ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ರವಿಕುಮಾರ್ ಅವರ ಪರಿಷತ್ ಸದಸ್ಯತ್ವ ರದ್ದುಪಡಿಸುವಂತೆ ಅಂಜುಮನ್ ಸಮಿತಿ ಒತ್ತಾಯ

ರಾಯಚೂರು: ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಪರಿಷತ್ ಸದಸ್ಯತ್ವ ರದ್ದುಪಡಿಸುವಂತೆ ಅಂಜುಮನ್ ರಾಯಚೂರು ಸಮಿತಿ ಒತ್ತಾಯಿಸಿದೆ.
ಈ ಕುರಿತು ಅಂಜುಮನ್ ರಾಯಚೂರು ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದೆ.
ಕಲಬುರಗಿ ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ಹೋರಾಟದ ಸಂದರ್ಭದಲ್ಲಿ ಎನ್.ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಅಸಂವಿಧಾನಿಕ ಪದ ಬಳಕೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.
ಸಂವಿಧಾನಬದ್ದವಾಗಿ ನೇಮಕಗೊಂಡ ಅಧಿಕಾರಿಗೆ ಎನ್.ರವಿಕುಮಾರ್ ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುತ್ತಾರೆ. ಪ್ರತಿಭಟನೆ ನಡೆಯುತ್ತಿರುವ ವಿಷಯಕ್ಕೂ ಜಿಲ್ಲಾಧಿಕಾರಿಗೂ ಯಾವುದೇ ಸಂಬಂದವಿಲ್ಲದಿದ್ದರೂ ಅನಗತ್ಯವಾಗಿ ಅವರನ್ನು ಎಳೆದು ತಂದಿರುತ್ತಾರೆ. ಇಂತಹವರು ವಿಧಾನ ಪರಿಷತ್ ಸದಸ್ಯರಾಗಿರಲು ಯೋಗ್ಯರಲ್ಲ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದು ಹೇಳಿದರು.
ಎನ್.ರವಿಕುಮಾರ್ ಅವರು ಈ ರೀತಿ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಇಂತಹ ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡಿಕೊಂಡು ರಾಜಕೀಯ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಬಿಜೆಪಿ ನಾಯಕರು ದೇಶದಲ್ಲಿ ಇತ್ತೀಚೆಗೆ ಮುಸ್ಲಿಂ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಲವು ಹೇಳಿಕೆಗಳು ನೀಡಿರುತ್ತಾರೆ. ರಾಜ್ಯಪಾಲರಾದ ತಾವು ಸಂವಿಧಾನಬದ್ದವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ರಕ್ಷಣೆಗೆ ಬರಬೇಕು ಹಾಗೂ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಮತ್ತು ಅಧಿಕಾರಿಗಳನ್ನು ಬೆದರಿಸುತ್ತಿರುವ ಎನ್.ರವಿಕುಮಾರ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದುಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಅಮೀನುಲ್ ಹಸನ್, ಮುಹಮ್ಮದ್ ಉಸ್ಮಾನ , ಶೇಖ್ ಷಾವಲಿ, ಸೈಯದ್ ಟಿಪ್ಪು ಸುಲ್ತಾನ್, ಮುಹ್ಮದ್ ಮೊಹೀನುದ್ದೀನ್ ಉಪಸ್ಥಿತರಿದ್ದರು.