದ್ಯ ಬಳಕೆ ನಾಟಕಗಳಲ್ಲಿ ಕಡಿಮೆ ಆಯಿತು. ಹಳ್ಳಿಗಳಲ್ಲಿ ಅಲ್ಲದೆ ಈಚಿನ ನಾಟಕಗಳಿಗೆ ಕಲಾವಿದರು ಸರಿಯಾಗಿ ಹಾಡುವುದಿಲ್ಲ. ಆಗ ಕ್ಯಾಸಿಯೊ ಮೂಲಕ ಸರಿದೂಗಿಸುತ್ತಾರೆ’’ ಎಂದು ವಿಷಾದದಿಂದ ಹೇಳಿದರು ಕ್ಲಾರಿಯೊನೆಟ್ ವಾದಕರಾದ ಮೈಸೂರಿನ ಡಿ. ರಾಮು.
ಕಳೆದ ವಾರ ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣವು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ೧೫ ದಿನಗಳ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಅಭಿನಯ ಸಮೇತ ರಂಗಗೀತೆಗಳನ್ನು ಹಾಡಿದಾಗ ಅವರು ಕ್ಲಾರಿಯೊನೆಟ್ ನುಡಿಸಿದರು.
‘‘ಮೈಸೂರು ಅರಮನೆಯಲ್ಲಿ ೧೯೪೬ರಲ್ಲಿ ಕ್ಲಾರಿಯೊನೆಟ್ ವಾದಕನೆಂದು ಸೇರಿದೆ. ನಮ್ಮ ತಂದೆ ದಾಸಪ್ಪ ಅವರೂ ಇದ್ದರು. ಟ್ರಿಮೊನ್ ಎಂಬ ಇಂಗ್ಲಿಷ್ ವಾದ್ಯ ನುಡಿಸುತ್ತಿದ್ದರು. ಅವರು ನಿವೃತ್ತಿಯಾದಾಗ ನನಗೆ ೧೨ ವರ್ಷ ವಯಸ್ಸು. ಸಂಬಳ ಕೊಡಬೇಡಿ, ತರಬೇತಿ ಕೊಡಿ ಎಂದು ನನ್ನನ್ನು ಮೈಸೂರು ಅರಮನೆಗೆ ಸೇರಿಸಿದರು. ಐದು ವರ್ಷಗಳವರೆಗೆ ತರಬೇತಿಯಾದ ಮೇಲೆ ನೀವೇ ಸಂಬಳ ಕೊಡ್ತೀರಿ ಎಂದು ಹೇಳಿದ್ರು. ಸಂಬಳ ಶುರುವಾದಾಗ ೧೮ ರೂಪಾಯಿ. ಚೆನ್ನಾಗಿ ಕಲಿತು ನುಡಿಸಿದ ಮೇಲೆ ಸಂಬಳ ಕೊಟ್ರು. ಆಗ ಜಯಚಾಮರಾಜೇಂದ್ರ ಒಡೆಯರ್ ಅವರಿದ್ರು. ರಾಜ್ಯ ಸರಕಾರದ ಆಳ್ವಿಕೆ ಶುರುವಾಗಿ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾದಾಗ ೧೮ರಿಂದ ೧೫೦ ರೂಪಾಯಿ ಸಂಬಳವಾಯಿತು. ಬೆಳಗ್ಗೆ ಮಾತ್ರ ಡ್ಯೂಟಿ ಇತ್ತು. ಸಂಜೆಯ ಮೇಲೆ ಇರುತ್ತಿರಲಿಲ್ಲ. ಸಂಜೆ ನಾಟಕಗಳಿಗೆ ಹೋಗುತ್ತಿದ್ದೆ. ಆಮೇಲೆ ಹಳ್ಳಿ ಕಡೆ ಕ್ಲಾರಿಯೊನೆಟ್ ವಾದ್ಯಕ್ಕೆ ಬೇಡಿಕೆ ಬಂತು. ಎತ್ತಿನಗಾಡಿ, ಸೈಕಲ್ ಮೇಲೆ ಹೋಗುತ್ತಿದ್ದೆ’’ ಎಂದು ಮೆಲುಕು ಹಾಕುವ ಅವರು ಈಗ ತೊಂಭತ್ತು ವರ್ಷ ಹತ್ತಿರದವರು.
