ಬಣ್ಣ ನಂಬಿ ಬದುಕು ಕಟ್ಟಿಕೊಂಡ ಕಲಾವಿದೆಯರು

ಮೊನ್ನೆ (ಜುಲೈ 28) ಮೈಸೂರು ಜಿಲ್ಲಾ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘವು ತನ್ನ 36ನೇ ವರ್ಷದ ಅಂಗವಾಗಿ ಪೌರಾಣಿಕ ರಂಗಸಂಭ್ರಮವನ್ನು ಆಚರಿಸಿತು. ಐದಾರು ಪೌರಾಣಿಕ ನಾಟಕಗಳ ದೃಶ್ಯಾವಳಿಗಳು ಸಮಾರಂಭದಲ್ಲಿದ್ದವು.
ಸುಮಾರು ಎಂಭತ್ತಕ್ಕೂ ಹೆಚ್ಚಿರುವ ಈ ಸಂಘದ ಕಲಾವಿದೆಯರು ರಂಗಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡವರು. ಇದರ ಅಧ್ಯಕ್ಷರಾದ ವಸಂತಕೃಷ್ಣ ಅವರಿಗೆ ಈಗ 79 ವರ್ಷ ವಯಸ್ಸು. ಸಂಘ ಆರಂಭವಾದಾಗಿನಿಂದ ಅವರೇ ಅಧ್ಯಕ್ಷರಾಗಿದ್ದಾರೆ. ಈ ಸಂಘ ಕಟ್ಟುವ ಮುನ್ನ ಅವರು ಗಾಯತ್ರಿ ಸ್ತ್ರೀ ನಾಟಕ ಮಂಡಳಿಯಲ್ಲಿದ್ದರು. ವಸಂತಮ್ಮ ಅವರ ಸೋದರಮಾವ ವೆಂಕಟಾಚಾರ್ಯ ಹಾಗೂ ಅವರ ಗೆಳೆಯರಾದ ಗುಬ್ಬಿ ಕಂಪೆನಿಯಲ್ಲಿ ಹಾರ್ಮೋನಿಯಂ ಮಾಸ್ಟ್ರು ಆಗಿದ್ದ ಟಿ.ಎನ್. ದೊರೆಸ್ವಾಮಿ ಅವರು ಕಲಾವಿದೆಯರಿಂದ ಪುರುಷ ಪಾತ್ರಗಳನ್ನು ಮಾಡಿಸಬೇಕೆಂದು ನಿರ್ಧರಿಸಿದರು. ಆಗ ವಸಂತಮ್ಮ, ಅವರ ಅಕ್ಕ ಇಂದ್ರಾಣಿ(ಇಂದ್ರಮ್ಮ), ಅವರ ಗೆಳತಿಯರಾದ ಪ್ರೇಮಾ, ಕಮಲಮ್ಮ, ಲಲಿತಾ, ನಾಗರತ್ನಾ, ಜಗದಂಬಾ, ಕಲಾವತಿ, ಎಸ್. ಸರೋಜಿನಿ, ಜಯಕುಮಾರಿ, ಅಂಬುಜಮ್ಮ ಇವರೆಲ್ಲ ಸೇರಿ ‘ಸಂಗೀತ ಸುಭದ್ರಾ ಪರಿಣಯ’ ನಾಟಕವನ್ನು ಟಿ.ಎನ್. ದೊರೆಸ್ವಾಮಿ ನಿರ್ದೇಶನದಲ್ಲಿ (1958) ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿಯ ಮುಡುಕುತೊರೆ ಜಾತ್ರೆಯಲ್ಲಿ ಮೊದಲಿಗೆ ಪ್ರದರ್ಶಿಸಿದರು. ಆಮೇಲೆ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗದಲ್ಲಿ ನಾಟಕವಾಡಿದರು. ಇವರೊಂದಿಗೆ ಆಸ್ಥಾನ ವಿದ್ವಾಂಸರಾದ ಬೆಂಗಳೂರಿನ ನಾರಾಯಣದಾಸರು ಹಾರ್ಮೋನಿಯಂ ಮಾಸ್ಟ್ರರಾಗಿ ಕೈಜೋಡಿಸಿದರೆ, ಅವರ ಹೆಂಡತಿ ಚಂದ್ರಮ್ಮ ನಾಟಕದಲ್ಲಿ ಬಣ್ಣ ಹಚ್ಚಿದರು. ಅಲ್ಲದೆ ತಬಲಾಕ್ಕೆ ಚೌಡಪ್ಪ, ವಯಲಿನ್ ಮೂಲಕ ಶೇಷಾದ್ರಿ ಸಾಥಿ ನೀಡಿದರು.
