ರಾಮನಗರ | ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು

ಸಾಂದರ್ಭಿಕ ಚಿತ್ರ
ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ರಾಘವಿ(18) ಮಧುಮಿತ(20), ಹಾಗೂ ರಮ್ಯಾ(22) ಎಂದು ಗುರುತಿಸಲಾಗಿದೆ.
ಜಲಾಶಯ ವೀಕ್ಷಣೆಗೆಂದು ಏಳು ಯುವತಿಯರು ಹೋಗಿದ್ದರು. ಈ ವೇಳೆ ಓರ್ವ ಯುವತಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ಯುವತಿಯನ್ನು ರಕ್ಷಿಸಲು ಉಳಿದಿಬ್ಬರು ಮುಂದಾಗಿದ್ದಾರೆ. ರಕ್ಷಣೆಗೆ ಧಾವಿಸಿದ ಯುವತಿಯರಿಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಮುಳಗತೊಡಗಿದ್ದಾರೆ. ಈ ವೇಳೆ ಯುವತಿಯರು ಮುಳುಗುತ್ತಿದ್ದನ್ನು ಕಂಡು ಉಳಿದವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಬರುವಷ್ಟರಲ್ಲಿ ಮೂವರು ಯುವತಿಯರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಯುವತಿಯರು, ವೈಜಿ ಗುಡ್ಡ ಜಲಾಶಯ ವೀಕ್ಷಣೆಗೆಂದು ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
Next Story