ಹಾಸಾಕೃ-ಅಪರೂಪದ ವ್ಯಕ್ತಿತ್ವ; ಅಪರೂಪದ ಕೃತಿ

ಹಿರಿಯ ರಂಗಕರ್ಮಿ ಹಾಸಾಕೃ ಕುರಿತ ಈ ಕೃತಿ ವಿಶಿಷ್ಟವಾದುದು. ಇದು ಕನ್ನಡ ಹಾಗೂ ಇಂಗ್ಲಿಷಿನಲ್ಲಿರುವ ಕಾರಣದ ಜೊತೆಗೆ ಹಾಸಾಕೃ ಕುರಿತ ಅಪರೂಪದ ಲೇಖನಗಳು ಇಲ್ಲಿವೆ. ಸಾಮಾನ್ಯವಾಗಿ ವ್ಯಕ್ತಿಗಳ ಕುರಿತ ಕೃತಿಯಲ್ಲಿ ಹೊಗಳಿಕೆಯೇ ಹೆಚ್ಚಿರುತ್ತದೆ. ಆದರೆ ಈ ಕೃತಿಯಲ್ಲಿ ಹೊಗಳಿಕೆಗಿಂತ ಹಾಸಾಕೃ ಇದ್ದ ಬಗೆಯನ್ನು ಕಟ್ಟಿಕೊಡಲಾಗಿದೆ.
‘ಹಾಸಾಕೃ ಎಂಬ ಮಿಸ್ಟರ್ ಸಿಟಿಜನ್’ ಕುರಿತು ಎನ್.ಕೆ. ಮೋಹನ್ರಾಂ ಅವರು ಮೊದಲಿಗೆ ಬರೆದಿರುವ ವಿಷಯ ಗಮನಾರ್ಹ. ‘ಆತ್ಮಚರಿತ್ರೆಯ ಸರಕು ಅವರಲ್ಲಿದೆಯಾದರೂ ತುಂಬ ಹಿಂಜರಿಕೆಯ, ಸಂಕೋಚದ, ಮುದುಡಿಕೊಳ್ಳುವ ಹಾಸಾಕೃ; ಬರೆಯಬಹುದಾದರೂ ಬರೆದಿಲ್ಲ, ಬರೆಯಲಿಲ್ಲ, ಬರೆಯುವುದೂ ಇಲ್ಲವಾಗಿದ್ದರಿಂದ. ನಾನು ಬರೆಯದಿದ್ದರೆ ಯಾರಿಗೂ ನಷ್ಟವಿಲ್ಲವೆಂಬುದು. ನನ್ನ ಬಗ್ಗೆ ಬರೆಯಹೊರಟಿರುವ ನಿಮಗೂ ಇದು ಅನ್ವಯ ಎಂಬುದು ಅವರ ಅಖೈರು.’
ಕಾಲದ ದೃಷ್ಟಿಯಿಂದ ಚರಿತ್ರೆಗೆ ಮುಂದೆಂದಾದರೂ ಇದರ ಒಂದೆರಡು ಪುಟಗಳು, ವಿಷಯಗಳು ನೆರವಾಗಬಹುದು ಎಂಬುದು ಈ ಹೊತ್ತಿಗೆಯ ಉದ್ದೇಶ. ಇದನ್ನು ಫಾರ್ಮಲ್ಲಾಗಿಸಹೊರಟರೆ ಹಾಸಾಕೃ ವಯಸ್ಸಿನಲ್ಲಿ ಎಂಭತ್ತು ದಾಟಿದರು. ಇನ್ನೇನು ತೊಂಭತ್ತು ಮುಟ್ಟುತ್ತಾರೆ. ಅವರ ಅಭಿನಯದ ‘ಪ್ಯಾಸೇಜಸ್ ಟು ಇಂಡಿಯಾ’ ಬಿಡುಗಡೆಗೆ ಐವತ್ತು ವರ್ಷಗಳಾಗಿವೆ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಹತ್ತಾರು ಸಮರ್ಥನೆಗಳಿಗೆ ಕೊರತೆ ಇಲ್ಲ.