‘‘ಜೀವನದಲ್ಲಿ ಮರೆಯಲಾರದ ಘಟನೆ ಎಂದರೆ; ಚಾಮರಾಜನಗರ ಜಿಲ್ಲೆಯ ಮುಳ್ಳೂರು ಊರಿಗೆ ನಾಟಕಕ್ಕೆ ಹೋಗಿದ್ದೆ. ಕಾರ್ತಿಕ ಸೋಮವಾರದ ದಿನ ಅವತ್ತು. ಬಹಳ ಮಳೆಯಾದ ಪರಿಣಾಮ ನೀರು ಹೆಚ್ಚು ಬಂದಿತ್ತು. ಬೆಲ್ಲ ಕಾಯಿಸುವ ಕೊಪ್ಪರಿಕೆಯಲ್ಲಿ ಕುಳಿತು ಹೊರಟೆವು. ಆಗ ರಾತ್ರಿ ಒಂಭತ್ತು ಗಂಟೆ. ಆಗ ಇದ್ದಕ್ಕಿದ್ದಂತೆ ನೀರು ಜಾಸ್ತಿ ಬಂತು. ಅಲ್ಲಾಡಬೇಡಿ ಎಂದು ದೋಣಿ ನಡೆಸುವವರು ಹೇಳಿದರೂ ನನ್ನ ಜೊತೆಯಿದ್ದ ನಟಿ ಇಂದ್ರಮ್ಮ ಹಾಗೂ ಅವರ ತಾಯಿ ಹೆದರಿ ಅಲ್ಲಾಡಿಬಿಟ್ಟರು. ಆಗ ಕೊಪ್ಪರಿಕೆ ಮಗುಚಿತು. ಕೂಡಲೇ ಇಂದ್ರಮ್ಮ ಅವರ ತಾಯಿಯನ್ನು ನಾನು ಹಿಡಿದುಕೊಂಡೆ. ಇನ್ನೊಂದು ಕೈಯಲ್ಲಿ ಕ್ಲಾರಿಯೊನೆಟ್ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಇಂದ್ರಮ್ಮ ಅವರು ತಮ್ಮ ತಾಯಿಯನ್ನು ತಬ್ಬಿಕೊಂಡರು. ಕೊಚ್ಚಿಕೊಂಡು ಹೋಗುತ್ತಿದ್ದೆವು. ಹೇಗೋ ದಡಕ್ಕೆ ತಲುಪಿದೆವು. ನಾಟಕ ಆಡಿಸುವವರು ದಡದಲ್ಲಿ ಕಾಯುತ್ತಿದ್ದರು. ಈಗಲೂ ಈ ಘಟನೆ ನೆನಪಾಗುತ್ತಲೇ ಇರುತ್ತದೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕ್ಲಾರಿಯೊನೆಟ್ ಈಗಲೂ ಇದೆ. ಅಂತೂ ಸಂಗೀತ ನಂಬಿಕೊಂಡು ಜೀವನ ಮಾಡಿದೆ’’ ಎಂದು ಖುಷಿಯಾಗಿ ಹೇಳಿದರು.
‘‘ನಾಟಕಗಳಿಗೆ ಈಗ ಕ್ಲಾರಿಯೊನೆಟ್ ವಾದ್ಯ ಸಾಥ್ ಕೊಡಲು ಹೋಗುತ್ತಿಲ್ಲ, ತೊಂಭತ್ತರ ಹತ್ತಿರ ಕಾರಣಕ್ಕೆ. ಆದರೆ ಕೆ.ಎಂ. ಪುಟ್ಟಣ್ಣಯ್ಯ ಅವರು ಕರೆದರೆ ಮಾತ್ರ ಹೋಗುವೆ’’ ಎನ್ನುವ ಸ್ಪಷ್ಟ ಉತ್ತರ ಅವರದು.
