ಯಾವುದು ಭಾರತದ ಫ್ಯಾಶಿಸಮ್?

ಭಾರತ ಎಂಬ ಬಹುತ್ವದ ದೇಶವನ್ನು ಮನುವಾದಿ ಫ್ಯಾಶಿಸಮ್ ಆವರಿಸಿರುವಾಗ ಸಹಜವಾಗಿ ಫ್ಯಾಶಿಸ್ಟ್ ಮತ್ತು ಫ್ಯಾಶಿಸಮ್ ಎಂಬ ಪದಗಳು ಭಾರತದಲ್ಲಿ ಇತ್ತೀಚಿನ ಹತ್ತು ವರ್ಷಗಳಿಂದ ಹೆಚ್ಚು ಬಳಕೆಯಾಗುತ್ತಿವೆ. ಜರ್ಮನಿಯ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಇದಕ್ಕೊಂದು ಖಚಿತತೆ ಬರುತ್ತದೆ. ಇದರ ಆಳ, ಅಗಲಗಳ ಬಗ್ಗೆ ಗೊತ್ತಿರುವ ಭಾರತದ ಕಮ್ಯುನಿಸ್ಟರಲ್ಲೂ ಇದರ ಬಗ್ಗೆ ಒಮ್ಮತವಿಲ್ಲ. ಭಾರತದ ಉಳಿದೆಲ್ಲ ಕಮ್ಯುನಿಸ್ಟ್ ಪಕ್ಷಗಳ ನಿಲುವಿಗೂ ಮಾರ್ಕ್ಸ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ನಿಲುವಿಗೂ ಭಿನ್ನಾಭಿಪ್ರಾಯಗಳಿವೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಫ್ಯಾಶಿಸ್ಟ್ ಸರಕಾರ ಎಂಬುದು ಉಳಿದ ಕಮ್ಯುನಿಸ್ಟ್ ಹಾಗೂ ಎಡಪಂಥೀಯ ಪಕ್ಷಗಳ ನಿಲುವಾಗಿದ್ದರೆ, ಸಿಪಿಎಂ ಮಾತ್ರ ಭಿನ್ನ ನಿಲುವು ತಾಳಿದೆ. ಮೋದಿ ಸರಕಾರ ನವ ಫ್ಯಾಶಿಸಮ್ನತ್ತ ಹೊರಟ ಸರಕಾರ, ಅದಿನ್ನೂ ಸಂಪೂರ್ಣ ಫಾಶಿಸ್ಟ್ ಆಗಿಲ್ಲ ಎಂಬುದು ಆ ಪಕ್ಷದ ಇತ್ತೀಚಿನ ಮಧುರೆ ಅಧಿವೇಶನದ ತೀರ್ಮಾನವಾಗಿದೆ.ಆದರೆ ಸೀತಾರಾಮ ಯೆಚೂರಿ ಅವರ ನಿಲುಮೆ ಬೇರೆಯಾಗಿತ್ತು.ಮೋದಿ ನೇತೃತ್ವದ ಸರಕಾರ ಫ್ಯಾಸಿಸ್ಟ್ ಸರಕಾರ ಎಂಬುದು ಅವರ ಖಚಿತ ನಿಲುವಾಗಿತ್ತು.ಆದರೆ ಈಗ ಅವರಿಲ್ಲ. ಈಗ ಅದರ ಬಗ್ಗೆ ಚರ್ಚೆಗೆ ನಾನು ಹೋಗುವುದಿಲ್ಲ. ಯುರೋಪಿನ ಕನ್ನಡಕ ಹಾಕಿ ಫ್ಯಾಶಿಸಮ್ ಇತಿಹಾಸವನ್ನು ನೋಡಿದರೆ ಯಾವುದೇ ಖಚಿತ ನಿಲುವನ್ನು ವ್ಯಕ್ತಪಡಿಸುವುದು ಸುಲಭವಾಗುವುದಿಲ್ಲ. ಈಗ ಭಾರತದಲ್ಲಿರುವುದು ಜರ್ಮನ್ ಮತ್ತು ಇಟಲಿ ಮಾದರಿಯ ಫ್ಯಾಶಿಸಮ್ ಅಲ್ಲ. ಆದರೆ ಅವುಗಳಿಂದ ಸೈದ್ಧಾಂತಿಕ ಸ್ಫೂರ್ತಿಯನ್ನು ಪಡೆದ ಇಲ್ಲಿನ ಸಂಸದೀಯ ಪ್ರಜಾಪ್ರಭುತ್ವದ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಅತ್ಯಂತ ನಯವಾದ ಫ್ಯಾಶಿಸಮ್ ಆವರಿಸುತ್ತಿದೆ. ಇದನ್ನು ಮನುವಾದಿ ಫ್ಯಾಶಿಸಮ್ ಎಂದು ಕರೆಯಬಹುದು. ಜರ್ಮನಿಯಲ್ಲಿ ಹಿಟ್ಲರ್ ತಾನೇ ಎಲ್ಲವನ್ನೂ ಮಾತಾಡುತ್ತಿದ್ದ.