‘ಐದು ಅಡಿ ಎತ್ತರ, ಬಡಕಲು ದೇಹ, ಕುರುಚಲು ಗಡ್ಡ, ಬಾಯಲ್ಲಿ ಬೀಡಿ, ಕೈಯಲ್ಲೊಂದು ಸೈಕಲ್... ಇವರಿಗೆ ಕೋಟು, ಕಚ್ಚೆ, ಪೇಟ ಹಾಕಿದ್ದಲ್ಲಿ ‘ಮಿಸ್ಟರ್ ಸಿಟಿಜನ್’ ಆಗುವ ಹಾಸಾಕೃ ಅವರನ್ನು 1950-2020ರ ಕಾಲದ ಕತೆಗಾರ, ಪತ್ರಕರ್ತ, ನಾಟಕಕಾರ, ನಟ, ಬಿ.ವಿ.ಕಾರಂತರ ಒಡನಾಡಿ, ಹೆಚ್ಚಾಗಿ ಒಬ್ಬ ಕಾಮ್ರೇಡ್ ಎಂತೆಲ್ಲಾ ನೋಡುವುದೇ ಉತ್ತಮ’ ಎನ್ನುವ ಅವರ ಮಾತುಗಳ ಮೂಲಕ ಹಾಸಾಕೃ ಅವರನ್ನು ಅರಿಯಬಹುದು.
‘ಮಾತು ಮಾತಿನಲ್ಲೇ ಕಳೆದುಹೋದವರು’ ಲೇಖನದಲ್ಲಿ ಎನ್.ಕೆ. ಮೋಹನ್ರಾಂ ಅವರು ಹಾಸಾಕೃ ಅವರನ್ನು ಪರಿಚಯಿಸಿದ್ದು ಭಿನ್ನವಾಗಿ. ‘ತಂದೆ ಶ್ರೀಕಂಠಯ್ಯ. ಊರು ಹುಣಸೂರು. ಈ ಲೆಕ್ಕದಲ್ಲಿ ಹಾಸಾಕೃ ಆಗಬೇಕಾದ್ದು, ಹುಣಸೂರು ಶ್ರೀಕಂಠಯ್ಯ ಕೃಷ್ಣಮೂರ್ತಿ. 1950ರ ದಶಕದ ಸಾಹಿತ್ಯಲೋಕದ ಫ್ಯಾಶನ್ನಿನಂತೆ, ಅವರ ಹೆಸರು ಅಥವಾ ಸಂಕ್ಷಿಪ್ತನಾಮ ಇರಬೇಕಾದ್ದು ಹುಶ್ರೀಕೃ. ಆದರೆ ಆದದ್ದು ಹಾಸಾಕೃ. ಅದು ಹೇಗೆ ಅಂತ ಅವರನ್ನು ಕೇಳಿದ್ದು ಸುಮಾರು 50 ವರ್ಷಗಳ ಹಿಂದೆ. ಹಾಸಾಕೃ ಎಂದರೆ ಹಾಸ್ಯವಿಲ್ಲದ, ಸಾರವಿಲ್ಲದ ಕೃತಿಗಳನ್ನು ರಚಿಸುವವನು ಅಂತ...’
‘ಇಂಥ ಹಾಸಾಕೃ ಅವರು ಹುಣಸೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದು ಆರಂಭಿಸಿದರು. ಮಾಧ್ಯಮಿಕ ಶಾಲೆಯವರೆಗೆ ಹುಣಸೂರಿನಲ್ಲಿಯೇ ಮುಂದುವರಿಸಿದರು. ನಂತರ ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಹೈಸ್ಕೂಲಿನಲ್ಲಿ ಮೊದಲೆರಡು ವರ್ಷ ಓದಿದರು. ಆಮೇಲೆ ಮೆಟ್ರಿಕ್ ಪರೀಕ್ಷೆಯನ್ನು ಮೊದಲನೇ ಸಲ ಉತ್ತಮ ಅಂಕಗಳೊಂದಿಗೆ ಪಾಸಾದರು. ಆಮೇಲೆ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಟರ್ಮೀಡಿಯಟ್, ಬಿಎಸ್ಸಿ ಪದವಿ ಪಡೆದರು. ಈ ಎಲ್ಲ ವಿದ್ಯಾಭ್ಯಾಸ ನಡೆದದ್ದು ವಾರಾನ್ನ ಆಶ್ರಯದಲ್ಲಿ’