ಬಳಿಕ ಕೃಷ್ಣಲೀಲೆ, ಕೃಷ್ಣಗಾರುಡಿ, ಗುಲೇಬಕಾವಲಿ, ದೇವದಾಸಿ, ಎಚ್ಚಮನಾಯಕ ಮೊದಲಾದ ನಾಟಕಗಳನ್ನು ಪ್ರದರ್ಶಿಸಿದರು. ಹೀಗೆ ಏಳೆಂಟು ವರ್ಷ ಕಂಪೆನಿ ನಡೆಯಿತು. 1962ರಲ್ಲಿ ಅಂಬುಜಮ್ಮ ಅವರು ರಾಜರಾಜೇಶ್ವರಿ ಸ್ತ್ರೀ ನಾಟಕ ಮಂಡಳಿ ಆರಂಭಿಸಿದರು. ಇದಕ್ಕೆ ಜಯಕುಮಾರಿ ಹಾಗೂ ಸರೋಜಿನಿ ಸೋದರಿಯರು ಸೇರಿದರು. ಆಗ ಬೇರೆ ಕಲಾವಿದೆಯರನ್ನು ಕಟ್ಟಿಕೊಂಡು ವಸಂತಮ್ಮ ನಾಟಕವಾಡಿದರು. ಅತ್ತ ಅಂಬುಜಮ್ಮ ಅವರು ‘ಕೃಷ್ಣಗಾರುಡಿ’ ನಾಟಕದ ಭೀಮನ ಪಾತ್ರಕ್ಕೆ ಆರ್. ನಾಗರತ್ನಮ್ಮ ಅವರನ್ನು ಆಹ್ವಾನಿಸಿದರು. ಅಂಬುಜಮ್ಮ ಅವರ ಕಂಪೆನಿಯು 10-12 ವರ್ಷ ನಡೆಯಿತು. ಆಮೇಲೆ ಆರ್. ನಾಗರತ್ನಮ್ಮ ಅವರು ಸ್ತ್ರೀ ನಾಟಕ ಮಂಡಳಿ ಎನ್ನುವ ಸ್ವಂತ ಕಂಪೆನಿ ಶುರು ಮಾಡಿದರು. ಇದಕ್ಕೆ ಅವರ ತಂಗಿ ಆರ್. ಮಂಜುಳಮ್ಮ, ಅವರ ಸೋದರ ಆರ್. ಪರಮಶಿವನ್ ಜೊತೆಗಿದ್ದರು. ಈ ಕಂಪೆನಿಯಲ್ಲೂ ವಸಂತಮ್ಮ ಅವರು ಬಣ್ಣ ಹಚ್ಚಿದರು. ಅಲ್ಲದೆ ಕೊಟ್ಟೂರಪ್ಪ ಅವರ ಚಾಮುಂಡೇಶ್ವರಿ ಕಂಪೆನಿ, ಶೇಷಾಚಾರ್ ಅವರ ಶೇಷಕಲಾ ನಾಟಕ ಮಂಡಳಿ, ನಂಜನಗೂಡು ನಾಗಪ್ಪ ಅವರ ಶ್ರೀಕಂಠೇಶ್ವರ ನಾಟಕ ಮಂಡಳಿಯಲ್ಲೂ ವಸಂತಮ್ಮ ಹಲವಾರು ಪಾತ್ರಗಳನ್ನು ನಿರ್ವಹಿಸಿದರು.