ಆದರೆ ಇಲ್ಲಿ ಮಾತನಾಡಲೆಂದೇ ಕೆಲವರಿದ್ದಾರೆ. ಮಾತಾಡಿಸುವವರು ಮೌನವಾಗಿರುತ್ತಾರೆ. ಗಾಂಧಿ ಹತ್ಯೆ,ಅದರ ಸಮರ್ಥನೆ, ದಾಭೋಲ್ಕರ್,ಪನ್ಸಾರೆೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ, ಅವುಗಳ ಪರೋಕ್ಷ ಸಮರ್ಥನೆ, ಇತ್ತೀಚಿನ ನಮ್ಮ ಸೇನಾ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಬಹಿರಂಗವಾಗಿ ಹೇಳಿದ ಮಧ್ಯಪ್ರದೇಶದ ಬಿಜೆಪಿ ಮಂತ್ರಿ ವಿಜಯ್ ಶಾ ನೀಡಿರುವ ಹೇಳಿಕೆ, ಹೈಕೋರ್ಟ್ ತರಾಟೆ, ಎಫ್ ಐ ಆರ್ ದಾಖಲಿಸಲು ಆದೇಶ, ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮೌನ, ಹೀಗೆ ನಡೆಯುತ್ತಿರುವ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತೀಯ ಫ್ಯಾಶಿಸಮ್ ಅರ್ಥವಾಗುತ್ತ ಹೋಗುತ್ತದೆ. ಜರ್ಮನಿ ಹಾಗೂ ಇಟಲಿಯಂಥ ದೇಶಗಳಲ್ಲಿ ಈ ಫ್ಯಾಶಿಸಮ್ ಪದ ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ. ನಿದ್ರೆಯಲ್ಲೂ ನಡುಗುತ್ತಾರೆ. ಆದರೆ ನಮ್ಮ ದೇಶದಲ್ಲಿ ಈಗ ಅನೇಕರು ಅದರಲ್ಲೂ ಯುವಕರು ಅದರ ಅಮಲೇರಿಸಿಕೊಂಡು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದರಲ್ಲಿ ವಾಟ್ಸ್ಆ್ಯಪ್ ಯುನಿವರ್ಸಿಟಿಗಳ ಪಾತ್ರ ದೊಡ್ಡದು. ಪುಸ್ತಕ ಓದುವುದು ನಿಂತೇ ಹೋಗಿದೆ. ವಿವೇಕ ಮಾಯವಾಗಿದೆ. ಏಕ ರಾಷ್ಟ್ರ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಪಕ್ಷ, ಏಕ ನಾಯಕ(ಏಕ ಜಾತಿ ಮಾತ್ರ ಇಲ್ಲ) ಎಂಬ ಹುಚ್ಚು ಹಿಡಿದಿದೆ. ಇದು ವಿವಿಧ ಸಂಸ್ಕೃತಿಗಳ, ಭಾಷೆಗಳ ವಿಶಿಷ್ಟ ನೆಲ ಎಂದು ಹೇಳಿದರೆ ಅರ್ಥವಾಗುವುದಿಲ್ಲ.ಸನಾತನ ಹಿಂದೂ ರಾಷ್ಟ್ರ ನಿರ್ಮಾಣ ಅವರ ಗುರಿ.