ವಾರಾನ್ನ ಕುರಿತು ಮೋಹನ್ರಾಂ ಅವರು ಬರೆದದ್ದು ಕುತೂಹಲವಾಗಿದೆ. ‘ಇಂದಿನವರಿಗೆ ವಾರಾನ್ನ ಎಂದರೆ ಅರ್ಥವಾಗಲಾರದು. ಇದು ಇದ್ದದ್ದು ಬಹುತೇಕವಾಗಿ ಬಡ ಬ್ರಾಹ್ಮಣ ಹುಡುಗರಿಗೆ. ಅಂದರೆ ಹುಡುಗನೊಬ್ಬ ವಾರದ ಏಳು ದಿನಗಳೂ ರವಿವಾರದಿಂದ ಶನಿವಾರದವರೆಗೆ, ಒಬ್ಬೊಬ್ಬ ಬ್ರಾಹ್ಮಣರ ಮನೆಗೆ ವಾರದ ಒಂದು ದಿನ ಬೆಳಗ್ಗೆ, ರಾತ್ರಿ ಹೊತ್ತುಗಳಲ್ಲಿ ಊಟಕ್ಕೆ ಹೋಗಬೇಕು. ಆ ಹುಡುಗನಿಗೆ ಆ ಮನೆಯವರು ಊಟ ಹಾಕುತ್ತಿದ್ದರು. ತಿಂದ ಎಲೆಯನ್ನು ಎತ್ತಿ ನಿಗದಿತ ಸ್ಥಳದಲ್ಲಿ ಹಾಕಿ, ಊಟ ಮಾಡಿದ ಜಾಗವನ್ನು ಹುಡುಗನೇ ಕ್ಲೀನ್ ಮಾಡಬೇಕು. ಅವರು ಹಾಕಿದ್ದನ್ನು, ಹಾಕಿದ್ದಷ್ಟೇ ತಿನ್ನಬೇಕು. ಬೇಕು, ಬೇಡಗಳ ಸ್ವಾತಂತ್ರ್ಯವಿಲ್ಲ. ಬಹುತೇಕವಾಗಿ ಊಟ ಹಾಕುವ ಮನೆಯವರು ಸುಮಾರಾಗಿ ಸ್ಥಿತಿವಂತ ಬ್ರಾಹ್ಮಣರಾದರೂ ಕೆಲವೊಂದು ಮನೆಗಳಲ್ಲಿ ಹೆಂಗಸರ ಗೊಣಗಾಟವೂ ಇರುತ್ತಿತ್ತು. ಆದರೆ ಬಹುತೇಕರ ಮನೆಗಳಲ್ಲಿ ಅದನ್ನು ತಮ್ಮ ಧರ್ಮ, ಕರ್ಮ, ಕರ್ತವ್ಯ ಎಂಬಂತೆ ಕಾಣುತ್ತಿದ್ದರು. ವಾರಾನ್ನದ ಹುಡುಗರಿಗೆ ಸಿಗುತ್ತಿದ್ದುದು ಎರಡು ಹೊತ್ತು ಊಟವಷ್ಟೇ. ಅದೂ ಆ ಮನೆಯವರು ಹೇಳಿದ ಸಮಯಕ್ಕೆ ಸರಿಯಾಗಿ ಹೋಗಬೇಕು. ಎರಡು ಊಟದಾಚೆ, ತಿಂಡಿ, ಕಾಫಿ ಏನೂ ಇಲ್ಲ. 1970ರ ದಶಕದವರೆಗೂ ಚಾಲ್ತಿಯಲ್ಲಿದ್ದ ಈ ವಾರಾನ್ನದ ಸೇವೆ ನಂತರ ಕಾಣೆಯಾಯಿತು’
ಕೃತಿ: ಹಾಸಾಕೃ
ಸಂಪಾದಕರು: ಎನ್.ಕೆ.ಮೋಹನ್ರಾಂ, ಎಂ.ಕೆ.ಶಂಕರ್, ಮುರಳೀಧರ ಖಜಾನೆ, ಎನ್.ವಿದ್ಯಾಶಂಕರ್
ಪ್ರಕಾಶನ: ಚಾರುಮತಿ ಪ್ರಕಾಶನ, ಬೆಂಗಳೂರು
ಪುಟ: 128, ಬೆಲೆ: 150
ಹೀಗೆ ವಾರಾನ್ನದ ಊಟ ಮಾಡಿ ಕಲಿತ ಹಾಸಾಕೃರಿಗೆ ಎಸೆಸೆಲ್ಸಿ ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವೀಸ್ನಲ್ಲಿ (ಆರ್ಎಂಎಸ್) ಸಾರ್ಟರ್ ಕೆಲಸ ಸಿಕ್ಕಿತು. ಇದಕ್ಕೂ ಮೊದಲು ಮೈಸೂರಿನ ಒಲಿಂಪಿಯಾ ಸಿನೆಮಾ ಟಾಕೀಸಿನಲ್ಲಿ ಟಿಕೆಟ್ ಕೊಡುವ ಕೆಲಸವನ್ನು ಒಂದೆರಡು ತಿಂಗಳು ನಿರ್ವಹಿಸಿದರು. ನಂತರ ನಟ ದ್ವಾರಕೀಶ್ ಕುಟುಂಬದ ಟೈರ್ಸ್ ಅಂಗಡಿಯಲ್ಲಿ ಸಹಾಯಕರಾಗಿದ್ದರು.
