ʼಬಮೂಲ್ʼ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ಬೆಂಗಳೂರು : ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ರಾಮನಗರ ಜಿಲ್ಲೆಯ 6 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಿಲ್ಲೆಯ ಹಾಲು ರಾಜಕಾರಣದಲ್ಲೂ ಜೆಡಿಎಸ್ ಸೋಲು ಕಂಡಿದೆ.
ಜಿಲ್ಲೆಯ ರಾಮನಗರ, ಹಾರೋಹಳ್ಳಿ, ಮಾಗಡಿ, ಚನ್ನಪಟ್ಟಣ, ಕುದೂರು, ಕನಕಪುರ ಸೇರಿ ಒಟ್ಟು 6 ಸ್ಥಾನಗಳ ಪೈಕಿ, ಕನಕಪುರದಿಂದ ಸ್ಪರ್ಧಿಸಿದ್ದ ಡಿ.ಕೆ. ಸುರೇಶ್ ಮತ್ತು ಕುದೂರಿನಿಂದ ಕಣಕ್ಕಿಳಿದಿದ್ದ ಕೆಇಬಿ ರಾಜಣ್ಣ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದ 4 ಸ್ಥಾನಗಳಿಗೆ ಮಾತ್ರ ಮೇ 25 ಚುನಾವಣೆ ನಡೆದಿತ್ತು. ಈ ಸಂಬಂಧ ಫಲಿತಾಂಶ ಹೊರಬಂದಿದ್ದು, ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಿ. ನಾಗರಾಜ್ ಅವರು ಎದುರಾಳಿ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ರೇಣುಕಮ್ಮ ಕೆಂಪಣ್ಣ ಅವರನ್ನು, ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಎಸ್. ಲಿಂಗೇಶ್ ಕುಮಾರ್ ಅವರು ಬಿ.ಸಿ. ಜಯಮುತ್ತು ಅವರನ್ನು, ಮಾಗಡಿಯಿಂದ ಎಚ್.ಎನ್. ಅಶೋಕ್ (ತಮ್ಮಾಜಿ) ಅವರು ಚಂದ್ರಮ್ಮ ಅವರನ್ನು ಹಾಗೂ ಹಾರೋಹಳ್ಳಿಯಲ್ಲಿ ಹರೀಶ್ ಕುಮಾರ್ ಅವರು ಬಸವರಾಜು ಅವರನ್ನು ಮಣಿಸಿ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ, ಮಾಗಡಿಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹೋದರ ಅಶೋಕ್ ಮೊದಲ ಸಲ, ರಾಮನಗರದ ನಾಗರಾಜ್ ಸತತ 6ನೆ ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಹಾರೋಹಳ್ಳಿಯ ಹರೀಶ್ ಕುಮಾರ್ 2ನೇ ಸಲ, ಚನ್ನಪಟ್ಟಣದ ಲಿಂಗೇಶ್ 3ನೇ ಸಲ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ದಕ್ಷಿಣ (ಹಿಂದಿನ ರಾಮನಗರ) ಜಿಲ್ಲೆಯ ಪ್ರತಿ ಚುನಾವಣೆಯೂ ಕಾಂಗ್ರೆಸ್ನ ಡಿ.ಕೆಸಹೋದರರು (ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್) ಹಾಗೂ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ನಡುವಣ ಪ್ರತಿಷ್ಠೆಯ ಪಣದೊಂದಿಗೆ ನಡೆಯುತ್ತದೆ. 2023ರ ವಿಧಾನಸಭಾ ಚುನಾವಣೆ ಬಳಿಕ ಸಹೋದರರು ಸತತವಾಗಿ ಎಲ್ಲಾ ಚುನಾವಣೆಗಳಲ್ಲೂ ಮೇಲುಗೈ ಸಾಧಿಸುತ್ತಲೇ ಬಂದಿದ್ದಾರೆ. ಇದೀಗ ಹಾಲು ರಾಜಕಾರಣದಿಂದಲೂ ಜೆಡಿಎಸ್ ಅನ್ನು ಹೊರಗೆ ತಳ್ಳಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.
‘ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಚುನಾವಣೆಯಲ್ಲಿ ಸಹಕರಿಸಿದ ಆಡಳಿತ ಮಂಡಳಿ ಸದಸ್ಯರು, ಒಕ್ಕೂಟದ ಅಧ್ಯಕ್ಷರು, ಸಿಬ್ಬಂದಿಗೆ, ಪಕ್ಷದ ಮುಖಂಡರು, ಶಾಸಕರಿಗೆ, ಮಂತ್ರಿಗಳಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ’
-ಡಿ.ಕೆ.ಸುರೇಶ್, ಮಾಜಿ ಸಂಸದ