ದೇಶವೊಂದರಲ್ಲಿ ಆರ್ಥಿಕತೆ ಕುಸಿದಾಗ, ವ್ಯವಸ್ಥೆ ದಿಕ್ಕು ತಪ್ಪಿದಾಗ, ಕಾನೂನು ದುರ್ಬಲವಾದಾಗ, ಜನ ಸಾಮಾನ್ಯರು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದಾಗ, ಫ್ಯಾಶಿಸ್ಟ್ ಮನಸ್ಥಿತಿ ಅವತರಿಸುತ್ತದೆ. ಕ್ರಮೇಣ ಆ ಮನಸ್ಥಿತಿ ಸಂಘಟಿತ ರೂಪ ಪಡೆಯುತ್ತದೆ. ನಿರ್ದಿಷ್ಟ ಜನ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ, ಹಲ್ಲೆ, ದ್ವೇಷ ಆರಂಭವಾಗುತ್ತವೆ. ಸದ್ಯದ ಸಮಸ್ಯೆಗಳಿಗೆ ಒಂದು ಸಮುದಾಯವೇ ಕಾರಣ ಎಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಒಂದೇ ದೇಶದ ಪ್ರಜೆಗಳಲ್ಲಿ ಅಪನಂಬಿಕೆಯ ಗೋಡೆ ಎದ್ದು ನಿಲ್ಲುತ್ತದೆ. ಕ್ರಮೇಣ ಅದು ದ್ವೇಷವಾಗಿ ರೂಪಾಂತರಗೊಳ್ಳತ್ತದೆ. ಗುಂಪು ದಾಳಿ, ಹತ್ಯೆಗಳಿಗೆ ಇಂಥ ರೋಗಗ್ರಸ್ತ ಮನಸ್ಥಿತಿ ಕಾರಣ.ಈಗ ಭಾರತದಲ್ಲಿ ನಡೆಯುತ್ತಿರುವುದು ಅದೇ ಅಲ್ಲವೇ ?
ಆಳುವ ವರ್ಗ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಧರ್ಮದ ಆಧಾರದಲ್ಲಿ, ಜನಾಂಗ ದ್ವೇಷದ ಆಧಾರದಲ್ಲಿ, ಬಹುಸಂಖ್ಯಾತ ಸಮುದಾಯಗಳನ್ನು ಒಂದುಗೂಡಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಗೆ ಪ್ರಚೋದನೆ ನೀಡುತ್ತದೆ. ಕಳೆದ ಶತಮಾನದ ಎರಡನೇ ದಶಕದಲ್ಲಿ ಜರ್ಮನಿಯಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡು ನಿರುದ್ಯೋಗ ಮಿತಿ ಮೀರಿದಾಗ ಜನಾಕ್ರೋಶದ ದಿಕ್ಕನ್ನು ತಿರುಗಿಸಲು ಆಳುವ ವರ್ಗಗಳು ನಾಝಿ ಪಾರ್ಟಿಯನ್ನು ಕಟ್ಟಿ ಹಿಟ್ಲರ್ ಎಂಬ ಸರ್ವಾಧಿಕಾರಿಯನ್ನು ಸೃಷ್ಟಿಸಿದವು. ಜರ್ಮನಿಯ ಸಮಸ್ಯೆಗಳಿಗೆಲ್ಲ ಅಲ್ಪಸಂಖ್ಯಾತ ಯಹೂದಿಗಳೇ ಕಾರಣವೆಂದು ಕತೆ ಕಟ್ಟಿ ಸುಳ್ಳು ಪ್ರಚಾರ ಮಾಡಿ ಜರ್ಮನಿಯ ಜನಸಾಮಾನ್ಯರನ್ನು ಯಹೂದಿಗಳ ವಿರುದ್ಧ ಎತ್ತಿ ಕಟ್ಟಿದವು. ಅಲ್ಲಿ ನಡೆದ ಯಹೂದಿಗಳ ರಕ್ತಪಾತ, ಹಿಟ್ಲರ್ ನಿರ್ಮಿಸಿದ ಗ್ಯಾಸ್ ಚೇಂಬರ್, ಕಾನ್ಸೆಂಟ್ರೇಶನ್ ಕ್ಯಾಂಪ್ ಚರಿತ್ರೆಯಲ್ಲಿ ಕಪ್ಪುಕಲೆಯಾಗಿ ಉಳಿದಿವೆೆ.