ಇದರೊಂದಿಗೆ ‘ಸಂಪಿಗೆ ಹೂ’ ಎಂಬ ಕಾದಂಬರಿ ಬರೆದು, ಪ್ರಜಾವಾಣಿಗೆ ವಿಮರ್ಶೆಗೆ ಕಳಿಸಿದರು. ಆಗಿನ್ನೂ ಅವರಿಗೆ 18ರ ಹರೆಯ. ಅವರ ಕಾದಂಬರಿ ಕುರಿತು ಶ್ರೀರಂಗರು ‘ಈ ತರುಣ ಲೇಖಕನಿಂದ, ಕನ್ನಡ ಸಾಹಿತ್ಯಲೋಕ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೃತಿಗಳನ್ನು ನಿರೀಕ್ಷಿಸಬಹುದು ಎಂದರು. ತಕ್ಷಣ ಹಾಸಾಕೃ ಇನ್ನೊಂದು ಕಾದಂಬರಿ ‘ನಾರಿ ಕಂಡ ದಾರಿ’ ಪ್ರಕಟಿಸಿದರು. ಮತ್ತೆ ಪ್ರಜಾವಾಣಿಗೆ ವಿಮರ್ಶೆಗೆ ಕಳಿಸಿದಾಗ ಶ್ರೀರಂಗರು ‘ಇನ್ನು ಮುಂದೆ ಈ ಲೇಖಕನಿಂದ ಏನನ್ನೂ ನಿರೀಕ್ಷಿಸುವಂತಿಲ್ಲ’ ಎಂದು ಬರೆದಾಗ ಹಾಸಾಕೃ ಮತ್ತೆ ಬರೆಯಲಿಲ್ಲ. ‘ಗಂಭೀರವಾಗಿ ತೆಗೆದುಕೊಳ್ಳಬೇಕಾದ ಮೊದಲನೇ ವಿಮರ್ಶೆಯನ್ನು ಲಘುವಾಗಿ, ಲಘುವಾಗಿ ತೆಗೆದುಕೊಳ್ಳಬೇಕಾದ ಎರಡನೆಯ ವಿಮರ್ಶೆಯನ್ನು ಗಂಭೀರವಾಗಿ ತೆಗೆದುಕೊಂಡ ಹಾಸಾಕೃ ಅವರ ವಿಶೇಷ ಇದೇ’ ಎಂದು ಮೋಹನ್ರಾಂ ಹೇಳುತ್ತಾರೆ. ಇದರ ಪರಿಣಾಮ ಇಂಗ್ಲಿಷ್ನಲ್ಲಿ ಲೇಖನಗಳನ್ನು, ಕಥೆಗಳನ್ನು ಬರೆದರು. ಅವರ ರಂಗಪ್ರೀತಿ ಶುರುವಾಗಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಓದುವಾಗಲೇ. ನಂತರ ಆರ್ಎಂಎಸ್ ಸೇರಿ ಬೆಂಗಳೂರಲ್ಲಿ ನೆಲೆಯೂರಿದ್ದರಿಂದ ಲಂಕೇಶರ ನಾಟಕಗಳಲ್ಲಿ ಅಭಿನಯಿಸಿದರು. ಬಳಿಕ ಬಿ.ವಿ.ಕಾರಂತರು ನಿರ್ದೇಶಿಸಿದ ‘ಸತ್ತವರ ನೆರಳು’ ನಾಟಕದಲ್ಲಿ ಅಭಿನಯಿಸಿದರು. ಇದರಿಂದ ಬಿ.ವಿ. ಕಾರಂತರ ಒಡನಾಟ ಸಿಕ್ಕಿತು. ಇದರ ಫಲವಾಗಿ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಬಿ.