ರಾಯಚೂರು | ಬಸ್ ಸಿಬ್ಬಂದಿಗಳ ಜೊತೆ ವಾಗ್ವಾದ : ಯುವಕನೋರ್ವ ಆತ್ಮಹತ್ಯೆ ; ಕುಟುಂಬಸ್ಥರಿಂದ ಪ್ರತಿಭಟನೆ

ರಾಯಚೂರು: ಬಸ್ ಚಲಿಸುವಾಗ ಕೆಸರು ಎರಚಿದ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನ ಜೊತೆ ವಾಗ್ವಾದ ನಡೆಸಿದ ಯುವಕನೋರ್ವ ತನ್ನ ಮೇಲೆ ಪ್ರಕರಣ ದಾಖಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸೂಗೂರು ತಾಲೂಕು ಹುನುಕುಂಟಿ ಗ್ರಾಮದಲ್ಲಿ ನಡೆದಿದೆ.
ಮುತ್ತಣ್ಣ ದೇವಪ್ಪ ಕುರಿ(18) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರು- ಸಜ್ಜಲಗುಡ್ಡಕ್ಕೆ ತೆರಳುತ್ತಿದ್ದ ಬಸ್ ಹುನುಕುಂಟಿ ಗ್ರಾಮದಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಮುತ್ತಣ್ಣಗೆ ಕೆಸರು ಎರಚಿದೆ. ಇದರಿಂದ ಕೋಪಗೊಂಡ ಮುತ್ತಣ್ಣ ಬಸ್ ಚಾಲಕ ಮತ್ತು ನಿರ್ವಾಹಕನ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಗುಂಪುನಲ್ಲಿದ್ದ ಯಾರೋ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆ.
ಬಸ್ ಚಾಲಕ ಹಾಗೂ ನಿರ್ವಾಹಕ ಈ ಬಗ್ಗೆ ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದರು. ಇದಕ್ಕೆ ಹೆದರಿದ ಮುತ್ತಣ್ಣ ತನ್ನ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಗ್ರಾಮದ ಹೊರವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಯುವಕನ ಸಾವಿಗೆ ಬಸ್ ಚಾಲಕ, ನಿರ್ವಾಹಕ ಕಾರಣವೆಂದು ಆರೋಪಿಸಿ ಬಸ್ ಡಿಪೋ ಮುಂದೆ ಮೃತದೇಹವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.