ಅದೇ ಕಾಲಘಟ್ಟದಲ್ಲಿ ಇಟಲಿಯಲ್ಲಿ ಶೋಷಕ ವರ್ಗಗಳು ಫ್ಯಾಶಿಸ್ಟ್ ಪಾರ್ಟಿಯನ್ನು ಹುಟ್ಟು ಹಾಕಿ ಮುಸ್ಸೋಲಿನಿ ಎಂಬ ನರಹಂತಕನನ್ನು ಸೃಷ್ಟಿಸಿದವು. ಆತನೂ ತನ್ನ ಪ್ರಜೆಗಳ ಜೀವ ಹಿಂಡಿದ. ಅಂಟೊನಿಯಾ ಗ್ರಾಮ್ಶಿಯಂಥ ಒರಿಜನಲ್ ಕಮ್ಯುನಿಸ್ಟ್ ಚಿಂತಕನನ್ನು ಜೈಲಿಗೆ ಹಾಕಿ ಹಿಂಸಿಸಿದ. ನಮ್ಮ ಆರೆಸ್ಸೆಸ್ ಗುರು ಗೋಳ್ವ್ವಾಲ್ಕರ್ ಅವರು ಇಂಥ ಹಿಟ್ಲರ್, ಮುಸ್ಸೋಲಿಯನ್ನು ಹಾಡಿ ಹೊಗಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರೆಸ್ಸೆಸ್ ಸ್ಥಾಪನೆಯಾಗುವ ಮುನ್ನ ಅದರ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರು ಡಾ. ಮೂಂಜೆ ಅವರನ್ನು ಇಟಲಿಗೆ ಕಳಿಸಿದ್ದರು. ಮೂಂಜೆ ಅಲ್ಲಿ ಮುಸ್ಸೋಲಿನಿಯನ್ನು ಭೇಟಿ ಮಾಡಿ ಅವನ ಫ್ಯಾಶಿಸ್ಟ್ ಪಾರ್ಟಿಯ ಧ್ಯೇಯ, ಕಾರ್ಯಕ್ರಮಗಳನ್ನು ಎರವಲು ಪಡೆದು ಭಾರತಕ್ಕೆ ಬಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಲು ನೆರವಾದರು. ಪುಣೆಯ ಪೇಶ್ವೆ ಸಾಮ್ರಾಜ್ಯ ಕುಸಿದು ಬಿದ್ದ ನಂತರ, ಜ್ಯೋತಿಬಾ ಫುಲೆ, ಶಾಹು ಮಹಾರಾಜ ಬೆಳಕಿನ ಪಂಜು ಹಿಡಿದು ನಿಂತಾಗ ದಿಗಿಲು ಗೊಂಡ ಪೇಶ್ವೆ ವಂಶಜರು ಹಿಂದುತ್ವದ ವೇಷ ಹಾಕಿದರು.
ಫ್ಯಾಶಿಸಮ್ಗೆ ಮನುವಾದದ ಸ್ಪರ್ಶವೂ ದೊರೆತು ಇಲ್ಲಿ ತನ್ನದೇ ಆದ ರೀತಿಯಲ್ಲಿ ನೆಲೆಗೊಂಡಿದ್ದು ಪ್ರತ್ಯೇಕ ಇತಿಹಾಸ. ಫ್ಯಾಶಿಸಮ್ ಇತಿಹಾಸವನ್ನು ಒಂದು ಪುಟ್ಟ ಅಂಕಣ ಬರಹದಲ್ಲಿ ವಿವರವಾಗಿ ಬರೆಯಲು ಆಗುವುದಿಲ್ಲ. ಭಾರತದ ಕಮ್ಯನಿಸ್ಟ್ ಪಕ್ಷಗಳಲ್ಲಿ ಸಿಪಿಐ ಮಾತ್ರ ಮೊದಲಿನಿಂದಲೂ ಫ್ಯಾಶಿಸಮ್ ಕುರಿತು ಒಂದು ಸ್ಪಷ್ಟ ನಿಲುವನ್ನು ತಾಳಿದ ಪಕ್ಷವೆಂದರೆ ಅತಿಶಯೋಕ್ತಿಯಲ್ಲ. ಒಟ್ಟಾರೆ ನಮ್ಮ ದೇಶದಲ್ಲಿ ಫ್ಯಾಶಿಸಮ್ ಭಯಾನಕ ಸ್ವರೂಪ ತಾಳಿ ನಿಂತಿದೆ. ಜರ್ಮನಿಯ ಕಾರ್ಮಿಕ ವರ್ಗದಂತೆ ಭಾರತದ ಸಂಘಟಿತ ಕಾರ್ಮಿಕ ವರ್ಗವೂ ಬಹುಪಾಲು ತಿಳಿದೋ ತಿಳಿಯದೆಯೋ ಅದಕ್ಕೆ ಮಾರು ಹೋಗಿರುವ ಭೀತಿ ಎದುರಾಗಿದೆ.