ವಿ. ಕಾರಂತರು, ಹಾಸಾಕೃ ಅವರು ವಿಶೇಷಾಧಿಕಾರಿಯಾಗಿ ಮೂರು ವರ್ಷಗಳವರೆಗೆ ನೇಮಕವಾಗಲು ನೆರವಾದರು. ಇಷ್ಟೊತ್ತಿಗೆ ಆರ್ಎಂಎಸ್ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ರಂಗಕರ್ಮಿಯಾಗಿದ್ದರು. ಅವರ ಪತ್ನಿ ಶೈಲಜಾ ಅವರು ದೂರವಾಣಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರಿಂದ ಜೀವನಕ್ಕೆ ಸಾಕೆಂದು ತೀರ್ಮಾನಿಸಿದರು. ಆದರೆ ಮೈಸೂರಿನ ರಂಗಾಯಣದಲ್ಲಿ ಅವಧಿಗೆ ಮುನ್ನವೇ ಹಾಸಾಕೃ ರಾಜೀನಾಮೆ ನೀಡಿದರು. ಇದರ ಲಾಭ ರಂಗಭೂಮಿಗಾಯಿತು. ಎಪ್ಪತ್ತು-ಎಂಭತ್ತರ ದಶಕದ ಅನೇಕ ನಾಟಕಗಳ ಖಾಯಂ ನಟರಾದರು. ನಂತರ ಪ್ರಸಿದ್ಧವಾದ ‘ಲಾರೆನ್ಸ್ ಆಫ್ ಅರೇಬಿಯಾ’ ಸಿನೆಮಾದ ನಿರ್ದೇಶಕ ಡೇವಿಡ್ ಲೀನ್ ಅವರ ‘ಪ್ಯಾಸೇಜ್ ಟು ಇಂಡಿಯಾ’ ಸಿನೆಮಾದಲ್ಲಿ ನಟಿಸುವ ಅವಕಾಶ ಹಾಸಾಕೃ ಅವರಿಗೆ ಸಿಕ್ಕಿತು. ಆಮೇಲೆ ಗಿರೀಶ್ ಕಾಸರವಳ್ಳಿ ಅವರ ಒಂದೆರಡು ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದರು. ಜೊತೆಗೆ ‘ಮತ್ತೆ ಮತ್ತೆ’ ನಾಟಕವನ್ನು ಅವರು ಬರೆದಾಗ ಅದನ್ನು ರಂಗಸಂಪದ ತಂಡ ರಂಗಕ್ಕೆ ತಂದಿತು. ಇದನ್ನು ಆರ್. ನಾಗೇಶ್ ನಿರ್ದೇಶಿಸಿದ್ದರು. ಈ ನಾಟಕದ ಭಿತ್ತಿಪತ್ರದಲ್ಲಿ ಹಾಸಾಕೃ ಬರೆದುದು ಉಲ್ಲೇಖಾರ್ಹ ‘ನಾವು ನಾಟಕದಿಂದ ನಾಟಕಕ್ಕೆ ನಗುತ್ತಾ ಸಾಗಿದ್ದೇವೆ. ನಕ್ಕು ನಕ್ಕು ನಮ್ಮ ಹೊಟ್ಟೆ ಹುಣ್ಣಾಗಿದೆ. ಇನ್ನೂ ಹೆಚ್ಚು ನಕ್ಕರೆ ಅಲ್ಸರ್ ಬಂದೀತು. ಬರುಬರುತ್ತ ಥಿಯೇಟರ್ ಲಾಫಿಂಗ್ ಗ್ಯಾಸ್ ಛೇಂಬರ್ ಆಗಿದೆ. ಬಹು ಪ್ರೇಕ್ಷಕರಿಗೆ ಥಿಯೇಟರ್ ಒಂದು ಕಚಗುಳಿ. ಎಲ್ಲೆಲ್ಲೂ ತಮ್ಮ ಜೀವನವನ್ನು ದುರಂತಗಳು ಆವರಿಸಿರುವಾಗ ನಾವೇಕೆ ಹೀಗೆ ನಗಲು ಸಾಯುತ್ತಿದ್ದೇವೆ? ದುರಂತಗಳ ಪರಿಚಯವೇ ನಮಗಿಲ್ಲವೇ ಅಥವಾ ದುರಂತಗಳನ್ನು ಭರಿಸಲಾರದಷ್ಟು