ಇಂಥ ರಾಮು ಅವರು ಮೈಸೂರು ಆಕಾಶವಾಣಿಯ ಮುಖವೀಣೆ ಸಂಗೀತ ವಿದ್ವಾಂಸರಾದ ಎ.ಎ. ನಾರಾಯಣಪ್ಪ ಅವರ ಬಳಿ ಅನೇಕ ವರ್ಷ ಸಂಗೀತ ಅಭ್ಯಾಸ ಮಾಡಿದರು. ನಂತರ ಮೈಸೂರಿನ ಆಂಗ್ಲ ಸಂಗೀತ ವಿದ್ವಾಂಸರಾದ ಜಿ.ಎಂ. ಪೆರೇರ ಅವರಲ್ಲಿ ೧೨ ವರ್ಷಗಳವರೆಗೆ ಸಂಗೀತ ಕಲಿತರು. ಬಳಿಕ ಸುಗಮ ಸಂಗೀತ, ನಾಟ್ಯ, ನಾಟಕ ಹಾಗೂ ಸಿನೆಮಾಗಳಿಗೂ ತಮ್ಮ ವಾದ್ಯದ ಸಾಥ್ ನೀಡಿದರು.
ಮೈಸೂರಿಗೆ ಬರುತ್ತಿದ್ದ ಚಾಮುಂಡೇಶ್ವರಿ ನಾಟಕ ಕಂಪೆನಿ, ಕೊಟ್ಟೂರಪ್ಪ ನಾಟಕ ಕಂಪೆನಿ, ಹಿರಣ್ಣಯ್ಯ ಮಿತ್ರ ಮಂಡಳಿ, ಶೇಷಾಚಾರ್ ನಾಟಕ ಕಂಪೆನಿಗಳ ನಾಟಕಗಳಿಗೆ ಅವರು ತಮ್ಮ ವಾದ್ಯದ ಸಹಕಾರ ನೀಡಿದ್ದಾರೆ. ಅಲ್ಲದೆ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಅವರೊಂದಿಗೆ ಅನೇಕ ವರ್ಷ ಕ್ಲಾರಿಯೊನೆಟ್ ನುಡಿಸಿದ್ದಾರೆ. ಬೆಂಗಳೂರಿನ ಆರ್. ಪರಮಶಿವನ್ ಅವರೊಂದಿಗೆ ನಾಟಕಗಳಿಗೂ ದುಡಿದಿದ್ದಾರೆ. ಅದರಲ್ಲೂ ಮೈಸೂರಿನ ರಂಗಕರ್ಮಿ ಎಚ್.ಎಸ್. ಗೋವಿಂದಗೌಡ ಅವರು ಸಿ.ಡಿ.ಗಳನ್ನು ಹೊರತಂದಿದ್ದಾರೆ. ಇವುಗಳಿಗೆ ಆರ್. ಪರಮಶಿವನ್ ನಿರ್ದೇಶನ. ೧,೬೦೦ ರಂಗಗೀತೆಗಳ ಹತ್ತು ಸಿ.ಡಿ.ಗಳಿಗೆ ರಾಮು ಅವರು ಕ್ಲಾರಿಯೊನೆಟ್ ಮೂಲಕ ಮೆರುಗು ಹೆಚ್ಚಿಸಿದ್ದಾರೆ.
ಮೈಸೂರಿನ ರಂಗಾಯಣದಲ್ಲಿ ನಡೆದ ನಾಟಕಗಳಿಗೂ ಹಿನ್ನೆಲೆಯಾಗಿ ಕ್ಲಾರಿಯೊನೆಟ್ ನುಡಿಸಿದ್ದಾರೆ.
ಹೀಗೆಯೇ ನಾಟ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರು ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ಅವರ ದಿಲ್ಲಿಯ ನಿವಾಸದಲ್ಲಿ ನಡೆದ ನೃತ್ಯ ಕಾರ್ಯಕ್ರಮಕ್ಕೂ ತಮ್ಮ ವಾದ್ಯದ ಸಾಥ್ ನೀಡಿದ್ದಾರೆ. ಹೀಗೆಯೇ ಹರಿಕಥೆ ಹೇಳುತ್ತಿದ್ದ ಗುರುರಾಜು ನಾಯ್ಡು ಅವರಿಗೆ, ಶಂಕರ್ ಸಿಂಗ್ ನಿರ್ದೇಶನದ ‘ಅಲ್ಲಮಪ್ರಭು’ ಸಿನೆಮಾಕ್ಕೆ ಹಿನ್ನೆಲೆ ಸಂಗೀತಗಾರರಾಗಿ ದುಡಿದಿದ್ದಾರೆ.