ಹೆಸರಾಂತ ಎಡಪಂಥೀಯ ಚಿಂತಕ ಡಿಮಿಟ್ರೋವ್ ಅವರು ಹೇಳಿದಂತೆ, ‘ಫ್ಯಾಶಿಸಮ್, ಜನರ ಮುಂದೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವೇಷ ಹಾಕಿಕೊಂಡು ಬರುತ್ತದೆ. ಆದರೆ, ಅತ್ಯಂತ ಭ್ರಷ್ಟ ಆಡಳಿತವನ್ನು ನೀಡುತ್ತದೆ. ಜನ ಅದನ್ನು ಪ್ರಶ್ನಿಸದಂತೆ ಜನಾಂಗೀಯ ದ್ವೇಷದ ಸಂಘರ್ಷದಲ್ಲಿ ಅವರನ್ನು ತೊಡಗಿಸುತ್ತದೆ. ಕಾರ್ಮಿಕ ವರ್ಗದ ಒಂದು ವಿಭಾಗವೂ ಅದರ ಬಲೆಗೆ ಬೀಳುತ್ತದೆ’ ಭಾರತದಲ್ಲಿ ಈಗ ಕಾಣುತ್ತಿರುವುದು ಅದೇ ಆಗಿದೆ.
ಈಗ ಭಾರತದ ಚಿತ್ರಣವನ್ನು ಕಣ್ಣ ಮುಂದೆ ತಂದುಕೊಂಡಾಗ ಡಿಮಿಟ್ರೋವ್ ಮಾತು ಮತ್ತೆ ಮತ್ತೆ ನೆನಪಾಗುತ್ತದೆ. ತಾನು ಇತರ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತ, ಗಾಂಧಿ, ನೆಹರೂ ಅವರಂಥ ರಾಷ್ಟ್ರೀಯ ನಾಯಕರ ತೇಜೋವಧೆ ಮಾಡುತ್ತ ಹೊಸ ಪೀಳಿಗೆಯ ಹುಡುಗರ ತಲೆಯಲ್ಲಿ ಜನಾಂಗೀಯ ದ್ವೇಷದ ವಿಷ ತುಂಬುತ್ತ, ಮೋದಿ ಒಬ್ಬರಿಂದ ಈ ದೇಶ ಉದ್ಧಾರ ಆಗುತ್ತದೆ ಎಂಬ ಹುಸಿ ಭ್ರಮೆಯನ್ನು ತುಂಬಲಾಗಿದೆ
ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಹೂಡಿಕೆ ನಿಂತು ಹೋಗಿದೆ ಎಂದು ಉದ್ಯಮಿ ರಾಹುಲ್ ಬಜಾಜ್ರಂಥವರು ಬಹಿರಂಗವಾಗಿ ಹೇಳಿದ್ದರು. ನೋಟು ಅಮಾನ್ಯೀಕರಣದಿಂದಾಗಿ ಸಣ್ಣ ಕೈಗಾರಿಕೆಗಳು ಹಾಳಾಗಿ ಹೋಗಿವೆ. ಇದನ್ನೆಲ್ಲ ಮುಚ್ಚಿ ಕೊಳ್ಳಲು ಏಕ ಧರ್ಮ , ಏಕ ರಾಷ್ಟ್ರ, ಏಕ ನಾಯಕ, ನಮೋ ಭಜನೆ ನಡೆದಿದೆ.