ನಾವು ದುರ್ಬಲರೆ? ಆರು ಸಾವಿರ ಮೈಲುಗಳಾಚೆ ಯಾರೋ ಬೆತ್ತಲೆ ಓಡುವ ಮೋಜಿನ ಸುದ್ದಿ ನಮ್ಮನ್ನು ಮುಟ್ಟುತ್ತದೆ, ಆಕರ್ಷಿಸುತ್ತದೆ. ಆದರೆ ಕಣ್ಣ ಮುಂದೆಯೇ ಹೊಟ್ಟೆಗಿಲ್ಲದೆಯೇ ಅಥವಾ ಕಲಬೆರಕೆಯಿಂದ ಸಾಯುವ ಸುದ್ದಿ ನಮ್ಮನ್ನೇಕೆ ತಟ್ಟುವುದಿಲ್ಲ? ಇಂತಹ ಸಂದರ್ಭದಲ್ಲಿ ದುರಂತಗಳನ್ನು ಅದರ ಅಡಿಪಾಯ ಅಪಾಯಗಳೊಂದಿಗೆ ಪ್ರೇಕ್ಷಕನಿಗೆ ಒಡ್ಡುವುದು ನಾಟಕಕಾರನಿಗೆ ಅನಿವಾರ್ಯವಾಗುತ್ತದೆ’
ಮುಖ್ಯವಾಗಿ ಬಿ.ವಿ. ಕಾರಂತರ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹಾಗೂ ಕರ್ನಾಟಕ ನಾಟಕ ಅಕಾಡಮಿಗೆ ಅವರು ಕೃತಿಗಳನ್ನು ರಚಿಸಿದ್ದಾರೆ. ಅವರ ಕುರಿತು ಮುರಳೀಧರ ಖಜಾನೆ, ಶಶಿಧರ ಭಾರಿಘಾಟ್, ಜೆ. ವೆಂಕಟೇಶ ಪ್ರಸಾದ್, ಎನ್.ಮಂಗಳಾ, ಟಿ.ಎಸ್. ನಾಗಾಭರಣ ಬರೆದ ಲೇಖನಗಳು ಇಲ್ಲಿವೆ. ಈ ಮೂಲಕ ಹಾಸಾಕೃ ಅವರನ್ನು ಅರಿಯಲು ಸಾಧ್ಯವಾಗುತ್ತದೆ. ಕೊನೆಗೆ ‘ಸತ್ತವರ ನೆರಳು’ ಕೆಲವು ಅನಿಸಿಕೆಗಳು ಕುರಿತು ಹಾಸಾಕೃ ಬರೆದುದು ಇಲ್ಲಿದೆ.
ಮತ್ತೆ ಎನ್.ಕೆ. ಮೋಹನ್ರಾಂ ಅವರ ಪ್ರಾಸ್ತಾವಿಕ ಮಾತುಗಳಲ್ಲಿನ ಮೊದಲಿನ ಮಾತುಗಳು ಇಲ್ಲಿ ಉಲ್ಲೇಖಾರ್ಹ. ‘ನಿಜಕ್ಕೂ ಗಾಬರಿಯಾದದ್ದು ಈಚಿನ ದಿನಗಳಲ್ಲಿ ಪ್ರಶಸ್ತಿ ಪಡೆವವರಿಗಿಂತ ಕೊಡುವವರೇ ಹೆಚ್ಚಾಗಿದ್ದಾರೆ ಎಂಬ ಹೇಳಿಕೆಯನ್ನೋದಿ. ಇದನ್ನು ಹೇಳಿದ್ದು ಪ್ರಶಸ್ತಿ ಪಡೆದವರೊಬ್ಬರು. ಅದೂ ಪ್ರಶಸ್ತಿ ಸ್ವೀಕಾರದ ಸಮಾರಂಭದಲ್ಲಿ. ಅವರಿಗೆ ಸಂದದ್ದು ಪ್ರತಿಷ್ಠಿತ ಕವಿಯೊಬ್ಬರ ಹೆಸರಿನ ಪ್ರಶಸ್ತಿ. ಕೊಟ್ಟವರೂ ಪಡೆದವರೂ ಸಾಂಸ್ಕೃತಿಕ ಬದ್ಧತೆಗೆ ಹೆಸರಾದವರೇ. ಪಡೆದವರ ಹೇಳಿಕೆಯಲ್ಲಿದ್ದ ನೇರವಂತಿಕೆ, ವಸ್ತುಸ್ಥಿತಿಯಲ್ಲಿ ಕಳಕಳಿಯಿತ್ತು.