ತಮ್ಮ ಕಂಪೆನಿ ನಿಂತ ಮೇಲೆ ಅಂದರೆ 1976-77ರಿಂದ ಹಳ್ಳಿಗಳಲ್ಲಿರುವ ಹವ್ಯಾಸಿ ತಂಡಗಳು ಆಡುವ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಅವರ ಹಾಗೆ ಇತರ ಕಲಾವಿದೆಯರು ಹಳ್ಳಿಗಳಲ್ಲಿ ನಾಟಕವಾಡಿದರು. ಇದರಿಂದ ಮೈಸೂರು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲದೆ, ಎಲ್ಲ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳಿಗೆ ಬಣ್ಣ ಹಚ್ಚಿದರು. ಅದು ಪೌರಾಣಿಕ ನಾಟಕಗಳ ಪರ್ವ. ಜನವರಿಯಿಂದ ಜೂನ್ ಅಂತ್ಯದವರೆಗೆ ಕಲಾವಿದೆಯರಿಗೆ ಪುರುಸೊತ್ತಿರಲಿಲ್ಲ. ಅವರ ನಾಟಕಗಳ ವಸ್ತ್ರಾಲಂಕಾರಕ್ಕೆ, ವರ್ಣಾಲಂಕಾರಕ್ಕೆ ಬಿ.ಎಂ. ರಾಮಚಂದ್ರ ಸದಾ ಸಹಕರಿಸುವರು.
‘‘ಆಗೆಲ್ಲ ಕುಟುಂಬದವರ ಹಾಗೆ ಇದ್ದೆವು. ಒಗ್ಗಟ್ಟಿತ್ತು. ದುಡ್ಡು ಕಡಿಮೆಯಿದ್ರೂ ಮರ್ಯಾದೆ ಹೆಚ್ಚಿತ್ತು. ಕಲಾವಿದೆಯರೆಂದರೆ ದೇವತೆಗಳೆಂದು ಮನೆಗೆ ಕರೆದೊಯ್ದು ಗೌರವ ಕೊಡುತ್ತಿದ್ದರು. ಸ್ನಾನಕ್ಕೆ ಬಿಸಿನೀರು ಕೊಟ್ಟು, ದೇವರ ಮನೆಯಲ್ಲಿ ಕೂಡಿಸಿ, ಪೂಜೆ ಮಾಡಿದ ಮೇಲೆ ಊಟ ಹಾಕುತ್ತಿದ್ದರು. ನಂತರ ಮೇಕಪ್ ಆಗುತ್ತಿತ್ತು. ಈಗ ನಾಟಕ ಮುಗಿದ ಮೇಲೆ ದುಡ್ಡು ಕೊಡುತ್ತಾರೆಂದು ಕಾಯುತ್ತೇವೆ. ಕಲಾವಿದೆಯರೆಂದರೆ ಪ್ರದರ್ಶನ ಗೊಂಬೆಗಳು’’ ಎಂದು ಬೇಸರದಿಂದ ಹೇಳುತ್ತಾರೆ ವಸಂತಕೃಷ್ಣ.