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗಿ ಹೋಗಿದೆ. ಉದ್ಯಮಪತಿಗಳು ಮಾಡಿದ ಸಾಲವನ್ನು ಸರಕಾರ ಮನ್ನಾ ಮಾಡುತ್ತಲೇ ಇದೆ. ಈವರೆಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಗೂ ಸರಕಾರ ಕೈ ಹಾಕಿತು. ಸರಕಾರದ ಅಂದರೆ ಸಾರ್ವಜನಿಕ ರಂಗದ ಉದ್ಯಮಗಳು ಒಂದೊಂದಾಗಿ ಮುಚ್ಚುತ್ತಿವೆ. ಆಟೊ ಮೊಬೈಲ್ ಉದ್ಯಮ ಬಾಗಿಲು ಹಾಕಿ 3 ಲಕ್ಷ ಕಾರ್ಮಿಕರು ಬೀದಿಗೆ ಬಿದ್ದು ವರ್ಷಗಳೇ ಗತಿಸಿದವು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಕಿವಿಯ ಮೇಲೆ ಹೂ ಇಡುವಂಥ ಭರವಸೆ ಹುಸಿಯಾಗಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ರಂಗ ಕುಸಿಯುತ್ತಿದೆ. ರೈತರು ಆತ್ಮಹತ್ಯೆ ಮಾಡಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮರೆಮಾಚಲು ಆಳುವ ವರ್ಗಕ್ಕೆ ಈಗ ಭಾವನಾತ್ಮಕ ವಿಷಯಗಳು ಬೇಕು. ಅದಕ್ಕಾಗಿ ಧರ್ಮೋನ್ಮಾದ, ಯುದ್ಧ್ಧೋನ್ಮಾದ, ದ್ವೇಷೋನ್ಮಾದದ ಮಡುವಿಗೆ ದೇಶವನ್ನು ತಳ್ಳುವ ಮಸಲತ್ತು ನಡೆದಿದೆ. ಕೆಂಪು ಕೋಟೆಯ ಮೇಲೆ ನಿಂತು ಮಾಡುವ ಭಾಷಣಗಳು ಈ ಸಮಸ್ಯೆಗಳಿಗೆ ಪರಿಹಾರವಲ್ಲ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರನೂ ಇದೇ ರೀತಿ ರೊಚ್ಚಿಗೆಬ್ಬಿಸುವ ಭಾಷಣ ಮಾಡುತ್ತಿದ್ದ. ಕೊನೆಗೆ ಏನಾದ, ಜರ್ಮನಿ ಏನಾಯಿತು ಎಂದು ಚರಿತ್ರೆ ಓದಿದ ಎಲ್ಲರಿಗೂ ಗೊತ್ತಿದೆ.
ಫ್ಯಾಶಿಸಮ್ ನಾನಾ ರೀತಿಗಳಲ್ಲಿ, ನಾನಾ ವೇಷಗಳಲ್ಲಿ ನಾನಾ ದೇಶಗಳಲ್ಲಿ ವಕ್ಕರಿಸುತ್ತದೆ. ಇದೊಂದು ರೋಗ. ಇದರ ಅಪಾಯವನ್ನು ಅರಿತ ಜರ್ಮನಿಯ ಜನ ಅದನ್ನು ದೂರವಿಟ್ಟಿದ್ದಾರೆ. ಆದರೆ ಭಾರತದ ಜನ ಅದರ ಬಲೆಗೆ ಬಿದ್ದಿದ್ದಾರೆ.
ಕಳೆದ ಶತಮಾನದಲ್ಲಿ ಜರ್ಮನಿಯ ಜನ ದೇಶದ ಎಲ್ಲ ಸಮಸ್ಯೆಗಳಿಗೆ ಹಿಟ್ಲರ್ ಪರಿಹಾರ ಎಂದು ನಂಬಿ ಮೋಸ ಹೋದರು. ಇಟಲಿಯ ಜನ ಮುಸ್ಸೋಲಿನಿಯನ್ನು ನಂಬಿ ಕೊನೆಗೆ ಸತ್ಯ ಗೊತ್ತಾಗಿ ತಕ್ಕ ಪಾಠ ಕಲಿಸಿದರು. ಈಗ ಭಾರತದ ಜನರು ಎಲ್ಲ ಸಮಸ್ಯೆಗಳಿಗೆ ಒಬ್ಬ ವ್ಯಕ್ತಿಯಲ್ಲಿ ಪರಿಹಾರ ಹುಡುಕುತ್ತಿದ್ದಾರೆ. ಆತ ನಾಗಪುರದ ಸೂತ್ರದ ಗೊಂಬೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕೊಂಚ ಏಟು ಕೊಟ್ಟಿದ್ದರೂ ಫ್ಯಾಶಿಸಮ್ ಮತ್ತೆ ಚಿಗುರೊಡೆಯುತ್ತಲೇ ಇದೆ. ಚರಿತ್ರೆಯಿಂದ ಪಾಠ ಕಲಿಯದವರು ಭಾರೀ ಬೆಲೆ ತೆರಲೇಬೇಕಾಗುತ್ತದೆ. ಆಗ ಸಮಾಜವಾದಿ ಸೋವಿಯತ್ ರಶ್ಯ ವಿತ್ತು. ಕೆಂಪು ಸೇನೆ ಜರ್ಮನಿಗೆ ನುಗ್ಗಿ ಫ್ಯಾಶಿಸ್ಟರನ್ನು ಸದೆ ಬಡಿಯಿತು. ಆದರೆ ಈಗ? ಏನೇ ಇರಲಿ ಕಾಲಚಕ್ರ ತಿರುಗುತ್ತಲೇ ಇರುತ್ತದೆ ಎಂಬುದನ್ನು ಮರೆಯಬಾರದು.