ಇದೇ ತರದ ಮತ್ತೊಂದು ಈಚಿನ ಹೇಳಿಕೆ, ಓದುವವರಿಗಿಂತ ಕನ್ನಡದಲ್ಲಿ ಬರೆವವರೇ ಹೆಚ್ಚಾಗಿದ್ದಾರೆ ಎಂಬುದು. ಈ ಎರಡೂ ಹೇಳಿಕೆಗಳು ಗಾಬರಿಯೊಂದಿಗೆ ತರುವ ಸಂಕೋಚ, ಮುಜುಗರಗಳು ನಮ್ಮೆಲ್ಲರನ್ನೂ ಕುರಿತದ್ದಾಗಿದೆಯೇ? ಬೇರೊಂದು ಸಂದರ್ಭದಲ್ಲಿ ನಾನೇ ಬರೆದಿದ್ದೆ. ದತ್ತಿ, ಟ್ರಸ್ಟ್, ಸ್ಮಾರಕ, ಮಠ, ಪೀಠ, ಪರಿಷತ್ತು, ಪ್ರತಿಷ್ಠಾನ, ಕೂಟ, ಬಳಗ, ಸಂಘಸಂಸ್ಥೆಗಳು, ಕಾರ್ಪೊರೇಷನ್, ಮುನಿಸಿಪಾಲಿಟಿಗಳೊಂದಿಗೆ ಇಲ್ಲಿನ ಅಂದಾಜು ಮೂವತ್ತು ಸರಕಾರಿ ವಿಶ್ವವಿದ್ಯಾನಿಲಯಗಳು, ಸುಮಾರು ಐವತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ಕೊಡುವ ಡಾಕ್ಟರೇಟ್ಗಳು, ಪ್ರಶಸ್ತಿಗಳು, ಬಿರುದುಗಳು ಸೇರಿದಂತೆ ಪಡೆದವರ ಸಂಖ್ಯೆ ವರ್ಷವೊಂದಕ್ಕೆ ಸುಮಾರು ಮೂರು ಸಾವಿರ ದಾಟುತ್ತದೆ. ಇವುಗಳಲ್ಲಿ ಶೇಕಡಾ 90ರಷ್ಟು ಫೇಕು, ಫೇಡು, ಫೇಲುಗಳೇ. ಇನ್ನು ಅಸ್ತಿತ್ವದಲ್ಲೇ ಇರದ ವಿದೇಶಿ ವಿವಿಗಳ ಲೇಬಲ್ಲಿನ ಬರ್ಮಾ ಬಝಾರ್ ಡಾಕ್ಟರೇಟ್ಗಳು ಸಹ ಇದರೊಂದಿಗಿವೆ’
ಇದು ಸುಡು(ವ) ವಾಸ್ತವ. ಹಾಸಾಕೃ ಹಾಗೆ ಬದುಕುವವರು ಹಾಗೂ ಮೋಹನ್ರಾಂ ಹಾಗೆ ಬರೆಯುವವರು ವಿರಳ. ಹೀಗಾಗಿ ಇದು ವಿಶಿಷ್ಟ ಕೃತಿಯೆಂದೆ. ಇದನ್ನು ಪ್ರಕಟಿಸಿದ ಚಾರುಮತಿ ಪ್ರಕಾಶನದ ಬಿ.ಎಸ್.ವಿದ್ಯಾರಣ್ಯ ಅವರನ್ನು ಅಭಿನಂದಿಸುವೆ (94482 35553). ಆದರೆ ಈ ಕೃತಿಯ ಮುಖಪುಟಕ್ಕೆ ಹಾಸಾಕೃ ಅವರ ಫೋಟೊವನ್ನೇ ಬಳಸಬಹುದಿತ್ತು. ಹಾಗೆ ಬಳಸಿದ್ದರೆ ಯುವತಲೆಮಾರಿನ ರಂಗಕರ್ಮಿಗಳಿಗೆ, ರಂಗಾಸಕ್ತರಿಗೆ ಅವರ ಮುಖಪರಿಚಯವಾಗುತ್ತಿತ್ತು. ಒಳಪುಟಗಳಲ್ಲಾದರೂ ಅವರ ಫೋಟೊ ಬಳಸಬಹುದಿತ್ತು.