‘‘ನಾಟಕ ಮುಗಿಸಿಕೊಂಡು ಬರುವಾಗ ಅಕ್ಕಿ, ರಾಗಿ, ಜೋಳ, ಬೆಲ್ಲ, ಹುಣಸೆಹಣ್ಣು ಹೀಗೆ ರೈತರು ತಾವು ಬೆಳೆದುದನ್ನು ಕೊಡೋರು. ಪೌರಾಣಿಕ ನಾಟಕಗಳು ಉಳಿದಿದ್ದೇ ನಮ್ಮ ಗ್ರಾಮೀಣರಿಂದ. ಅವರು ನಮ್ಮನ್ನು ಸಾಕಿದರು. ಆಗೆಲ್ಲ ಒಂದು ದಿನಕ್ಕೆ ಹತ್ತು ರೂಪಾಯಿ ಸಂಭಾವನೆ. ಲಗೇಜನ್ನು ಎತ್ತಿನಗಾಡಿಯಲ್ಲಿ ಹಾಕಿ ಅದರ ಹಿಂದೆ ನಡೆದುಕೊಂಡು ಹೋಗುತ್ತಿದ್ದೆವು. ಆಮೇಲೆ ಬಸ್ ಬಂದವು. ಬಸ್ ಇದ್ದರೂ ಮುಖ್ಯರಸ್ತೆಯಿಂದ 3-4 ಕಿ.ಮೀ. ನಡೆದುಕೊಂಡು ಹಳ್ಳಿಗಳಿಗೆ ಹೋಗುತ್ತಿದ್ದೆವು. ರೈತರು ಕಬ್ಬು ಕಡಿಯುತ್ತಿದ್ದರೆ ಪಡೆದುಕೊಂಡು ತಿನ್ನುತ್ತ, ಹುಣಸೆಹಣ್ಣು ಬಿಡಿಸುತ್ತಿದ್ದರೆ ಕೇಳಿ ತಿನ್ನುತ್ತ, ಯಾರೇ ಊಟ ತಂದಿದ್ದರೂ ಹಂಚಿಕೊಂಡು ಉಣ್ಣುತ್ತಿದ್ದೆವು. ಒಗ್ಗಟ್ಟಾಗಿರುತ್ತಿದ್ದೆವು. ವೃತ್ತಿ ರಂಗಭೂಮಿ ಕಲಾವಿದೆಯರಿಗೆ ರಕ್ಷಣೆ ಬೇಕೆಂದು 1989ರಲ್ಲಿ ಮೈಸೂರು ಜಿಲ್ಲಾ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘವನ್ನು ಶುರು ಮಾಡಿದೆವು. ಎಸ್.ಎಸ್.ಗಾಯತ್ರಿ ಕಾರ್ಯದರ್ಶಿಯಾದರು. ಸಂಘದ ಆರಂಭದಿಂದ ಅಂದರೆ 36 ವರ್ಷಗಳಿಂದ ನಾನೇ ಅಧ್ಯಕ್ಷಳಾಗಿರುವೆ’’ ಎಂದು ಖುಷಿಯಿಂದ ಹೇಳಿದರು.
‘‘ಸಮಾನ ಮನಸ್ಕರೆಲ್ಲ ಸೇರಿ ತಿಂಗಳಿಗೊಂದು ನಾಟಕವಾಡುವ ಯೋಜನೆಯಿದೆ. ಮೈಸೂರಿನ ಟೌನ್ಹಾಲಿನಲ್ಲಿ ನಾಟಕೋತ್ಸವ ಏರ್ಪಡಿಸುತ್ತ ರಂಗಗೀತೆಗಳನ್ನು ಹಾಡುವುದು, ಕುಂಟೊಬಿಲ್ಲೆ ಆಡುವುದು, ನಾಟಕ ಆಡುವುದು... ಹೀಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ. ಮೊನ್ನೆ ಸೋಮವಾರ ನಡೆದ ನಮ್ಮ ಸಂಘದ ವಾರ್ಷಿಕೋತ್ಸವ ದಿನ 200 ಜನರಿಗೆ ಊಟ ಹಾಕಿದೆವು. ಇದಕ್ಕೆಲ್ಲ ಮೇಕಪ್ ಬಿ.ಎಂ. ರಾಮಚಂದ್ರ ಅವರ ಪ್ರೋತ್ಸಾಹ ಕಾರಣ. ಅವರ ಪತ್ನಿ ಎಚ್.ಬಿ. ಯಶೋದಾ ನಾಟಕಗಳಿಗೆ ಬಣ್ಣ ಹಚ್ಚುತ್ತಾರೆ. ಯಶೋದಾ ಅವರ ಸೋದರಿಯರಾದ ಎಚ್.ಬಿ.ಗಾಯತ್ರಿ ಹಾಗೂ ಎಚ್.ಬಿ.ಉಷಾ ಅವರೂ ಕಲಾವಿದೆಯರು’’ ಎನ್ನುವ ಹೆಮ್ಮೆ ವಸಂತಮ್ಮ ಅವರಿಗೆ.