ಅವರ ಪುತ್ರರಲ್ಲಿ ಆರ್.ಮೋಹನ್ (೬೧) ಅವರೂ ಕ್ಲಾರಿಯೊನೆಟ್ ವಾದಕರು. ಮೈಸೂರು ಅರಮನೆಯ ಬ್ಯಾಂಡ್ ಮಾಸ್ಟರ್ ಆಗಿದ್ದರು. ಮೈಸೂರು ಆಕಾಶವಾಣಿಯ ಎ ಗ್ರೇಡ್ ಕಲಾವಿದರಾದ ಅವರು, ಕಳೆದ ವರ್ಷ ಫೆಬ್ರವರಿಯಲ್ಲಿ ಮೈಸೂರು ಅರಮನೆಯಿಂದ ನಿವೃತ್ತಿಯಾದರು. ನಂತರ ನಾಟಕಗಳ ಜೊತೆಗೆ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹಾಗೂ ಆರ್ಕೆಸ್ಟ್ರಾ ತಂಡಗಳಿಗೆ ಸಾಥ್ ನೀಡುತ್ತಿದ್ದಾರೆ. ಮೋಹನ್ ಅವರ ಪುತ್ರ ರಾಕೇಶ್ ವಯಲಿನ್ ನುಡಿಸುತ್ತಾರೆ. ಅವರ ಪುತ್ರಿ ಡಾ.ಭೂಮಿಕಾ ಅವರು ಸುಗಮ ಸಂಗೀತ ಕಲಾವಿದರು. ರಾಮು ಅವರ ಇನ್ನೊಬ್ಬ ಪುತ್ರ ದಯಾಕರ್ ಅವರು ವಯಲಿನ್ ನುಡಿಸುತ್ತಾರೆ.
‘‘ನಮ್ಮ ತಾತ ದಾಸಪ್ಪ ಅವರು ಮೈಸೂರು ಅರಮನೆಯ ಆಂಗ್ಲ ವಾದ್ಯ ವೃಂದದಲ್ಲಿ ೧೮೮೮ರಲ್ಲಿ ಬ್ರಾಸ್ ಟ್ರಿಮನ್ ವಾದ್ಯ ನುಡಿಸುತ್ತಿದ್ದರು. ೧೮೮೮ರಿಂದ ೧೯೨೮ರ ವರೆಗೆ ಕಲಾವಿದರಾಗಿದ್ದರು. ಅವರ ನಂತರ ನಮ್ಮ ತಂದೆ ಕ್ಲಾರಿಯೊನೆಟ್ ವಾದಕರಾದರು. ಈ ವಾದ್ಯ ಅಪರೂಪ. ಕಲಿಯುವವರೂ ಅಪರೂಪ’’ ಎನ್ನುತ್ತಾರೆ ಮೋಹನ್.
ಮತ್ತೆ ರಾಮು ಕುರಿತು ಹೇಳುವೆ; ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅವರು ಅನೇಕ ಸಂಘ-ಸಂಸ್ಥೆಗಳ ಮೂಲಕ ಸನ್ಮಾನಿತರಾಗಿದ್ದಾರೆ. ಪ್ರಚಾರದಿಂದ ದೂರವಿರುವ, ಪ್ರಶಸ್ತಿಗಳಿಗೆ ಹೊತೊರೆಯದ ರಾಮು ಅವರು ಸದ್ದಿಲ್ಲದೆ ಹಿಂದೆ ಸರಿಯುತ್ತಿರುವ ತಮ್ಮ ವಾದ್ಯದ ಹಾಗೆ ಬದುಕು ಸವೆಸಿದವರು.