‘‘ಆಗ ಕಲಾವಿದೆಯರೆಲ್ಲ ಶರೀರ-ಶಾರೀರದ ಮೂಲಕ ಪಾತ್ರ ಮಾಡುತ್ತಿದ್ದೆವು. ಈಗಿನ ಕಲಾವಿದರಿಗೆ ಚಮಕ್ ಡ್ರೆಸ್, ಆಭರಣ ಮುಖ್ಯವಾಗುತ್ತವೆ. ತಾಲೀಮು ಮಾಡಲ್ಲ. ಮೈ ದಂಡಿಸಲ್ಲ. ರಂಗಭೂಮಿ ಮೇಲಿನ ನಿಷ್ಠೆ ಕಡಿಮೆ. ಆಗ ನಮಗೆಲ್ಲ ಕಲಿಯಬೇಕು ಎನ್ನುವ ತುಡಿತವಿತ್ತು. ಈಗ ಕಲಿತಿದ್ದೇವೆ ಎಂದು ತಿಳಿಯುತ್ತಾರೆ’’ ಎನ್ನುವ ಬೇಸರ ವಸಂತಮ್ಮ ಅವರದು.
‘‘ಆಗ ಹಾರ್ಮೋನಿಯಂ ಮಾಸ್ಟ್ರುಗಳೂ ಹಾಗೆ ಇದ್ದರು. ಕೊಳ್ಳೇಗಾಲ ವೆಂಕಟರಮಣ, ಮಾಂಬಳ್ಳಿ ವೀರಭದ್ರಪ್ಪ, ಚಿಕ್ಕಬಾಗಿಲು ಮರಿಸ್ವಾಮಿ, ಮುಸುವನಕೊಪ್ಪಲು ಚಿಕ್ಕಣ್ಣ, ವಾಜಮಂಗಲ ರಂಗಪ್ಪ, ಬಿಳಗಲಿ ರಂಗಪ್ಪ, ಆಲನಹಳ್ಳಿ ರಾಜಣ್ಣ, ವಯಲಿನ್ಗೆ ಶೇಷಣ್ಣ, ನಾರಾಯಣ, ನಾಗರಾಜ್, ಗೋವಿಂದರಾಜ್, ತಬಲಾದಲ್ಲಿ ಅನಂತಣ್ಣ, ಮಹಾದೇವಣ್ಣ, ಗೋಪಾಲ, ಚೌಡಪ್ಪ, ಕ್ಲಾರಿಯೊನೆಟ್ಗೆ ಡಿ.ರಾಮಣ್ಣ ಇಂಥ ದಿಗ್ಗಜರೊಂದಿಗೆ ನಾಟಕವಾಡುತ್ತಿದ್ದೆವು’’ ಎಂದು ಸ್ಮರಿಸುತ್ತಾರೆ ಅವರು.
ಬಣ್ಣವನ್ನೇ ನಂಬಿ ಬದುಕನ್ನು ಕಟ್ಟಿಕೊಂಡ ಅವರ ಹಾಗೆ ಮೈಸೂರಲ್ಲಿ ಎಂಭತ್ತಕ್ಕೂ ಹೆಚ್ಚು ಕಲಾವಿದೆಯರಿದ್ದಾರೆ.